ಕೊಹೆಲೊ ಹೇಳಿದ ಪೆನ್ಸಿಲ್ ಬದುಕು

ಕೊಹೆಲೊ ಹೇಳಿದ ಪೆನ್ಸಿಲ್ ಬದುಕು

ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ.ಕೊಂಚ ಹೊತ್ತು ಸುಮ್ಮನಿದ್ದವನು,ಬರೆಯುತ್ತಿದ್ದ ಅಜ್ಜಿಯನ್ನುದ್ದೇಶಿಸಿ,’ಏನು ಬರೆಯುತ್ತಿದ್ದಿಯಾ ಅಜ್ಜಿ..? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ.ಅವನತ್ತ ತಿರುಗಿದ್ದಳು ಅಜ್ಜಿ.ಸಣ್ಣಗೆ ಮುಗುಳ್ನಕ್ಕು,’ಹೌದು ಮಗು ನಾನು ಬರೆಯುತ್ತಿರುವುದು ನಿನ್ನ ಬಗ್ಗೆಯೇ.ಆದರೆ ಅಷ್ಟೇನೂ ಮುಖ್ಯವಲ್ಲದ ವಿಷಯ ಬಿಡು,ನಾನು ಬರೆಯುತ್ತಿರುವ ಪತ್ರಕ್ಕಿಂತ ಬರೆಯಲು ಬಳಸುತ್ತಿರುವ ಈ ಪೆನ್ಸಿಲ್ ಇದೆಯಲ್ಲ ಇದೇ ಬಹಳ ಮಹತ್ವದ್ದು.ಬೆಳೆದು ದೊಡ್ಡವನಾದ ಮೇಲೆ ನೀನೂ ಈ ಪೆನ್ಸಿಲಿನಂತಾಗಬೇಕು’ಎನ್ನುತ್ತ ಪೆನ್ಸಿಲ್‌ನ್ನು ಅವನಿಗೆ ತೋರಿದಳು ವೃದ್ಧೆ.

ಅಜ್ಜಿಯ ಮಾತುಗಳನ್ನು ಕೇಳಿದ ಬಾಲಕನಿಗೆ ಸಣ್ಣ ಕುತೂಹಲ.ಅಜ್ಜಿಯ ಕೈಲಿದ್ದ ಪೆನ್ಸಿಲ್‌ನ್ನು ಮತ್ತೊಮ್ಮೆ ದಿಟ್ಟಿಸಿದ.ಯಾವುದೋ ವಿಶೇಷವಾದ ಪೆನ್ಸಿಲ್ ಇರಬೇಕು ಎಂದುಕೊಂಡವನಿಗೆ ಅದೊಂದು ತೀರ ಸಾಮಾನ್ಯ ಪೆನ್ಸಿಲ್  ಎಂದು ಗೊತ್ತಾದಾಗ ಕೊಂಚ ನಿರಾಸೆಯಾಗಿತ್ತು.’ಇದರಲ್ಲಿ ವಿಶೇಷವೇನಿದೆ ಅಜ್ಜಿ..? ನಾನು ದಿನನಿತ್ಯ ನೋಡಿರಬಹುದಾದ ಅತಿ ಸಾಧಾರಣ ಪೆನ್ಸಿಲ್ಲೇ ಅಲ್ಲವಾ ಇದು..’? ಎಂದು ಕೇಳಿದವನಿಗೆ ಅಜ್ಜಿಯ ಉತ್ತರ ಕೇಳುವ ಕಾತುರ

’ಹೌದು ಮರಿ.ಇದು ಸಾಧಾರಣವಾದ ಪೆನ್ಸಿಲ್ಲೇ,ಆದರೆ ಇದರಲ್ಲಡಕವಾಗಿರುವ ಐದು ಮಹಾನ್ ಗುಪ್ತ ತತ್ವಗಳ ಬಗ್ಗೆ ನಿನಗಿನ್ನೂ ತಿಳಿದಿಲ್ಲ.ಅವುಗಳ ಬಗ್ಗೆ ನಾನಿಂದು ನಿನಗೆ ತಿಳಿಸುತ್ತೇನೆ.ನಿನ್ನ ಬದುಕಿನಲ್ಲಿ ನೀನು ಅವುಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಾದರೆ ,ಬಹುಶ: ನಿನ್ನ ಬಾಳಿನಲ್ಲಿ ಅಶಾಂತಿಯ ಸುಳಿವೇ ಇರದು’ಎಂದಳು ಅಜ್ಜಿ.ಮೊಮ್ಮಗ ಅವಳತ್ತಲೇ  ನೋಡುತ್ತಿದ್ದ.

’ಈ ಪೆನ್ಸಿಲ್ ಕಾಗದದ ಮೇಲೆ ಅದ್ಭುತ ಕಲ್ಪನೆಗಳನ್ನು ಚಿತ್ರಿಸಬಲ್ಲದು.ಅದ್ಭುತವೆನ್ನಿಸುವ ಕತೆ,ಕವನಗಳ ಲೋಕವನ್ನೇ ಸೃಷ್ಟಿಸಬಹುದು.ಬರೆದ ಅಕ್ಷರಗಳಿಂದ ಯಾರಲ್ಲಿಯೋ ಪ್ರೀತಿಹುಟ್ಟಿಸುವ,ಯಾರಿಗೋ ದ್ವೇಷ ಹುಟ್ಟಿಸುವ ಗುಣ ಇದ್ದಕ್ಕಿದೆ.ಆದರೆ ಬರೆಯುವ ಕೈಗಳ ಮಾರ್ಗದರ್ಶನವಿಲ್ಲದಿದ್ದರೇ ಏನನ್ನೂ ಮಾಡುವುದೂ ಇದರಿಂದ ಸಾಧ್ಯವಿಲ್ಲ.ಪೆನ್ಸಿಲಿನಿಂದ ನಾವು ಕಲಿಯಬೇಕಾದ ಮೊದಲ ತತ್ವವಿದು.ನಮ್ಮೊಳಗಿನ ಅಂತ:ಸತ್ವಕ್ಕೆ ಪ್ರಪಂಚವನ್ನೇ ಬದಲಿಸುವ ಶಕ್ತಿಯಿದೆ.ಆದರೆ ಮಾರ್ಗದರ್ಶಕನ ಕೈಗಳಿಲ್ಲದಿದ್ದರೇ ,ಅವನಿಚ್ಛೆ ಇಲ್ಲದಿದ್ದರೆ ಏನೂ ಸಾಧ್ಯವಾಗದು ಎಂಬುದು ನೆನಪಿರಬೇಕು.ಆ ಮಾರ್ಗದರ್ಶಕನನ್ನೇ ನಾವು ದೇವರೆನ್ನುವುದು.ಬದುಕಿನ ಯಾವುದೇ ಹಂತದಲ್ಲಿಯೂ ದೇವರನ್ನು ನಿರ್ಲಕ್ಷಿಸಬಾರದು ನಾವು’ಎಂದಳು ಅಜ್ಜಿ.ಸುಮ್ಮನೇ ತಲೆಯಾಡಿಸಿದ್ದ ಹುಡುಗ

