ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೦)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೦)

ಬರಹ

*****ಭಾಗ ೧೦

ವಾತಾಪಿ ಸೇರಿ ಕೆಲವೇ ದಿನಗಳಾಗಿದ್ದವು. ಮೊದಲೇ ಹೇಳಿದಂತೆ ರಾಯಭಾರಿ ಕೆಲಸಕ್ಕೆ ಶಿಕ್ಷಣ ಪಡೆಯುತ್ತಿದ್ದೆ. ಇನ್ನು ಕಾಯಕಾರ್ಥವಾಗಿ ನಾನು ಕಾಮರೂಪಕ್ಕೆ ಹೋಗುವ ಸಮಯವಾಗಿತ್ತು. ಮನೆಯಲ್ಲಿ ಮಾತಾಪಿತರಿಗೆ ನನಗೆ ವಿವಾಹ ಮಾಡಿ ಕಳುಹಿಸಬೇಕೆಂಬ ಆಶಯ. ಆದರೆ ಅದಕ್ಕವಕಾಶವಾಗಲಿಲ್ಲ. ಮಾತಾ-ಪಿತರನ್ನು ಬೀಳ್ಕೊಟ್ಟು ಅರಮನೆಗೆ ಹೊರಟೆ.

ಅರಮನೆಯಲ್ಲಿ ಮಂತ್ರಿಗಳು "ನೀನು ಕಲಿತಿರುವ ಗೂಢಚರ್ಯೆ ಹಾಗು ನೀನು ಮಾಡಿರುವ ವಿಶ್ಲೇಷಣೆ ಕೆಲಸಕ್ಕಿಂತ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಈ ಕೆಲಸದಲ್ಲಿ ನೀನು ಆ ದೇಶದಲ್ಲಿ ಅರಸನ ಪ್ರತಿನಿಧಿ ಎನ್ನುವುದನ್ನು ಯಾವಾಗಲೂ ಮರೆಯಬೇಡ. ಅಂತೆಯೇ ಅಲ್ಲಿಯ ಸುದ್ಧಿ-ಸಂದೇಶಗಳನ್ನು ಮೊದಲಿನಂತೆ ವಿಶ್ಲೇಷಿಸಿ ಬರುವ ಸಾರ್ಥ-ಪ್ರಯಾಣಿಕರೊಂದಿಗೆ ಕಳುಹಿಸಬೇಕು" ಎಂದು ಹೇಳಿ ಕಳುಹಿಸಿಲ್ಕೊಟ್ಟರು.

ನಾನು ಇಬ್ಬರು ಭಟರೊಡಗೂಡಿ ವಾತಾಪಿಯಿಂದ ಹೊರಟೆ. ಹಲವು ದಿನಗಳ ನಂತರ ಒಂದು ಸಾರ್ಥವನ್ನು ಹಿಡಿದು ಚೋಳ-ಆಂಧ್ರ ಮಾರ್ಗವಾಗಿ ಜಗನ್ನಾಥ ಪುರಿಯವರೆಗು ಹೋದೆ. ಅಲ್ಲಿಂದ ಮತ್ತೆ ಹೊರಟು ಕಳಿಂಗ-ವಂಗ ಮಾರ್ಗವಾಗಿ ಕಾಮರೂಪಕ್ಕೆ ನಾವಾಗಿಯೇ ಹೊರಟೆವು. ಕಳಿಂಗ ದಾಟಿ ವಂಗ ದೇಶಕ್ಕೆ ಬಂದಮೇಲೆ ನಾಲ್ಕಾರುದಿನಗಳ ಕಾಲ ಕೊಳಚೆ ಪ್ರದೇಶದಲ್ಲಿ ಹೋಗಬೇಕಾಯಿತು. ಆ ಕೊಳಚೆ ಪ್ರದೇಶದಲ್ಲಿ ನಾನು ಅಸ್ವಸ್ಥನಾಗಿ, ಹಲವಾರು ದಿನಗಳ ಕಾಲ ನರಳಿದ್ದಾಯಿತು. ಕೊಳಚೆಯ ನಂತರ ವಂಗದೇಶವನ್ನು ಬಿಟ್ಟು ಕಾಮರೂಪದ ಸೀಮೆ ಸೇರಿದೆವು. ಇದು ಪರ್ವತ ಪ್ರದೇಶವಾದ್ದರಿಂದ ಕೊಳಚೆಯಂತೆ ಪ್ರಯಾಣದ ಗತಿ ನಿಧಾನವಾಯಿತು. ಕೊಳಚೆ, ಗುಡ್ಡ ಕಾಡುಗಳಿಂದ ಹಾಯ್ದು ಕಡೆಗೊಮ್ಮೆ ಕಾಮರೂಪವನ್ನು ತಲುಪಿದೆ.

