NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)

ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ ನಂತರ ನಾವು ಟ್ರಾಕ್ಟರ್ ಹತ್ತಿದಾಗಲೂ ಟ್ರಾಕ್ಟರ್ ನ್ನೇ ಪ್ರಿಡ್ಜ್ ಲ್ಲಿಟ್ಟು ಆಗತಾನೆ ಹೊರಗೆಳೆದು ತಂದಂತಿತ್ತು. ಟ್ರಾಕ್ಟರ್ ನಲ್ಲಿ ಹೋಗುವಾಗ ತಗ್ಗು ಗುಂಡಿಗಳ ದಡಕಿಗೆ ಟ್ರಾಲಿಯ ಕಂಠವನ್ನು ನಾಲ್ಕು ಬೆರಳಿನಿಂದ ಎರಡು ಸೆಕೆಂಡ್ ಹಿಡಿದುಕೊಳ್ಳಲಾಗಷ್ಟು ಈ ಕಬ್ಬಿಣ ತಣ್ಣಗೆ ಕೊರೆಯುತ್ತಿತ್ತು. ಸುತ್ತಲೂ ವಿಶಾಲವಾದ ಎರೆಹೊಲ.. ಎತ್ತ ನೋಡಿದರೂ ಸೂರ್ಯಕಾಂತಿ ಮತ್ತು ಕಡಲೆ ಗಿಡಗಳ ಹೊಲಗಳು. ವಿಶಾಲ ಹೊಲಗಳ ಮದ್ಯದಲ್ಲಿರುವ ಹನುಮನ ಆಲಯ. ಆಗ ತಾನೆ ರವಿಯ ಕಿರಣಗಳಿಗೆ ಬಿಳಿಯ ಇಬ್ಬನಿ ಹಿಮ್ಮೆಟ್ಟುತ್ತಲಿತ್ತು. ಹನುಮಾನ್ ದೇಗುಲ NSS ಕ್ಯಾಂಪಿನ ಸಹಾಯದಿಂದ ಸ್ವಚ್ಚತಾ ಕಾರ್ಯಗಳ ಆಗಬೇಕಿತ್ತು ಎಂಬಷ್ಟು ಗಲೀಜು ಆಗಿರಲಿಲ್ಲ.. ಕೆಲವೇ ಗಂಟೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಮುಗಿಯಿತು. ಆದರೆ ನಮ್ಮನ್ನು ಡ್ರಾಪ್ ಮಾಡಿದ ಟ್ರಾಕ್ಟರ್ ಯಾವುದೋ ಕೆಲಸದ ನಿಮಿತ್ತ ಚಳ್ಳಕೆರೆ ಎಪಿಎಂಸಿ ಮಾರುಕಟ್ಟೆಗೆ ಹೋದದ್ದರಿಂದ ನಮ್ಮನ್ನು ಕರೆದುಕೊಂಡು ಹೋಗಲು ಆ ಟ್ರಾಕ್ಟರ್ ಗೆ ಹಲವು ಗಂಟೆಗಳು ಬೇಕಾದ್ದರಿಂದ ನಮಗೂ ಮಾಡಲು ಕೆಲಸವಿಲ್ಲದರಿಂದ ದೇಗುಲದ ಪಕ್ಕದಲ್ಲಿ ಇದ್ದ ಒಂದು ಬೀಳುಬಿದ್ದ ಜಮೀನಿನಲ್ಲಿ ಎಂಟತ್ತು ವರ್ಷದ ಗಿಡಗಂಟೆಗಳು ಮುಳ್ಳು ಬೇಲಿಗಳು ಬೆಳೆದಿದ್ದವು. ಹಾಗೆ ನಾಲ್ಕಾರು ಜನ ಅದರೊಳಗೆ ಹೊಕ್ಕು ಜಲಬಾಧೆಯನ್ನು ನಿವಾರಿಸಿಕೊಳ್ಳುವಾಗಲೇ ಕಂಡಿತೊಂದು ಜೇನು. ಅವರೊಂದಿಗೆ ಅಲ್ಲಿ ಜೇನುಗೂಡು