’ಬರೆಯುತ್ತಿರುವ ಪೆನ್ಸಿಲ್ ಆಗಾಗ ಮೊನಚು ಕಳೆದುಕೊಂಡು ಬಿಡುತ್ತದೆ.ಆಗ ಬರೆಯುವುದನ್ನು ನಿಲ್ಲಿಸಿ ಅದರ ತುದಿಯನ್ನು ಕೆತ್ತಿ ಮತ್ತೊಮ್ಮೆ ಚೂಪುಗೊಳಿಸಿಕೊಳ್ಳಬೇಕು ಅದನ್ನು. ಮತ್ತೆ ತೀಕ್ಷ್ಣವಾಗುತ್ತದೆ ಅದು.ಅದರಿಂದ ಕಲಿಯಬೇಕಾದ ಎರಡನೇ ಗುಣವಿದು.ಬದುಕಿನಲ್ಲಿ ಎದುರಾಗುವ  ಕಷ್ಟಗಳು  ಪೆನ್ಸಿಲ್ ಕೆತ್ತುವಿಕೆಯ ಪ್ರಕ್ರಿಯೆಯಂಥದ್ದು. ನೋವು ಕೊಡುತ್ತವೆನ್ನುವುದೇನೋ ನಿಜ.ಆದರೆ ಕಷ್ಟಕಳೆದ ಮರುಕ್ಷಣ ಮತ್ತೆ ಚುರುಕಾಗುತ್ತೇವೆ ನಾವು ಎಂಬುದನ್ನು ಮರೆಯಬಾರದು.ಬದುಕಿನ ಕಷ್ಟಕಾರ್ಪಣ್ಯಗಳು ತಾತ್ಕಾಲಿಕ ಮಾತ್ರ ಎಂಬುದರಿತು ಮುನ್ನಡೆಯಬೇಕು’ಎಂದ ಅಜ್ಜಿಯ ಮಾತಿಗೆ ಸಣ್ಣ ಮುಗುಳ್ನಗು ಅವನ ಮುಖದಲ್ಲಿ.

’ಪೆನ್ಸಿಲಿನಿಂದ ಬರೆದದ್ದು ತಪ್ಪಾದರೆ ತಪ್ಪನ್ನು ರಬ್ಬರಿನಿಂದ ಒರೆಸಿ  ತಿದ್ದಿ ಬರೆಯಬಹುದು ಅಲ್ಲವೇ...? ಅದು ನಾವು ಕಲಿಯಬೇಕಾದ ಮೂರನೇಯ ಅಂಶ.ಬದುಕಿನ ಪಟಲದಿಂದ ಏನನ್ನಾದರೂ ಒರೆಸುವುದು ಅಥವಾ ತಿದ್ದುವುದು ಪ್ರತಿಬಾರಿಯೂ ಕೆಟ್ಟ ಸಂಗತಿಯೇ ಆಗಬೇಕೆಂದೇನಿಲ್ಲ.ತಪ್ಪುಗಳಾದಾಗ ಸಮರ್ಥಿಸಿಕೊಳ್ಳದೇ ನಿರ್ದಾಕ್ಷಿಣ್ಯದಿಂದ ಅವುಗಳನ್ನು ಬದುಕಿನಿಂದ ಒರೆಸಿಬಿಡಬೇಕು.ತಪ್ಪುಗಳನ್ನು ತಿದ್ದಿಕೊಂಡು ಬದುಕಲು ಕಲಿಯಬೇಕು. ಬಾಳಿನ ನ್ಯಾಯಮಾರ್ಗದಲ್ಲಿ ನಡೆಯಲು ಬೇಕಾದ ಬಹುಮುಖ್ಯ ಅಂಶವಿದು’ಎಂದ ಅಜ್ಜಿ ಕೊಂಚ ಹೊತ್ತು ಸುಮ್ಮನಾದಳು.ಆಸಕ್ತಿಯಿಂದ ಕೇಳುತ್ತಿದ್ದ ಹುಡುಗ,’ನಾಲ್ಕನೆಯದ್ದು ..’? ಎಂದು ಕೇಳಿದ.ಅಜ್ಜಿಯ ಮುಖದಲ್ಲಿ ಮಂದಹಾಸ. ನಾಲ್ಕನೇಯ ತತ್ವವನ್ನು ವಿವರಿಸತೊಡಗಿದಳು ಅವಳು

