ರೈತರ ಹತಾಶೆಯ ಕೂಗು ಕೇಳಿಸುತ್ತಿದೆಯೇ?

ರೈತರ ಹತಾಶೆಯ ಕೂಗು ಕೇಳಿಸುತ್ತಿದೆಯೇ?

ತೆಲಂಗಾಣ ೨೦೧೮ರ ಆಗಸ್ಟ್ ೧೫-೧೬ರಂದು ನೆರೆಯಿಂದಾಗಿ ತತ್ತರಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿನ “ಕಿಸಾನ್ ಮಿತ್ರ” ಸಹಾಯವಾಣಿಯ ಶ್ರುತಿ ಅವರಿಗೊಂದು ಹತಾಶೆಯ ಫೋನ್ ಕರೆ ಬಂತು.
ಆ ಫೋನ್ ಕರೆ ಮಾಡಿದವರು ಶಿವಣ್ಣ. ಅವರ ಹತ್ತಿ ಹೊಲಕ್ಕೆ ನೆರೆ ನುಗ್ಗಿತ್ತು. ಅನಿಶ್ಚಿತ ಭವಿಷ್ಯದ ಭಯ ತಾಳಲಾಗದೆ ಕೀಟನಾಶಕ ಕುಡಿದು ಸಾಯಲು ಸಿದ್ಧರಾಗಿದ್ದರು. “ಅದೃಷ್ಠವಶಾತ್ ಶಿವಣ್ಣ ವಿಷ ಕುಡಿಯುವ ಮುಂಚೆ ಅವರ ನೆರೆಹೊರೆಯವರು ಗಮನಿಸಿ, ಸಹಾಯವಾಣಿಗೆ ಫೋನ್ ಮಾಡಿಸಿದರು” ಎನ್ನುತ್ತಾರೆ ಶ್ರುತಿ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡ ಶ್ರುತಿ ಫೋನಿನಲ್ಲಿ ಬಹಳ ಹೊತ್ತು ಶಿವಣ್ಣನ ಜೊತೆ ಮಾತನಾಡಿದರು. ಅಷ್ಟರಲ್ಲಿ ಕ್ಷೇತ್ರ ಸಂಚಾಲಕರನ್ನು ಶಿವಣ್ಣನ ಬಳಿಗೆ ಕಳಿಸಲಾಯಿತು.
“ನಮಗೆ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶ ಮಾಡಿ, ಆತ್ಮಹತ್ಯೆ ತಪ್ಪಿಸಲು ಸಾಧ್ಯವಾಯಿತು. ನಮ್ಮ ಸೂಚನೆಯಂತೆ ಅಲ್ಲಿನ ಕೃಷಿ ಅಧಿಕಾರಿ ಶಿವಣ್ಣರನ್ನು ಭೇಟಿ ಮಾಡಿದರು. ಅನಂತರ ಶಿವಣ್ಣರನ್ನು ಜಿಲ್ಲಾಧಿಕಾರಿಯ ಬಳಿಗೆ ಕರೆದೊಯ್ದೆವು. ಶಿವಣ್ಣ ತನ್ನ ಜಮೀನಿನ ಒಂದು ಭಾಗ ಮಾರಾಟ ಮಾಡಿದ್ದರು; ಅದರ ಹಣ ಅವರ ಕೈಸೇರಲು ಜಿಲ್ಲಾಧಿಕಾರಿ ಸಹಾಯ ಮಾಡಿದರು. ಅಷ್ಟೇ ಅಲ್ಲ, ಶಿವಣ್ಣ ಆಟೋರಿಕ್ಷಾ ಖರೀದಿಸಲು ಜಿಲ್ಲಾಧಿಕಾರಿ ಹಣಕಾಸಿನ ವ್ಯವಸ್ಥೆ ಮಾಡಿದರು. ಈಗ ಶಿವಣ್ಣ ಚೆನ್ನಾಗಿದ್ದಾರೆ” ಎಂದು ತಿಳಿಸುತ್ತಾರೆ ಶ್ರುತಿ. ಹೀಗೆ, ಕಿಸಾನ್ ಮಿತ್ರದಂತಹ ಸಹಾಯವಾಣಿಗಳು ನಮ್ಮ ದೇಶದ ಹತಾಶ ರೈತರ ಜೀವ ಉಳಿಸಲು ಸಹಾಯ ಮಾಡುತ್ತಿವೆ.
