ಕಗ್ಗ ದರ್ಶನ – 24 (2)

ಕಗ್ಗ ದರ್ಶನ – 24 (2)

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ
ನಶಿಸಲೀ ನಿನ್ನೆಲ್ಲವೇನಾದೊಡೇನು?
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ
ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ
ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ ಕುಸಿದು ಹೋಗಲಿ, ಆ ಗಗನ ಕಳಚಿ ಬೀಳಲಿ. ನಿನ್ನದೆಲ್ಲವೂ ನಾಶವಾಗಿ ಹೋಗಲಿ. ಏನಾದರೇನು? ನೀನು ಮಾತ್ರ ಅಧೀರನಾಗದಿರು; ಕಂಗಾಲಾಗಿ, ಹತಾಶನಾಗಿ ದಣಿಯದಿರು. ಆ ಜಗನ್ನಿಯಾಮಕನ ಸತ್ತ್ವದಲ್ಲಿ ನಂಬಿಕೆಯಿಟ್ಟು ಬದುಕು (ವಸಿಸು). ನಿನ್ನ ಎದೆಗಟ್ಟಿಯಿದ್ದರೆ, ನಿನಗೆ ಆತ್ಮವಿಶ್ವಾಸವಿದ್ದರೆ, ಎಲ್ಲವೂ ಒಳಿತಾಗುತ್ತದೆ.
ಚೆನ್ನೈಯಲ್ಲಿ ಡಿಸೆಂಬರ್ ೨೦೧೫ರ ಆರಂಭದಲ್ಲಿ ಆದಂತೆ ಆದಾಗ ….. ಎಲ್ಲವೂ ನಾಶವಾಗಿ, ಬದುಕೆಲ್ಲ ಕತ್ತಲಾಗಿ ಕಂಗೆಟ್ಟಾಗ ಇಂತಹ ಸಂದೇಶವೇ ಬದುಕಿನ ಆಶಾಕಿರಣ, ಅಲ್ಲವೇ?
ಚೆನ್ನೈಯ ಜಲಪ್ರಳಯವನ್ನು ಹೇಗೆ ಎದುರಿಸಲಾಯಿತು? ೩೫,೦೦೦ ನಿರಾಶ್ರಿತರ ಕೇಂದ್ರಗಳನ್ನು ತೆರೆದು ಜನರಿಗೆ ಆಹಾರ ಹಾಗೂ ವಾಸದ ವ್ಯವಸ್ಥೆ. ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮೂಲಕ ಆಹಾರ ಹಾಗೂ ಇತರ ಅಗತ್ಯ ಸಾಮಗ್ರಿ ಪೂರೈಕೆ. ಸುಮಾರು ೧,೫೦೦ ಸೈನಿಕರ ಮೂಲಕ ಸಂಕಟದಲ್ಲಿ ಸಿಲುಕಿದವರ ರಕ್ಷಣೆ. ನೌಕಾದಳದ ಬೋಟುಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾವಿರಾರು ಜನರ ರವಾನೆ. ಕಟ್ಟಡಗಳ ಮೇಲೆ ನಿಂತು ಜೀವ ಉಳಿಸಲು ಮೊರೆಯಿಡುವವರನ್ನು ಹೆಲಿಕಾಪ್ಟರಿನಿಂದ ಎತ್ತಿ ಪಾರು ಮಾಡಿದ್ದು. ಕೇಂದ್ರ ಸರಕಾರದಿಂದ ಮುಂಚಿನ ರೂ.೯೦೦ ಕೋಟಿಗಳಲ್ಲದೆ ಹೆಚ್ಚುವರಿ ರೂ.೧,೦೦೦ ಕೋಟಿ ನೆರವಿನ ಭರವಸೆ. ಇವೆಲ್ಲದರ ಪರಿಣಾಮವಾಗಿ ಕೇವಲ ಐದು ದಿನಗಳಲ್ಲಿ ಪರಿಸ್ಥಿತಿಯ ನಿಯಂತ್ರಣ.
ವ್ಯಕ್ತಿಯಾಗಿ ಮಾತ್ರವಲ್ಲ, ಸಮಾಜವಾಗಿ ನಾವು ಎದೆಗಟ್ಟಿ ಮಾಡಿಕೊಳ್ಳಲು ಕಲಿಯಲೇ ಬೇಕಾಗಿದೆ. ಸುನಾಮಿ ಅಪ್ಪಳಿಸಿದಾಗಲೂ ೨.೭೫ ಲಕ್ಷ ಜನರ ಸಾವು. ಹಲವು ಕುಟುಂಬಗಳ ಸರ್ವ ನಾಶ. ಅವೆಲ್ಲ ಆಘಾತ ಸಹಿಸಿಕೊಂಡು, ಲಕ್ಷಗಟ್ಟಲೆ ಜನರು ಮತ್ತೆ ಬದುಕು ಕಟ್ಟಿಕೊಂಡರು. ಈ ಮುಕ್ತಕಗಳ ಇನ್ನೊಂದು ಸಂದೇಶ: ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಇದನ್ನು ಒಪ್ಪಿಕೊಳ್ಳದವರು, ಚೆನ್ನೈಯಲ್ಲಿ ಪ್ರಕೃತಿಯ ರುದ್ರನಾಟಕದಿಂದಲಾದರೂ ಪಾಠ ಕಲಿಯಲಿ.
 

Comments