ಕಗ್ಗ ದರ್ಶನ – 36 (1)

ಕಗ್ಗ ದರ್ಶನ – 36 (1)

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ - ಮಂಕುತಿಮ್ಮ
ನಾವು ಹುಟ್ಟಿದ ಕ್ಷಣವೇ ನಿರ್ಧಾರವಾಗಿರುತ್ತದೆ ನಮ್ಮ ಗ್ರಹಗತಿ – ಆ ಕ್ಷಣದಲ್ಲಿ ಗುರು, ಶನಿ, ಶುಕ್ರ, ಬುಧ, ಮಂಗಳ ಇತ್ಯಾದಿ ಗ್ರಹಗಳ ಸ್ಥಾನ ಅವಲಂಬಿಸಿ. ಅದು ನಮ್ಮ ಜನ್ಮಕ್ಷಣದ ವಿಧಿನಿರ್ಣಯ. ಆ ಗ್ರಹಗತಿ ಅಂತಿಮ. ನಮ್ಮ ಜಾತಕ ತಿದ್ದಿ, ನಮ್ಮ ಗ್ರಹಗತಿ ಸರಿಪಡಿಸಲು ಯಾವ ಜ್ಯೋತಿಷಿಗೂ ಸಾಧ್ಯವಿಲ್ಲ. ನಮಗೆ ಯಾವ ದಶೆ (ಸ್ಥಿತಿ) ಬಂದರೂ ಅದನ್ನು ಸಹಿಸಿಸಹಿಸಿ ಮುಗಿಸಬೇಕು – ಶನಿದಸೆಯನ್ನೂ. ಬೇರೆ ದಾರಿಯೇ ಇಲ್ಲ. ಹಾಗೆ ಬದುಕಲಿಕ್ಕಾಗಿ ವಜ್ರದಂತಹ ಸಹನೆ ಬೆಳೆಸಿಕೊಳ್ಳಬೇಕು ಎಂದು ಈ ಮುಕ್ತಕದಲ್ಲಿ ಸರಳವಾಗಿ ತಿಳಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಸ್ವರ್ಗದಂತಹ ವೈಭವವಿದ್ದ ನೌಕೆ ಟೈಟಾನಿಕ್. ೧೯೧೨ರಲ್ಲಿ ಅದರಲ್ಲಿ ಸಾವಿರಾರು ಜನರು ಸಾಗರಯಾನ ಹೊರಟರು. ಸೌತಾಂಪ್ಟನಿನಿಂದ ಹೊರಟ ಆ ಮಹಾಹಡಗು ಕೆಲವೇ ಗಂಟೆಗಳಲ್ಲಿ ಮುಳುಗಿ, ೧,೫೦೦ಕ್ಕಿಂತ ಅಧಿಕ ಪ್ರಯಾಣಿಕರ ಬಲಿ ತೆಗೆದುಕೊಂಡಿತು. ಮಹಾಮಂಜುಗಡ್ಡೆಗೆ ಢಿಕ್ಕಿ ಹೊಡೆದದ್ದರಿಂದ ಟೈಟಾನಿಕ್ ನೌಕೆಯ ತಳಕ್ಕೆ ಘಾಸಿಯಾಗಿ ನೌಕೆ ಮುಳುಗಿತೆಂದು ಈ ವರೆಗೆ ನಂಬಲಾಗಿತ್ತು. ಆದರೆ, ೨ ಜನವರಿ ೨೦೧೭ರ ಪತ್ರಿಕಾವರದಿಯಲ್ಲಿದೆ ಬೇರೊಂದು ಸತ್ಯ. ಆ ನೌಕೆ ಬೆಲ್-ಫಾಸ್ಟಿನ ಷಿಪ್ ಯಾರ್ಡಿನಿಂದ ಹೊರಟಾಗಿನಿಂದ ಅದರ ಕಲ್ಲಿದ್ದಲು ಕೋಣೆಯಲ್ಲಿ ಅಕಸ್ಮಾತ್ ಹುಟ್ಟಿಕೊಂಡ ಬೆಂಕಿಯನ್ನು ನಂದಿಸಲು ಸಾಧ್ಯವಾಗಿರಲಿಲ್ಲ. ಆ ಬೆಂಕಿಯಿಂದಾಗಿ ನೌಕೆಯ ತಳ (ಹಲ್) ದುರ್ಬಲವಾಗಿತ್ತು. ಅದನ್ನು ಸರಿಪಡಿಸಿದ ನಂತರವೇ ನೌಕೆ ಯಾನ ಆರಂಭಿಸಬೇಕಿತ್ತು. ಆ ನೌಕೆ ನಿರ್ಮಿಸಿದ ಕಂಪೆನಿಯ ಅಧ್ಯಕ್ಷ ಜೆ. ಬ್ರೂಸ್ ಇಸ್ಮೇ ಅದೇ ನೌಕೆಯಲ್ಲಿದ್ದ; ಅದನ್ನು ಸರಿಪಡಿಸುವ ಹೊಣೆಗಾರಿಕೆ ಆತ ನಿರ್ವಹಿಸಲಿಲ್ಲ. ಅಂತೂ, ಬೆಂಕಿ, ಮಹಾಮಂಜುಗಡ್ಡೆ ಮತ್ತು ಕ್ರಿಮಿನಲ್ ಬೇಜವಾಬ್ದಾರಿತನದಿಂದಾಗಿ ಮಹಾಹಡಗು ನಾಶ ಹಾಗೂ ೧,೫೦೦ ಮಿಕ್ಕಿ ಯಾನಿಗಳ ಸಾವು.
ಮೊದಲನೇ ಮತ್ತು ಎರಡನೇ ಮಹಾಯುದ್ಧ, ಜಪಾನಿನ ಮೇಲೆ ಮೊದಲ ಅಣುಬಾಂಬುಗಳ ಧಾಳಿ, ವಿಯೆಟ್ನಾಂ ಯುದ್ಧ, ಶ್ರೀಲಂಕಾದ ಅಂತರ್ ಯುದ್ಧ, ಆಫ್ರಿಕಾದ ಜನಾಂಗೀಯ ಕಲಹ, ಜಗತ್ತಿನ ವಿವಿಧೆಡೆಗಳಲ್ಲಿ ಭಯೋತ್ಪಾದಕರ ಧಾಳಿ – ಇವುಗಳಿಂದಾಗಿ ಸತ್ತವರ ಲೆಕ್ಕ ಉಂಟೇ? ಅವರೆಲ್ಲರ ಸಾವು ವಿಧಿಲಿಖಿತ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಾಗೆ ಸತ್ತವರ ಕುಟುಂಬದವರ, ಬಂಧುಬಾಂಧವರ ಸಂಕಟಕ್ಕೆ ಕೊನೆಯುಂಟೇ? ಅವರದನ್ನು ಸಹಿಸಲೇ ಬೇಕು, ಅಲ್ಲವೇ?