ಕಗ್ಗ ದರ್ಶನ – 15 (1)

ಕಗ್ಗ ದರ್ಶನ – 15 (1)

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ-
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ
“ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು ಹೆದರಿಕೊಂಡು, ಜೀವನವನ್ನು ಬಿಟ್ಟು ಓಡಿ ಹೋಗುವವರ ಗತಿ ಏನಾದೀತು? ಅವರು ವಿಧಿಯ (ಬಿದಿಯ) ಬಾಯಿಗೆ ತುತ್ತು (ಕವಳ) ಆಗುತ್ತಾರೆ ಎಂಬುದು ಮಾನ್ಯ ಡಿ.ವಿ.ಗುಂಡಪ್ಪನವರ ಅಭಿಪ್ರಾಯ.
ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಗಮನಿಸಿ. ಅವರಿಗೆ ವಿಧಿ ಹಲವನ್ನು ಕೊಟ್ಟಿರುತ್ತದೆ; ಕೆಲವನ್ನು ಕೊಟ್ಟಿರುವುದಿಲ್ಲ, ಅಷ್ಟೇ. ಹಾಗಂತ ವಿಧಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುವುದಿಲ್ಲ. ಪ್ರತಿಯೊಬ್ಬರಿಗೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಸಂಪತ್ತಿದ್ದರೆ ಆರೋಗ್ಯವಿಲ್ಲ; ಆರೋಗ್ಯವಿದ್ದರೆ ಸಂಪತ್ತಿಲ್ಲ. “ಹಲ್ಲಿದ್ದಾಗ ತಿನ್ನಲು ಕಡಲೆಯಿಲ್ಲ, ಕಡಲೆಯಿದ್ದಾಗ ತಿನ್ನಲು ಹಲ್ಲಿಲ್ಲ” ಎಂಬ ಪರಿಸ್ಥಿತಿ ಎಲ್ಲರದು.
ಆದರೆ ಆತ್ಮಹತ್ಯೆ ಇಂಥಹ ಸಮಸ್ಯೆಗಳಿಗೆ ಪರಿಹಾರವಲ್ಲ. ಅಂಥವರು ಏನನ್ನು ಸಾಧಿಸುತ್ತಾರೆ? ಅದರ ಬದಲಾಗಿ, ನಮ್ಮೆದೆಯನ್ನು ಉಕ್ಕಿನಂತೆ ಸಶಕ್ತವಾಗಿಸಿ, ವಿವೇಕದಿಂದ ಜೀವನವನ್ನು ಎದುರಿಸಿದರೆ, ವಿಧಿ ನಮಗೆ ಒಲಿಯುತ್ತದೆ.
ಇದಕ್ಕೆ ಅದ್ಭುತವಾದ ಉದಾಹರಣೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೯೮೨ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ. ಹುಟ್ಟುವಾಗಲೇ ಕೈಗಳು ಇಲ್ಲದವರನ್ನು ಕಂಡಿದ್ದೇವೆ; ಕಾಲುಗಳೆರಡನ್ನೂ ಕಳೆದುಕೊಂಡವರನ್ನು ಕಂಡಿದ್ದೇವೆ. ಆದರ ಈತನಿಗೆ ಹುಟ್ಟುವಾಗಲೇ ಎರಡು ಕೈಗಳೂ ಎರಡು ಕಾಲುಗಳೂ ಇಲ್ಲ! ಬಡವರಾದ ತಂದೆತಾಯಿಗಳಾಗಿದ್ದರೆ, ಇಂತಹ ಮಗುವನ್ನು ಹುಟ್ಟಿದೊಡನೆ ತಿಪ್ಪೆಗುಂಡಿಗೆ ಎಸೆಯುತ್ತಿದ್ದರೇನೋ!
ಅವನ ಹೆಸರು ನಿಕ್ ವೋಯಾಚಿಚ್. ಅವನದೀಗ “ಮಿತಿಯೇ ಇಲ್ಲದ ಬದುಕು” (ಇದು ಆತನ ಆತ್ಮಕತೆಯ ಹೆಸರು). ಜೀವನದ ಪ್ರತಿಯೊಂದು ಸಂಕಟದಲ್ಲಿಯೂ ಒಂದು ಉದ್ದೇಶವಿದೆ; ಸಂಕಟದ ಬಗೆಗಿನ ನಮ್ಮ ಮನೋಭಾವವೇ ಅದರ ಪರಿಣಾಮವನ್ನು ನಿರ್ಧರಿಸುತ್ತದೆ ಎಂದು ನಂಬಿ ಬೆಳೆದವನು ನಿಕ್. ಆತ ಪದವೀಧರನೂ ಆದ; ಮದುವೆಯೂ ಆದ.
ಎಲ್ಲದಕ್ಕಿಂತ ಮಿಗಿಲಾಗಿ, ತನ್ನ ಪ್ರೇರಣಾ ಭಾಷಣಗಳಿಂದ ೫೦ ಲಕ್ಷ ಜನರ ಬದುಕಿಗೆ ಹೊಸ ಬೆಳಕು ನೀಡಿದ ಅಸಾಧಾರಣ ವ್ಯಕ್ತಿ ನಿಕ್. ಅವನಿಗೆ ವಿಧಿ ಒಲಿದಿದೆ, ಅಲ್ಲವೇ?