ಹಲಸು ಭವಿಷ್ಯದ ಬೆಳೆ ಆಗಬೇಕಾದರೆ….

ಹಲಸು ಭವಿಷ್ಯದ ಬೆಳೆ ಆಗಬೇಕಾದರೆ….

ಕರಾವಳಿ ಕರ್ನಾಟಕದ ಹಾಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀವು ಕಾಣ ಬಹುದಾದ ಒಂದು ದೃಶ್ಯ: ಹಲಸಿನ ಮರಗಳಿಂದ ಬಿದ್ದು ಕೊಳೆಯುವ ರಾಶಿರಾಶಿ ಹಲಸಿನ ಹಣ್ಣುಗಳು. ಕರ್ನಾಟಕದಲ್ಲಿ ಪ್ರತಿ ವರುಷ ಕನಿಷ್ಠ ೨,೦೦೦ ಕೋಟಿ ರೂಪಾಯಿಯ ಹಲಸು ಹಾಳಾಗುತ್ತಿದೆ ಎಂದು ಅಂದಾಜು.

ಎಂತಹ ಸಂಪನ್ಮೂಲಕ್ಕೆ ಎಂತಹ ದುರವಸ್ಥೆ! ಹೀಗೆ ಹಲಸು ಹಾಳಾಗಲು ನಮ್ಮ ಅಲಕ್ಷ್ಯವೇ ಕಾರಣವಲ್ಲವೇ?
ಈ ಹಿನ್ನೆಲೆಯಲ್ಲಿ, ಹಲಸಿನ ಬಗೆಬಗೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಸಂಘಟಿಸಲಾಗುತ್ತಿರುವ “ಹಲಸು ಹಬ್ಬ”ಗಳು ಮುಖ್ಯವಾಗುತ್ತವೆ. ಇತ್ತೀಚೆಗಿನ “ಹಲಸು ಹಬ್ಬ” ಆಯೋಜಿಸಿದ್ದು ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ – ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ, ೧೧ ಜೂನ್ ೨೦೧೭ರಂದು.

ಈ “ಹಲಸು ಹಬ್ಬ” ಉದ್ಘಾಟಿಸಿದವರು ಕೇರಳ ಸರಕಾರದಿಂದ “ಅಂತರರಾಷ್ಟೀಯ ಹಲಸು ರಾಯಭಾರಿ” ಎಂದು ಗೌರವಿಸಲ್ಪಟ್ಟ ಶ್ರೀಪಡ್ರೆ ಅವರು. “ಅಡಿಕೆ ಪತ್ರಿಕೆ”ಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಅವರು, ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ ಒಂದು ಮಾತು, “ನಮ್ಮ ಜನರಿಗೆ ಕಳೆದ ಮೂರ್ನಾಲ್ಕು ವರುಷಗಳಲ್ಲಿ ಸಿರಿಧಾನ್ಯಗಳ ಮೋಹ ಹಿಡಿಸಿದಂತೆ ಹಲಸಿನ ಮೋಹ ಹಿಡಿಸಬೇಕು.” ಈ ಮಾತಿನ ಮರ್ಮ ಗ್ರಹಿಸಿದರೋ ಎಂಬಂತೆ ಅಂದಿನ ಹಲಸು ಹಬ್ಬದಲ್ಲಿ ಕೆಲವರು ತಮ್ಮ ವಿನೂತನ ಹಲಸು ತಿನಿಸುಗಳ ಮೂಲಕ ಜನಮನ ಗೆದ್ದರು. ಅವರಲ್ಲೊಬ್ಬರು ದಕ್ಷಿಣಕನ್ನಡದ ಪುತ್ತೂರಿನ ಹತ್ತಿರದ ಮರಿಕೆಯ ಸುಹಾಸ್. ಅವರು ಅಲ್ಲಿ ತಯಾರಿಸಿ ಕೊಡುತ್ತಿದ್ದ ಹಲಸಿನ ಚಾಟ್ಗೆ ಭಾರೀ ಬೇಡಿಕೆ. ಅವರ ಮಳಿಗೆಯಲ್ಲಿ ಮಾರಾಟಕ್ಕಿದ್ದ ಇತರ ವಿಶೇಷ ತಿನಿಸುಗಳು: ಹಲಸಿನ ಪಲಾವ್, ಬನ್ಸ್, ಬರ್ಫಿ ಹಾಗೂ ಪರೋಟ.

