ಚಾಣಕ್ಯ ನೀತಿ - ಮತ್ತೊಮ್ಮೆ

ಚಾಣಕ್ಯ ನೀತಿ - ಮತ್ತೊಮ್ಮೆ

ಕೆಲವು ದಿನಗಳ ಹಿಂದೆ ಚಾಣಕ್ಯ ಪಂಡಿತನ ಕೆಲವು ಸುಭಾಷಿತಗಳನ್ನು ರೂಪಾಂತರಿಸಿ ಬರೆದಿದ್ದೆ.

ಇವತ್ತು ಅದೇ ನೀತಿದರ್ಪಣದ ಇನ್ನು ಕೆಲವು ಸುಭಾಷಿತಗಳು ಇಲ್ಲಿವೆ ನೋಡಿ. ಮೂಲವನ್ನೂ (ಕನ್ನಡ ಲಿಪಿಯಲ್ಲೇ) ಬರೆದಿದ್ದೇನೆ:

 
ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ?
 
ಒಳ್ಳೆಯ ಮಾತನು ಕೇಳಲು
ಎಲ್ಲರು ಸಂತಸ ಹೊಂದುವರು
ಅದಕೇ ಅಂಥಾ ಮಾತನೆ ನೀ ನುಡಿ
ಬರೀ ಮಾತಿಗೇನು ಬಡತನವು ?
 
ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತ ಗತಂ ಧನಂ
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ಸ ತದ್ ಧನಂ
 
ಹೊತ್ತಿಗೆಯೊಳಗೆ ಅಡಗಿದ ತಿಳಿವು
ಕಂಡವರಿಗೆ ಕೊಟ್ಟಿರುವ ಹಣವು
ಬೇಕಾದಾಗ ದೊರಕದೆ ಇರಲು
ಅದೇನು ತಿಳಿವು? ಅದೇನು ಹಣವು?

 
ತಕ್ಷಕಸ್ಯ ವಿಷಂ ದಂತೇ ಮಕ್ಷಿಕಾಯಾಸ್ತು ಮಸ್ತಕೇ
ವೃಶ್ಚಿಕಶ್ಚ ವಿಷಂ ಪುಚ್ಚೇ ಸರ್ವಾಂಗೇ ದುರ್ಜನೇ ವಿಷಂ
 
ಚೇಳಿನ ವಿಷವದು ಬಾಲದ ಕೊಂಡಿಲಿ
ನೊಣಕ್ಕದು ಬಾಯಲ್ಲೆಲ್ಲಾ
ಹಾವಿನ ಹಲ್ಲಲಿ ತುಂಬಿದೆ ಆ ವಿಷ
ಕೆಟ್ಟವನಿಗೋ ಮೈಯಲ್ಲೆಲ್ಲಾ
 
ನ ದೇವೋ ವಿದ್ಯತೇ ಕಾಷ್ಟೇ ನ ಪಾಷಾಣೇ ನ ಮೃಣ್ಮಯೇ
ಭಾವೇ ಹಿ ವಿದ್ಯತೇ ದೇವ: ತಸ್ಮಾದ್ಬ್ಭಾವೋ ಹಿ ಕಾರಣಂ
 
ಕಟ್ಟಿಗೆಯಲ್ಲಿಲ್ಲ ಅವನು
ಕಲ್ಲಲಿ ಮಣ್ಣಲಿ ಅವನಿಲ್ಲ
ಮನದಲಿ ಇಹನು ಆ ಜಗದೊಡೆಯನು
ಭಾವವೆ ಎಲ್ಲಕು ಕಾರಣವು
 
ದುರ್ಜನಸ್ಯ ಚ ಸರ್ಪಸ್ಯ ವರಂ ಸರ್ಪೋ ನ ದುರ್ಜನಃ
ಸರ್ಪೋ ದಂಶತಿ ಕಾಲೇ ತು ದುರ್ಜನಸ್ತು ಪದೇಪದೇ
 
ಕೆಟ್ಟವರಿಗೂ ಹಾವಿಗೂ ನಡುವೆ 
ನನಗಿರಲಿ ಹಾವಿನದೇ ಕೆಳೆ
ಹಾವು ಕಚ್ಚೀತು ಅಪರೂಪದಲಿ
ಕೆಟ್ಟವನೋ? ಪದೇಪದೆ!
 
-ಹಂಸಾನಂದಿ
Rating
No votes yet