ಕಗ್ಗ ದರ್ಶನ – 41 (2)

ಕಗ್ಗ ದರ್ಶನ – 41 (2)

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ?
ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ
ಬಾಳುವುದೆ ಗೆಲವೆಲವೊ – ಮರುಳ ಮುನಿಯ
ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅವರು ನೀಡುವ ಸಂದೇಶ: ಈ ಜಗತ್ತು ಪರಮಾತ್ಮನ ಲೀಲೆ ಎನ್ನುವುದಾದರೆ, ಇಲ್ಲಿ ಪರಿ ಪರಿ ಪರೀಕ್ಷೆಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ನಮ್ಮ ಸಂಯಮದ ಸತ್ತ್ವದಿಂದ ತಾಳಿಕೊಂಡು ಬಾಳುವುದೇ ಗೆಲವು.
ಕಳೆದ ೨೧ ವರುಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೩,೧೮,೦೦೦ ದಾಟಿದೆ. ೨೦೧೫ರಲ್ಲಿ, ಒಂದೇ ವರುಷದಲ್ಲಿ, ೮,೦೦೭ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಕೃಷಿರಂಗದ ಗರ್ಭದಲ್ಲಿರುವ ತಲ್ಲಣಗಳ ಸೂಚಕ. ಕಳೆದ ಮೂರು ದಶಕಗಳಲ್ಲಿ ಹೀಗೇಕಾಯಿತು? ಏಕೆಂದರೆ, “ಆರ್ಥಿಕ ಸುಧಾರಣೆ”ಯ ಕ್ರಮಗಳು ಜ್ಯಾರಿ ಆದಾಗಿನಿಂದ ಕೃಷಿರಂಗವು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ನಮ್ಮ ದೇಶಕ್ಕೆ ಜಾಗತಿಕ ಬ್ಯಾಂಕ್ ನೀಡಿದ್ದ ನಿರ್ದೇಶನ: ೨೦೧೫ರ ಹೊತ್ತಿಗೆ ೪೦೦ ದಶಲಕ್ಷ ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಬೇಕು. ಅದಕ್ಕಾಗಿ, ಎಲ್ಲ ಸರಕಾರಗಳು ಕೃಷಿ ಎಂಬುದು ನಷ್ಟದ ವ್ಯವಹಾರ ಆಗುವಂತೆ ಮಾಡಿವೆ.
ಆಹಾರದ ಹಣದುಬ್ಬರ ನಿಯಂತ್ರಿಸಲಿಕ್ಕಾಗಿ ರೈತರ ಫಸಲಿಗೆ ಕಡಿಮೆ ಬೆಲೆ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಅದು ಎಷ್ಟು ಕಡಿಮೆಯೆಂದರೆ, ಫಸಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ. ಇದರಿಂದಾಗಿ, ವರುಷದಿಂದ ವರುಷಕ್ಕೆ ರೈತರ ಹತಾಶೆ ಹೆಚ್ಚುತ್ತಿದೆ. ಕೇಂದ್ರ ಸರಕಾರ ಪ್ರಕಟಿಸಿದ ೨೦೧೬ರ ಆರ್ಥಿಕ ಸಮೀಕ್ಷೆ ಪ್ರಕಾರ, ೧೭ ರಾಜ್ಯಗಳ ಕೃಷಿ ಕುಟುಂಬಗಳ ವಾರ್ಷಿಕ ಆದಾಯ ಕೇವಲ ರೂ.೨೦,೦೦೦. ಅಂದರೆ, ತಿಂಗಳಿಗೆ ರೂ.೧,೭೦೦ಕ್ಕಿಂತ ಕಡಿಮೆ. ಈ ಆದಾಯದಲ್ಲಿ ಒಂದು ಕುಟುಂಬ ಬಾಳಲು ಸಾಧ್ಯವೇ?
ಆದರೆ, ತಮ್ಮ ಕೈಮೀರಿದ ಕಾರಣಗಳಿಂದಾಗಿ ಬದುಕು ದಾರುಣವಾದಾಗ ಆತ್ಮಹತ್ಯೆ ಪರಿಹಾರವಲ್ಲ. ಕಡಿಮೆ ನೀರಿನಿಂದ ಬೆಳೆಸಬಹುದಾದ ಸಿರಿಧಾನ್ಯದ ಬೆಳೆಗಳ ಬೇಸಾಯದಿಂದ ಮನೆಮಂದಿಯ ಊಟಕ್ಕೆ ಬೇಕಾದ ಫಸಲು ಪಡೆಯಲು ಸಾಧ್ಯ. ಬಹುಬೆಳೆಗಳನ್ನು ಬೆಳೆಸಿದರೆ, ಒಂದಾದರೂ ಬೆಳೆ ಕೈಗೆ ಬಂದು, ಆದಾಯ ಸಿಗಲು ಸಾಧ್ಯ. ಫಸಲಿನ ಮೌಲ್ಯವರ್ಧನೆ ಮಾಡಿ (ಹಲಸಿನಿಂದ ಹಪ್ಪಳ, ಮಾವಿನಿಂದ ಮಾಂಬಳ) ಮಾರಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ರೀತಿ ಬದಲಾದ ಪರಿಸ್ಥಿತಿಯನ್ನು ಎದುರಿಸಿ ಬಾಳಬೇಕು. ಇದುವೇ ಜೀವನದ ಗೆಲವು, ಅಲ್ಲವೇ?