ಇರುವುದನ್ನು ಹಂಚಿಕೊಂಡೆ. ಹರಡಿಕೊಂಡ ಬಳ್ಳಾರಿ ಜಾಲಿಗಿಡದ ಒಣಗಿದ ಹುಲ್ಲಿನ ಮದ್ಯದಲ್ಲಿ ಕರ್ರಗೆ ಕಾಣುತಿತ್ತು. ನಾನು ಜೇನು ಕೀಳಲು ಅಣಿಯಾಗುತ್ತಿದ್ದಂತೆ ನಮ್ಮೊಂದಿಗೆ ಬಂದಿದ್ದವರು ಅವರ ಇಷ್ಟದ ಹುಡುಗಿಯರಿಗೆ ನಾನು ಕೀಳುವ ಜೇನನ್ನು ಇವನ ದೆಸೆಯಿಂದ ಹುಡುಗಿಯರಿಗೆ ಜೇನು ತಿನ್ನಿಸೋಣ ಎಂದು ಕ್ಯಾಂಪಿಗೆ ಬಂದಿದ್ದ ಹುಡುಗಿಯರನ್ನು ಕರೆದುಕೊಂಡು ಬಂದ. 

ನಾನು ಜೇನು ತೆಗೆದುಕೊಂಡು ಪೊದೆಯಿಂದ ಹೊರಬರುವುದಕ್ಕೂ ಅವರೆಲ್ಲರೂ ಅಲ್ಲಿಗೆ ಬಂದು ಸೇರುವುದಕ್ಕೂ ಒಂದೇ ಆಯಿತು. ಹತ್ತು ಹನ್ನೆರಡು ಜನರಿದ್ದ ಗುಂಪಿಗೆ ಒಂದು ಜೇನು ಎಲ್ಲಿಗೆ ಆಗಬೇಕು? ಎಲ್ಲರಿಗೂ ಒಂದೊಂದು ರೌಂಡು ಸಿಕ್ಕಿತ್ತು. ಯಾರಿಗೂ ಸಂತೃಪ್ತವಾಗಿ ಸಾಕಾಗಲಿಲ್ಲ. ಕೈ ಬೆರಳು ಚೀಪುತ್ತಲೇ ಇನ್ನೂ ಇದ್ದಾವೆನೋ ನೋಡು... ನೋಡು.. ತಿನ್ನೋಣ ಎಂದು ಎಲ್ಲರ ಒತ್ತಾಸೆಯಾಗಿತ್ತು. ನಾನು ಅವರ ಆಸೆಗೆ ತಣ್ಣೀರೆರಚಲಿಲ್ಲ. ನೋಡಬೇಕು... ಹುಡುಕುವೆ... ಸಿಕ್ಕರೆ ತೆಗೆದು ಕೊಡುವೆ ಎಂಬ ವಿಶ್ವಾಸನೀಯವಾಗಿ ಆಶ್ವಾಸನೆ ಕೊಟ್ಟೆ. ಸುತ್ತಾ ಮುತ್ತಾ ಹುಡುಕಲು ನೋಡಿದ ಪೊದೆಗಳಲ್ಲೆಲ್ಲಾ ಜೇನುಗಳೋ ಜೇನುಗಳು..!! ಎಂಟತ್ತು ಜೇನುಗಳು ವಿವಿಧ ಸೈಜಿನವು ಸಿಕ್ಕವು. ನಾನು ನೋಡಿದ ಜೇನುಗಳನ್ನು ನನಗಿಂತಲೂ ಮೊದಲೇ ಕೀಳಲು ಹೋದ ಸಿಟಿ ಪೋರನೊಬ್ಬ ಹಿಗ್ಗಾ ಮುಗ್ಗಾ ಸಿಕ್ಕ ಸಿಕ್ಕಲ್ಲಿಗೆ ಕಚ್ಚಿಸಿಕೊಂಡು ಓಡಿದ. ಕೊನೆಗೆ ಸಾವಕಾಶವಾಗಿ ಎಲ್ಲವನ್ನೂ ಒಂದೊಂದೇ ತೆಗೆದು ಎಲ್ಲರಿಗೂ ಹಂಚಿದೆ. ಹಾಗೇ ಅಲಗ ಅಲೆಯುತ್ತಾ ತಿರುಗುತ್ತಾ ಜೇನು ತಿನ್ನುತ್ತಾ ಅಡವಿಯೆಲ್ಲಾ ಸುತ್ತಿದ್ದೋ ಸುತ್ತಿದ್ದು. ಬಿಸಿಲಿನ ಧಗೆಗೆ ನೀರಿನ ಬಾಯಾರಿಕೆಗೆ ತತ್ತರಿಸಿ ನೀರು ಕುಡಿಯಲು ಬಂದವರೆಲ್ಲಾ ಹನುಮನ ದೇಗುಲ ಉಳಿದವರೆಲ್ಲರಿಗೂ ಹೇಳಿದ್ದರಿಂದ ಎಲ್ಲರೂ ಜೇನು ತಿನ್ನಲು ನಾವಿರುವ ಕಡೆ ಧಾವಿಸಿದರು. ನಮ್ಮ ತಂಡದ ಉಸ್ತುವಾರಿಗೂ ಒಂದಷ್ಟು ಜೇನು ತಿನ್ನಿಸಿದ್ದರಿಂದ ಅವರೂ ನನ್ನ ಕಡೆಗೆ ಸೆಳೆಯಲ್ಪಟ್ಟು ಪದೇ ಪದೇ ಆಯ್ತೆನ್ರೋ... ಬರ್ರಿ ಬರ್ರೀ ಎಂದು ಅಷ್ಟೆ ಸೀಟಿ ಹೊಡೆಯುತ್ತಿದ್ದರು. ಜೇನು ರುಚಿಯನ್ನು ನೋಡಿದ ಯಾರೂ ಅವರ ಸೀಟಿಯ ಶಬ್ಧವನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ಧನ ಮತ್ತು ಋಣ ಎರಡೂ ಆಯಾಮಗಳು ಅಲ್ಲೇ ಇದ್ದುದರಿಂದ ಯಾರು ಯಾರನ್ನೂ ಬಿಟ್ಟು ಕದಲುವ ಹಂತದಲ್ಲಿ ಇರಲಿಲ್ಲ. 

ನಮ್ಮ ತಂಡ ಮುನ್ನೆಡುಸುತ್ತಿದ್ದ ಮೇಲ್ವಿಚಾರಕರಿಗೆ ಪರಿಸ್ಥಿತಿ out of control ಆಗಿತ್ತು. ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ಸುತ್ತಾಡಿ ಬಿಸಿಲ ಧಗೆಗೆ ಬಾಯಾರಿಕೆ ತಡೆಯಲು ಆಗದೇ ಹಿಂದಿರುಗಿದೆವು. ಹೇರಳವಾಗಿ ಜೇನು ಸಿಕ್ಕಿದ್ದರಿಂದ ಶ್ರಮದಾನದ ನಡುವೆ ಜೇನು ಕಟ್ಟಿರುವಲ್ಲಿಗೆ ಹೋಗಿ ಜೇನುಕೀಳುವುದನ್ನು live ನೋಡುತ್ತಾ, ಹುಡುಗ ಹುಡುಗಿಯರ ಜೊತೆ ಪರಸ್ಪರ ಮಾತಾನಾಡುತ್ತಿದ್ದರೆ ಬಿಸಿಲು ಬಿಟ್ಟರೆ ನಾಕವೇ ಧರೆಗಿಳಿದಂತಿತ್ತು. ಜೇನು ಸೊಂಪಾಗಿ ಸಿಕ್ಕಿದ್ದರಿಂದಲೂ, ಮುಕ್ತವಾಗಿ ಪರಸ್ಪರ ಮಾತನಾಡಲು ಸಮಯಾವಕಾಶ ಸಿಕ್ಕಿದ್ದರಿಂದ ಎಲ್ಲರಿಗೂ ಖುಷಿಯಾಗಿತ್ತು. ಜೇನಿನ ಲೋಕಕ್ಕೆ ಹೋಗಿದ್ದ ನಾವು ಹಿಂತಿರುಗಿ ಬರುವಷ್ಟೊತ್ತಿಗೆ ನಮಗಾಗಿ ಟ್ರಾಕ್ಟರ್ ಬಂದು ಕಾಯುತ್ತಾ ನಿಂತಿತ್ತು. ಟ್ರಾಕ್ಟರ್ ಬಂದು ಅರ್ಧಗಂಟೆ ಮೇಲೆ ಆಗಿದೆ. ಶ್ರಮ ದಾನ ಮಾಡಲು ಹೋದವರು ಯಾರೂ ಶ್ರಮ ಮಾಡುವುದಿರಲಿ... ಯಾರೂ ಶ್ರಮದಾನ ಮಾಡುವ ಜಾಗದಲ್ಲೂ ಸಹ ಒಬ್ಬರೂ ಹಾಜರಿ ಇರಲಿಲ್ಲ. ಇಬ್ಬರು NSS ಅಧಿಕಾರಿಗಳು ಹಾಜರಿದ್ದರೂ ನೋಡಲು ಒಬ್ಬರಾದರೂ ವಿದ್ಯಾರ್ಥಿಗಳು ಇರದಿದ್ದುದು ಅವರಿಗೆ ಬೇಸರ ಉಂಟಾಗಿತ್ತು. ನಮಗಿಂತ ಮುಂದೆ ಹೋದವರು ಯಾರೋ ಹುಡುಗ ಹುಡುಗಿಯರೆಲ್ಲಾ ಜೇನು ತಿನ್ನಲು ಹೋಗಿದ್ದಾರೆ ಎಂಬ ಸುದ್ದಿಯನ್ನು ಕೇಳಿ "ಆ PUC ಹುಡುಗನೇ ಸರ್ ಎಲ್ಲರನ್ನೂ ಕರೆದುಕೊಂಡು ಹೋಗಿರುವುದು. ಅವನಿಗೆ ಸರಿಯಾಗಿ ವಾರ್ನ್ ಮಾಡಬೇಕೆಂದು ಅಂದರಂತೆ. ಆದರೇನು ಮಾಡುವುದು majority ಇದ್ದುದು ನಮ್ಮ ಕಡೆಯೇ... ಎಲ್ಲಾ ಸೀನಿಯರ್ ಹುಡುಗರು ಜೇನು ತಿನ್ನಲು ಸಹಮತ ಇದ್ದುದರಿಂದ ಅವರೇನು ಮಾಡಲಾಗದೇ ಹೊಟ್ಟೆತುಂಬಾ ನೀರು ಕುಡಿದು ಟ್ರಾಕ್ಟರ್ ಹತ್ತಿ ಕ್ಯಾಂಪ್ ವಸತಿ ಸ್ಥಳಕ್ಕೆ ಆಗಮಿಸಿದೆವು. ಅಂದಿನಿಂದ ಶಿಭಿರಾರ್ಥಿಗಳ ಪಾಲಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ತಮ್ಮನಾಗಿ ಕೆಲವು ಶಿಬಿರದ ಹುಡುಗರಿಗೆ ಅಳಿಯನೂ ಆದೆ. ಮನೆಯಿಂದ ತಂದ snacks, ಕ್ಯಾಂಪಿನಲ್ಲಿ ಮಾಡಿದ ಸ್ನ್ಯಾಕ್ಸ್ ಎಲ್ಲಾವೂ ಒಂದು ಕೈ ನನಗೆ ಅಧಿಕವೇ ಸಿಗುತ್ತಿತ್ತು. ಕೆಲವರಂತೂ ಇನ್ಮೇಲೆ ಎಲ್ಲಿಯಾದರೂ ಜೇನು ಸಿಕ್ಕರೆ ಎಲ್ಲರಿಗೂ ಹೇಳುವುದು ಬೇಡ. ಗುಟ್ಟಾಗಿ ನಾವಷ್ಟೇ ಹೋಗೋಣ ಎಂದು ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಿಯೇ ಶ್ರಮದಾನ ನಡೆಯುತ್ತಿರಲಿ ಇವತ್ತು ಜೇನು ಹುಡುಕಬೇಕೆಂದು ಅದಕ್ಕಾಗಿ ತಂಡದ ಸದಸ್ಯರೆಲ್ಲರೂ ಒಪ್ಪಿಗೆಯಿಂದ ನನ್ನನ್ನು ಕಳಿಸಿಕೊಡುತ್ತಿದ್ದರು. ಒಂದೆರಡು ದಿನ ಅಲ್ಲೇ ಹುಡುಕಾಡಿದರೂ ಜೇನು ಮಾತ್ರ ಸಿಕ್ಕಿರಲಿಲ್ಲ.

