ಗುಜರಾತಿನ ಮೋಡಿ, ಪಟೇಲರ ಹಾಡಿ..

ಗುಜರಾತಿನ ಮೋಡಿ, ಪಟೇಲರ ಹಾಡಿ..

ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋಚನೆಗಳ ಸಮಷ್ಟಿ ಸಂಗಮ. ಮೆದು ಧೋರಣೆಯ ನೆಹರು ಆಡಳಿತದ ಅಡಿಯಲ್ಲೆ, ಈ ಕಾರ್ಯ ಸಾಧಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಸಾಕಷ್ಟು ತೊಡಕುಗಳನ್ನೆದುರಿಸಿಯೆ ಅವರು ಭಾರತದ ಎಲ್ಲಾ ಸಂಸ್ಥಾನ, ಅಂಗಭಾಗಗಳನ್ನು ಒಗ್ಗೂಡಿಸಬೇಕಾಯ್ತು. ಅಂದು ಅವರು ಅದನ್ನು ಮಾಡಿರದಿದ್ದರೆ, ಇಂದು ಈ ದೇಶ ಯಾವ ಸ್ಥಿತಿಯಲ್ಲಿ ಛಿದ್ರವಾಗಿರುತ್ತಿತ್ತೊ , ಅಥವಾ ಹೀಗೆ ಭದ್ರ ಒಕ್ಕೂಟವಾಗಿರುತ್ತಿತ್ತೊ ಹೇಳಲು ಬರುವುದಿಲ್ಲ. ಆದರೆ, ಪಟೇಲರ ಆಶಯವನ್ನು ಮೀರಿ ಬಲಾತ್ಕಾರವಾಗಿ ವಿಶ್ವಸಂಸ್ಥೆಯ ನಿರ್ಣಯಕ್ಕೊಪ್ಪಿಸಿದ ಕಾಶ್ಮೀರದ ಉದಾಹರಣೆ ನೋಡಿದರೆ, ಏನಾಗಿರುತ್ತಿತ್ತೆಂದು ಊಹಿಸಲು ಕಷ್ಟವೇನಿಲ್ಲ. ಅದೇನಿದ್ದರೂ, ಇಂದಿನ ಈ ಒಗ್ಗೂಡಿತ ಒಕ್ಕೂಟದ ಅಸ್ತಿಭಾರ ಹಾಕಿ, ಭದ್ರ ನೆಲೆಗಟ್ಟಿನಲ್ಲಿ ನಿಲ್ಲುವಂತೆ ಮಾಡುವಲ್ಲಿ ಪಟೇಲರ ಪಾತ್ರ ಹೋಲಿಕೆಗತೀತವಾದದ್ದು. ನಯ, ಭಯದನುಸಂಧಾನದಿಂದ ಹಿಡಿದು 'ದಂಡಂ ದಶಗುಣಂ' ವರೆಗಿನ ಎಲ್ಲಾ ಅಸ್ತ್ರ ಶಸ್ತ್ರಗಳನ್ನು ಬಳಸಿ ಇದನ್ನು ಸಾಧ್ಯವಾಗಿಸಿದ್ದು ಈ ಉಕ್ಕಿನ ಮನುಷ್ಯನ ಹಿರಿಮೆ. ಅದಕೊಂದು ಕೃತಜ್ಞತೆಯ ಕುರುಹಾಗಿ ಈ ಸರಳ ಕವನದ ಅಶ್ರುತರ್ಪಣ - ಅವರ ಹುಟ್ಟು ಹಬ್ಬದ ಜಯಂತಿಯಂದು.

ಗುಜರಾತಿನ ಮೋಡಿ, ಪಟೇಲರ ಹಾಡಿ 
_______________________________

ಖಂಡ ಖಂಡ ಗೊತ್ತ, ಸ್ವತಂತ್ರ ಭಾರತದ ಒಕ್ಕೂಟ
ಅಖಂಡವಾಗಿಸಲವಿರತ, ದುಡಿದಿದ್ದೊಂದೆ ಚಿತ್ತ ||

ಮನದಿ ಗಾಂಧಿತತ್ವ, ಅಸಹಕಾರ ಚಳುವಳಿ ಸತ್ವ
ಜನರೊಡನೆಯೆ ಒಡನಾಡುತ, ಬೆಳೆದ ನಾಯಕತ್ವ ||

ಸ್ವಾತ್ಯಂತ್ರಾ ಹೋರಾಟಕೆ, ಹೋರಾಟದ ಸ್ವಾತಂತ್ರ
ಬಿಟ್ಟೋಡಿದ ಪರಂಗೀ ಜನರೆ, ಮೆಚ್ಚಿದ ಮಹಾಪಾತ್ರ ||

ಬಿಡುಗಡೆಯೇನೊ ಹಸ್ತ, ದೇಶ ಪೂರಾ ಅಸ್ತವ್ಯಸ್ತ
ಚಿಂದಿ ಛಿದ್ರ ನಾಡಾಗಿಸೊ, ಪುಂಡು ಜನರೆ ಮಸ್ತ ||

ನೆಟ್ಟಗಿರಬೇಕಿರೆ ಮನೆ, ಬೇಕು ಸರಿ ಗೃಹಮಂತ್ರಿ
ಆ ಸಂಧಿ ಕಾಲದಲಿ, ನಿಭಾಯಿಸಿದನೀ ಸ್ವಾತಂತ್ರಿ ||

ಬಾರೆನೆಂದವರ ಒಲಿಸಿ, ಬರದವರ ಎಳೆತರಿಸಿ
ದಂಡಂ ದಶಗುಣಂ ದನಿಸಿ, ಮಿಕ್ಕವರ ಒತ್ತರಿಸಿ ||

ಲಕ್ಷದೀಪಕೆ ಹಾಕುತ ಲಗ್ಗೆ, ಬಿಡದೆಲೆ ಶತ್ರು ನುಗ್ಗೆ
ನಿವಾರಿಸಿ ನಯನೀತಿಗೆ, ಬಾಗದ ನವಾಬರ ಪಿಡುಗೆ ||

ಒಕ್ಕೂಟದಲಿ ವಿಲೀನ, ಮಾಡಿಸುತೆಲ್ಲ ಜನರ ಕನಸ
ನನಸಾಗಿಸಿ ನೆಲೆ ನಿಂತ, ಜನಮನದಿ ಉಕ್ಕಿನ ಮನುಷ್ಯ ||

ಮಾಡಿದ್ದೆಲ್ಲ ಮಹನೀಯ, ಬಾಳಿ ಬದುಕಿದ ಸರದಾರ
ಭಾರತದ ಈ ಒಕ್ಕೂಟ, ಪಟೇಲರು ಕಟ್ಟಿದ ಉಡಿದಾರ ||

ಮಾತವರ ಕೇಳದೆಲೆ, ವಿಶ್ವಸಂಸ್ಥೆ ನ್ಯಾಯಕಿತ್ತ ಕಾಶ್ಮೀರ
ಇನ್ನು ಹರಿಯದ ಗೊಂದಲ, ಮುಂದಾಲೋಚನೆ ದೂರ ||

ಒಗ್ಗೂಡಿಸಿದ ನಮನ, ವಲ್ಲಭ ಭಾಯಿ ಪಟೇಲರ ಧ್ಯಾನ
ಹುಟ್ಟುಹಬ್ಬದ ಗಳಿಗೆಯಲಿ, ಕೃತಜ್ಞತೆಯ ಅಶ್ರುತರ್ಪಣ ||

