ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು

ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು

ಬರಹ

ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ.

ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ ಮತ್ತು ಅಗತ್ಯವೂ ಆಗಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕೂಗು ಸತ್ತು ಹೋಗಿದೆ. ಇದರಿಂದಾಗಿಯೇ ಭಾಷೆಯ ಆಧಾರದ ಮೇಲೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒಂದೇ ಅಜೆಂಡಾದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಎಂ.ಇ.ಎಸ್, ನೆಲ ಕಚ್ಚಿದೆ. ಇತ್ತೀಚೆನ ಕೆಲವು ವರ್ಷಗಳಲ್ಲಿ ಬೆಳಗಾವಿಯ ಮೇಯರ್ ಆಗಿ ಕನ್ನಡದ ಶ್ರೀ ಸಿದ್ದನಗೌಡ ಪಾಟೀಲರು ಕಾರ್ಯ ನಿರ್ವಹಿಸಿದ್ದಾರೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ನಗರ ಪಾಲಿಕೆ ಸಾಕಷ್ಟು ಬಾರಿ ನಿರ್ಣಯ ತೆಗೆದುಕೊಂಡಿದೆ. ಆನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಅವರ ನಿರ್ಣಯಕ್ಕೆ ತುಂಬಾ ಪ್ರಚಾರ ಸಿಕ್ಕಿದ್ದು ಈ ಸಲವೇ ಇರಬೇಕು. ಇರಲಿ, ಅವರ ನಿರ್ಣಯದ ವಿರುದ್ಧ ಧರಣಿ, ಸತ್ಯಾಗ್ರಹ, ಮೆರವಣಿಗೆ, ಪ್ರತಿಕೃತಿ ದಹನ, ಬಂದ್ ಎಲ್ಲವೂ ಸರಿ. ಆದರೆ, ಮೇಯರ್ ಗೆ ಕಪ್ಪು ಮಸಿ ಬಳಿದು, ಅದರ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದ್ದು ಕನ್ನಡದ ಹೋರಾಟಕ್ಕೇ ಮಸಿ ಬಳಿದಂತೆ. ಇದರಿಂದ ಆಗಿದ್ದೇನು? ಬೆಳಗಾವಿಯ ನಮ್ಮ ಗೆಳೆಯರು ಹೇಳಿದ್ದು, "ಸತ್ತು ಹೋದ ಎಂ.ಇ.ಎಸ್ ಗೆ ಜೀವ ತುಂಬಿದರು".

ಈ ಕುರಿತು ಚಂಪಾ ಆದಿ ಎಲ್ಲಾ ಸಾಹಿತಿ ವರೇಣ್ಯರು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