ಗಿರಿಧಾಮಗಳ ರಾಣಿ ಶಿಮ್ಲಾ

ಗಿರಿಧಾಮಗಳ ರಾಣಿ ಶಿಮ್ಲಾ

ಬರಹ

ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು. ಹಿಂದಿನ ಸಂಜೆ ಅಂಬಾಲಾದಿಂದ ಹೊರಟುಬಂದು ಕಾಲ್ಕಾ ರೈಲುನಿಲ್ದಾಣದಲ್ಲಿ ಚಳಿಗೆ ನಡುಗುತ್ತಾ ಮುದುಡಿ ಕುಳಿತಿದ್ದ ನಮ್ಮನ್ನು ಹೊತ್ತ ಈ ಪುಟಾಣಿ ನ್ಯಾರೋಗೇಜ್ ರೈಲು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟಾಗ ಇನ್ನೂ ಗಾಢಕತ್ತಲೆ ಆವರಿಸಿತ್ತು. ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಬಂದದ್ದರ ಅರಿವು ನಮಗೆ ಹೇಗೆ ತಾನೇ ಆಗಬೇಕು ಹೇಳಿ?

ಆರು ಗಂಟೆ ವೇಳೆಗೆ ಒಂದು ಸುರಂಗದ ಬಾಯಿಂದ ನಾವು ಹೊರಬಂದಾಗ ಬೆಳಕು ಒಮ್ಮಿಂದೊಮ್ಮೆಲೇ ಪ್ರಕಾಶ ತೋರಿ ನಮ್ಮ ಕಣ್ಣುಗಳು ಕಿರಿದಾದದ್ದಂತೂ ದಿಟ. ಬಾರೋಗ್ ಎಂಬ ಆ ನಿಲ್ದಾಣದಲ್ಲಿ ರೈಲು ನಿಂತಿತು. ಅಲ್ಲಿದ್ದ ಒಂದು ಫಲಕ ನಾವು ಆಗತಾನೇ ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿದ್ದೇವೆಂಬುದನ್ನು ಸಾರುತ್ತಿತ್ತು. ಕೆಳಗಿಳಿದು ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಅಲ್ಲಲ್ಲ ಆರು ಪುಟ್ಟ ಪೆಟ್ಟಿಗೆಯಂಥ ಮನೆಗಳ ಬಂಡಿಯನ್ನು ಕಣ್ತುಂಬಿಕೊಂಡೆ. ಪುಟಾಣಿ ಮಗಳು ಸ್ನೇಹಾ ಕೆಳಗಿಳಿಯಲೊಪ್ಪದೆ ಶಾಲನ್ನು ಕವಚಿಕೊಂಡು ಕಿಟಕಿ ಗಾಜಿನಿಂದಲೇ ನೋಡುತ್ತಿದ್ದಳು. ಹೊರಗೆ ಬಾ ಎಂದು ನಾನು ಕರೆದಾಗ ನನ್ನ ಬಾಯಿಂದ ಉಸಿರು ಬಿಸಿ ಹಬೆಯಾಗಿ ಹೊರಬಂತು. ಅದನ್ನು ನೋಡಿ ಅವಳು ಕಿಲಕಿಲನೆ ನಕ್ಕಳು. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳೂ ನಗುತ್ತಿದ್ದವು. ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜ ಆಳ್ವಿಕೆ ನಡೆಸಿದ್ದ. ಸೂಜಿಯೆಲೆಗಳಿಂದ ಇಬ್ಬನಿ ತೊಟ್ಟಿಕ್ಕುತ್ತಿತ್ತು.