- ಧನ್ಯವಾದಗಳೊಂದಿಗೆ
    ನಾಗೇಶ ಮೈಸೂರು
 

Comments

Submitted by H A Patil Thu, 10/31/2013 - 19:14

ನಾಗೇಶ ಮೈಸೂರು ರವರಿಗೆವಂದನೆಗಳು
ಸರ್ದಾರ ವಲ್ಲಭಭಾಯಿ ಪಟೇಲರ ಜನ್ಮ ದಿನ ಇಂದು ಎಂಬುದು ಮರೆತು ಹೋಗಿತ್ತು, ತಮ್ಮ ಕವನ ಅಶ್ರು ತರ್ಪಣದ ಮೂಲಕ ಅವರ ಹೋರಾಟದ ಬದುಕಿನ ಸಮಗ್ರ ದರ್ಶನ ಮಾಡಿಸಿದ್ದೀರಿ. ನೆಹರೂ ಬುದ್ಧಿವಂತ ವಿಚಾರವಾದಿ ಮತ್ತು ಸೂಕ್ಷ್ಮಸಂವೇದನೆಯ ಮನುಷ್ಯ, ಆದರೆ ಸರದಾರ ಪಟೇಲರು ಒಬ್ಬ ವಾಸ್ತವವಾದಿ ಚಿಂತಕ, ನೆಹರೂ ಕಾಶ್ಮೀರ ಸಮಸ್ಯೆಯನ್ನು ವಿಶ್ವ ಸಂಸ್ಥೆಗೆ ಒಯ್ದು ತಪ್ಪು ಮಾಡಿದರು, ಪಟೇಲರ ಮಾತಿಗೆ ಬೆಲೆಕೊಟ್ಟು ವಿಶ್ವಸಂಸ್ಥೆಗೆ ಈ ಸಮಸ್ಯೆ ಒಯ್ಯದಿದ್ದರೆ ಕಾಶ್ಮೀರ ಸಮಸ್ಯೆ ಇಷ್ಟೊಂದು ಮಗ್ಗಲು ಮುಳ್ಳಾಗಿ ಒಂದು ವೃಣವಾಗಿ ನಮ್ಮನ್ನು ಕಾಡುತ್ತಿರಲಿಲ್ಲ, ಪಟೇಲರನ್ನು ನೆನಪಿಸಿದ್ದೀರಿ ಧನ್ಯವಾದಗಳು.

Submitted by nageshamysore Fri, 11/01/2013 - 03:10

In reply to by H A Patil

ನಮಸ್ಕಾರ ಪಾಟೀಲರೆ. ಅದೆ ದಿನದಲ್ಲಿ ಆಚರಿಸುವ ಇತರೆ ಗಣ್ಯ ಪುಣ್ಯತಿಥಿಯ ನಡುವೆ ಪಟೇಲರ ಜನುಮದಿನ ಆಚರಣೆಯ ಸುದ್ದಿ ಪ್ರಾಮುಖ್ಯತೆ ಪಡೆಯುವುದು ಅಪರೂಪ. ಸರದಾರ್ ಪಟೇಲರಂತೆ ನಾಯಕತ್ವದ ಛಡಿಯನ್ನು ಸರಿಯಾಗಿ ಬೀಸಿ, ದೇಶ ಕಟ್ಟುವ ನಾಯಕತ್ವ ಇಂದಿನ ಮುಖ್ಯ ಅಗತ್ಯಗಳಲ್ಲೊಂದು. ಅಂತಹ ನಾಯಕತ್ವ ಬಂದಲ್ಲಿ ನಮ್ಮ ದೇಶದ ಪ್ರಗತಿಪಥದ ಕಕ್ಷೆ-ನಕ್ಷೆಗಳೆಲ್ಲ ತಾನಾಗೆ ಬದಲಾಗಿಬಿಡುವುವು - ಧನಾತ್ಮಕವಾಗಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by venkatb83 Wed, 11/06/2013 - 17:25

"ಬಿಡುಗಡೆಯೇನೊ ಹಸ್ತ, ದೇಶ ಪೂರಾ ಅಸ್ತವ್ಯಸ್ತ
ಚಿಂದಿ ಛಿದ್ರ ನಾಡಾಗಿಸೊ, ಪುಂಡು ಜನರೆ ಮಸ್ತ ||

ನೆಟ್ಟಗಿರಬೇಕಿರೆ ಮನೆ, ಬೇಕು ಸರಿ ಗೃಹಮಂತ್ರಿ
ಆ ಸಂಧಿ ಕಾಲದಲಿ, ನಿಭಾಯಿಸಿದನೀ ಸ್ವಾತಂತ್ರಿ ||

ಬಾರೆನೆಂದವರ ಒಲಿಸಿ, ಬರದವರ ಎಳೆತರಿಸಿ
ದಂಡಂ ದಶಗುಣಂ ದನಿಸಿ, ಮಿಕ್ಕವರ ಒತ್ತರಿಸಿ ||

ಲಕ್ಷದೀಪಕೆ ಹಾಕುತ ಲಗ್ಗೆ, ಬಿಡದೆಲೆ ಶತ್ರು ನುಗ್ಗೆ
ನಿವಾರಿಸಿ ನಯನೀತಿಗೆ, ಬಾಗದ ನವಾಬರ ಪಿಡುಗೆ ||

ಒಕ್ಕೂಟದಲಿ ವಿಲೀನ, ಮಾಡಿಸುತೆಲ್ಲ ಜನರ ಕನಸ
ನನಸಾಗಿಸಿ ನೆಲೆ ನಿಂತ, ಜನಮನದಿ ಉಕ್ಕಿನ ಮನುಷ್ಯ ||"

>>>ನಾಗೇಶ್ ಸಾರ್ -ಒಂದು ವಾರ ಆಫೀಸಿನತ್ತ ಸುಳಿಯದಿದ್ದ ಕಾರಣ -ಮತ್ತು ಮನೆಯಲ್ಲಿ ಲ್ಯಾಪ್ಟಾಪ್ -ಡೆಸ್ಕ್ಟಾಪ್ ಇದ್ದೂ ನೆಟ್ ಇಲ್ಲದ ಕಾರಣ ನಿಮ್ಮ ಮತ್ತು ಇನ್ನಿತರರ ಬರಹ ಓದಲು ಆಗಿರಲಿಲ್ಲ .. ಈಗ ಎಲ್ಲವನ್ನೂ ಒಟ್ಟಾಗಿ ಓಪನ್ ಮಾಡಿ ಒಂದೊಂದನ್ನು ಓದಿ ಪ್ರತಿಕ್ರಿಯಿಸುತ್ತಿರುವೆ ...

ಸರ್ದಾರ್ ವಲ್ಲಭ ಭಾಯ್ ಪಟೇಲರ ಬಗ್ಗೆ ಏನಾದರೂ ಹೇಳಲು ನಾ ಭಲೇ ಚಿಕ್ಕವನು -
ಉಕ್ಕಿನ ಮನುಷ್ಯರು -ಉಕ್ಕಿನ ಮಹಿಳೆಯರು ಎಂದೆಲ್ಲ ಇನ್ನಿತರ ಜಗತ್ತಿಂದ ದೇಶಗಳ ಮುಖ್ಯಸ್ಥರನ್ನು ಸಹಾ ಕರೆದಿರುವರು -ಆದರೆ ಆ ಕ್ಷಣದ -ಆ ಸಂಘಟನೆಗಳ -ಘಟನೆಗಳ ನಿರ್ವಹಣೆ -ವಿಧಾನ ಭಿನ್ನ ಭಿನ್ನ .. ಅದಕಾಗಿ ಪಟೇಲರು ವಿಭಿನ್ನ ..!!

ಚಿಕ್ಕಂದಿನಲ್ಲಿ ಸ್ಕೂಲಲ್ಲಿ ಅವರ ಬಗೆಗಿನ ಪಾಠ -ಕವನ (ಬಲು ಕಡಿಮೆ )ಓದುವಾಗ , ಮಹಾತ್ನ್ಮ ಗಾಂಧೀಜಿ ,ನೆಹರೂ (ಅದರಲ್ಲೂ ನೆಹರೂ ಅವರ ಬಗ್ಗೆ ವರ್ಷದ ಅನುದಿನವೂ ನೆನಪಿನ ಮರುಕಳಿಕೆ ಇರುವುದು ) ಅವರ ಜನ್ಮ ದಿನಗಳ ಸಂದರ್ಭದಲ್ಲಿ ಚಟುವಟಿಕೆಗಳನ್ನು ನೋಡುವಾಗ ಅದ್ರಲ್ಲಿ ಭಾಗವಹಿಸುವಾಗ -ಪಟೇಲರಿಗೆ ಮತ್ತು ನೇತಾಜಿ ಅವರಿಗೆ ಬರು ಬರುತ್ತಾ ರಾಜೇಂದ್ರ ಪ್ರಸಾದ್ -ತಿಲಕರು ಇತ್ಯಾದಿ ಮಹನೀಯರ ಬಗ್ಗೆ ನೆನಪು ಮಾಡಿಕೊಳ್ಳುವ ಸಭೆ ಸಮಾರಂಭ ಕಡಿಮೆ ಆಗಿ ಅವರಿಗೆ ನೀಡಬೇಕಾಗಿದ್ದ ಗೌರವ ಗಮನ ಸಲ್ಲಿಸದೆ -ನಿರಾಭಿಮಾನಿಗಳು ಆದೆವು ಅನಿಸುತ್ತಿದೆ. . :(((

