ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫

ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ

ಬಗೆ ಬಗೆಯ ಬೇಡರಿಂದಲಿ ದೂರವಾಗು.

 

ಹೊತ್ತನ್ನು ತಿಂಬ ಸೋಮಾರಿತನ ಬೇಡ !

ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ !

ಕತ್ತು ಕೊಯ್ಕರ ಕೊಡೆ ನಂಟುಬೇಡತನ !

ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ !

 

ಎತ್ತಿದ್ದ ಸಾಲವನು ಕೊಡದ ಮನ ಬೇಡ !

ವಿತ್ತ ವಸ್ತುವ ನುಂಗುವಾ ಮೋಸ ಬೇಡ !

ಚಿತ್ತವನು ಕೆಡಿಪ ಹೊಟ್ಟೆಯ ಕಿಚ್ಚು ಬೇಡ !

ಮತ್ತೆ ಪಾಪದ ತರುವ ಕೆಡುಗೆಲಸ ಬೇಡ !

***

ಜೇನು ಹುಳು

ಹಸನು ಗೂಡನು, ಮಯಣಬೀಡನು

ಎಸೆವ ಹುಳಗಳ ನೋಡೆಲೊ,

ಬಿಸಿಲು ಕಾಲದೆ, ಗೇದು ಸೋಲದೆ,

ಒಸೆಯುತಿವೆ ಎಚ್ಚರದಲಿ.

 

ಹುಳಕೆ ದೇವನು ಬುದ್ದಿ ಈವನು

ಕೆಲಸ ಹುಳು ಸರಿಗೈವುದು ;

ಚೆಲುವ ಗೂಡನು ನರನು ಮಾಡನು

ಹುಳುವು ಕಟ್ಟಿದ ಹಾಗೆಯೇ.

 

ಒಳಗೆ ಸುಳಿವುದು, ಹೊರಗೆ ನಲಿವುದು

ಹುಳುವು ಪರಿವಿಡಿಯಿಂದಲಿ ;

ನೆಲೆಯ ಕಾಂಬುದು, ಜೇನ ತಿಂಬುದು,

ಕೆಲಸ ತಿಳಿವುದು ತನ್ನಯಾ.

 

ಅತ್ತಮೊರೆವುದು, ಇತ್ತಬರುವುದು

ಮತ್ತೆ ಹಾರ್ವುದು ಹೂವಿಗೆ ;

ಸುತ್ತ ಅಲೆಯದೆ, ಹೊತ್ತು ಕಳೆಯದೆ,

ಎತ್ತಿ ಒಯ್ವುದು ಹನಿಯನು.

 

ಅಂದು ಚೈತ್ರವು ಬರೆ ವಿಚಿತ್ರವು;

ಒಂದೆ ಹನಿ ಹನಿಯಾದರೂ

ಹಿಂದು ನೋಡದೆ, ಹುಳುಗಳಾಡದೆ

ತಂದು ಮಧು ಕೂಡಿಸುವವು.

 

ಒಡನೆ ಕೆಲಸದೆ ನಾನು ಆಲಸದೆ

ನೆಡುವೆ ನನ್ನೀ ಮನವನು,

ಹುಡುಕಿ ಎಲ್ಲವ, ಸವಿಯ ಬೆಲ್ಲವ

ಪಡೆವೆ ತುಂಬಿಯ ಹಾಗೆಯೇ.

(‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನಗಳು)