ಸಾಲದ, ಸಾವಿನ ಸುಳಿಯಿಂದ ರೈತರು ಪಾರಾಗಬೇಕಾದರೆ….

ಸಾಲದ, ಸಾವಿನ ಸುಳಿಯಿಂದ ರೈತರು ಪಾರಾಗಬೇಕಾದರೆ….

ಮುಂಬೈಯಿಂದ ಒಂದು ನೂರು ಕಿಮೀ ದೂರದ ಕಾರ್-ಸೊಡ್ ಗ್ರಾಮದಲ್ಲಿ (ಪಾಲ್-ಘರ್ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್ ಖರೀದಿಸುವುದು ಕಿಲೋಕ್ಕೆ ರೂ.೧೦ ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ, ಅವನ ಪಕ್ಕದಲ್ಲಿರುವ ಡೇರೆಯಲ್ಲಿ ಬೀನ್ಸ್ ಗುಡ್ಡವೇ ಬೆಳೆಯುತ್ತಿದೆ.
ಅನಂತರ, ಆ ಮಧ್ಯವರ್ತಿ ಅದೇ ಬೀನ್ಸನ್ನು ಕಿಲೋಕ್ಕೆ ರೂ.೭೦ ಅಥವಾ ರೂ.೮೦ ದರದಲ್ಲಿ ಮಾರುತ್ತಾನೆ. ಈತನಿಗೆ ಕುಳಿತಲ್ಲೇ ಲಾಭದ ಕೊಳ್ಳೆ. ಆದರೆ, ತಿಂಗಳುಗಟ್ಟಲೆ ಕಷ್ಟಪಟ್ಟು ಬೀನ್ಸ್ ಬೆಳೆಸಿದ ರೈತನಿಗೆ ಬೆಳೆಯ ವೆಚ್ಚವೂ ದಕ್ಕುವುದಿಲ್ಲ.
ಆದ್ದರಿಂದಲೇ ಈಗಷ್ಟೇ ದಾಟಿ ಹೋದ ೨೦೧೮ರಲ್ಲಿ ರೈತರ ಆಕ್ರೋಶ ಸ್ಫೋಟವಾಗಿತ್ತು. ಹಾಲನ್ನು, ತರಕಾರಿಗಳನ್ನು ರಸ್ತೆಗೆ ಸುರಿದು ರೈತರು ಪ್ರತಿಭಟಿಸಿದ್ದರು. ಯಾಕೆಂದರೆ, ಅವನ್ನು ಮಾರಿದರೆ ಸಿಗುವ ಹಣ, ಮಾರುಕಟ್ಟೆಗೆ ಅವನ್ನು ತಂದ ವಾಹನದ ಬಾಡಿಗೆಗೂ ಸಾಕಾಗುತ್ತಿರಲಿಲ್ಲ. ಕೃಷಿ ಎಂದರ ನಷ್ಟ ಎಂದಾಗಿದೆ!
ಮಹಾರಾಷ್ಟ್ರದಲ್ಲಿ ಬ್ಯಾಂಕಿನ ಎದುರು ಪ್ರತಿಭಟಿಸುತ್ತಿದ್ದ ರೈತನೊಬ್ಬ ಅಲ್ಲೇ ಸಾವಿಗೀಡಾದ. ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ನೂರಾರು. ಹತಾಶರಾದ ರೈತರು ಮತ್ತೆಮತ್ತೆ ಮೃತ್ಯುವಿಗೆ ಬಲಿಯಾಗುತ್ತಿದ್ದಾರೆ. ಯಾಕೆಂದರ ಅವರಿಗೆ ತಮ್ಮ ನಿರಂತರ ಬವಣೆಯಿಂದ ಪಾರಾಗಲು ಬೇರಾವ ದಾರಿಯೂ ತೋಚುತ್ತಿಲ್ಲ.