ನಮ್ಮೀ ಕರುನಾಡ ದಕ್ಷಿಣ ಕರುನಾಡ ಮತ್ತು ಉತ್ತರ ಕರುನಾಡಿನ ಕೆಲ ಪ್ರದೇಶಗಳ ಜನರಿಗಿಂತ ನಮಗೆ -ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ -ನಮ್ಮನ್ನು ಭಾರತದ ತೆಕ್ಕೆಗೆ -ನಿಜಾಮನ ಸೊಕ್ಕು ಮುರಿದು ನೆಹರೋ ಮಾತಿಗೆ ಸೊಪ್ಪು ಹಾಕದೆ -ಸೇರಿಸಿದ ಕಾರಣಕ್ಕಾಗಿ ಪಟೇಲರ ಬಗ್ಗೆ ನಮಗೆ ಹೆಚ್ಚಿನ ಗೌರವ -ಆಕರ್ಷಣೆ -ಒಲವು ಇದೆ ಅನ್ನಬಹುದು ..

ಈಗ ದೇಶದ ಎಲ್ಲೆಡೆ ನಿಂತಿರುವ ನಿಲ್ಲುತ್ತಿರುವ ನಿಲ್ಲಬಹುದಾದ ಇನ್ನಿತರ ಮಹನೀಯರ ಪ್ರತಿಮೆಗಳು --ಸೌಧ ನೆನಪಿನ ಸ್ಮಾರಕಗಳಿಗೆ ಹೋಲಿಸಿದಾಗ ನೆಹರೂ ವಂಶಸ್ತ್ರ್ಹರನ್ನು ಬಿಟ್ಟು ಮಿಕ್ಕೆಲ್ಲ ಮಹನೀಯರಿಗೆ ಅಗೌರವವೇ ಆಗಿದೆ ..

ಅವರ ಜನುಮ ದಿನದಂದು ಅವರ ಬಗ್ಗೆ ಸಾಧನೆ -ಆ ಕ್ಷಣದ ಅಗತ್ಯತೆ -ಕ್ಷಿಪ್ರ ನಿರ್ಧಾರ -ಛಲ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿರುವಿರಿ ..

ಅಂತಾ ಮಹನೀಯರ ಅವಶ್ಯಕತೆ ಈಗ ನಮಗಿದೆ ..
ನಮ್ಮ ದುರ್ದೈವ ಎಂದರೆ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಈ ತರಹದ ಮುತ್ಸದ್ಧಿಗಳನ್ನು ಒಬ್ಬರ ಹಿಂದೆ ಒಬ್ಬರನ್ನು ಕಳೆದುಕೊಂಡದ್ದು ..;((( ಆ ಸ್ಥಾನ ತುಂಬಬಲ್ಲ ಮತ್ತೊಬ್ಬ ಮಹನೀಯರು ಬರಲಿಲ್ಲ ..
ಬರಹ ಆಪ್ತವಾಯಿತು ..
ಶುಭವಾಗಲಿ
\। /

