ಪ್ರಕೃತಿ ಶಾಶ್ವತ!

ಪ್ರಕೃತಿ ಶಾಶ್ವತ!

ಶಾಶ್ವತ ಪ್ರಕೃತಿ

ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ

ಮಾಡುತ್ತಾರಂತೆ ಮದುವೆ|

ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ

ಇಬ್ಬರು ಮಾಗಲು ತಡವೆ?||

ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ

ಕುಡಗೋಲು ಬೀಳುವ ಹಾಗೆ|

ಮದುವೆ ಮುಗಿದ ಮೇಲೆ ಇಬ್ಬರನ್ನು ಒಂದು ರಾತ್ರಿ ದೂಡುತ್ತಾರೆ

ಕತ್ತಲು ತುಂಬಿದ ಕೋಣೆಗೆ||

ಅಂದು, ಹುಡುಗಿ ಬೆದರಿದ ಹರಿಣಿ ಮೂಲೆಯಲ್ಲಿದ್ದಳು

ಒಳಗೊಳಗೆ ನಡನಡುಗುತ್ತಾ!

ಬರುವುದು ಹುಲಿಯೋ ಕಿರುಬನೋ ಇಲ್ಲ ಸಾರಂಗವೋ

ಎಂದು ಒಬ್ಬಳೇ ಕಾಯುತ್ತಾ||

ಪುರುಷಮೃಗದ ಕಾಲಿಗೆ ಬಿದ್ದು, ಕೈಗೆ ಬಿಸಿ ಹಾಲನ್ನು

ಕೊಟ್ಟು ತಲೆಬಗ್ಗಿಸಿ ನಿಲ್ಲಬೇಕಿತ್ತು|

ಖಂಡವಿದೆಕೋ ಮಾಂಸವಿದೆಕೋ ಬಿಸಿರಕ್ತದ ಗುಂಡಿಗೆಯಿದೆಕೋ

ಕುತ್ತಿಗೆಯೊಡ್ಡಬೇಕಿತ್ತು||

ಏಳುಸುತ್ತಿನ ಕೋಟೆಯೋ ಆಫ್ರಿಕದ ಕಗ್ಗತ್ತಲ ಖಂಡವೋ

ಸಾಹಸಕ್ಕಿಳಿಯಲೇಬೇಕಿತ್ತು|

ಮೊದಲ ಬಾರಿಗೆ ನೇಗಿಲ ಹಿಡಿದು ಹೊಲವನುಳಲು ಹೊರಟ

ಅಳುಕು ಭೀತಿಯಿರುತ್ತಿತ್ತು||

ತೆರೆಗಳ ಸರಿಸಿ ಮನದ ಪೊರೆಗಳ ಕಳಚಿ ಹುಡುಕಾಟ ಬೆದಕಾಟ

ಮುದವನ್ನು ಕೊಡುತ್ತಿತ್ತು|

ಕಚ್ಚಾಟ ಕಿರುಚಾಟ ಪರಚಾಟ ಕರಡಿಯುಗುರ ಘಾತಕ್ಕೆ ಹಲಸು

ಬಿರಿದು ಅಂಟು ರೇಜಿಗೆಯಾಗುತ್ತಿತ್ತು||

ಇಂದು ಅಂತರ್ಜಾಲದಲ್ಲಿ ಜಾರಿ ಹೋಗುವಾಗ ಸಂಗಾತಿ ತೇಲಿ

ಬರಲು ಹೃದಯಗಳು ದಡಗುಟ್ಟುತ್ತವೆ|

ಮಾತೇ ಕಥೆಯಾಗಿ, ಕಥೆಯೇ ಬದುಕಾಗಿ ಬದಲಾಗುವ ಅದ್ಭುತವೆಂಬ

ಮಾಯೆಯ ಮುಸುಕು ಅಡರುತ್ತದೆ||

ಮುಖಾಬಿಲೆಯಲ್ಲಿ ಮೊಳಕೆಯೊಡೆದರೆ ಪ್ರೀತಿ, ಗಿಡವಾಗಿ ಮರವಾಗಿ

ಬೇರು ಬಿಳಲು ಬಿಡುತ್ತದೆ|

ಹೊರಒಳಗನ್ನು ನೋಡುವ ತಡಕುವ ಅರ್ಥಮಾಡಿಕೊಳ್ಳುವ ವ್ಯರ್ಥ

ಪ್ರಯತ್ನವೂ ನಡೆಯುತ್ತದೆ||

ತೇಲುವಾಗ ಹುಡುಗ ಹುಡುಗಿಯರೆಷ್ಟು ಕಳಿತಿದ್ದರು ಎಂಬುದು ಮುಖ್ಯ

 ತೇಲಿಹೋಗಬಹುದು, ಇಲ್ಲ|

ಹಿರಿಯರ ಸಮ್ಮುಖದಲ್ಲಿ ನೆಪಮಾತ್ರಕ್ಕೆ ಹಸೆಮಣೇಯೇರಿ ಮದುವೇ

ಶಾಸ್ತ್ರವೆಲ್ಲ ಮುಗಿದೇ ಹೋಗುವುದಲ್ಲ||