ಆದರೆ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ೨೦೧೫ರಿಂದೀಚೆಗೆ ರೈತರ ಆತ್ಮಹತ್ಯೆ ಬಗ್ಗೆ ಅಂಕೆಸಂಖ್ಯೆ ಪ್ರಕಟಿಸಿಲ್ಲ. ಬ್ಯುರೋ ಪ್ರಕಟಿಸಿದ ೨೦೧೫ರ ಮಾಹಿತಿ ಅನುಸಾರ, ಆ ವರುಷ ೮,೦೦೭ ರೈತರು ಮತ್ತು ೪,೫೮೫ ಕೃಷಿ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡರು.
ಈ ಪರಿಸ್ಥಿತಿಯಲ್ಲಿ, ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಸಹಾಯಕ ರೈತರನ್ನು ಹತಾಶೆಯ ಶೂಲದಿಂದ ರಕ್ಷಿಸಲು ಮಾಡುತ್ತಿರುವ ಪ್ರಯತ್ನಗಳು ಗಮನಾರ್ಹ. ಕೆಲವು ರಾಜ್ಯಗಳಲ್ಲಿ ಬದುಕಿನ ಭರವಸೆ ಕಳೆದುಕೊಂಡ ರೈತರಿಗೆ ಮಾನಸಿಕ ಬೆಂಬಲ ನೀಡಲು ಕಾರ್ಯಕ್ರಮಗಳನ್ನು ಶುರು ಮಾಡಿರುವುದು ಮುಖ್ಯ ಬೆಳವಣಿಗೆ.
ಮಹಾರಾಷ್ಟ್ರದ ಯವತ್‍ಮಾಲ್ ಜಿಲ್ಲೆಯಲ್ಲಿ ೨೦೦೫ರಿಂದ ಕಾರ್ಯಾಚರಿಸುತ್ತಿರುವ ಸೊಸೈಟಿ ಫಾರ್ ರೂರಲ್ ಆಂಡ್ ಅರ್ಬನ್ ಜಾಯಿಂಟ್ ಆಕ್ಟಿವಿಟೀಸ್ (ಶ್ರುಜನ್) ಅಂತಹ ಒಂದು ಸಂಸ್ಥೆ. “ಹತಾಶನಾದ ರೈತ ತಾನು ಏಕಾಂಗಿ, ತನಗೆ ಯಾರೂ ಇಲ್ಲ ಎಂದು ಭಾವಿಸಬಾರದು ಎಂಬುದು ನಮ್ಮ ಆಶಯ. ಅದಕ್ಕಾಗಿ ರೈತರೊಂದಿಗೆ ಸಭೆಗಳನ್ನು ನಡೆಸಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಖಿನ್ನತೆಯಂತಹ ಸಂಗತಿಗಳ ಬಗ್ಗೆ ಸಂವಾದ ನಡೆಸುತ್ತೇವೆ” ಎನ್ನುತ್ತಾರೆ ಶ್ರುಜನ್ ಸಂಸ್ಥೆಯ ಯೋಗಿನಿ ದೋಲ್ಕೆ.