ಪೂರ್ವದಲ್ಲಿ ಈ ನಗರದ ಹೆಸರು ಪ್ರಾಜ್ಯೋತಿಶಪುರ - ಇದು ಕಿರಾತರ ರಾಜಧಾನಿಯಾಗಿತ್ತು. ಕಿರಾತರ ದೇಶ ಹಿಮಾಚಲದಿಂದ ಸಾಗರದವರೆಗೆಂದು ವರ್ಣಿಸಲಾಗಿದೆ. ದೇವತೆಗಳ ಸ್ಥಪತಿಯಾದ ವಿಶ್ವಕರ್ಮನೇ ಬಂದು ಪ್ರಾಜ್ಯೋತಿಶಪುರವನ್ನು ನರಕಾಸುರನಿಗಾಗಿ ಕಟ್ಟಿಕೊಟ್ಟನಂತೆ. ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ ನಂತರ ಅವನ ಪುತ್ರನಾದ ಭಗದತ್ತನು ತನ್ನ ಗಜೇಂದ್ರನೊಂದಿಗೆ ಮಹಾಭಾರತ ಯುದ್ಧದಲ್ಲಿ ಕೌರವರ ಪಡೆಯಲ್ಲಿ ಪಾಲ್ಗೊಂಡ ಕತೆಯನ್ನು ನಾನು ಗುರುಕುಲದಲ್ಲಿ ಕೇಳಿದ್ದೆ. ನಂತರ ಇದರ ಹೆಸರು ಕಾಮರೂಪವೆಂದು ಬದಲಾಯಿಸಲಾಯಿತು. ಕಲಿಕಾ ಪುರಾಣ ಹಾಗು ವಿಷ್ಣು ಪುರಾಣಗಳ ಪ್ರಕಾರ ಈ ದೇಶದ ಹೆಸರು ಕಾಮರೂಪವೆಂದೇ. ರಾಜಧಾನಿಯಲ್ಲಿರುವ ನೀಲಾಚಲ ಪರ್ವತದ ಮೇಲಿರುವ ಕಾಮಾಖ್ಯ ದೇವಾಲಯದಿಂದ ನಾಲ್ಕು ದಿಕ್ಕಿನಲ್ಲೂ ೪೫೦ ಕ್ರೋಶಗಳಷ್ಟು ದೂರದವರೆಗು ಇದರ ಸೀಮೆಯೆಂದು ಹೇಳಲಾಗಿದೆ. ಇಲ್ಲಿಯ ದೊರೆ ಭಾಸ್ಕರವರ್ಮನೆಂಬ ರಾಜನಾಗಿದ್ದ. ಈ ಭಾಸ್ಕರವರ್ಮನ ಆಸ್ಥಾನಕ್ಕೇ ನಾನು ರಾಯಭಾರಿಯಾಗಿ ಬಂದದ್ದು.