’ಪೆನ್ಸಿಲ್‍ನ ಮೇಲ್ಮೈ ಎಷ್ಟೇ ಸುಂದರವಾಗಿದ್ದರೂ ಒಳಗಿನ ಸೀಸದ ಕಡ್ಡಿ ಸರಿಯಾಗಿರದಿದ್ದರೇ ಅದಕ್ಕೊಂದು ಬೆಲೆಯಿಲ್ಲ.ಬದುಕೂ ಹಾಗೆ.ನೀನು ಎಷ್ಟೇ ಸುಂದರವಾಗಿದ್ದರೂ ನಿನ್ನಲ್ಲಿ ಒಳ್ಳೆಯ ಗುಣಗಳಿರದಿದ್ದರೆ,ನಿನಗೊಂದು ನಿನ್ನದೇ ಆದ ವ್ಯಕ್ತಿತ್ವವಿರದಿದ್ದರೆ ನಿನಗ್ಯಾವ ಬೆಲೆಯೂ ಇಲ್ಲ.ಪೆನ್ಸಿಲಿನಿಂದ ಕಲಿಯಬೇಕಾದ ನಾಲ್ಕನೇ ಮಹತ್ವದ ಗುಣವಿದು’ಎಂದಳು ಅಜ್ಜಿ.ಐದನೇಯ ತತ್ವವನ್ನು ಕೇಳಲು ಕಾತುರನಾಗಿದ್ದ ಹುಡುಗ.

’ಒಮ್ಮೆ ಜೋರಾಗಿ ಉಸಿರೆಳೆದುಕೊಂಡ ಅಜ್ಜಿ,’ ಏನನ್ನೇ ಬರೆದರೂ,ಬರೆದ ಅಕ್ಷರಗಳ ರೂಪದಲ್ಲಿ ಗುರುತು ಉಳಿಸಿಟ್ಟು ಹೋಗುತ್ತದೆ ಪೆನ್ಸಿಲ್.ಕೆಟ್ಟದ್ದೋ ಒಳ್ಳೆಯದ್ದೋ ಗುರುತಂತೂ ಉಳಿಸುತ್ತದೆ.ನಾವು ಕಲಿಯಬೇಕಾದ ಐದನೇಯ ಮತ್ತು ಅತಿಮುಖ್ಯವಾದ ತತ್ವವೆಂದರೆ ಇದೇ.ಬದುಕೆಂಬ ಕಾಗದದಲ್ಲಿ ಏನನ್ನಾದರೂ ಬರೆಯುವ ಮುನ್ನ ಬಹಳ ಎಚ್ಚರಿಕೆಯಿಂದರಬೇಕು.ಸಾಧ್ಯವಾದಷ್ಟು ಒಳ್ಳೆಯದನ್ನು ಮಾತ್ರ ಬರೆಯಲು ಪ್ರಯತ್ನಿಸಬೇಕು.ಕೆಟ್ಟದ್ದು ಬರೆದುಬಿಟ್ಟರೆ ಅದರ ಗುರುತು ಉಳಿದುಹೋಗುತ್ತದೆ’ಎಂದು ನುಡಿದು ಮಾತು ನಿಲ್ಲಿಸಿದ್ದಳು.ಅವಳ ಮಾತು ಮುಗಿದ ನಂತರ ಕ್ಷಣಕಾಲದ ಮೌನವಿತ್ತು ಅಲ್ಲಿ.

ಅಜ್ಜಿಯ ಕೈಯಿಂದ ಪೆನ್ಸಿಲ್ ಇಸಿದುಕೊಂಡ ಬಾಲಕ ಅವಳತ್ತ ನೋಡಿ ಸುಮ್ಮನೇ ನಸುನಕ್ಕ.’ಬೆಳೆದು ದೊಡ್ಡವನಾದ ಮೇಲೆ ನಾನೂ ಸಹ ಈ ಪೆನ್ಸಿಲಿನಂತಾಗುತ್ತೇನೆ ಅಜ್ಜಿ’ಎನ್ನುತ್ತ ಪೆನ್ಸಿಲನ್ನು ಪ್ರೀತಿಯಿಂದ ಎದೆಗೊತ್ತಿಕೊಂಡ ಅವನು.ಅಜ್ಜಿಯ ಮುಖದಲ್ಲಿ ಮತ್ತದೇ ಮಂದಹಾಸ. ಒಮ್ಮೆ ಹಿತವಾಗಿ  ಮೊಮ್ಮಗನ ತಲೆಯನ್ನು ನೇವರಿಸಿದಳು ಅವಳು.

ಮೂಲ : ಪೌಲೋ ಕೊಹೆಲೋ

ಅನುವಾದ : ಗುರುರಾಜ ಕೊಡ್ಕಣಿ,ಯಲ್ಲಾಪುರ

Comments