ಕಗ್ಗ ದರ್ಶನ – 9 (2)

ಕಗ್ಗ ದರ್ಶನ – 9 (2)

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ
ಸಹಿಸು ಬೇಡದೆ ಬಂದ ಪಾಡನೆಲ್ಲ
ಸಹನೆ ನಿನ್ನಾತ್ಮವನು ಗಟ್ಟಿ ಪಡಿಪಭ್ಯಾಸ
ವಿಹಿತವದು ಮನುಜಂಗೆ – ಮರುಳ ಮುನಿಯ
ಮತ್ತೆಮತ್ತೆ ಸುಡುವ ಬೆಂಕಿಯಂತಿರುವ ಬಾಳಿನಲ್ಲಿ ಜಯಿಸಬೇಕಾದರೆ ಏನು ಮಾಡಬೇಕು? “ಸಹನೆಯಿಂದಿರಬೇಕು. ಯಾಕೆಂದರೆ ನಮ್ಮ ಜೀವಕ್ಕೆ ವಿಜಯ ತಂದು ಕೊಡುವುದೇ ಸಹನೆ” ಎಂದು ಸರಳ ಉತ್ತರ ನೀಡಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ,ಯವರು.
ನಮ್ಮ ಬದುಕಿನಲ್ಲಿ ಬರುವ ಕಷ್ಟಕೋಟಲೆಗಳು, ದುಃಖದುಮ್ಮಾನಗಳು ನಾವು ಬೇಡಿ ಪಡೆದವುಗಳಲ್ಲ. ಅವೆಲ್ಲವೂ ನಾವು ಬೇಡದೆ ಬಂದ ಬದುಕಿನ ಪಾಡು. ಅದೆಲ್ಲವನ್ನೂ ಹಲ್ಲು ಕಚ್ಚಿ ಸಹಿಸಬೇಕು. ಇದನ್ನೇ ಇನ್ನೊಂದು ಮುಕ್ತಕದಲ್ಲಿ “ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸುನಾಮಿಯಲ್ಲಿ ಸುಮಾರು ೨,೭೫,೦೦೦ ಜನರು ವಿಧಿವಶರಾದರು. ಕಳೆದ ಐದು ವರುಷಗಳಲ್ಲಿ ಭೂಕಂಪಗಳಲ್ಲಿ ಸತ್ತವರು ಲಕ್ಷಗಟ್ಟಲೆ ಜನರು. ಕೇದಾರನಾಥಕ್ಕೆ ೨೦೧೩ರಲ್ಲಿ ತೀರ್ಥಯಾತ್ರೆಗೆ ಹೋಗಿದ್ದವರಲ್ಲಿ, ನುಗ್ಗಿ ಬಂದ ನೆರೆಯಲ್ಲಿ ಮುಳುಗಿ ಮೃತರಾದವರ ಸಂಖ್ಯೆ ೫,೦೦೦ಕ್ಕಿಂತ ಅಧಿಕ. ಜೂನ್ ೨೦೧೪ರಲ್ಲಿ, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಹೋಗಿದ್ದ ವಿಎನ್ಆರ್ ವಿಜ್ನಾನ ಜ್ಯೋತಿ ಕಾಲೇಜಿನ ೨೪ ವಿದ್ಯಾರ್ಥಿಗಳು ವಿದ್ಯುತ್ವೇಗದಲ್ಲಿ ಏರಿ ಬಂದ ಬಿಯಾಸ್ ನದಿಯ ಪ್ರವಾಹದಲ್ಲಿ ನೀರುಪಾಲಾದರು.
ಇಂತಹ ದುರಂತಗಳಿಗೆ ಬಲಿಯಾದವರ ಹೆತ್ತವರ, ಕುಟುಂಬದವರ, ಹತ್ತಿರದವರ ಬದುಕಿನಲ್ಲಿ ಕವಿಯುತ್ತದೆ ಕತ್ತಲು. ಆಗ ಅವಡುಗಚ್ಚಿ ಸಹಿಸಿಕೊಳ್ಳುವುದಲ್ಲದೆ ಬೇರೆ ದಾರಿಯಿಲ್ಲ. ಎದೆ ನಡುಗಿಸುವ ಇಂತಹ ಘಟನೆಗಳನ್ನು ಸಹಿಸಿ ಬಾಳುವುದು ನಮ್ಮ ಆತ್ಮವನ್ನೇ ಗಟ್ಟಿಗೊಳಿಸುವ ಸಾಧನ. ಆದ್ದರಿಂದಲೇ, ಸಹನೆ ನಮ್ಮ ಜೀವನದ ವಜ್ರದ ಕವಚ.
ಹೀಗೆ ಒಂದಾದಮೇಲೊಂದು ಬೆಂಬತ್ತಿ ಬರುವ ಸಂಕಟ ಹಾಗೂ ಸೋಲುಗಳನ್ನು ಎದುರಿಸುತ್ತ ಜೀವನದ ನದಿಯಲ್ಲಿ ಈಸಬೇಕು; ಈಸಿ ಜಯಿಸಬೇಕು. ಇದುವೇ ಬದುಕುವ ಸೂಕ್ತ ಮಾರ್ಗ. ಬದಲಾಗಿ ಬದುಕಿನ ಕಷ್ಟ ಮತ್ತು ಸೋಲುಗಳನ್ನು ಎದುರಿಸದೆ ಪಲಾಯನ ಮಾಡುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ಗೆಲ್ಲುವುದು ಹೇಗೆಂದು ಕಲಿಸುವುದರಲ್ಲೇ ಮುಳುಗಿದ್ದೇವೆ. ದುಃಖ, ನಿರಾಶೆ, ಹತಾಶೆ, ಸೋಲುಗಳನ್ನು ಸಹಿಸಲಿಕ್ಕೂ ಕಲಿಸಬೇಕು.