ಕಗ್ಗ ದರ್ಶನ – 23 (2)

ಕಗ್ಗ ದರ್ಶನ – 23 (2)

ಆಗಲಿಹುದಾದೀತು ಆದೊಡೇಂ ಪೋದೊಡೇಂ
ಈಗಳಿಹ ಕರ್ತವ್ಯವೇನೊ ನೋಡದನು
ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್
ಜಾಗರೂಕನೊ ಯೋಗಿ – ಮರುಳ ಮುನಿಯ
ಯೋಗಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವನ್ನು ನಮ್ಮೆದುರು ಇಟ್ಟಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅದಕ್ಕೆ ಪೂರ್ವಭಾವಿಯಾಗಿ ಇನ್ನೊಂದು ಮೂಲಭೂತ ವಿಷಯವನ್ನು ಎತ್ತುತ್ತಾರೆ: ಆಗಬೇಕಾದದ್ದು ಆದೀತು; ಹಾಗಿರುವಾಗ ಆದರೇನು ಹೋದರೇ॑ನು? ಯಾರದೋ ಹುಟ್ಟು ಅಥವಾ ಸಾವು, ಯಾವುದೋ ಅಪಘಾತ ಅಥವಾ ಕಲಹ – ಆದರೇನು ಹೋದರೇನು? ಇಂತಹ ಘಟನೆಗಳು ಆದರೆ ಅಥವಾ ಆಗದಿದ್ದರೆ, ಅದರಿಂದಾಗಿ ಈ ಜಗತ್ತಿನಲ್ಲಿ ಬದಲಾವಣೆಯೇನೂ ಆಗೋದಿಲ್ಲ. ಈ ಜಗತ್ತು ಮುಂದಕ್ಕೆ ಸಾಗುತ್ತಲೇ ಇರುತ್ತದೆ. ಆದ್ದರಿಂದ ನಿನ್ನ ಈಗಿನ ಕರ್ತವ್ಯ ಏನೆಂಬುದನ್ನು ನೋಡೆಂದು ಅವರು ಸೂಚಿಸುತ್ತಾರೆ. ಆಯಾ ಕ್ಷಣದ ಕರ್ತವ್ಯವನ್ನು ಮಾಡುವುದೇ ಮುಖ್ಯ. ತ್ಯಾಗ, ಭೋಗ, ಈಗಿನ ಕಾಯಕ (ಉದ್ಯೋಗ) – ಇವು ಎಲ್ಲದರಲ್ಲಿಯೂ ಯೋಗಿಯಾದವನು ಎಚ್ಚರದಿಂದ ಇರಬೇಕು. ಆಯಾ ಸನ್ನಿವೇಶದಲ್ಲಿ ತನ್ನ ಕರ್ತವ್ಯವನ್ನು ತಿಳಿದು ಮಾಡಬೇಕು.
ಉದಾಹರಣೆಗೆ ಸರಕಾರವನ್ನು ನಡೆಸುವವರ ಕರ್ತವ್ಯ ಏನು? ದಕ್ಷ ಹಾಗೂ ಪ್ರಾಮಾಣಿಕ ಆಡಳಿತವನ್ನು ಒದಗಿಸುವುದು. ಕರ್ನಾಟಕದಲ್ಲಿ ಆಡಳಿತದ ಅದಕ್ಷತೆಯ ಸೂಚಕ ಅಕ್ರಮ ರೇಷನ್ ಕಾರ್ಡುಗಳ ಸಂಖ್ಯೆ. ಈ ವರುಷ ೮೫ ಲಕ್ಷ ಅಕ್ರಮ ರೇಷನ್ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ ಎಂಬುದು ಸಚಿವರ ಹೇಳಿಕೆ. ಇವನ್ನು ನೀಡಿದ್ದು ಯಾರು? ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು. ಹಾಗಿದ್ದರೆ, ಆ ಇಲಾಖೆಯಲ್ಲಿ ತುಂಬಿರುವ ಅದಕ್ಷತೆ ಮತ್ತು ಭ್ರಷ್ಟತೆಯ ಅಂದಾಜು ಮಾಡಿ. ರಾಜ್ಯದಲ್ಲಿ ಸಹಬಾಳ್ವೆಗೆ ಹಾಗೂ ಶಾಂತಿಯುತ ಜನಜೀವನಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಸರಕಾರ ನಡೆಸುವವರ ಇನ್ನೊಂದು ಮುಖ್ಯ ಕರ್ತವ್ಯ. ಆದರೆ ಕರ್ನಾಟಕದ ಸರಕಾರ ಮಾಡಿದ್ದೇನು? ೧೦ ನವಂಬರ್ ೨೦೧೫ರಂದು ಟಿಪ್ಪು ಸುಲ್ತಾನ ಜಯಂತಿಯನ್ನು ಸರಕಾರಿ ವೆಚ್ಚದಲ್ಲಿ ಆಚರಿಸುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡಿದ್ದು. ಇದರಿಂದಾಗಿ ಪ್ರತಿಭಟನಾ ಗಲಭೆಗಳಿಗೆ ಮೂವರು ಬಲಿಯಾಗಿ, ಹಲವರು ಗಾಯಗೊಂಡಿದ್ದಾರೆ. ಸರಕಾರ ನಡೆಸುತ್ತಿರುವವರು ತಮ್ಮ ಕರ್ತವ್ಯದ ಬಗ್ಗೆ ಜಾಗರೂಕರಾಗಿದ್ದರೆ, ಇದನ್ನು ತಪ್ಪಿಸಬಹುದಾಗಿತ್ತು, ಅಲ್ಲವೇ?
 

Comments

Submitted by kavinagaraj Tue, 05/29/2018 - 09:05

ವರ್ತಮಾನದ ಮಹತ್ವ ಮತ್ತು ಜಾಗರೂಕತೆಯ ಅಗತ್ಯ ಬಿಂಬಿಸುವ ಕಗ್ಗ!