ಹೊರಡೋಣವೆಂದು ರೈಲು ಸಿಳ್ಳು ಹಾಕಿದಾಗ ರೈಲು ಹತ್ತಿದೆ. ಆ ಬೋಗಿಯಾದರೂ ಎಂಥದು. ಕೈಯೆತ್ತಿ ಚಾವಣಿ ಮುಟ್ಟಬಹುದಾದ, ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಡಬ್ಬಿ ಅದು. ಇನ್ನೂ ನಾಲ್ಕು ಗಂಟೆಗಳ ಪ್ರಯಾಣ ಬಾಕಿಯಿತ್ತು. ಒಟ್ಟಾರೆಯಾಗಿ ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಲೀಲಾಜಾಲವಾಗಿ ಜಯಿಸುವ ಈ ರೈಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ.ಇಂಗ್ಲಿಷರ ಕಾಲದ ಇಂಡಿಯಾದ ಬೇಸಿಗೆ ರಾಜಧಾನಿ ಶಿಮ್ಲಾ. ಹಿಮಾಲಯದ ಅಂಚಿನಲ್ಲಿರುವ ಆದರೆ ಹಿಮಾಲಯದ ಗುಣಗಳನ್ನೇ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾಗಿರುವ ಶಿಮ್ಲಾ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸೂಜಿಗಲ್ಲು. ಬ್ಲ್ಯಾಕ್ ಎಂಬ ಹಿಂದೀ ಸಿನೆಮಾ ಮಾತ್ರವಲ್ಲ ಅಸಂಖ್ಯಾತ ಸಿನೆಮಾಗಳ ಚಿತ್ರೀಕರಣ ಸ್ಥಳ ಈ ಶಿಮ್ಲಾ. ಈ ನಗರದ ಹೃದಯ ಭಾಗವಾದ ಮಾಲ್ ಅನ್ನು ತಲಪಲು ಮೇಲೇರಿ ಹೋಗಬೇಕು. ಮಾಲ್ ಒಂದು ವಾಣಿಜ್ಯಕೇಂದ್ರವೂ ಹೌದು. ಬೆಂಗಳೂರಿನ ಮೆಜೆಸ್ಟಿಕ್ ಇದ್ದ ಹಾಗೆ. ಶಿಮ್ಲಾದಲ್ಲಿ ಪ್ರವಾಸ ಎಂದರೆ ಬೆಟ್ಟವನ್ನು ಏರುತ್ತಾ ಏರುತ್ತಾ ಏರುತ್ತಾ ಹೋಗುವುದೆಂದೇ ತಿಳಿಯಿರಿ. ಹೇಳಿಕೇಳಿ ಇದು ಬಯಲು ಪ್ರದೇಶ ಅಲ್ಲವಲ್ಲ! ಸಮುದ್ರ ಮಟ್ಟದಿಂದ ಸುಮಾರು ೭೫೦೦ ಅಡಿಗಳ ಮೇಲೆ ಇರುವ ಫಾಗು ಎಂಬ ಸ್ಥಳದಿಂದ ಹಿಮಾಲಯದ ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು.