ಬವಣೆ ಮತ್ತು ಶೋಷಣೆಯಿಂದ ಪಾರಾಗಲಿಕ್ಕಾಗಿ ದಶಕಗಳ ಕಾಲ ಕಾದಿದ್ದಾರೆ ರೈತರು. “ಇನ್ನು ಕಾಯಲಾಗದು” ಎಂದು ಆಡಳಿತದ ಸೂತ್ರ ಹಿಡಿದವರಿಗೆ, ಅಧಿಕಾರಿಗಳಿಗೆ ಹಾಗೂ ದೇಶದ ಜನರಿಗೆ ೨೦೧೮ರ ಆರಂಭದಿಂದಲೇ ಸ್ಪಷ್ಟವಾಗಿ ಸೂಚಿಸಿದ್ದಾರೆ ರೈತರು: ಮುಂಬೈ ಮತ್ತು ಢೆಲ್ಲಿಯಂತಹ ಮಹಾನಗರಗಳ ರಸ್ತೆಗಳಲ್ಲಿ ಜಾಥಾ ನಡೆಸಿದ್ದಾರೆ; ದೇಶದ ಉದ್ದಗಲದಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆಗಳನ್ನು ಜರಗಿಸಿದ್ದಾರೆ. ದೇಶದ ರಾಜಧಾನಿ ಡೆಲ್ಲಿಯಲ್ಲಿ ಸಂಸತ್ತಿನ ಪಕ್ಕದಲ್ಲೇ ದೇಶದ ಮೂಲೆಮೂಲೆಗಳಿಂದ ಬಂದು ಜಮಾಯಿಸಿದ ೫೦,೦೦೦ ರೈತರು ಹಾಗೂ ಕೃಷಿಕೆಲಸಗಾರರ ಆಕ್ರೋಶ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಅವರ ಬೇಡಿಕೆಗಳೇನು? ಕಷ್ಟಪಟ್ಟು ಬೆಳೆಸಿದ ಬೆಳೆಗಳ ಫಸಲಿಗೆ ನ್ಯಾಯಯುತ ಬೆಲೆ, ಕೃಷಿಗೆ ಹಣದ ಅಗತ್ಯವಿದ್ದಾಗ ಸಾಲ, ಕೃಷಿಜಮೀನಿನ ಹಕ್ಕು, ಸುಪ್ರೀಂ ಕೋರ್ಟ್ ಆದೇಶಿಸಿರುವ “ಗೌರವದ ಬದುಕು ಬಾಳುವ ಹಕ್ಕು” – ಇಷ್ಟನ್ನೇ ರೈತರು ಕೇಳುತ್ತಿದ್ದಾರೆ.
ಮಾರ್ಚ್ ೨೦೧೮ರಲ್ಲಿ ನಾಸಿಕದಿಂದ ಮುಂಬೈಯ ಆಜಾದ್ ಮೈದಾನಕ್ಕೆ ಮತ್ತು ನವಂಬರ್ ೨೦೧೮ರಲ್ಲಿ ದೇಶದ ಮೂಲೆಮೂಲೆಗಳಿಂದ ಢೆಲ್ಲಿಯ ಸಂಸತ್ ರಸ್ತೆಗೆ ಸಾಗಿಬಂದ ರೈತರ, ಕೃಷಿಕೆಲಸಗಾರರ ಮತ್ತು ಬುಡಕಟ್ಟು ಜನರ ಜಾಥಾಗಳು ಮತ್ತು ಮಹಾ ಪ್ರತಿಭಟನಾ ಸಭೆಗಳ ಒಂದು ಪರಿಣಾಮ: ರೈತರ ಬದುಕುಬವಣೆಗಳ ಬಗ್ಗೆ ತಮಗೇನೂ ಸಂಬಂಧವಿಲ್ಲ ಎಂಬಂತಿದ್ದ ನಗರವಾಸಿಗಳೊಮ್ಮೆ ಬೆಚ್ಚಿಬಿದ್ದದ್ದು – ನೂರಾರು ಕಿಲೋಮೀಟರ್ ನಡೆದು ಕಾಲುಗಳಲ್ಲಿ ಬೊಬ್ಬೆ ಬಂದಿದ್ದ, ಸುಡುಬಿಸಿಲಿಗೆ ಮುಖದ ಚರ್ಮವೇ ಸುಟ್ಟು ಹೋಗಿದ್ದ, ಹೊತ್ತುಹೊತ್ತಿಗೆ ಊಟತಿಂಡಿ ಸಿಕ್ಕದೆ ಹಸಿದಿದ್ದ, ದಣಿದು ಬಸವಳಿದಿದ್ದ ಅನ್ನದಾತರನ್ನು ಕಣ್ಣಾರೆಕಂಡು. ಆ ಕ್ಷಣದಲ್ಲಿ, ಇವರೆಲ್ಲ ಬೆಳೆ ಬೆಳೆಸದಿದ್ದರೆ ತಮ್ಮ ಊಟದ ತಟ್ಟೆ ಬರಿದೋ ಬರಿದು ಎಂಬ ಸತ್ಯದರ್ಶನವಾಯಿತು ನಗರವಾಸಿಗಳಿಗೆ.
