ದೊಡ್ಡವರ ದಾರಿ ......14
ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು. ಜೀವನದಲ್ಲಿ ಮೂರು "ಮ"ಗಳನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು. ಇದು ನಮಗೆ ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗುತ್ತದೆ.
ಆ ಮೂರು " ಮ "ಗಳೆಂದರೆ, " ಮರೆಯಬಾರದು ,ಮೆರೆಯಬಾರದು ಮತ್ತು ಮುರಿಯಬಾರದು. "
ನಮ್ಮ ಜೀವನವನ್ನು ಸುಗಮಗೊಳಿಸಲು ಶೈಶವದಿಂದ ನಮಗಾಗಿ ಅದೆಷ್ಟೋ ಜೀವಗಳು ಶ್ರಮಿಸುತ್ತವೆ. ಪ್ರತಿ ಕ್ಷಣದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಮತ್ತೊಬ್ಬರ ಸಹಾಯ ಸಹಕಾರ ಇದ್ದೆe ಇರುತ್ತದೆ . ನಾವೇ ಎಲ್ಲವನ್ನು ಮಾಡಲಾಗುವುದಿಲ್ಲ. ಎಲ್ಲರ ಪರಿಶ್ರಮದ ಸಹಕಾರದಿಂದ ನಾವು ನಮ್ಮ ಬದುಕನ್ನು ಸಾಗಿಸುತ್ತೇವೆ, ಸುಂದರವಾಗಿಸಿಕೊಂಡಿ ರುತ್ತೇವೆ. ಆದರೆ ಈ ರೀತಿ ಸಹಾಯ ಮತ್ತು ಸಹಕಾರ ನೀಡಿದ ಮಹನೀಯರುಗಳನ್ನು ನಮ್ಮ ಕೆಲಸವಾದ ನಂತರ ಮರೆತು ಬಿಡುತ್ತೇವೆ. ಇಲ್ಲಿ ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಗುರುಜನ, ನೆರೆಹೊರೆಯವರು, ಸ್ನೇಹಿತರು, ಬಂಧುಗಳು , ಹಾಲು ತರಕಾರಿ ದಿನಸಿ ಮುಂತಾದವನ್ನು ಕೊಡುವ ಮಂದಿ ಮತ್ತು ಮನೆ ಕೆಲಸದವರನ್ನು ಸೇರಿಸಿಕೊಂಡು ಇನ್ನು ಹಲವು ಮಂದಿ ಎಲ್ಲರೂ ನಮ್ಮ ಜೀವನವನ್ನು ಸುಗಮಗೊಳಿಸಲು ಪರಿಶ್ರಮ ಹಾಕಿದವರೇ! ಇವರ ಶ್ರಮವನ್ನು ಗೌರವಿಸು. ಇವರನ್ನು ಎಂದಿಗೂ ಮರೆಯಬಾರದು.
ಎಲ್ಲರ ಪರಿಶ್ರಮದ ಜೊತೆಗೆ ನಮ್ಮ ಪರಿಶ್ರಮವೂ ಸೇರಿಕೊಂಡು ನಾವು ಸಮಾಜದಲ್ಲಿ ಒಂದು ಜವಾಬ್ದಾರಿಯುತ ಸ್ಥಾನ ಅಲಂಕರಿಸಿದಾಗ ಹೆಸರು, ಐಶ್ವರ್ಯ, ಯಶಸ್ಸು ಇತ್ಯಾದಿಗಳು ಲಭ್ಯವಾಗುತ್ತದೆ. ಇಂತಹ ಸಮಯದಲ್ಲಿ ಅಹಂಕಾರ, ಮದ ನಮ್ಮೊಳಗೇ ನಮ್ಮ ಅರಿವಿಗೆ ಬಾರದಂತೆ ನುಸುಳಿಬಿಡುತ್ತದೆ. ಇದು ಅವನತಿಯ ಹಾದಿ ಎಂದು ತಿಳಿಯುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಮದೋನ್ಮತ್ತ ರಾಗಬಾರದು. ಈ ಅವಕಾಶ ದೇವರು ನನಗೆ ದಯಪಾಲಿಸಿರುವ ಭಿಕ್ಷೆ. ಇಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಅವಶ್ಯಕತೆ ಇರುವವರಿಗೆ ಮಾಡುತ್ತೇನೆ ಎಂಬ ವಿನಮ್ರ ಭಾವನೆ ಹೊಂದಬೇಕೆ ವಿನಃ ಮೆರೆಯಬಾರದು.