ಒಂದು ದಿನ ಶ್ರಮ ದಾನ ಮಾಡಿ ಮಧ್ಯಾಹ್ನ ಬಾವಿಯಲ್ಲಿ ಈಜಾಡಲು ಜೇನು ಹುಡುಕುತ್ತಾ ಹೋಗುವಾಗ ಹುಣಸೇ ಮರದಲ್ಲಿ ಹೆಜ್ಜೇನೊಂದನ್ನು ನೋಡಿದೆ. ಜೊತೆಗಿದ್ದವರಿಗೆ ತೋರಿಸಿದಾಗ ಹೇಗಾದರೂ ಮಾಡಿ ಈ ತುಪ್ಪ ತೆಗೆ ಎಂದು ಹೇಳುತ್ತಿದ್ದರು. ನಾನು ಯಾವತ್ತೂ ಹೆಜ್ಜೇನಿನ ಸುದ್ದಿಗೆ ಹೋಗಿಲ್ಲ. ನನ್ನ ಬಳಿ ಇದು ಅಸಾಧ್ಯ ಎಂದೇಳಿದ್ದಕ್ಕೆ ರಾತ್ರಿ ಸೀಮೆಎಣ್ಣೆ ತಂದು ಬೆಂಕಿ ಹಾಕುವ, ಹೆಲ್ಮೆಟ್ ಕಂಬಳಿ ಹೊದ್ದು ಜೇನುಕೀಳುವ ಎಂದು ನಾನಾ ಉಪಾಯಗಳನ್ನು ಹೇಳಿದರು. ಹೆಜ್ಜೇನು ಕೀಳುವುದು ನನ್ನಿಂದಾಗದ ಕೆಲಸ. ಬೇಕಾದರೇ ಇಲ್ಲೇ ಎಲ್ಲಿಯಾದರೂ ಸಣ್ಣ ಜೇನು ಸಿಕ್ಕರೆ ಕಿತ್ತುಕೊಡುವೆ ಎಂದು ಮನಸೋ ಇಚ್ಚೆ ಈಜಾಡಿದೆವು. ಈಜಾಡಿ ಹೊಟ್ಟೆಯು ಹಸಿವಾಗಿದ್ದಕ್ಕೆ ಈಜು ನಿಲ್ಲಿಸಿ ಒದ್ದೆಯಾದ ನಮ್ಮ ನಮ್ಮ 'ಝಂಡ' ಗಳನ್ನು ಕೈಯಲ್ಲಿ ಹಿಡಿದು, ಕೆಲವರು ತಲೆ ತಂಪಿರಲಿ ಎಂದು ತಲೆಯ ಮೇಲೆಯೇ ಈ 'ಝಂಡ' ಹಾಕಿಕೊಂಡು ನಡೆದು ಬರುವಾಗ ಬೇಲಿಯಲ್ಲಿ ಒಂದು ಜೇನು ನೋಡಿದೆ. 