ನಾನು ಕಾಮರೂಪ ರಾಜನ ಆಸ್ಥಾನಕ್ಕೆ ಹೋಗಿ ಅರಸ ಪುಲಿಕೇಶಿ ಕೊಟ್ಟ ಓಲೆಯಾದಿ ಉಪಹಾರಗಳನ್ನು ಸಲ್ಲಿಸಿದೆ. ರಾಜನು ನನ್ನನ್ನು ಮಿತ್ರನಂತೆ ಸ್ವಾಗತಿಸಿ ನನಗಿರಲು ರಾಜಧಾನಿಯಲ್ಲಿ ಒಂದು ಗೃಹ ಹಾಗು ಬೇಕಾದ ಸೇವಕರ ಏರ್ಪಾಡು ಮಾಡಿಸಿದ. ಆ ವಿಚಾರದಲ್ಲಿ ನನಗಾವ ಯೋಚನೆಯೂ ಇರದಂತೆ ನೋಡಿಕೊಳ್ಳುತ್ತಿದ್ದ. ಭಾಸ್ಕರವರ್ಮನೂ ಅರಸ ಪುಲಿಕೇಶಿಯಂತೆಯೇ ಹರ್ಷರಾಜನ ವೈರಿಯಾಗಿದ್ದರಿಂದ ನಮ್ಮೆರಡೂ ರಾಜ್ಯಗಳಲ್ಲಿ ಮಿತ್ರತೆಯ ಭಾವವಿತ್ತು. ಹಾಗಾಗಿ ನನಗೆ ಹೆಚ್ಚು ಪ್ರಚ್ಛನ್ನ ಕಾರ್ಯಗಳನ್ನು ಮಾಡುವ ಅವಶ್ಯಕತೆಯಿರಲಿಲ್ಲ. ನಮ್ಮವರಿಗೆ ಕಿಂಚಿತ್ತಾದರೂ ಸಂಬಂಧಪಟ್ಟ ಈ ರಾಜ್ಯದ ಆಗುಹೋಗುಗಳನ್ನು ವರದಿ ಮಾಡಿ ಸಾರ್ಥ ಪ್ರಯಾಣಿಕರ ಮೂಲಕ ವಾತಾಪಿಗೆ ಕಳುಹಿಸುತ್ತಿದ್ದೆ.

ಹೀಗೆಯೇ ಹಲವಾರು ಮಾಸಗಳು ಉರುಳಿದವು. ಕಾಮರೂಪದ ಹವಾಮಾನ ಬಹು ಸುಖದಾಯಕವಾಗಿತ್ತು. ಸದಾ ತಂಪನೆ ತಾಪಮಾನ, ಚಳಿಗಾಲದಲ್ಲಿ ವಾತಾಪಿಗಿಂತ ಚಳಿ ಹೆಚ್ಚಾಗಿರುತ್ತಿತ್ತು. ಜನರು ಮೃದು ಹಾಗು ನಿಷ್ಠಾವಂತ ಸ್ವಭಾವದವರಾಗಿದ್ದರು. ಸ್ವಲ್ಪ ಕುಬ್ಜರೂಪಿಗಳಾಗಿ ಪೀತ ವರ್ಣವುಳ್ಳವರಾಗಿದ್ದರು; ಸಣ್ಣನೆಯ ಮೂಲೆಯಮೇಲೆ ನಿಂತಂತ ಕಣ್ಣುಗಳು ಹಾಗು ಕಾಣದಂತಹ ಹುಬ್ಬು-ರೆಪ್ಪಗಳನ್ನು ಹೊಂದಿದವರು. ಚೂದನಾ ಸ್ವಭಾವದವರು, ದೀರ್ಘ ಸ್ಮೃತಿಶಕ್ತಿ, ಹಾಗು ವಿದ್ಯಾಭ್ಯಾಸದಲ್ಲಿ ಕೌತುಕರು. ರಾಜನು ಪ್ರಜ್ಞಾ ಪ್ರೇಮಿ, ಹಾಗಾಗಿ ಯಥಾ ರಾಜ ತಥಾ ಪ್ರಜ ಎನ್ನುವಂತೆ ಪ್ರಜೆಗಳೂ ಜ್ಞಾನ ಪ್ರಿಯರು.

