" ದೀಪಾವಳಿ," ಹಬ್ಬ !

" ದೀಪಾವಳಿ," ಹಬ್ಬ !

" ದೀಪಾವಳಿ," ಹಬ್ಬ !

ಈ ದೀಪಾವಳಿಯ ಪವಿತ್ರಶುಭ-ದಿನದಂದು ಸಂಪದಿಗರಿಗೆಲ್ಲಾ, ಹಾಗೂ ಕನ್ನಡಿಗರಿಗೆಲ್ಲಾ ಹಾರ್ದಿಕ ಶುಭಾಶಯಗಳು.

ದೀಪಾಲಂಕಾರಗಳಿಂದ, ಮನದ ಕತ್ತಲನ್ನು ಹೊಡೆದೋಡಿಸಿ ಹೊಸ ಬೆಳಕನ್ನು ಆಹ್ವಾನಿಸುವ, ಅದನ್ನು ಆಸ್ವಾದಿಸುವ ಹಬ್ಬ ! ನಮ್ಮಲ್ಲೇ ಆಳವಾಗಿ ಹೂತಿರುವ ಕತ್ತಲೆಗಳಾದ, ಅಜ್ಞಾನ, ಆಲಸ್ಯ, ಅನಾರೋಗ್ಯ, ದಾರಿದ್ರ್ಯ, ನಿರಾಶೆ, ಖಿನ್ನತೆಗಳೆಲ್ಲಾ ಕತ್ತಲಿನ ಅನೇಕಮುಖಗಳು. ದೀಪ ಹಚ್ಚುವ, ಅಥವ ಪ್ರಜ್ವಲನದಿಂದ, ಬೆಳಕನ್ನು ತರುವ ಪ್ರಕ್ರಿಯೆ, ನಮ್ಮ ಜೀವನದಲ್ಲಿ ಎಲ್ಲೋ ಮಂಕಾಗಿ, ಕ್ಷೀಣವಾಗಿ ಕಾಣಿಸಿಕೊಳ್ಳುತ್ತಿರುವ ಜೀವನೋಲ್ಲಾಸದ ಸೆಲೆಯನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿ ಕಾರ್ಯೋನ್ಮುಖರಾಗಲು ಪ್ರೇರೆಪಿಸುವ ಸದುದ್ದೇಶವೇ ದೀಪಾವಳಿಯ ಪ್ರಮುಖ ಉದ್ದೇಶ್ಯ. ದೀಪಾವಳಿ ನಮ್ಮೆಲ್ಲರಿಗೂ ವಿಶಿಶ್ಠಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ದೀಪಾವಳಿಯಲ್ಲಿ ಆಚರಣೆಯಲ್ಲಿರುವ ಪ್ರಮುಖ ದಿನಗಳು ಮೂರು.

೧. ನರಕ ಚತುರ್ದಶಿ.

೨. ಅಮಾವಾಸ್ಯೆ.

೩. ಬಲಿಪಾಡ್ಯಮಿ.

ದೀಪಾವಳಿ ಈ ೩ ದಿನಗಳನ್ನೂ ವ್ಯಾಪಿಸಿದೆ. ಅದಲ್ಲದೆ ಅದರ ಸಂದೇಶ ವರ್ಷದ ಇನ್ನುಳಿದ, ೩೬೨ ದಿನಗಳನ್ನು ಸಹಿತ! ನರಕಾಸುರನೆಂಬ ರಾಕ್ಷಸನ ಸಂಹಾರದಿಂದ ಪ್ರಜೆಗಳಿಗೆ, ಅದರಲ್ಲೂ ಬಂದಿಗಳಾಗಿದ್ದ ಸ್ತ್ರೀಯರಿಗೆ, ಬಿಡುಗಡೆಯ ದೀಪವನ್ನು ತೋರಿಸಿದ್ದು, ಶ್ರೀಕೃಷ್ಣ. ಇದು ನಡೆದದ್ದು ನರಕಚತುರ್ದಶಿಯ ದಿನದಂದು. ಅದರ ಮರುದಿನವೇ ಅಮಾವಾಸ್ಯೆ. ಆದಿನ, ಲಕ್ಷ್ಮೀದೇವಿಯ ಪೂಜೆ ಮಾಡಿ, ಶಾಂತಿ, ಸಮೃದ್ಧಿ, ಮತ್ತು ಐಷ್ವರ್ಯಗಳನ್ನು ಕರುಣಿಸೆಂದು ಪ್ರಾರ್ಥಿಸಬೇಕು. ಆಮೇಲೆ ಬರುವುದು, ಪಾಡ್ಯಮಿ- ಬಲಿಪಾಡ್ಯಮಿ. ಬಲಿಚಕ್ರವರ್ತಿ, ಅಹಂಕಾರ ನಾಶವಾಗಿ, ಆತನು ತಾನು ಗಳಿಸಿದ ಭೂಮಿಯನ್ನೆಲ್ಲಾ ವಾಮನನ ರೂಪದಲ್ಲಿದ್ದ, ಶ್ರೀಹರಿಗೆ ಧಾರೆಯೆರೆಯುವ ಮೂಲಕ " ಪ್ರಪತ್ತಿ ಮಾರ್ಗ,"ದ ದರ್ಶನವನ್ನು ಪಡೆದು ಜೀವನ್ಮುಕ್ತನಾಗುತ್ತಾನೆ. ಭಾರತೀಯರೆಲ್ಲಾ ದೇಶದಲ್ಲಿ ಮೇಲೆ ತಿಳಿಸಿದ ೩ ದಿನಗಳನ್ನು, ವಿವಿಧ ಭಾಗಗಳಲ್ಲಿ, ಸಂಭ್ರಮದಿಂದ ಆಚರಿಸುತ್ತಾರೆ. ಅಭ್ಯಂಜನ, ಪೂಜೆ, ಕುಟುಂಬದ ಸದಸ್ಯರೊಡನೆ ಕಲೆತು ಭೋಜನ, ಎಲ್ಲರಿಗು ಜೀವನ ಹಸನಾಗಲೆಂಬ ಆಶಯ, ನಮಗಾಗಿ ದುಡಿಯುವ ಹಸು, ಎತ್ತು, ಎಮ್ಮೆ ಗಳಿಗೆಗೆ ಪೂಜೆ ಸಲ್ಲಿಸುವ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಏರ್ಪಾಡಿದೆ. ಹೊಸದಾಗಿ ಮದುವೆಯಾದ ಯುವ-ದಂಪತಿಗಳಿಗೆ ಶುಭಹಾರೈಸುವ ಕಾರ್ಯವೂ ಅತಿ ಮುಖ್ಯವಾದದ್ದು. ಇವೆಲ್ಲವೂ ದೀಪಾವಳಿಯನ್ನು ಒಂದು ಅವಿಸ್ಮರಣೀಯ ಸಂಕೇತವನ್ನಾಗಿ ಮಾಡಿ ನಮ್ಮ ಬಾಳು ಹಾಗೆಯೇ ಹಚ್ಚ ಹಸಿರಾಗಿರಲು ಪ್ರೇರೇಪಿಸುತ್ತವೆ.

ಕೇರಳ ರಾಜ್ಯದಲ್ಲಿ " ಓನಂ" ದಿನವನ್ನು ಆಚರಿಸಿದಾಗಲೇ ಬಲಿಚಕ್ರವರ್ತಿಯನ್ನು ಅವರು ಆಹ್ವಾನಿಸಿ ಪೂಜಿಸಿರುತ್ತಾರೆ.

Rating
No votes yet