ಅದು ನಮ್ಮ ಕ್ಯಾಂಪು ತಂಗಿದ್ದ ಶಾಲೆಯ ಕೊಂಚ ಸಮೀಪದಲ್ಲಿಯೇ...! ಎಲ ಒಂದೇ ಸ್ಥಳದಲ್ಲಿ ಎಲ್ಲರೂ ನಿಂತರೆ ಕ್ಯಾಂಪಿನ ಇತರರಿಗೆಲ್ಲಾ ಗೊತ್ತಾಗಿ ಅವರೆಲ್ಲರೂ ಬಂದರೆ ಈ ಜೇನು ಯಾರಿಗೂ ಸಾಲುವುದಿಲ್ಲ ಎಂದು ಎಲ್ಲರ ಅಭಿಪ್ರಾಯದಂತೆ ನಾನು ಸುನೀಲ ಮಾತ್ರ ಉಳಿದು ಜೇನು ಕಿತ್ತು ತರುವುದು. ಉಳಿದವರು ಸ್ವಲ್ಪವೇ ಮುಂದೆ ಹೋಗಿ ಬೇವಿನ ಮರದ ನೆರಳಿನಲ್ಲಿ ನಿಲ್ಲುವುದು. ಎಂದು ನಿರ್ಣಯಿಸಿದೆವು‌. ಹುಳುಗಳನ್ನು ಎಬ್ಬಿಸಿ ಜೇನು ತೆಗೆಯಲು ನೋಡಿದಾಗ ಹಸಿ ಬಳ್ಳಾರಿ ಜಾಲಿ ಕೊನೆಗೆ ಗೂಡುಕಟ್ಟಿದ್ದರಿಂದ ಆಯುಧ ರಹಿತ ವಾಗಿ ಕೊನೆಸಹಿತ ಕೀಳುವುದು ಅಸಾಧ್ಯ ಆಯಿತು. ಬೇವಿನ ಮರದ ನೆರಳಲ್ಲಿ ನಿಂತವರನ್ನು ಕೂಗಿ ಕರೆಯಲು ಕ್ಯಾಂಪಿನ ಕೇಂದ್ರದವರಿಗೆಲ್ಲರಿಗೂ ಹೇಗೋ ಗೊತ್ತಾಯಿತು. 'ಜೇನು' ಎಂಬ ಶಬ್ದಕೇಳಿದ ಎಲ್ಲರೂ ಎಲ್ಲೆಲ್ಲಿದ್ದರೋ ಅಲ್ಲಿಂದಲೇ ತಾಮುಂದು ನೀ ಮುಂದು ಎಂದು ಓಡಿಬಂದರು. ನಾನು ಜೇನುತುಪ್ಪವನ್ನು ಕಿತ್ತು ಕೊಡುತ್ತಿದ್ದೆ. ಜೇನುಹುಳುಗಳು ಹಾರಾಡುತ್ತಲೇ ಇದ್ದುದರಿಂದ ದೈರ್ಯ ಇರುವ ಒಂದಿಬ್ಬರು ಮಾತ್ರ ಬಂದು ತೆಗೆದುಕೊಂಡು ಇತರರಿಗೆ ಜೇನು ಹಂಚಿದರು. ನಾಲ್ಕೈದು ಜನ ಹುಡುಗರಿಗೆ ಎರಡ್ಮೂರು ಹುಡುಗಿಯರಿಗೆ ಜನರಿಗೆ ತಲಾ ಹತ್ತಿಪ್ಪತ್ತು ಗ್ರಾಂ ತುಪ್ಪ ಸಿಕ್ಕಿತ್ತು. ಉಳಿದವರಿಗೆ ಏನೂ ಸಿಗಲಿಲ್ಲ. ಜೇನು ಸಿಕ್ಕರೇ ಯಾರಿಗೂ ಹೇಳಬಾರದು ಎಂದು secret ಡೀಲ್ ಮಾಡಿಕೊಂಡವರು ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೂ ಮುಂದಿನ ದಿನಗಳಲ್ಲಿ ಜೇನು ಕಿತ್ತು ಕೊಡುವ ಭರವಸೆ ಕೊಟ್ಟೆ..

ಮುಂದಿನ ಒಂದೆರಡು ದಿನಗಳಲ್ಲಿ NSS camp ಸಮಾರೋಪ ಆಯಿತು. ಆದರೆ ಜೇನು ತಿನ್ನಬೇಕೆಂಬ ಕ್ಯಾಂಪಿನ ಹೆಣ್ಮಕ್ಕಳ ಬೃಹದಾಸೆ ಹಾಗೆ ಉಳಿಯಿತು. ಕಾಲೇಜು ಆರಂಭವಾದಾಗ ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಬಂದಾಗ ಎದುರಾಗುತ್ತಿದ್ದ ಶಿಬಿರಾರ್ಥಿಗಳು ಜೇನು ಹುಡುಕಿ ಕಿತ್ತು ಕೊಡಬೇಕೆಂದು ಮನವಿ ಮಾಡುತ್ತಿದ್ದರು. ಇನ್ನೂ ಕೆಲವರು ಹುಣಸೇಮರದ ಕೆಳಗೆ ಯಾವಾಗಲೂ ಗಿರ್ಮಿಟ್ ಮಂಡಕ್ಕಿ ತಿನ್ನುತ್ತಿದ್ದರು.. ಅವರದೂ ಅದೇ ಬೇಡಿಕೆ... ಎಂದಾದರೂ ಎಲ್ಲಿಯಾದರೂ ಹೋಗೋಣ. ನಮಗೆ ಕ್ಯಾಂಪಿನ ತರಹ ಜೇನು ಕಿತ್ತುಕೊಡಬೇಕು ಎಂದು ಹೇಳುತ್ತಿದ್ದರು. ನನಗೂ ಒಂದಷ್ಟು ಮಂಡಕ್ಕಿ, ನಿಪ್ಪಟ್ಟು ಹಾಗೆ ನನಗೂ complementary ಯಾಗಿ ಸಿಗುತ್ತಿತ್ತು. ನನ್ನ ಜೊತೆಯಲ್ಲಿ ಬರುತ್ತಿದ್ದ ಶಿವರಾಮನಿಗೂ ಹತ್ತು ದಿನಕ್ಕೆ ಹೀರೋ ಆಗಿಬಿಟ್ಟೀಯಾ... ಎಂದು ಆಗಾಗ ಹೇಳುತ್ತಿದ್ದ. ಇವರು ನಾನು ಕಂಡಾಗಲೆಲ್ಲಾ ಜೇನಿಗಾಗಿ ನನ್ನನ್ನು ಕೇಳುತಿದ್ದುದ್ದಕ್ಕೆ ಒಂದು ದಿನ ಐದಾರು ಜನ ಅಕ್ಕಂದಿರು ಒಂದಿಬ್ಬರು ಭಾವದಿಂರು ಚಂದ್ರವಳ್ಳಿಯ ಕಡೆ ಜೇನು ಹುಡುಕಲು ಹೋಗಿದ್ದೆವು. 