“ಹಸುರು ಕ್ರಾಂತಿ”ಯ ಜೊತೆಗೇ ನಮ್ಮ ದೇಶದಲ್ಲಿ ರೈತರ ಬವಣೆಗಳು ಶುರುವಾದವು. ದೇಸಿ ತಳಿಗಳನ್ನು ಮೂಲೆಗುಂಪು ಮಾಡಲಾಯಿತು; ಬದಲಾಗಿ ಹೈಬ್ರಿಡ್ ತಳಿಗಳನ್ನು ಬಳಕೆಗೆ ತರಲಾಯಿತು. ಸಾವಯವ ಕೃಷಿಯ ಬದಲಾಗಿ ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕ ಆಧಾರಿತ ಕೃಷಿಯನ್ನು ಪ್ರಚಾರ ಮಾಡಲಾಯಿತು. ಇದೆಲ್ಲದರ ದುಷ್ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಉಗ್ರಾಣಗಳಲ್ಲಿ ಆಹಾರಧಾನ್ಯಗಳ ದಾಸ್ತಾನಿದ್ದರೂ ಲಕ್ಷಗಟ್ಟಲೆ ಬಡವರಿಗೆ ಅವು ಸಿಗುತ್ತಿಲ್ಲ. ಪಡಿತರ ವ್ಯವಸ್ಥೆಗೆ ನೀಡಲಾಗುವ ದೊಡ್ಡಪ್ರಮಾಣದ ಆಹಾರಧಾನ್ಯಗಳು ಕಳ್ಳಸಂತೆಕೋರರ ಪಾಲಾಗುತ್ತಿವೆ. ಪಂಜಾಬ್ ಸಹಿತ ಹಲವಾರು ರಾಜ್ಯಗಳಲ್ಲಿ ಮಣ್ಣು ಫಲವತ್ತತೆ ಕಳೆದುಕೊಂಡಿದೆ; ಇದರಿಂದಾಗಿ ಎಕ್ರೆವಾರು ಇಳುವರಿ ಕುಸಿಯುತ್ತಿದೆ. ಸಾಧಾರಣ ಮಟ್ಟದ ಫಸಲು ಪಡೆಯಬೇಕಾದರೂ ಮಣ್ಣಿಗೆ ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಸುರಿಯಬೇಕಾಗಿದೆ. ದೇಸಿ ಬೀಜಗಳು ಕಣ್ಮರೆಯಾಗಿ, ರೈತರು ಬೀಜಗಳಿಗಾಗಿ ಬಹುರಾಷ್ಟ್ರೀಯ ಮತ್ತು ಸ್ಥಳೀಯ ಕಂಪೆನಿಗಳನ್ನು ಅವಲಂಬಿಸ ಬೇಕಾಗಿದೆ. ಇದೆಲ್ಲದರ ಪರಿಣಾಮವಾಗಿ ವರುಷದಿಂದ ವರುಷಕ್ಕೆ ಕೃಷಿಯ ವೆಚ್ಚ ಏರುತ್ತಿದೆ. ಆದರೆ ರೈತರ ಕೃಷಿ ಆದಾಯ ಕುಸಿಯುತ್ತಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ ೨೦೧೫ರಲ್ಲಿ ಭಾರತದ ಪರಿಸ್ಥಿತಿ ಬಗ್ಗೆ ಹೀಗೆಂದು ವರದಿ ಮಾಡಿದೆ: “ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಮತ್ತು ಕೃಷಿ ಉತ್ಪನ್ನಗಳ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ, ಭಾರತವು ಅತ್ಯಂತ ಜಾಸ್ತಿ ಪೋಷಕಾಂಶ-ಕೊರತೆಯ ಜನರು (೧೯೪.