  ಇನ್ನೂ ೫೦೦ ಅಡಿಗಳ ಮೇಲೆ ಹೋದಲ್ಲಿ ಕುಫ್ರಿ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಹಿಮಾಲಯದ ವನ್ಯಜೀವಿಗಳ ಅಭಯಧಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ, ಚಾರಣಕ್ಕೆ ಹೇಳಿ ಮಾಡಿಸಿದ ಶಿಖರಗಳೂ ಕೊರಕಲುಗಳೂ ಇವೆ. ವಾಹನಗಳು ಚಲಿಸಲಾಗದ ಉರುಟು ಕಲ್ಲು ಕೊರಕಲುಗಳಿಂದ ಕೆಲವೊಮ್ಮೆ ಹಿಮದಿಂದ ತುಂಬಿದ ಹಾದಿಯಲ್ಲಿ ಕುದುರೆಯ ಮೇಲೆ ಕುಳಿತು ಏರುತ್ತಾ ಇಳಿಯುತ್ತಾ ಮುಗ್ಗರಿಸುತ್ತಾ ಅಳುಕಿನಿಂದ ಸಾಗುವುದೇ ಒಂದು ಸಾಹಸದ ಅನುಭವ. ಇದಕ್ಕೆಂದೇ ಅಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ. ಒಂದು ಕುದುರೆಯ ಮೇಲೆ ನಾನೂ ನನ್ನ ಮಗಳೂ ಇನ್ನೊಂದು ಕುದುರೆಯ ಮೇಲೆ ನನ್ನ ಪತ್ನಿ ಜೆಸಿಂತಳೂ ಸವಾರಿ ಹೊರಟೆವು. ಕುದುರೆಯ ಮೇಲೆ ಕುಳಿತಾಗ ನನ್ನವಳು ಥೇಟ್ ಕಿತ್ತೂರು ಚೆನ್ನಮ್ಮನಂತೆಯೇ ಕಾಣುತ್ತಿದ್ದಳು. ಕುದುರೆಯ ಮಾಲಿಕ ಅವುಗಳ ಲಗಾಮು ಹಿಡಿದು ಬೆನ್ನು ತಟ್ಟಿ ಮುಂದೆ ನಡೆಸುತ್ತಿದ್ದ. ಕುದುರೆ ಸವಾರಿ ಅಭ್ಯಾಸವಿಲ್ಲದ ಕಾರಣ ಅದು ಮುಗ್ಗರಿಸುವಾಗಲೆಲ್ಲ ಉಸಿರು ಬಿಗಿ ಹಿಡಿದು ಜೀವವನ್ನು ಕೈಯಲ್ಲಿ ಹಿಡಿದೇ ಸಾಗಿದೆವು. ಸ್ನೇಹಾ ಮಾತ್ರ ಕೇಕೆ ಹಾಕಿ ನಗುತ್ತಿದ್ದಳು. ಶಿಖರದಲ್ಲಿ ಕುದುರೆಯಿಳಿದಾಗ ಒಂದಿಷ್ಟು ನಿರಾಳವೆಸಿತು. ಅದುವರೆಗೆ ನಾವು ಸುತ್ತಲಿನ ಪ್ರಕೃತಿಯನ್ನು ನೋಡಿರಲೇ ಇಲ್ಲ. ಏಕೆಂದರೆ ನಮ್ಮ ಗಮನವೆಲ್ಲ ಕುದುರೆಯ ಮೇಲೆ ಸುರಕ್ಷಿತವಾಗಿ ಕೂರುವುದರತ್ತಲೇ ಕೀಲಿಸಿತ್ತು.

ಶಿಖರದ ಮೇಲೆ ಆಹ್ಲಾದಕರ ವಾತಾವರಣವಿತ್ತು. ಅಲ್ಲಲ್ಲಿ ದೂರದರ್ಶಕಗಳನ್ನು ಇಟ್ಟುಕೊಂಡಿದ್ದ ಕೆಲವರು ಹಿಮಾಲಯ ತೋರಿಸುತ್ತೇವೆ ಬನ್ನಿ ಚೀನಾ ಗಡಿಯನ್ನು ತೋರಿಸುತ್ತೇವೆ ಬನ್ನಿ ಎನ್ನುತ್ತಿದ್ದರು. ಎಷ್ಟೊಂದು ಯಾಕ್ (ಹಿಮಾಲಯದ ಎಮ್ಮೆ) ಪ್ರಾಣಿಗಳು ಅಲ್ಲಿದ್ದವು. ಸುಂದರವಾದ ಅವುಗಳ ತುಪ್ಪಳವನ್ನು ಸ್ನೇಹಾ ನವಿರಾಗಿ ಸವರಿದಳು. ಅದನ್ನು ಕಾಯುತ್ತಿದ್ದಾಕೆ, ಅಲ್ಲ, ಆ ಸಂದರ್ಭಕ್ಕಾಗಿಯೇ ಕಾಯುತ್ತಿದ್ದಾಕೆ ಅಲ್ಲಿಗೆ ಬಂದು ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟು ಯಾಕ್ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳಿ ಎಂದು ದುಂಬಾಲು ಬಿದ್ದಳು. ಅದಕ್ಕಾಗಿಯೇ ಅಲ್ಲಿ ಉಡುಪುಗಳು ಬಾಡಿಗೆಗೆ ಸಿಗುತ್ತವೆ. ಹಿಮಾಚಲದ ಗುಡ್ಡಗಾಡು ಜನರ ವೇಷಭೂಷಣಗಳು, ಅಲ್ಲಿಯ ರಾಜ ರಾಣಿಯರ ಉಡುಪುಗಳು, ವೀರೋಚಿತ ಆಯುಧಗಳು, ಗಿರಿಜನ ಹೆಂಗಸರ ಪರಿಕರಗಳು ಎಲ್ಲವೂ ಇಲ್ಲಿ ಲಭ್ಯ. ಅಂಥದೊಂದು ಉಡುಪನ್ನು ತೊಟ್ಟು ಫೋಟೋ ತೆಗೆಸಿಕೊಳ್ಳಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಫೋಟೋ ಸೆಷನ್ ಮುಗಿಸಿ ಹಿಮಾಚಲಪ್ರದೇಶ ಪ್ರವಾಸೋದ್ಯಮದ ಹೋಟೆಲಿಗೆ ಬಂದು ಊಟಕ್ಕೆ ಕುಳಿತೆವು. ಒಳಗೆ ಚಳಿ ಇತ್ತು, ಬಿಸಿಲ ಆಹ್ಲಾದದೊಂದಿಗೆ ಊಟ ಸವಿಯೋಣವೆಂದು ಹೊರಗೆ ಬಂದೆವು, ಅದೆಲ್ಲಿತ್ತೋ ಹಿಮಾಲಯನ್ ಲಂಗೂರ್ ಎಂಬ ಕೋತಿ ಚಂಗನೆ ನೆಗೆದು ಬಂದು ನಮ್ಮ ಕುಲಾವಿ ಕದ್ದೊಯ್ದಿತು. 'ಹಿಮಾಲಯಕ್ಕೆ ಬಂದರೂ ಕೋತಿ ಕಾಟ ತಪ್ಪಲಿಲ್ಲ' ಎಂದುಕೊಂಡು ನಕ್ಕೆವು.

