ಹಂಬಲ ಹಣತೆ (7) ಯೋಧ ಕುಮಾರ

ಹಂಬಲ ಹಣತೆ (7) ಯೋಧ ಕುಮಾರ

ಕವನ

ವಜ್ರ ಕವಚವನಾತ ತೊಟ್ಟಿಹನು
ಕುಂಡಲವ ಕಿವಿಗಿಟ್ಟಹನು,
ಮಕುಟವನು ತಲೆಗೆತಾಧರಿಸಿಹನು,
ಬಲು ಎತ್ತರದ ಬಿಲ್ಲಾಳು ,
ಅರಿಕೊರಳ ಕೊರೆವ ಗರಿಯುಳ್ಳವನು
ಬಲ್ಲೆಯಾನೀನಾತನನು?
 
ಧಣಿ ಕೌರವನು ಕೋಪಗೊಂಡಿರಲು,
ಮೌನದೊಳಿಹನೆ ಅವನಾಳು?
ವೈರಿಗಳ ಪಡೆಗಳನು ಪುಡಿಗಯ್ಯೆ
ಕೆಚ್ಚಿನಿಂತಾಡೆದಿಹನು!-
ಎಮ್ಮಯ್ಯನನು ಕಂಡವರೋಡರೇ
ಕರವಾಲಗಳ ಕೆಳಗಿಟ್ಟು?
 
"ಅಮ್ಮನಿಗೆ ನಂಬಿಕೆಯ ಪುಟ್ಟಾಳು
ಬಲು ಬೆಂಬಲ ಕಟ್ಟಾಳು,
ಬಳ್ಳಿದನು ನೀನಾಗು - ಧೀರನಾಗು!"
ಎಂದೆನ್ನ ನೆತ್ತಿ ಮುತ್ತಿಟ್ಟು
ಮರಿಯಾನೆಯನು ಕೊಟ್ಟು, ಆಡುತಿರು
ಎಂದಧ್ವರಕೆ ತೆರಳಿಹನು!
 
ಅಧಟರಧಟರು, ಶರಣು ಎಂದವರ
ಪೊರೆವವರು ಅರಿಭಯಂಕರರು_
ಅಡಿಯಹಿಂದಿಡಿದವರು, ನುಡಿದಂತೆ
ನಡೆವವರು ನಮ್ಮ ದಳದವರು!
ಜೀವಗಳ್ಳರಾಗರೆಂದೆಂದು
ಸುಳ್ಳಾಡರೆಮ್ಮದಳದವರು!
 
"ಇರಿವರೇ ವೈರಿಗಳು ಅಯ್ಯನನು?"
ಎನಲಮ್ಮ ಅಳತೊಡಗಿದಳು
ಕರವಾಲ ಕೆಳಗಿಟ್ಟು ಓಡುವರು
ಇರಿವರವರೇ_ಅಯ್ಯನನು?
ಅರಿಕೊರಳ ಕೊರೆವ ಗುರಿಯುಳ್ಳವನ
ಇರಿವರವ ರಾರಿಹರಲ್ಲಿ !
 
ಆತನನು ಮುಟ್ಟದರ ಋಂಡಗಳ
ಅಬ್ಬರಿಸಿ ಚಂಡಾಡುವೆನು !
ಕಡಿವೆ ನಾ ವೀರರೆನಿಪೆಲ್ಲರನು _
ಇಂದಿರುಳು ನಾಮಲಗೆದ್ದು
ಬೆಳಗಾಗೆ_ ಎತ್ತರದ ಆಳಾಗೆ_
ಇನ್ನು ನೀನೆನ್ನ ಹರಸಮ್ಮ !