ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧

ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳನ್ನು ಸಂಗ್ರಹಿಸಿ ನೀಡುತ್ತಿದ್ದೇವೆ. “ಪಂಜೆ ಮಂಗೇಶರಾಯರ ಮಕ್ಕಳ ಸಾಹಿತ್ಯ" ಎಂಬ ಕೃತಿಯ (ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು) ಕುರಿತಾದ ಪುಸ್ತಕ ಪರಿಚಯವು ‘ಸಂಪದ' ಜಾಲತಾಣದಲ್ಲಿ ಈಗಾಗಲೇ (ಅಗೋಸ್ಟ್ ೧೪, ೨೦೧೯) ಪ್ರಕಟವಾಗಿದೆ. ಈ ಕೃತಿಯನ್ನು ೧೯೭೩ರಲ್ಲಿ ಮುದ್ರಿಸಲಾಗಿದ್ದು, ಅವುಗಳು ಕ್ರಮೇಣ ಅಲಭ್ಯವಾದ ಕಾರಣ ಅಂಕಿತ ಪುಸ್ತಕ ಪ್ರಕಾಶನದವರು ೨೦೧೫ರಲ್ಲಿ ಮರು ಮುದ್ರಣ ಮಾಡಿದ್ದಾರೆ. 

ಪಂಜೆ ಮಂಗೇಶರಾಯರು ಬರೆದ ಈ ಕವನಗಳು ಬಹಳ ಅಪರೂಪವಾದವುಗಳು. ಅವುಗಳ ಪರಿಚಯ ಈಗಿನ ಕಾಲದ ಮಕ್ಕಳಿಗೂ ತಿಳಿಯಪಡಿಸುವ ದೃಷ್ಟಿಯಿಂದ ಆ ಕವನ ಸಂಕಲನದ ಕವನಗಳನ್ನು ಒಂದೊಂದಾಗಿ ‘ಸಂಪದ' ದಲ್ಲಿ ಪ್ರಕಟಿಸಲಿದ್ದೇವೆ. “ಪಂಜೆಯವರು ಈ ಮಕ್ಕಳ ಪದ್ಯಗಳನ್ನು ರಚಿಸಿ ಸರಿಸುಮಾರು ನೂರು ವರ್ಷಗಳಾಗಿದ್ದರೂ ಇಂದಿಗೂ ಅವುಗಳ ತಾಜಾತನ ಮಾಸಿಲ್ಲ. ಕನ್ನಡದಲ್ಲಿ ಮಕ್ಕಳ ಪದ್ಯಗಳನ್ನು ಬರೆಯಲು ಯಾರೂ ಸಾಹಸ ಮಾಡದೇ ಇದ್ದಾಗ ಪಂಜೆಯವರು ಈ ಕೆಲಸ ಮಾಡಿ ಯಶಸ್ವಿಯಾದರು.” ಎಂಬುದು ಈ ಕೃತಿಯ ಪ್ರಕಾಶಕರ ಮಾತು. ಈ ಕವನಗಳಿಗೆ ರೇಖಾ ಚಿತ್ರಗಳನ್ನು ರಚಿಸಿ ಜೀವತುಂಬುವ ಕೆಲಸ ಮಾಡಿದ್ದಾರೆ ಶ್ರೀ ಬಿ ವಿ ರಾಮಮೂರ್ತಿಯವರು.

ಈ ಕೃತಿಯಲ್ಲಿ ೨೧ ಕವನಗಳು ಇವೆ. ಕೆಲವು ದೀರ್ಘವಾಗಿವೆ. ಈ ವಾರ ನಾವು ಪಂಜೆಯವರ ಎರಡು ಪುಟ್ಟ ಕವನಗಳನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇವೆ. 

ಆಡಿನಾ ಮರೀ!

ಆಡಿನಾ ಮರೀ, ಆಡ ಬಾರಲೇ !

ಓಡ ಬೇಡಲೆ, ನೋಡಿ ನನ್ನನು!

 

ಅರಳಿ ಎಲೆಯನೂ, ಹಲಸಿನೆಲೆಯನೂ,

ಹುರುಳಿ ಕಡಲೆಯಾ, ಕಲಸಿ ಕೊಡುವೆನು.

 

ಮಾತನಾಡದೇ, ನನ್ನ ನೋಡದೆ,

ಏತಕೋಗುವೆ? ಆಡಿನಾ ಮಗೂ !

***

ಸೂರ್ಯೋದಯ

ಕೆಂಪಿನ ಓಕುಳಿ ಸ್ನಾನದಲಿ,

ಇಂಪಿನ ಕೋಗಿಲೆ ಗಾನದಲಿ,

ಬಾನಿನ ಗದ್ದಿಗೆ ಏರಿದನು,

ಭಾನುವು ಹೊಂದಲೆ ತೋರಿದನು.

 

ಆ ದಿನನಾಥನ ಮೂರುತಿಗೆ

ಆದವು ಹೂಗಳು ಆರತಿಗೆ,

ಕೋಳಿಯು ಕಹಳೆಯ ಊದಿದುದು,

ಗಾಳಿಯು ರಾಯಸ ಓದಿದುದು.

***

(ಎರಡೂ ಕವನಗಳು ‘ಕವಿ ಶಿಷ್ಯ' ಸಂಕಲನದಿಂದ ಆಯ್ದುಕೊಳ್ಳಲಾಗಿದೆ)