ಮುಗಿಯದಿರಲೀ ಜಲದೊರತೆಯ ಆಯುಷ್ಯವು !..

ಮುಗಿಯದಿರಲೀ ಜಲದೊರತೆಯ ಆಯುಷ್ಯವು !..

ಸಭ್ಯ ಸಂಸ್ಕೃತಿಯ
ಹೆಗ್ಗುರುತು ನೀರು;
ಬಾಯಾರಿದವರಿಗೆ
ಅಮೃತ ಸ್ವರೂಪಿ ನೀರು;
ಪ್ರಕೃತಿಯ ವರದಾನ
ನೀರು; ಜೀವ ಜಂತುಗಳ
ಜೀವದಾಯಿನಿ ನೀರು...

ಕಣ್ಣು ಹಾಯಿಸಿದೆಡೆ
ಹಸಿರು; ದಟ್ಟ ಕಾಡು
ಹರಿವ ನೀರಿನ ಜುಳು ಜುಳು
ನಿನಾದ; ಪಕ್ಷಿ ಸಂಕುಲದ
ಚಿಲಿಪಿಲಿ ಗಾನ ಎಲ್ಲವೂ
ಕಾಣೆಯಾಗಿಹುದಿಲ್ಲಿ....

ಮಾನವ ನಿರ್ಮಿತ
ಗಗನ ಚುಂಬಿ ಕಟ್ಟಡಗಳು,
ಹೂಳು ತುಂಬಿದ ಕೆರೆಕಟ್ಟೆಗಳು,
ಗುಳೆ ಹೋದ ಪಕ್ಷಿ ಸಂಕುಲ
ಮಾಯವಾದ ಮಳೆ
ಬಟ್ಟ ಬಯಲಾದ ಕಾಡುಮೇಡು
ಬರಿದಾದ ಭೂದೇವಿಯ ಒಡಲು...

ಕಾಣೆಯಾಗಿಹುದಿಲ್ಲಿ
ಮಾನವನ ಅಂತಃಸಾಕ್ಷಿ
ಪ್ರಕೃತಿ-ಪ್ರೀತಿ;
ಅವನ ಕೊನೆಯಿಲ್ಲದ
ಕನಸಿಗೆ ಆಹುತಿಯಾಗಿದೆ.
ಜೀವಸೆಲೆಯ ಅಸ್ತಿತ್ವ
ಕ್ಷೀಣಿಸುತ್ತಿದೆ ಭವ್ಯ
ಭವಿತವ್ಯದ ಆಶಯ...

ಈ ನೆಲದ ಜಲವ
ಸವಿದ ಮನುಜ
ಮರೆಯದಿರಲಿ ಭುವಿಯ
ಋಣವ ; ಕರುಣೆಯಾ.
ಮುಗಿಯದಿರಲಿ
ಜಲದೊರತೆಯ ಆಯುಷ್ಯವು
ದುಸ್ತರವಾಗದಿರಲಿ
ಬದುಕಿನ ಭವಿಷ್ಯವು.....

Rating
No votes yet

Comments

Submitted by Jagadeesha Chandra Sun, 01/21/2018 - 22:47

ಕವನ‌ ಚೆನ್ನಾಗಿದೆ. ಕಾರು ತೊಳೆಯಲು, ಫುಟ್ ಪಾಥ್ ತೊಳೆಯಲು ಪ್ಯೆಪ್ ನಲ್ಲಿ ನೀರು ಬಿಟ್ಟುಕೊಂಡು ನೀರು ದಂಡ ಮಾದುವವರನ್ನು ನೋಡಿದಾಗ‌ ಬೇಸರವಾಗುತ್ತದೆ.