ಹಳತು - ಹೊಸತು

ಹಳತು - ಹೊಸತು

ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ.

ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ?

ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ:


पुराणमित्येव न साधु सर्वं न चापि काव्यं नवमित्यवद्यम् ।
सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥

ಹಳತಾದ ಮಾತ್ರದಲಿ ಸದಾ ಸೊಗಸಲ್ಲ; ಇದು ಹೊಸತು ಎಂದೆನಲು ತಪ್ಪಿಲ್ಲದೇನಿಲ್ಲ
ಕುಳಿತೋದಿ ಒರೆಯಿಡುವರರಿತವರು - ಕಂಡವರ ಮಾತಿನಲೆ ಗಳಹುವರು ಮೂಳರು!

(ಅನುವಾದ ನನ್ನದು)

ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ, ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅವತ್ತಿಗೂ, ಇವತ್ತಿಗೂ, ಯಾವತ್ತಿಗೂ, ಕಾವ್ಯವೊಂದೇ ಅಲ್ಲ, ಬದಲಿಗೆ ಎಲ್ಲ ಬಗೆಯ ಅರಿವಿಗೂ  ಹೊಂದುವ ನಲ್ನುಡಿ ಎಂದು ನನಗನಿಸುತ್ತೆ. ನೀವೇನಂತೀರಿ?

-ಹಂಸಾನಂದಿ

Rating
No votes yet

Comments