ಇದು ತಿರುಕನ ಕನಸಲ್ಲ...

ಸಿನಿಮಾ ಮಾಡೋಣ ಬನ್ನಿ
ಹೊಡೆದಾಟಗಳಿಲ್ಲದ - ರಕ್ತ ಚೆಲ್ಲದ - ಕುತಂತ್ರಗಳಿಲ್ಲದ -
ಆಕರ್ಷಕ - ಸೃಜನಾತ್ಮಕ - ಮನೋರಂಜನಾತ್ಮಕ -
ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ.
ಸಾಹಿತ್ಯ ರಚಿಸೋಣ ಬನ್ನಿ,
ದ್ವೇಷಕಾರದ - ವಿಷಕಕ್ಕದ - ಪ್ರತಿಷ್ಠೆ ಮೆರೆಯದ -
ಚೆಂದದ ಭಾಷೆಯ - ಪ್ರೀತಿಯ ಚುಂಬಕದ - ಮಾನವೀಯ ಬರಹ.
ಚಿತ್ರ ಬಿಡಿಸೋಣ ಬನ್ನಿ,
ಆತ್ಮವಂಚನೆಯಿಲ್ಲದ - ಬೆಂಕಿಯುಗುಳದ - ಅಶ್ಲೀಲವಲ್ಲದ - ಪ್ರಕೃತಿಯ ಮಡಿಲಿನ - ಸೌಂದರ್ಯದ ಬೀಡಿನ - ಮನಮೋಹಕ ದೃಶ್ಯ .
ಸಂಗೀತ ನುಡಿಸುತ್ತಾ ಹಾಡೋಣ ಬನ್ನಿ,
ಅಹಂಕಾರಗಳಿಲ್ಲದ - ಪಂಥಬೇದಗಳಿಲ್ಲದ - ಕೃತಿಮತೆಯಿಲ್ಲದ -
ಮನಕೆ ಮುದನೀಡುವ - ಆಹ್ಲಾದಕರ - ಆರಾಧನಾ ಭಾವದಿಂದ.
ಪರಿಸರ ಉಳಿಸೋಣ ಬನ್ನಿ,
ವಿಷಗಾಳಿಯಿಲ್ಲದ - ಕಲ್ಮಶನೀರಲ್ಲದ - ಆಹಾರ ಕಲಬೆರಕೆಯಾಗದ - ಹಚ್ಚಹಸಿರಿನ - ಸ್ವಚ್ಚ ಗಾಳಿಯ - ಶುಧ್ಧ ನೀರಿನ ಪ್ರಕೃತಿ.
ಸಂಘಟಿತರಾಗೋಣ ಬನ್ನಿ,
ಸ್ವಾರ್ಥಿಗಳಾಗದ - ಘರ್ಷಣೆಗಳಿಲ್ಲದ - ಸೇವಾಮನೋಭಾವದ -
ತ್ಯಾಗದ - ಪ್ರಾಮಾಣಿಕತೆಯ - ಅರ್ಪಣಾಮನೋಭಾವದ ಸಂಸ್ಥೆಯೊಂದಿಗೆ.
ಆಡಳಿತ ನಡೆಸೋಣ ಬನ್ನಿ,
ಭ್ರಷ್ಟತೆಯಿಲ್ಲದ - ದೌರ್ಜನ್ಯಗಳಿಲ್ಲದ - ಅನ್ಯಾಯ ಮಾಡದ - ಸಮಾನತೆ - ಸ್ವಾತಂತ್ರ್ಯ - ಸೋದರತೆಯ ಜೀವಪರ ಸರ್ಕಾರ.
ಬದುಕೋಣ ಬನ್ನಿ,
ಚಿಂತೆಗಳಿಲ್ಲದ - ಜಿಗುಪ್ಸೆಗಳಿಲ್ಲದ - ನೋವುಗಳಿಲ್ಲದ -
ನೆಮ್ಮದಿಯ - ಆನಂದದಾಯಕ - ಸುಖದ ಜೀವನ .
ಮನುಷ್ಯರಾಗೋಣ ಬನ್ನಿ,
ಕಪಟತನವಿಲ್ಲದ - ದುರ್ಬುದ್ಧಿಗಳಿಲ್ಲದ - ಮನೋವಿಕಾರಗಳಿಲ್ಲದ -
ಜ್ಞಾನಸ್ಥ - ಧ್ಯಾನಸ್ಥ - ಯೋಗಸ್ಥ - ಕರ್ಮಸ್ಥ - ಜೀವಿಗಳಾಗಿ.
ಇದು ತಿರುಕನ ಕನಸಲ್ಲ...
ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ ...
- ಜ್ಞಾನ ಭಿಕ್ಷಾ ಪಾದಯಾತ್ರೆಯ 155 ನೆಯ ದಿನ ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