ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ.
ಹೊಗೆನಕಲ್ ವಿವಾದವಾದಾಗ ತಮಿಳು ಚಿತ್ರನಟರಾದ ಶ್ರೀ.ರಜನಿಕಾಂತ್ ಅವರು ಕನ್ನಡಿಗರನ್ನು ಕುರಿತು, ಕನ್ನಡ ಹೋರಾಟಗಾರರನ್ನು ಕುರಿತು ಕೀಳಾಗಿ ಮಾತನಾಡಿದ್ದು ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದು ’ನನ್ನ ಚಿತ್ರ ನೋಡದಿದ್ದರೆ ನನಗೇನೂ ನಷ್ಟವಿಲ್ಲ’ ಎ೦ದಿದ್ದ ಅವರು ಕನ್ನಡಿಗರ ಕ್ಷಮೆ ಕೇಳಲು ಇಲ್ಲವೆಂದಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯಿಂದ ಕೆಲ ಕನ್ನಡಿಗ ಸದಸ್ಯರನ್ನು ತೆಗೆದು ಹಾಕಿದ ಅಪಮಾನದ ಗಾಯ ಇನ್ನೂ ಕನ್ನಡಿಗರ ಮನದಲ್ಲಿ ಹಸಿಯಾಗಿದೆ. ಶ್ರೀ. ರಜನಿಕಾಂತ್ ಅವರು ತಮ್ಮ ಉದ್ಧಟತನದ ಮಾತಿಗಾಗಿ ಕನ್ನಡಿಗರ ಕ್ಷಮೆಯನ್ನು ಕೇಳದೆ ಇದೀಗ ಕುಸೇಲನ್ ಚಿತ್ರವನ್ನು ಇಲ್ಲಿ ಬಿಡುಗಡೆ ಮಾಡಲು ಮುಂದಾಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ರಜನಿಕಾಂತ್ ಅವರು ನಾಡಿನ ಕ್ಷಮೆ ಕೇಳುವವರೆಗೆ ಅವರ ಚಿತ್ರ ಬಿಡುಗಡೆಗೆ ತಡೆ ಒಡ್ಡುತ್ತೇವೆ. ಈ ದಿಸೆಯಲ್ಲಿ ಸಂಬಂಧಪಟ್ಟ ವಾಣಿಜ್ಯ ಮಂಡಲಿಯವರಿಗೆ, ಚಿತ್ರವಿತರಕರಿಗೆ, ನಾಡಜನತೆಗೆ ಕನ್ನಡ ನಾಡಿನ ಸ್ವಾಭಿಮಾನಕ್ಕೆ ಎದುರಾಗಿರುವ ಈ ಸವಾಲನ್ನು ಎದುರಿಸಲು ನಮ್ಮೊಂದಿಗೆ ಕೈಜೋಡಿಸಬೇಕೆಂದು ಈ ಮೂಲಕ ಕೋರುತ್ತೇವೆ.
http://karave.blogspot.com/
http://www.karnatakarakshanavedike.org/modes/view/74/kuselan-film-karnataka.html