ನಾವೆಲ್ಲರೂ ಜೊತೆಗಿರುವುದನ್ನು ನೋಡಿದ ಕಾಲೇಜು ಸಿಬ್ಬಂದಿ ನಮ್ಮೆಲ್ಲರ ಮೇಲೆ ಒಂದು ಕಣ್ಣಿಟ್ಟಿದ್ದರೆ BA , BSC, B.com ಎಲ್ಲಾ ಹುಡುಗರು ನಮ್ಮ ಗುಂಪಿನಮೇಲೆ ನೂರಾರು ಕಣ್ಣುಗಳನ್ನು ಇಟ್ಟಿದ್ದರು. ಅಂದು ನಾವು ಜೇನು ಹುಡುಕಲು ಹೋಗಿದ್ದು ಚಂದ್ರವಳ್ಳಿಗೆ. ಸುಂದರ ಚಂದ್ರವಳ್ಳಿಯ ತೋಟದ ವರ್ಣನೆ ಅದ್ಬುತ.. ಮಾನವನ ಆದಿ ನೆಲೆಗಳಲ್ಲಿ ಚಂದವಳ್ಳಿಯು ಒಂದು.. ಕೆರೆಯ concept ಗೆ ಬಂದರೆ ಇತಿಹಾಸದ ದಾಖಲೆಗಳ ಪ್ರಕಾರ ಚಂದ್ರವಳ್ಳಿ ಕೆರೆಯೇ ಮೊದಲಕೆರೆ. ಸ್ವಚ್ಛಂದದ ಸಿಹಿನೀರ ಕೆರೆ. ನೋಡಲದ್ಭುತ..!! ಜೇನು ಹುಡುಕಲು ಬಂದ ನಮ್ಮ ಹುಡುಗರ ಗುಂಪು ನೂರಾರು ಕೋತಿಗಳು ಹುಣಸೇಮರದಿಂದ ಕೆರೆಯ ನೀರೊಳಗೆ ದುಮುಕಿ ಈಜಾಡುತ್ತಾ ಜಗಳವಾಡುತ್ತಾ, ಕಿರುಚಾಡುತ್ತಾ ಮಾಡುವ ಕೋತಿಯಾಟವ ನೋಡುತ್ತಾ ಕಾಲಕಳೆದೆವು. ನಮ್ಮ ಸುತ್ತಲೂ ದೊಡ್ಡ ದೊಡ್ಡ ಕಲ್ಲು ಹೆಬ್ಬಂಡೆ ಬೆಟ್ಟಗುಡ್ಡಗಳೇ ಇದ್ದುದ್ದರಿಂದ ನಾನು ಹುಡುಕುವ ಜೇನುಗಳು ಮಾತ್ರ ಅಂದು ಕಾಣಲೇ ಇಲ್ಲ. ದವಳಪ್ಪನ ಗುಡ್ಡದ ಕಡೆ ಹೋಗಬೇಕಿತ್ತು. ಹೋಗಿದ್ದರೆ ಸಿಗುತ್ತಿದ್ದವೇನೋ...? ಆ ಕೋತಿಗಳ ಜೊತೆಗೆ ಈ ಕೋತಿಗಳು ಕೋತಿಯಾಟ ಶುರುಮಾಡಿದ್ದರಿಂದ ಹುಡುಕುವ ಇಂಟರೆಸ್ಟ್ ಇರಲಿಲ್ಲ. ಈ ದಿನಕ್ಕೆ ನಮ್ಮ NSS ಕ್ಯಾಂಪ್ ನ ಸದಸ್ಯರು ನಮಗೆ ಜೇನು ಬೇಕು ಎಂದು ಕೇಳುವುದು ಕಡಿಮೆ ಆಯಿತು. ಇದಾದ ಕೆಲದಿನಗಳ ನಂತರ ನಾನು ಕಾಲೇಜಿಗೆ ಹೋಗುವುದೇ ತ್ಯಜಿಸಿ ನಿತ್ಯ ಚಿತ್ರದುರ್ಗ ಕೋಟೆಯೇ ನನ್ನ ಕಾಲೇಜ್, ಅಡ್ವೆಂಚರ್‌, ಟೈಮ್ ಪಾಸ್, ಓದು ಬರಹ ಓಡಾಟ ಕೋಟೆಯೋಳಗೆ ಸಾಗಿತ್ತು. ಕೋಟೆಯೇ ಅವಿಭಾಜ್ಯ ಭಾಗ ಆಗಿ ಹೋಗಿತ್ತು. ಕೋಟೆಯೊಳಗೆ ಟ್ರೆಕ್ಕಿಂಗ್ ಮಾಡುವಾಗ ನಾನು ತಿಮ್ಮಣ್ಣ ಜೇನು ಕಿತ್ತು ಆಗಾಗ ತಿನ್ನುತ್ತಿದ್ದೆವು...

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