ದೀರ್ಘ ಮಳೆಗಾಲವುಉಳ್ಳ ನಾಡಿದು. ಇಲ್ಲಿಯ ಬ್ರಹ್ಮಪುತ್ರಾ ನದಿಯು ಪ್ರತಿ ವರ್ಷಕಾಲದಲ್ಲಿ ಉಕ್ಕಿ ಹೊಸ ಕಾಲುವೆಗಳಲ್ಲಿ ಹರಿದು ಹೋಗುತ್ತದೆ. ನೀರು ಕಡಿಮೆಯಾದಂತೆ ಮರಳು ದ್ವೀಪಗಳು ಕಾಣಿಸಿಕೊಳ್ಳುತ್ತವೆ. ಈ ದ್ವೀಪಗಳಲ್ಲಿ ನದಿಯ ಪೂರದಿಂದ ಬಂದ ಮಣ್ಣು ಸಮೃದ್ಧವಾಗಿದ್ದು ಇವು ಕೃಷಿಗೆ, ಜನರ ನೆಲೆಗೆ ಯೋಗ್ಯವಾಗಿರುತ್ತವೆ. ಮಳೆಗಾಲವಲ್ಲದೆ ವರ್ಷದಲ್ಲಿ ಎರಡು ಮಾಸಗಳ ಕಾಲ ಚಕ್ರವಾತದ ಶಕ್ಯವಿದ್ದು, ಇತರ ಮಾಸಗಳಲ್ಲೂ ವೃಷ್ಟಿಯ ಸಂಭಾವನೆ ಇರುತ್ತದೆ.

ಇಲ್ಲಿಯ ಮತ್ತೊಂದು ವಿಶಿಷ್ಟತೆ ಇಲ್ಲಿಯ ಅಗರು ಪರಿಮಳ. ನಮ್ಮ ನಾಡಿನ ಶ್ರೀಗಂಧಕ್ಕೆ ಸಮಾನ ಪರಿಮಳವುಳ್ಳ ಈ ವೃಕ್ಷವು ಅರ್ಘವೆನಿಸಿದೆ. ಇಲ್ಲಿಯ ರಾಜರ ಶಾಸನಗಳೆಲ್ಲ ಈ ಅಗರು ವೃಕ್ಷದ ಬಾಹ್ಯದಮೇಲೆ ಲಿಖಿಸಲಾಗುತ್ತಿತ್ತು. ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಳದಲ್ಲಿಯೂ ಈ ಅಗರುವಿನ ಉಲ್ಲೇಖವಿದೆ. ಇಲ್ಲಿದ್ದಾಗ ಉಪಹಾರವಾಗಿ ಅರಸನಿಂದ ಅಗರು ವೃಕ್ಷದ ಬಾಹ್ಯವನ್ನು ಪಡೆದಿದ್ದೆ. ಇದರ ಹಲವು ಕಾಷ್ಠಗಳನ್ನು ವಾತಾಪಿಗೂ ಕಳುಹಿಸಿದ್ದೆ.

ನನ್ನ ಕಾಮರೂಪದ ಅತೀ ಹತ್ತಿರದ ಬಂಧು ದೇವದತ್ತನೆಂಬ ಮಂತ್ರಿವರ್ಗದಲ್ಲಿ ಕಾರ್ಯ ಮಾಡುತ್ತಿದ್ದ ಒಬ್ಬ ಸಭಾಪತಿ. ದೇವದತ್ತನ ಮನೆ ನಾನಿದ್ದ ಮನೆಯ ಪಕ್ಕದಲ್ಲಿತ್ತು. ಇಬ್ಬರದ್ದೂ ಒಂದೇ ರೀತಿಯ ಮನಸ್ಸು, ಒಂದೇ ರುಚಿ, ಹಾಗಾಗಿ ನಮ್ಮ ಬಾಂಧವ್ಯ ದಿನ ದಿನಕ್ಕೂ ಹೆಚ್ಚಾಯಿತು. ಈ ದೇವದತ್ತನು ಕಾಮರೂಪದ ಪೂರ್ವಭಾಗದಿಂದ ಬಂದವನು. ಕಾಮರೂಪದ ಭಾಷೆಯೇ ಮಧ್ಯದೇಶಗಳ ಭಾಷೆಗಿಂತ ಭಿನ್ನವಾದದ್ದು. ಈ ದೇವದತ್ತನ ಮಾತೃಭಾಷೆಯಂತೂ ನಮ್ಮ ಅಥವ ಸಂಸ್ಕೃತ ಭಾಷೆಗೆ ಹೋಲಿಕೆಯಿಲ್ಲದಂತಹ ಭಾಷೆ. ದೇವದತ್ತನ ಸಂಸ್ಕೃತವೂ ಅಷ್ಟು ನಿಖರವಾಗಿರಲಿಲ್ಲ. ಕಾಲ ಕ್ರಮೇಣ ನಾನೇ ಅವನ ಭಾಷೆಯಲ್ಲಿ ಮಾತನಾಡುವುದನ್ನು ಕಲಿತುಕೊಂಡೆ. ಇದರಿಂದ ನಮ್ಮ ಮಿತ್ರತೆ ಇನ್ನೂ ಧೃಡವಾಯಿತು.

ಹರ್ಷಚಕ್ರವರ್ತಿಯು ಕ್ರಮೇಣ ಬೌದ್ಧ ಧರ್ಮದ ಕಡೆ ತಿರುಗುತ್ತಿರಲು ಹರ್ಷನ ರಾಜ್ಯದ ಬ್ರಾಹ್ಮಾಣರೆಲ್ಲ ಆ ರಾಜ್ಯವನ್ನು, ಧರ್ಮಭ್ರಷ್ಟ ರಾಜನನ್ನು ತ್ಯಜಿಸಿ ಕಾಮರೂಪಕ್ಕೆ ಆಗಮಿಸುತ್ತಿದ್ದರು. ಭಾಸ್ಕರವರ್ಮರಾಜನು ಈ ಶರಣಾರ್ಥರಿಗೆ ಮನ್ನಣೆಯಿತ್ತು ಅವರ ನೆಲೆಗೆ ಭೂದಾನ ಮಾಡುತ್ತಿದ್ದನು. ಬೌದ್ಧ ಧರ್ಮವೇ ಪ್ರಬಲವಾಗಿದ್ದ ಈ ಪ್ರದೇಶದಲ್ಲಿ ನಮ್ಮ ಧರ್ಮವನ್ನೆತ್ತಿ ಹಿಡಿಯುವವ ಇವನೊಬ್ಬ. ಇವನನ್ನು ಬಿಟ್ಟರೆ ಗೌಡ ರಾಜ ಶಶಾಂಕ.

ನಾನು ಹರ್ಷ ಚಕ್ರವರ್ತಿಯ ವಿಷಯವಾಗಿ ಈ ಗೌಡರಾಜ ಶಶಾಂಕನ ಬಗ್ಗೆ ಕೇಳಿದ್ದು ಕೇವಲ ದುಷ್ಕರ್ಮಗಳನ್ನು. ಈಗ ಗೌಡರಾಜ್ಯದ ಸಾಮೀಪ್ಯದಿಂದ ಶಶಾಂಕರಾಜನ ಹಲವಾರು ಸತ್ಯ ಸಂಗತಿಗಳು ತಿಳಿದವು. ಶಶಾಂಕನ ರಾಜ್ಯ ವಂಗದೇಶದಿಂದ ಭುವನೇಶದವರೆಗು ಹರಡಿತ್ತು. ಮಗಧವನ್ನು ಮೌಖಾರಿಗಳಿಂದ ಬಿಡಿಸಲೆಂದು ಇವನು ಹರ್ಷನ ಶ್ಯಾಲನಾದ ಗೃಹವರ್ಮನ ಮೇಲೆ ಯುದ್ಧಕ್ಕೆ ಹೋದದ್ದು. ಆ ಕತೆ ಆಗಲೇ ಹೇಳಿದ್ದೇನೆ. ಆದರೆ ರಾಜ್ಯವರ್ಧನನ ವಿಷಯದಲ್ಲಿ ನಾನು ಕೇಳಿದ್ದ ಕತೆ ಮಿತ್ಯಾಸೆಯೆಂದು ಈಗ ಅರ್ಥವಾಯಿತು. ರಾಜ್ಯವರ್ಧನನು ಮಾಳವ ರಾಜ ದೇವಗುಪ್ತನನ್ನು ಸುಲಭವಾಗಿ ಸೋಲಿಸಿದರೂ, ಶಶಾಂಕನನ್ನು ಪರಾಜಯಗೊಳಿಸಲಾಗಲಿಲ್ಲ. ಹಾಗಾಗಿ ಅವನು ಶಶಾಂಕನೊಡನೆ ಸಂಧಾನಕ್ಕೆಂದು ಶಶಾಂಕನ ನಿಮಂತ್ರಣ ಸ್ವೀಕರಿಸಿದನು. ರಾಜ್ಯವರ್ಧನನ ನಿಷ್ಠುರತೆಯಿಂದ ಈ ಸಂಧಾನವು ಮಧ್ಯದಲ್ಲಿಯೇ ಮುರಿದುಹೋಗಿ, ಮತ್ತೆ ಯುದ್ಧ ಆರಂಭವಾಗಿ ಆಗ ಶಶಾಂಕನು ರಾಜ್ಯವರ್ಧನನ ಸಂಹಾರ ಮಾಡಿದ್ದು ಸತ್ಯ ಸಂಗತಿಯೆಂದು ನನಗೆ ತಿಳಿದುಬಂತು. ಶಶಾಂಕನನ್ನು ಖಳನನ್ನಾಗಿಸಿ ಪ್ರಚಾರ ಮಾಡಿಸಿದ್ದು ಹರ್ಷ ಚಕ್ರವರ್ತಿಯ ಕುತಂತ್ರವೆಂದೂ ಅರ್ಥವಾಯಿತು.