೬ ದಶಲಕ್ಷ) ಇರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.”
ನಮ್ಮ ದೇಶದ ರೈತರ ಸರಾಸರಿ ಮಾಸಿಕ ಆದಾಯ ಸುಮಾರು ರೂ.೬,೦೦೦. ಹತ್ತು ವರುಷಗಳ ಮುಂಚೆ ಇದು ರೂ.೨,೦೦೦ ಆಗಿತ್ತು (ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಮಾಹಿತಿ). ಆದರೆ, ೨೦೦೩ರಲ್ಲಿ ಶೇ.೪೮.೬ ಕೃಷಿಕುಟುಂಬಗಳು ಸಾಲ ಮಾಡಿದ್ದರೆ, ೨೦೧೩ರಲ್ಲಿ ಶೇ.೫೨ ಕೃಷಿಕುಟುಂಬಗಳು ಸಲದಲ್ಲಿವೆ. ಇದು ಕೃಷಿ ಆದಾಯದಿಂದ ಕೃಷಿವೆಚ್ಚ ಸರಿದೂಗಿಸಲು ಆಗುತ್ತಿಲ್ಲ ಎಂಬುದರ ಪ್ರಬಲ ಪುರಾವೆ. ಆದ್ದರಿಂದಲೇ, ೨೦೦೧-೧೧ರ ಅವಧಿಯಲ್ಲಿ ೯ ದಶಲಕ್ಷ ಕೃಷಿಕರು ಕೃಷಿ ತೊರೆದಿದ್ದಾರೆ (ಮಹಾ ಜನಗಣತಿಯ ಮಾಹಿತಿ).
ಇಂತಹ ಸನ್ನಿವೇಶದಲ್ಲಿ, ರೈತರ ಆತ್ಮಹತ್ಯೆಗಳು ಸುದ್ದಿಯಾಗುವುದೇ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (ಎನ್.ಸಿ.ಆರ್.ಬಿ.) ಪ್ರಕಟಣೆ ಪ್ರಕಾರ, ೧೯೯೫ರಿಂದ ೨೦೧೫ರ ಇಪ್ಪತ್ತು ವರುಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೩,೨೧,೪೨೮. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಏನು ಮಾಡುತ್ತಿವೆ? ಗಮನಿಸಿ: ೨೦೧೫ರ ನಂತರ ಎನ್.ಸಿ.ಆರ್.ಬಿ. ರೈತರ ಆತ್ಮಹತ್ಯೆಗಳ ಬಗ್ಗೆ ವಾರ್ಷಿಕ ಅಂಕೆಸಂಖ್ಯೆ ಪ್ರಕಟಿಸುತ್ತಿಲ್ಲ! ಕೆಲವು ರಾಜ್ಯ ಸರಕಾರಗಳು “ರೈತ” ಪದದ ವಿವರಣೆಯನ್ನೇ ತಿರುಚಿ, “ನಮ್ಮ ರಾಜ್ಯದಲ್ಲಿ ಕಳೆದ ವರುಷ ಯಾವನೇ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ” ಎಂದು ಘೋಷಿಸುತ್ತಿವೆ!