Submitted by nageshamysore Thu, 11/07/2013 - 03:52

In reply to by venkatb83

ಸಪ್ತಗಿರಿಗಳೆ ನಮಸ್ಕಾರ, ನಿಮ್ಮ ಆಫೀಸಿನ ಜತೆ ಮನೆಯ ನೆಟ್ವರ್ಕು ಸಹ ರಾಜ್ಯೋತ್ಸವ - ದೀಪಾವಳಿ ಆಚರಣೆಗೆ ಒಂದು ವಾರದ ರಜೆ ಹಾಕಿಬಿಟ್ಟವೆಂದು ಕಾಣುತ್ತದೆ. ದೀಪಾವಳಿಯ ನಡುವೆ ತುಸು 'ಡಲ್' ಅನಿಸಿ ಕಡಿಮೆಯಾಗಿದ್ದ ಪ್ರತಿಕ್ರಿಯೆಗಳಿಗು ಈಗ ನಿಮ್ಮ ಪ್ರತಿಕ್ರಿಯೆಯ 'ದೀಪಾವಳಿ' :-)

ಸರ್ದಾರ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿಗಳ ರೀತಿಯ ಅದೆಷ್ಟೊ ನಾಯಕರ ಬಗ್ಗೆ ನಾವೂ ಹೆಚ್ಚು ಕೇಳುವುದೆ ಇಲ್ಲ. ಅವರ ಹುಟ್ಟುಹಬ್ಬ ಪುಣ್ಯತಿಥಿಗಳ ಬಂದು ಹೋಗಿದ್ದು ಗೊತ್ತಾಗುವುದಿಲ್ಲ. ಮತ್ತೆ ಕೆಲವನ್ನು ಮರೆಯಲೆ ಆಗದಂತೆ ರಜೆಯ ಮುಖಾಂತರವೊ, ಮಾಧ್ಯಮ ಪ್ರಚಾರಗಳ ಮೂಲಕವೊ ಅಥವ ಯೋಜನೆಗಳ ಹೆಸರಿನಲ್ಲೊ ಜೀವಂತವಾಗಿರಿಸಲಾಗಿರುತ್ತದೆ. ಮತ್ತೊಂದು ವಿಪರ್ಯಾಸವೆಂದರೆ ನಿಜಕ್ಕು ಕೆಲಸ ಮಾಡುವ ಎಷ್ಟೊ ಜನರು 'ಮೌನ ಸಾಧಕರು (ಸೈಲೆಂಟ್ ಪರ್ಫಾರ್ಮರ್ಸ್)' . ಅವರಾಗಲಿ ಅವರ ಹತ್ತಿರದವರಾಗಲಿ, ಸ್ವಯಂ ಪ್ರಚಾರದ ಲಾಬಿ ಮಾಡಲು ಹೋಗುವುದಿಲ್ಲ. ಹೀಗಾಗಿ ಕಾಲಮಾನದ ಕನ್ನಡಿಯಲ್ಲಿ ಮಸುಕಾಗಿಬಿಡುವ ಸಾಧ್ಯತೆಯೆ ಹೆಚ್ಚು. ಅದನ್ನು ಸ್ವಲ್ಪಮಟ್ಟಿಗೆ ಮೀರಿಸಿದ್ದೆಂದರೆ ಗಾಂಧೀಜಿಯ ವ್ಯಕ್ತಿತ್ವ - ಪ್ರಾಯಶಃ ಅವರ ಜನಪ್ರಿಯತೆಯನ್ನು ಕುಗ್ಗಿಸಲಾಗದಷ್ಟು ಅವರು ಜನಮಾನಸದಲ್ಲಿ ಪರಿಚಿತರಾಗಿಬಿಟ್ಟಿದ್ದ ಕಾರಣ. ನನಗೆ ನೆನಪಿರುವಂತೆ ಪಟೇಲರ ಕುರಿತು ಒಂದೆ ಒಂದು ಪಾಠವಿತ್ತು ಭಾರತದ ಸ್ವಾತ್ಯಂತ್ರ ಸಂಗ್ರಾಮದ ಇತಿಹಾಸದ ನಡುವೆ ಸೇರಿಸಿದ್ದು. ಅದು ಬಿಟ್ಟರೆ ಮಿಕ್ಕೆಲ್ಲು ಓದಿದ ನೆನಪಿಲ್ಲ.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು