ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೯

ಭದ್ರ ನೆಲೆ
ಭದ್ರ ನೆಲೆಯು ಛಿದ್ರವಾಗ-
ದಂತೆ ವಹಿಸು ಎಚ್ಚರ;
ಛಿದ್ರವಾದರದರ ಸತ್ವ
ಉಡುಗಿ ಪೋಪುದೆಚ್ಚರ !
ಶುದ್ಧವಾದ ಮನವನಿಟ್ಟು
ಕೊಂಡರದುವೆ ಸಂಭ್ರಮ;
ಬದ್ಧವಾದ ಕ್ರಿಯೆಗೆ ಸ್ಪಷ್ಟ-
ವಾಗದಿರ್ಯ್ವ ವಿಭ್ರಮ !
ನಿಖರವಾದ ಯತ್ನದಿಂದ
ಸಫಲವಾದ ಈ ಕ್ರಮ ;
ಪ್ರಖರವಾದ ಪರಿಣಾಮಕೆ
ನಿಕಟವಾದುದೀ ಶ್ರಮ !
ಮನದ ಕುರುಹು ಮನದ ಹರಹು
ಬೆಟ್ಟದಂತೆ ಬೆಳೆದಿದೆ ;
ಮಾನವ ತಣಿಸಿ ಮನವ ಮಣಿಸಿ
ಕಟ್ಟಿ ಹಾಕಬೇಕಿದೆ !
ಛಿದ್ರವಾಗದಂತೆ ಮನವ
ಬದ್ಧಗೊಳಿಸಬೇಕು ;
ಸಿದ್ಧಗೊಳಿಸಿಕೊಂಡ ಮೇಲೆ
ಸ್ನಿಗ್ಧ ಭಾವ ಸಾಕು !
ಭದ್ರ ನೆಲೆಯು ಛಿದ್ರವಾಗ-
ದಂತೆ ವಹಿಸು ಎಚ್ಚರ ;
ಛಿದ್ರವಾಗಗೊಡದೆ ನಿತ್ಯ
ಬದ್ಧಗೊಳಿಸು ಎಚ್ಚರ !
***
ದಾತನ ಸ್ಮರಣೆ
ದಾತನ ಸ್ಮರಿಸುವ ಬಾರೆ ಸಖೀ ನವ-
ನೂತನ ಹರುಷವ ತಾಳಿ ಸಖಿ ;
ದಾತನ ಭಜಿಸುವ ಬಾರೆ ಸಖೀ ಭವ
ತಾಪವ ಕಳೆಯುವ ಬಾರೆ ಸಖಿ !
ಧ್ಯಾನದಿ ಮನವನು ನಿಲಿಸಿ ಸಖೀ -
ಸುಜ್ಞಾನದ ಸಿರಿಯನು ಪಡೆವ ಸಖಿ ;
ಧ್ಯಾನದ ಮಹಿಮಾಪೂರದಪಾರದ
ವಾರಿಧಿಯಲಿ ಮುಳುಗೋಣ ಸಖಿ !
ಜ್ಞಾನದ ಬೆಳಕನು ಹುಡುಕಿ ಸಖೀ -
ಅಜ್ಞಾನನದ ಮೌಢ್ಯವ ಕಳೆವ ಸಖಿ ;
ಜ್ಞಾನದ ಅಮೃತವರ್ಷದ ಸಿಂಚನ -
ದನುಪಮದನುಭವ ಪಡೆವ ಸಖಿ !
ದಾತನ ಸ್ಮರಿಸುವ ಬಾರೆ ಸಖಿ ನವ -
ನೂತನ ಹರುಷವ ತಾಳಿ ಸಖಿ ;
ಚೇತನರೂಪನ ಕೌತುಕದೀಪನ
ವ್ಯಾಪಕ ನೆಲೆಯನು ತಿಳಿವ ಸಖಿ !
***