ಇದೆಲ್ಲದರ ಬದಲಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ಕೃಷಿಕರ ಕಮಿಷನಿನ ಶಿಫಾರಸುಗಳನ್ನು ಜ್ಯಾರಿ ಮಾಡಬೇಕಾಗಿತ್ತು. ಮುಖ್ಯವಾಗಿ, ಬೆಳೆ ಬೆಳೆಯುವ ವೆಚ್ಚದ ಶೇ.೧೫೦ನ್ನು ಕನಿಷ್ಠ ಬೆಂಬಲ ಬೆಲೆಯಾಗಿ ರೈತರಿಗೆ ಪಾವತಿಸ ಬೇಕಾಗಿತ್ತು. ಕೇವಲ “ಸಾಲಮನ್ನಾ” ಮಾಡಿ, ರೈತರನ್ನು ಸಾಲ ಮತ್ತು ಸಾವಿನ ಸುಳಿಯಿಂದ ಪಾರು ಮಾಡಲು ಸಾಧ್ಯವಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗಿದೆ.
ಅದಲ್ಲದೆ, ಗ್ರಾಹಕರೂ ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕಾಗಿದೆ. ರೈತರಿಂದಲೇ ನೇರವಾಗಿ ಖರೀದಿಸುವ ವ್ಯವಸ್ಥೆಗಳನ್ನು ಹೆಚ್ಚಿಸಿಕೊಳ್ಳಬೇಕು. ಈಗ ಮಧ್ಯವರ್ತಿಗಳ ಜೇಬು ಸೇರುತ್ತಿರುವ (ಗ್ರಾಹಕ ಪಾವತಿಸುವ) ಖರೀದಿ ಬೆಲೆಯ ಪಾಲು ಶೇ.೪೦ರಿಂದ ಶೇ.೬೦. ಇದು ರೈತರ ಕೈಸೇರಿದರೆ, ಅವರ ಆದಾಯ ಖಂಡಿತ ಹೆಚ್ಚುತ್ತದೆ. ಮಂಗಳೂರಿನಲ್ಲಿ ೨೦೧೩ರಿಂದ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ” ಇಂತಹ ವ್ಯವಸ್ಥೆ ನಡೆಸಿಕೊಂಡು ಬಂದಿದೆ. ಪ್ರತಿ ಭಾನುವಾರ ಬೆಳಗ್ಗೆ ೭ರಿಂದ ೧೦.೩೦ ಗಂಟೆ ತನಕ ನಾವು ಜರಗಿಸುವ “ಸಾವಯವ ಹಣ್ಣು – ತರಕಾರಿ – ಧಾನ್ಯ ಸಂತೆ”ಯಲ್ಲಿ ಸುಮಾರು ೧,೦೦೦ ಗ್ರಾಹಕರು ರೈತರಿಂದಲೇ ನೇರವಾಗಿ ಖರೀದಿಸುತ್ತಿದ್ದಾರೆ. ಹೊಸವರುಷದ ಆರಂಭದಲ್ಲಿ, ಇಂತಹ ವ್ಯವಸ್ಥೆಗಳು ಹೆಚ್ಚೆಚ್ಚು ಸ್ಥಳಗಳಲ್ಲಿ ಬೆಳೆದು ಬರಲೆಂದು ಹಾರೈಸೋಣ.
ಫೋಟೋ ಕೃಪೆ: ಇಕನಾಮಿಕ್ ಟೈಮ್ಸ್ ದಿನಪತ್ರಿಕೆ