೨೦೦೫ರಲ್ಲಿ ಶ್ರುಜನ್ ಸಂಸ್ಥೆ ರೈತರಿಗಾಗಿ ಕಾರ್ಯಕ್ರಮ ಆರಂಭಿಸಿದಾಗ, ಆ ಸಂಸ್ಥೆಯಲ್ಲೇ ಒಬ್ಬ ಮನಶಾಸ್ತ್ರಜ್ನ ಇದ್ದರು. ಅನಂತರ, ೨೦೧೫ರಲ್ಲಿ ಮಹಾರಾಷ್ಟ್ರ ಸರಕಾರವು ಇದೇ ಉದ್ದೇಶದಿಂದ “ಪ್ರೇರಣಾ” ಎಂಬ ಸಹಾಯವಾಣಿ ಆರಂಭಿಸಿತು. ಇದಕ್ಕೆ ಹತಾಶ ರೈತರು ಫೋನ್ ಕರೆ ಮಾಡಿ ಆಪ್ತಸಲಹೆ (ಕೌನ್ಸೆಲಿಂಗ್) ಪಡೆಯಬಹುದು. ಸುಮಾರು ಒಂದು ವರುಷ “ಪ್ರೇರಣಾ” ಸಹಾಯವಾಣಿ ಚೆನ್ನಾಗಿ ಕೆಲಸ ಮಾಡಿದರೂ, ನಂತರ ಅದರಲ್ಲಿ ಎಲ್ಲವೂ ಸರಿಯಿಲ್ಲ.
ಮಹಾರಾಷ್ಟ್ರ ಸರಕಾರವು ರೈತರ ಆತ್ಮಹತ್ಯೆ ಮತ್ತು ಅದನ್ನು ತಡೆಯುವಲ್ಲಿ ಮನಃಶಾಸ್ತ್ರದ ಪಾತ್ರದ ಬಗ್ಗೆ ೨೦೦೫ರಲ್ಲಿ ಅಧ್ಯಯನ ನಡೆಸಿತ್ತು. ವಾರ್ಧಾದ ಮಹಾತ್ಮಗಾಂಧಿ ವೈದ್ಯಕೀಯ ವಿಜ್ನಾನ ಸಂಸ್ಥೆಯ ಮನಃಶಾಸ್ತ್ರ ವಿಭಾಗದ ಪಿ.ಬಿ. ಬೆಹೆರೆ ಆ ಅಧ್ಯಯನ ತಂಡದ ಒಬ್ಬ ಸಂಶೋಧಕರು. “ಆತ್ಮಹತ್ಯೆಯ ಪ್ರಯತ್ನದಿಂದ ಪಾರಾದವರಲ್ಲಿ ಹಲವರು ತಾವು ಪುನಃ ಆತ್ಮಹತ್ಯೆ ಮಾಡಬೇಕೆಂದು ಯೋಚಿಸುತ್ತಿರುವುದಾಗಿ ತಿಳಿಸಿದರು” ಎಂಬ ಆತಂಕಕಾರಿ ಮಾಹಿತಿ ನೀಡುತ್ತಾರೆ ಬೆಹೆರೆ.
ತೆಲಂಗಾಣದಲ್ಲಿ ಸ್ಥಾಪಿಸಲಾದ ಕಿಸಾನ್ ಮಿತ್ರ ಸಹಾಯವಾಣಿ ಸಕ್ರಿಯವಾಗಿದೆ (ಮಹಾರಾಷ್ಟ್ರದ ನಂತರ, ಆತ್ಮಹತ್ಯೆ ಮಾಡಿಕೊಂಡ ಅತ್ಯಧಿಕ ರೈತರ ರಾಜ್ಯ ತೆಲಂಗಾಣ). ಎಪ್ರಿಲ್ ೨೦೧೭ರಿಂದ ಕಿಸಾನ್ ಮಿತ್ರ ಸಹಾಯವಾಣಿ ಸುಮಾರು ೪,೦೦೦ ಹತಾಶ ರೈತರಿಗೆ ಸಹಾಯ ಮಾಡಿದೆ. ಅದರ ಶುಲ್ಕರಹಿತ ಸಹಾಯವಾಣಿ ೧೮೦೦೧೨೦೩೨೪೪ ಮೂಲಕ ರೈತರ ದೂರುಗಳು ಮತ್ತು ಪ್ರಶ್ನೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗುತ್ತಿದೆ. ೨೦೧೮ರಲ್ಲಿ ಮುಂಗಾರು ಹಂಗಾಮಿನಲ್ಲಿ ಹತ್ತಿಯ ಬೆಲೆ ಕುಸಿಯಿತು. ಆಗ, ಕಿಸಾನ್ ಮಿತ್ರಕ್ಕೆ ಬಂದ ಕರೆಗಳ ಮಾಹಿತಿ ಆಧರಿಸಿ, ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಿದ ಕಾರಣ ರೈತರಿಗೆ ಸಹಾಯವಾಯಿತು.
ಅಲ್ಲಿನ ಸುಸ್ಥಿರ ಕೃಷಿ ಕೇಂದ್ರವು ಪತ್ರಿಕಾ ವರದಿಗಳು ಮತ್ತು ಸ್ವಯಂಸೇವಕರು ಕಳಿಸಿದ ಮಾಹಿತಿಯ ಆಧಾರದಿಂದ ರೈತ ಆತ್ಮಹತ್ಯೆಗಳ ಅಂಕೆಸಂಖ್ಯೆ ದಾಖಲಿಸುತ್ತಿದೆ. ಅದರ ಕಾರ್ಯನಿರ್ವಾಹಕ ನಿರ್ದೇಶಕ ಜಿ.ವಿ. ರಾಮಾಂಜನೇಯುಲು. “ರೈತರೊಂದಿಗೆ ಮಾತನಾಡುವುದಕ್ಕೆ ಯಾರೂ ಇಲ್ಲ. ರೈತರ ಖಿನ್ನತೆ ಪ್ರಾಣಾಂತಿಕ ಮಟ್ಟಕ್ಕೇರಲು ಇದುವೇ ಮುಖ್ಯ ಕಾರಣ. ಮೊದಲಾಗಿ, ನಿಮಗಾಗಿ ನಾವಿದ್ದೇವೆ ಎಂಬ ವಿಶ್ವಾಸವನ್ನು ರೈತರಲ್ಲಿ ಮೂಡಿಸಬೇಕು. ಅನಂತರ ರೈತರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಮಾತಾಡಬೇಕು. ಅದಾದ ನಂತರ ಆ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ವಿವರಿಸುತ್ತಾರೆ.
ಹಲವು ರಾಜ್ಯಗಳು ರೈತ ಸಹಾಯವಾಣಿ ಆರಂಭಿಸಿವೆ – ರೈತರ ಆತ್ಮಹತ್ಯೆಗೆ ಮಾನಸಿಕ ಆರೋಗ್ಯದ ಕೊರತೆ ಕಾರಣ ಎಂಬ ನೆಲೆಯಲ್ಲಿ. ಆದರೆ ಪರಿಣತರ ಅಭಿಪ್ರಾಯ ಮತ್ತು ಅಧ್ಯಯನಗಳ ಪ್ರಕಾರ, ರೈತರ ಆತ್ಮಹತ್ಯೆ ಕಡಿಮೆ ಮಾಡಬೇಕಾದರೆ, ಮನಃಶಾಸ್ತ್ರ ಆಧಾರಿತ ಕ್ರಮಗಳಿಗಿಂತ ರೈತರ ಹತಾಶೆ ಹೋಗಲಾಡಿಸುವ ಸರಕಾರದ ಧೋರಣಾತ್ಮಕ ಕ್ರಮಗಳು ಹೆಚ್ಚು ಪರಿಣಾಮಕಾರಿ.