ನಾವೆಲ್ಲರೂ ಭಾವನ ಜೀವಿಗಳು. ನಮ್ಮೆಲ್ಲರಿಗೂ ಒಂದೊಂದು ರೀತಿಯಲ್ಲಿ ಬೇರೆ ಬೇರೆ ಭಾವನೆಗಳು ಇರುತ್ತವೆ. ಎಲ್ಲವು ಒಂದೇ ರೀತಿ ಇರಲು ಸಾಧ್ಯವಿಲ್ಲ, ಒಂದೇ ರೀತಿಯಲ್ಲಿ ಇರಬೇಕಾಗಿಯು ಇಲ್ಲ. ನನಗೆ ಸರಿಯೆನಿಸಿದ ಭಾವನೆಗಳು ನಿಮಗೆ ಬೇಡವೆನಿಸಬಹುದು. ಬೇಕು ಬೇಡಗಳಿಗೆ ಅವರದೇ ಆದ ಕಾರಣಗಳು ಇದ್ದೆ ಇರುತ್ತವೆ. ಈ ಎಲ್ಲಾ ಕಾರಣಗಳು ಅವರವರಿಗೆ ಸರಿಯೆಂದೇ ಅನಿಸಿರುತ್ತದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರ ಭಾವನೆಯನ್ನು ಗೌರವಿಸಬೇಕು. ಸರಿ ತಪ್ಪು ನಿರ್ಣಯ ನಮಗೆ ಬೇಡ. ಸರಿ ಎನಿಸಿದ್ದನ್ನು ಮಾಡು, ತಪ್ಪೆಂದು ನಿನಗನಿಸಿದ್ದನ್ನು ಬಿಟ್ಟು ಬಿಡು. ಆದರೆ, ಇನ್ನೊಬ್ಬರ ಭಾವನೆಯನ್ನು ಘಾಸಿಗೊಳಿಸ ಬಾರದು . ಇನ್ನೊಬ್ಬರ ಭಾವನೆಯನ್ನು ಮುರಿಯಬಾರದು.
ಇಷ್ಟು ಸಾಕಲ್ಲವೇ ಉತ್ತಮ ಜೀವ ನಡೆಸಲು. ಹೇಳಿದಂತೆ ಮಾಡಿ ತೋರಿದ ಗುರುವಿನ ಪಾದಾರವಿನ್ದಕ್ಕೆ ಶ್ರದ್ಧೆಯ ನಮನಗಳು.
ಹೆಚ್ ಏನ್ ಪ್ರಕಾಶ್
15 11 2012
Comments
>> " ಮರೆಯಬಾರದು ,ಮೆರೆಯಬಾರದು
" ಮರೆಯಬಾರದು ,ಮೆರೆಯಬಾರದು ಮತ್ತು
In reply to " ಮರೆಯಬಾರದು ,ಮೆರೆಯಬಾರದು ಮತ್ತು by sathishnasa
ಧನ್ಯವಾದಗಳು ಸತೀಶರೆ.
ದೊಡ್ಡವರು ತೋರಿಸಿದ ದಾರಿಯಲ್ಲಿ
In reply to ದೊಡ್ಡವರು ತೋರಿಸಿದ ದಾರಿಯಲ್ಲಿ by kavinagaraj
ಧನ್ಯವಾದಗಳು ನಾಗರಾಜರೇ,.......
ಪ್ರಕಾಶ್ ಅವರೆ,
In reply to ಪ್ರಕಾಶ್ ಅವರೆ, by ಗಣೇಶ
ಆತ್ಮೀಯ ಗಣೇಶರೆ,