ಇಷ್ಟೆಲ್ಲ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್ ಅವರ ಪ್ರತಿಮೆಯಿದೆ. ಈ ಪ್ರತಿಮೆಯದೇ ಒಂದು ಕುತೂಹಲಕಾರಿ ಕಥೆ. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಪಂಜಾಬಿನ ಸಿಂಹವೆಂದೇ ಕರೆಯಲ್ಪಡುತ್ತಿದ್ದ ಲಜಪತರಾಯರು ಲಾಹೋರಿನಲ್ಲಿ ಪೊಲೀಸರ ಲಾಠಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದರು. ಅನಂತರ ಅವರ ನೆನಪಿಗೆ ೧೯೩೫ರಲ್ಲಿ ಲಾಹೋರಿನ ಆ ಸ್ಥಳದಲ್ಲೊಂದು ಪ್ರತಿಮೆ ನಿಲ್ಲಿಸಲಾಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದೊಂದಿಗೆ ಪಂಜಾಬವೂ ಇಬ್ಭಾಗವಾಯಿತು. ಆಮೇಲೆ ಲಜಪತರಾಯರ ಪ್ರತಿಮೆ ಅಲ್ಲಿನವರಿಗೆ ಬೇಡವಾಯಿತು. ಅನಂತರ ಅಂತೂ ಇಂತೂ ಅವರ ಪ್ರತಿಮೆ ನಮ್ಮ ದೇಶಕ್ಕೆ ಬಂದು ಶಿಮ್ಲಾದಲ್ಲಿ ನೆಲೆಕಂಡಿತು. ಈ ಎಲ್ಲ ಹರಾಕಿರಿಯಲ್ಲಿ ಪ್ರತಿಮೆಯ ಬಲಗೈ ತೋರುಬೆರಳು ಮುರಿದಿದ್ದಾಗಲೀ ಅದನ್ನು ಕುಶಲಕರ್ಮಿಗಳು ಮತ್ತೆ ಸರಿಮಾಡಿದ್ದಾಗಲೀ ಯಾರಿಗೂ ಗೊತ್ತಾಗಲಿಲ್ಲ.

ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು. ಶಿಮ್ಲಾವನ್ನು ಬಿಟ್ಟು ಬಂದರೂ ಸದಾ ಕಾಲ ಆ ನೆನಪೇ ನಮ್ಮನ್ನು ಕಾಡುತ್ತಿರುತ್ತದೆ.