ಕೆಲವು ಹನಿಗಳು...

ಕೆಲವು ಹನಿಗಳು...

ಕವನ

ಪ್ರವೀಣ! 

ಜನಪ್ರಿಯ

ಗಾದೆ-

ಹುಚ್ಮುಂಡೆ

ಮದುವೇಲಿ

ಉಂಡವನೇ

ಜಾಣ...

 

ಇದನ್ನು

ಅಕ್ಷರಶಃ

ಸಾಧಿಸಿದವನೇ

ನಮ್ಮೂರ

ರಾಜಕೀಯ

ಪ್ರವೀಣ!

***

ಚಾಪ್ಲಿನ್-ಉವಾಚ 

ಸುರಿವ

ಮಳೆಯೊಳಗೆನ್ನ

ನಿಲ್ಲಿಸಿಬಿಡು-

ಮಳೆಯ ಜೊತೆಗೆ

ಕಣ್ಣೀರ ಹನಿಗಳನೂ

ಸುರಿಸಿಬಿಡುವೆ...

 

ಈ ಜಗದ

ಜನಕೆ

ಅದು ಗೊತ್ತಾಗದಿರಲಿ;

ಆ ಮಳೆ

ನಿಂತೊಡೆನೆಯೇ

ನಾ ನಕ್ಕುಬಿಡುವೆ!

***

ಏಕ ಪತ್ನೀ ವೃತಸ್ಥ...

ಸೀತೆಯನು

ಕಾಡಿಗಟ್ಟಿ

ಪರೀಕ್ಷೆಗೊಳಪಡಿಸಿದರೂ

ಆದನು

ಶ್ರೀರಾಮ

ಪುರುಷೋತ್ತಮ...

 

ರಾವಣನನ್ನು

ಕೊಂದದ್ದಕ್ಕಲ್ಲ;

ಸದಾಚಾರ ಸಂಪನ್ನ

ಏಕ ಪತ್ನೀ ವೃತಸ್ಥನಾಗಿ

ಮೆರೆದದ್ದೇ

ಉತ್ತಮೋತ್ತಮಾ!

***

ಅಮ್ಮಾ ನಿನ್ನ ಸಮರುಂಟೇ? 

ನಿನಗೇನು

ಕೊಡಲಿ

ತಾಯಿ

ನಿನಗೆ

ಕೊಡುವಂತಹ

ವಸ್ತುವುಂಟೇ...

 

ಹೀಗೆನ್ನುತ್ತಲೇ

ಅವಳನು

ಹೊಗಳೀ

ಹೊಗಳೀ

ಏನೂ

ಕೊಡಲಿಲ್ಲವಂತೆ!

***

ಕನಸು 

ಅಕ್ಕ

ಕೇಳವ್ವಾ

ನಾನೊಂದು

ಸುಂದರ

ಕನಸಾ

ಕಂಡೆ...

 

ಭ್ರಷ್ಟಾಚಾರ

ಇಲ್ಲದ

ಭವ್ಯಭಾರತದ

ರಾಮರಾಜ್ಯ-

ಎನ್ನ ಕನಸಿನ

ಉಂಡೆ!

***

ಅಪರಿಪೂರ್ಣ 

ಈ ಜಗತ್ತಿನಲಿ

ಯಾವ

ಅತಿರಥರ

ಆತ್ಮಕಥನಗಳೂ

ಪರಿಪೂರ್ಣ

ಅಲ್ಲವೋ...

 

ಸತ್ಯವೆಂಬ

ಹೂರಣ-

ಅಸತ್ಯದ

ಕಣಕದಲಿ

ಮುಚ್ಚಿ 

ಹೋದಾವೋ...!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್