ಉದಾಹರಣೆಗೆ, ಇಂಡಿಯನ ಜರ್ನಲ್ ಆಫ್ ಸೈಕಿಯಾಟ್ರಿ ಸಂಶೋಧನಾ ಪತ್ರಿಕೆಯಲ್ಲಿ ೨೦೧೭ರಲ್ಲಿ ಪ್ರಕಟವಾದ ಒಂದು ಅಧ್ಯಯನ ವರದಿ ಹೀಗೆನ್ನುತ್ತದೆ: “ಕರ್ನಾಟಕ, ಕೇರಳ, ತಮಿಳ್ನಾಡು ಮತ್ತು ಇತರ ರಾಜ್ಯಗಳಲ್ಲಿ ನಡೆಸಿದ ಅಧ್ಯಯನಗಳಿಂದ ಪಡೆದ ಸಾಕ್ಷ್ಯಗಳ ಅನುಸಾರ, ರೈತರ ಆತ್ಮಹತ್ಯೆಗಳಲ್ಲಿ ಮಾನಸಿಕ ಸಮಸ್ಯೆಗಳ ಪಾತ್ರಕ್ಕಿಂತ ಸಾಮಾಜಿಕ – ಆರ್ಥಿಕ ಒತ್ತಡಗಳ ಪಾತ್ರ ಹಿರಿದಾಗಿದೆ.”
“ಮಹಾರಾಷ್ಟ್ರದ ವಿಧರ್ಭ ಪ್ರದೇಶದಲ್ಲಿ ರೈತರ ಆತ್ಮಹತ್ಯೆ: ಕಟ್ಟುಕತೆ ಅಥವಾ ವಾಸ್ತವ” ಎಂಬ ಶೀರ್ಷಿಕೆಯ ಅಧ್ಯಯನ ವರದಿ ಹೀಗೆಂದು ದಾಖಲಿಸಿದೆ: “ರೈತರ ಆತ್ಮಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ವಿವಿಧ ಅಂಶಗಳು ಇವು: ವಿಪರೀತ ಸಾಲ ಮತ್ತು ವರ್ಷಗಟ್ಟಲೆ ಬಾಕಿಯಾದ ಬಡ್ಡಿ ಪಾವತಿಸಲು ಅಸಾಮರ್ಥ್ಯ; ಕೌಟುಂಬಿಕ ಜಗಳಗಳು, ಖಿನ್ನತೆ ಮತ್ತು ಮದ್ಯಪಾನ ಚಟಕ್ಕೆ ಕಾರಣವಾಗುವ ಆರ್ಥಿಕ ಸಂಕಷ್ಟಗಳು; ಆತ್ಮಹತ್ಯೆ ಮಾಡಿಕೊಂಡರೆ ಸಿಗುವ ಪರಿಹಾರದ ಹಣದಿಂದ ಸಾಲ ತೀರಿಸಲು ಕುಟುಂಬಕ್ಕೆ ಆಗುವ ಸಹಾಯ; ಕೃಷಿಯ ಒಳಸುರಿಗಳ (ಬೀಜ, ಗೊಬ್ಬರ ಇತ್ಯಾದಿ) ಏರುತ್ತಿರುವ ವೆಚ್ಚ ಮತ್ತು ಕುಸಿಯುತ್ತಿರುವ ಕೃಷಿ ಉತ್ಪನ್ನಗಳ ಬೆಲೆ.”
ವಾಸ್ತವ ಹೀಗಿರುವಾಗ, ಕೃಷಿರಂಗದ ಬಿಕ್ಕಟ್ಟು ಮತ್ತು ರೈತ ಆತ್ಮಹತ್ಯೆಗಳ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಅಗತ್ಯ. ಮುಂಬೈ ಅಥವಾ ಢೆಲ್ಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟಿಸಿದ ರೈತರು ತೀವ್ರ ಹತಾಶೆಯ ಎಚ್ಚರಿಕೆಯ ಸಂದೇಶಗಳನ್ನು ಕಳಿಸುತ್ತಲೇ ಇದ್ದಾರೆ. ಬದುಕಬೇಕು ಎಂಬುದು ಅವರ ಆಶಯ. ಅವರನ್ನು ಹತಾಶೆಯ ಪ್ರಪಾತದ ಅಂಚಿಗೆ ತಳ್ಳಬಾರದು, ಅಲ್ಲವೇ?
ಫೋಟೋ ಕೃಪೆ: ರಾಯಿಟರ್ಸ್