ಕೇರಳದ ಕೋಳಿಯೂರಿನ ರವಿಶಂಕರ್ ಮತ್ತು ತಂಡದವರು ಗ್ರಾಹಕರಿಗೆ ನೀಡುತ್ತಿದ್ದದ್ದು ಅಲ್ಲೇ ತಯಾರಿಸಿದ ಹಲಸಿನ ಬಿಸಿಬಿಸಿ ದೋಸೆ, ಬಜ್ಜಿ ಮತ್ತು ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ. ಅವರಿಗೆ ಅಂದು ಸಂಜೆಯ ವರೆಗೆ ಬಿಡುವಿಲ್ಲದ ವ್ಯಾಪಾರ. ಅಲ್ಲಿ ಶರವು ಕ್ಯಾಟರರ್ಸ್ ಮಳಿಗೆಯ ಎದುರು ಮುಗಿಯದ ಸರತಿ ಸಾಲು – ಹಲಸಿನ ಕಬಾಬ್, ಮಂಚೂರಿ, ಚಿಲ್ಲಿ, ಘೀರೋಸ್ಟ್, ಪಲಾವ್, ಬನ್ಸ್, ಅಂಬಡೆ ಮತ್ತು ದೋಸೆಗಳ ಖರೀದಿಗೆ. ಮುಳಿಯ ವೆಂಕಟಕೃಷ್ಣ ಶರ್ಮರು ತಂದಿದ್ದ ಹಲಸಿನ ಪಫ್ಗಳ ಮಾರಾಟವೂ ಬಿರುಸು. ಮೈತ್ರೇಯಿ ಶೆಣೈ ಹಲಸಿನ ಬೀಜದ ಹುಡಿಯಿಂದ ತಯಾರಿದ ಪಾನೀಯ “ಜಾಫಿ”ಗೆ ನಿರಂತರ ಬೇಡಿಕೆ.

“ಹಲಸಿನ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ. ಆದರೆ ಪೂರೈಕೆ ಸಾಕಾಗುತ್ತಿಲ್ಲ. ಪೂರೈಕೆ ಹೆಚ್ಚಬೇಕಾದರೆ ಯಾಂತ್ರೀಕೃತ ಉತ್ಪಾದನೆ ಅತ್ಯಗತ್ಯ” ಎಂದು ತಮ್ಮ ಮಾತಿನಲ್ಲಿ ಸ್ಪಷ್ಟ ಪಡಿಸಿದರು ಶ್ರೀಪಡ್ರೆ. ಈ ನಿಟ್ಟಿನಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿದವರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಆಡುವಳ್ಳಿಯ ಎಸ್.ಆರ್.ಎಸ್. ಹೋಂ ಇಂಡಸ್ಟ್ರೀಸಿನ ಕೆ.ಎಸ್. ಶಿವಶಂಕರ್ ೧೫ ವರುಷದ ಪ್ರಯತ್ನದಿಂದ ಹಲಸು ಹಪ್ಪಳ ತಯಾರಿ ಯಂತ್ರ ಅಭಿವೃದ್ಧಿ ಪಡಿಸಿ, ಜುಲಾಯಿ ೨೦೧೫ರಿಂದ ಅದರಿಂದಲೇ ಹಲಸಿನ ಹಪ್ಪಳ ಉತ್ಪಾದಿಸುತ್ತಿರುವುದು ಸಾಧನೆಯೇ ಸೈ. ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದಲ್ಲಿ ಕಿಶೋರ್ ಕೊಡ್ಗಿ ಅವರ “ಗೋಕುಲ್ ಫ್ರುಟ್ಸ್” ಕಳೆದ ಹತ್ತು ವರುಷಗಳಿಂದ ಹಲಸಿನ ಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಇದು ದೇಶದಲ್ಲೇ ಮೊತ್ತಮೊದಲ ಇಂತಹ ಉದ್ಯಮ. ದೇಶಾದ್ಯಂತ ನೂರಕ್ಕೂ ಅಧಿಕ “ನ್ಯಾಚುರಲ್ ಐಸ್ ಕ್ರೀಮ್” ಮಳಿಗೆಗಳಲ್ಲಿ ಹಲಸಿನ ಐಸ್ ಕ್ರೀಮನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿರುವುದು ಇದರ ರೂವಾರಿ ಆರ್.ಎಸ್. ಕಾಮತರ ಸಾಹಸ.
ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲಿಕ್ಕಾಗಿ ಶ್ರೀಪಡ್ರೆಯವರು ಸೂಚಿಸಿದ್ದು ಎರಡು ದಾರಿಗಳನ್ನು: ಮೊದಲನೆಯದು, ಉತ್ತರ ಭಾರತದಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಮೂಡಿಸುವುದು. ಈಗ ಅಲ್ಲಿ ತರಕಾರಿಯಾಗಿ ಹಲಸಿನ ಕಾಯಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಹಲಸಿನ ಹಣ್ಣಿನ ಬಳಕೆ ಅಲ್ಲಿ ಬಹಳ ಕಡಿಮೆ. ಎರಡನೆಯದಾಗಿ, ಹಲಸಿನ ಕಾಯಿಯ ಸೊಳೆಯ ಗ್ಲೈಸೆಮಿಕ್ಸ್ ಇಂಡೆಕ್ಸ್ ಕಡಿಮೆ ಇರುವ ಕಾರಣ ಅದು ಸಕ್ಕರೆ ಕಾಯಿಲೆಯವರಿಗೆ ಸೂಕ್ತ ಆಹಾರ ಎಂಬುದಕ್ಕೆ (ಇದು ಅಧ್ಯಯನಗಳಿಂದ ದೃಢಪಟ್ಟಿರುವ ವಿಷಯ) ವ್ಯಾಪಕ ಪ್ರಚಾರ ನೀಡುವುದು. ಹೆಚ್ಚೆಚ್ಚು ಮಧುಮೇಹಿಗಳು ತರಕಾರಿಯಾಗಿ ಹಸಿಹಲಸು ತಿನ್ನತೊಡಗಿದರೆ, ಅದಕ್ಕೆ ಬೇಡಿಕೆ ಖಂಡಿತ ಹೆಚ್ಚಲಿದೆ.