ಮೊದಲ ರಾತ್ರಿ ಹುಡುಗ ಹುಡುಗಿಯರಿಗೆ ಹೊಸ ಹೋಟಲಿಗೆ ಹೋಗುವ

ಸಂಭ್ರಮವು ತುಳುಕುತ್ತಿರುತ್ತದೆ|

ತಿಂಡಿ ಹೇಗಿರುವುದೋ, ರುಚಿಯಿರುವುದೋ, ಮಸಾಲೆ ಹದವಾಗಿರುತ್ತದೋ

ಎಂಬ ಕುತೂಹಲವಿಷ್ಟಿರುತ್ತದೆ||

ಹುಲಿಗಳಿಲ್ಲ, ಚಿರತೆಗಳಿಲ್ಲ, ಕಿರುಬಗಳ ಕಾಟವಿಲ್ಲ, ಹಾಲನೊಪ್ಪಿಸುವ

ಹರಕೆ ಪುಣ್ಯಕೋಟಿ ಬದುಕೇ ಇಲ್ಲ|

ಎಲ್ಲವೆಲ್ಲ ಲೆಕ್ಕ, ಸರಿಸಮ ಲೆಕ್ಕ! ಯಾರೂ ಹೆಚ್ಚಲ್ಲ ಯಾರೂ ಕೀಳಲ್ಲ

ಎಲ್ಲ ವೆಲ್ಲದರಲ್ಲಿ ಸರಿಸಮವೆಲ್ಲ||

ಅಂತರ್ಜಾಲದಲ್ಲಿ ತೇಲಿ ತೇಲಿ ಹೋಗುವಾಗಲೆಲ್ಲ ಕಗ್ಗತ್ತಲ ಖಂಡವೆಲ್ಲ

ದಟ್ಟ ಪರಿಚಯವಾಗಿರುತ್ತದೆಯಲ್ಲ|

ಮರುಭೂಮಿಯನ್ನು ಉತ್ತು ಓಯಸಿಸ್ಸು ಹರಸಿ ಸಿಹಿ ಸಿಹಿ ಖರ್ಜೂರವ

ಬೆಳೆಸಿದ ಅನುಭವವಿರುತ್ತದೆಯಲ್ಲ||

ಕೋಟೆಕೊತ್ತಲಗಳ ಕಾಲ ಮುಗಿದಿದೆ, ಜಗದ ತುಂಬಾ ಉಜ್ವಲ

ಸೂರ್ಯಕಿರಣದ ಬೆಳಕಿದೆ|

ಟ್ರಾಕ್ಟರ್ ಇರುವ ಕಾಲದಲ್ಲಿ ಉತ್ತ ನೆಲ ಎಳ್ಳೆಡೆ ಇರುವಾಗ

ನೆಲವೆಲ್ಲ ಫಲವತ್ತಾಗಿಯೇ ಇರುತ್ತದೆ||

ಬೇಕಿದ್ದಲ್ಲಿ ಭತ್ತದ ಪಯಿರನ್ನು ನೆಡಿ ಬೆಳೆಸಿ, ಬೇಡವಿದ್ದಲ್ಲಿ ನೆಲದ

ಗಂಧವ ಮನದಣಿಯುವವರಿಗೆ ಆಸ್ವಾದಿಸಿ|

ಕಳಪೆ ಬೀಜವ ಮಣ್ಣಲಿ ಹೊಸಕಿ, ಸ್ವದೇಶದ್ದೋ ವಿದೇಶದ್ಧೋ

ಉತ್ತಮ ತಳಿಯ ಬೀಜವ ಬಿತ್ತಿ ಬೆಳೆಯಿರಿ||

ಹಣದ ಥೈಲಿ ಝಣ ಝಣ ನೀನಾದ ಮಾಡುತ್ತಿರಲು ದಿನದಿನ

ಹೊಸನೆಲದ ಅನ್ವೇಷಣೆ ಅಸಹಜವಲ್ಲ|

ಜಗವು ಕುಗ್ರಾಮವಾಗಿರಲು ವಿಶಾಲ ಬಯಲು ನಮ್ಮದಾಗಿರಲು

ವಿಧ ವಿಧ ಗಿಡಮರ ಗಿಡಮರ ಬೆಳೆಸುವುದರಲ್ಲಿ ತಪ್ಪಿಲ್ಲ||

ಬೇಕೆನಿಸಿದಾಗ ನೆಲದ ಮೇಲಕ್ಕಿಳಿದರಾಯಿತು ಇಲ್ಲದಿರೆ

ಜಗವನ್ನೇ ಮನೆಯನ್ನಾಗಿಸಿ ತೇಲಿದರಾಯಿತು|

ಮುಕ್ತ ಎಲ್ಲ ಮುಕ್ತ ಎಲ್ಲರಿಗೂ ಮುಕ್ತ ಮದುವೆಯ ಚೌಕಟ್ಟೆಂಬುದು

ಬೇಡವೆಂದಲ್ಲಿ ಹೊರಬಂದರಾಯಿತು||

ನಾಗರಿಕತೆ ಎಣ್ಣುವುದು ಕೃತಕ! ಮಾನವ ಮಾಡಿಕೊಂಡ

ಒಪ್ಪಂದ ಎಷ್ಟು ದಿನವಿದ್ದೀತು ಹೇಳು?

ಪ್ರಕೃತಿ ಅನಂತ! ಶಕ್ತಿಶಾಲಿ, ಕುಣಿಸುವುದು ಹಿಡಿದು ಮೂಗುದಾರ

ಎಂದೆಂದಿಗೂ ಶಾಶ್ವತ ಕೇಳು||

                                          -ಡಾ.ನಾ.ಸೋಮೇಶ್ವರ

Rating
No votes yet