ಈಗ ದಕ್ಷಿಣ ಭಾರತದಲ್ಲಿ ಹಬ್ಬುತ್ತಿರುವ ಹಲಸು ಜಾಗೃತಿ ಆಂದೋಲನವು ಸ್ಥಳೀಯ ಉತ್ತಮ ತಳಿಗಳ ಆಯ್ಕೆ ಹಾಗೂ ಕೃಷಿಯಿಂದ ಶುರು ಮಾಡಿ, ಮುನ್ನಡೆದರೆ ಭಾರತ ಹಲಸಿನ ಕೃಷಿ ಮತ್ತು ಉದ್ದಿಮೆ ಎರಡರಲ್ಲೂ ಮುಂಚೂಣಿಗೆ ಬರಲು ಸಾಧ್ಯವಿದೆ. ವಿಯೆಟ್ನಾಮಿನ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಕೇವಲ ಒಂದೂವರೆ ದಶಕದಲ್ಲಿ ಅಲ್ಲಿ ಹಲಸು ಪ್ಲಾಂಟೇಷನ್ ೫೦,೦೦೦ ಹೆಕ್ಟೇರಿಗೆ ವ್ಯಾಪಿಸಿದೆ. ಅಲ್ಲಿ ಬೆಳೆಯುವ ಹಲಸಿನ ಶೇಕಡಾ ೬೦ರಷ್ಟು ಉದ್ದಿಮೆಗೆ ಬಳಕೆ ಆಗುತ್ತದೆ. ವಿಯೆಟ್ನಾಮಿನ ಮುಖ್ಯ ಹಲಸಿನ ಉತ್ಪನ್ನ ಬಕ್ಕೆ ಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್. ಇದರ ಉತ್ಪಾದನೆಗೆ ಸ್ವಯಂಚಾಲಿತ ಯಂತ್ರಗಳು ಹಾಗೂ ತೀರಾ ಕಡಿಮೆ ಎಣ್ಣೆಯ ಬಳಕೆ. ಈಗ ಇದರ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಅಲ್ಲಿನ ವಿನಾಮಿಟ್ ಕಂಪೆನಿ. ಹಲವು ದೇಶಗಳಿಗೆ ಇದನ್ನು ರಫ್ತು ಮಾಡುತ್ತಿರುವ ಈ ದೈತ್ಯ ಕಂಪೆನಿಯ ಹಲಸಿನ ತೋಟದ ವಿಸ್ತೀರ್ಣ ೧೦,೦೦೦ ಹೆಕ್ಟೇರ್. ವಿಯೆಟ್ನಾಮಿನಲ್ಲಿ ಹಲಸು ಉದ್ದಿಮೆ ಬೃಹತ್ತಾಗಿ ಬೆಳೆಯಲು ಪ್ರಧಾನ ಕಾರಣಗಳು: ಏಕಬೆಳೆಯಾಗಿ ವಿಸ್ತಾರ ತೋಟಗಳಲ್ಲಿ ಹಲಸಿನ ಕೃಷಿ ಹಾಗೂ ಪೂರ್ವಸಂಸ್ಕರಣಾ ಕೇಂದ್ರಗಳು (ಪ್ರಿ-ಪ್ರೊಸೆಸಿಂಗ್ ಸೆಂಟರ್ಸ್). ಈಗ ಕೇರಳದಲ್ಲಿ ಎರಡು ಹಲಸು ಉದ್ಯಮ ಘಟಕಗಳು ಇಂತಹ ಕೇಂದ್ರಗಳನ್ನು ತೆರೆದಿರುವುದು ಆಶಾದಾಯಕ ಬೆಳವಣಿಗೆ.

ಹಲಸು ಭವಿಷ್ಯದ ಬೆಳೆ ಆಗಬೇಕಾದರೆ, ಹಲಸಿನ ಕೃಷಿ ಬಗ್ಗೆ ಕೃಷಿಕರು ತಮ್ಮ ಧೋರಣೆಯನ್ನೇ ಬದಲಾಯಿಸ ಬೇಕಾಗಿದೆ. ಹಲಸಿನ ಗಿಡ ನೆಟ್ಟರಾಯಿತು, ಅದರ ಪಾಡಿಗೆ ಅದು ಬೆಳೆಯುತ್ತದೆ ಎಂಬ ಧೋರಣೆ ಸಲ್ಲದು. ಅದನ್ನು ಕಾಫಿ ಪ್ಲಾಂಟೇಷನುಗಳಂತೆ ವೈಜ್ನಾನಿಕವಾಗಿ ಬೆಳೆಸಬೇಕಾಗಿದೆ. ಹಲಸಿನ ಮರಗಳು ೧೫ ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡಲೇ ಬಾರದು. ಹಲಸಿನ ಗಿಡಗಳ ಪ್ರೂನಿಂಗ್ (ವರುಷಕ್ಕೆ ಎರಡು ಸಲ) ಕಡ್ಡಾಯ. ಹಲಸಿನ ಕಾಯಿಗಳ ಥಿನ್ನಿಂಗ್ ಕೂಡ ಅತ್ಯಗತ್ಯ.

ಹಲಸಿನ ಉತ್ಪನ್ನಗಳ ಉತ್ಪಾದಕರೂ ತಮ್ಮ ಧೋರಣೆ ಬದಲಾಯಿಸಬೇಕಾಗಿದೆ. ಉತ್ಪನ್ನ ಹೇಗಿದ್ದರೂ ಮಾರಾಟವಾಗುತ್ತದೆ ಎಂಬ ಧೋರಣೆ ಸಲ್ಲದು. ಗುಣಮಟ್ಟ ಸುಧಾರಣೆ ಮತ್ತು ಆಕರ್ಷಕ ಪ್ಯಾಕೇಜಿಂಗ್ ಇಂದಿನ ತುರ್ತು. ಚುಟುಕಾಗಿ ಹೇಳಬೇಕೆಂದರೆ, ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಇತರ ಅತ್ಯುತ್ತಮ ಬ್ರಾಂಡಿನ ಆಹಾರ ಉತ್ಪನ್ನಗಳಿಗೆ ಸ್ಪರ್ಧೆ ನೀಡುವಂತಿರಬೇಕು. ಇವನ್ನೆಲ್ಲ ಸಾಧಿಸಿದರೆ, ಹಲಸಿನ ತವರೂರಾದ ಭಾರತದಲ್ಲಿ ಹಲಸು ಭವಿಷ್ಯದ ಬೆಳೆಯಾಗಲಿದೆ.