ಶಶಾಂಕನಿಗೆ ತಕ್ಕ ಶಾಸ್ತಿ ಮಾಡಲೆಂದು ಹರ್ಷಚಕ್ರವರ್ತಿಯು ಭಾಸ್ಕರವರ್ಮನೊಡನೆ ಸಂಧಾನ ಮಾಡಿಕೊಂಡರೂ, ಭಾಸ್ಕರವರ್ಮ-ಶಶಾಂಕರ ಮಿತ್ರತೆಯ ಕಾರಣ ಶಶಾಂಕನ ಸಂಹಾರ ಸಾಧ್ಯವಾಗಿರಲಿಲ್ಲವೆಂಬುದು ನನಗೆ ಗೂಢಚರ್ಯೆ ಸಂಪರ್ಕಗಳಿಂದ ತಿಳಿದುಬಂತು. ಸತ್ಯ ಸಂಗತಿ ತಿಳಿಯುವ ಮುನ್ನ ನಾನೂ ನನಗೆ ಹಿಂದೆ ತಿಳಿದಿದ್ದ ವಿಚಾರಗಳಿಂದ ಶಶಾಂಕರಾಜನನ್ನು ಖಳನೆಂದು ಭಾವಿಸುತ್ತಿದ್ದೆ. ಪ್ರಚಾರದಿಂದ ಜನಸಾಮಾನ್ಯರ ಮತಾಭಿಪ್ರಾಯ ನಿಯಂತ್ರಿಸುವುದು ಎಷ್ಟು ಸುಲಭದ ಕಾರ್ಯವೆಂದು ನನಗೀಗ ಅರ್ಥವಾಯಿತು. ವರುಣಾಚಾರ್ಯರೂ ನನ್ನ ಗೂಢಚರ್ಯೆ ಶಿಕ್ಷಣದಲ್ಲಿ ಈ ವಿಷಯವಾಗಿ ಹೇಳಿಕೊಟ್ಟ ಪಾಠ ಈಗ ಮನದಟ್ಟಾಯಿತು.

ಇನ್ನೂ ಹಲವು ಮಾಸಗಳುರುಳಿದವು. ನಾನು ಪುಲಿಕೇಶಿ ಅರಸನ ಬೇಟೆ ತಪ್ಪಿಸಿ ಅವನ ಸೆರೆ ಸಿಕ್ಕಿ ಸುಮಾರು ಐದು ವರ್ಷಗಳಗಿದ್ದವು. ಕಾಮರೂಪದ ಸ್ಥಿರ ಹಾಗು ಸುರಕ್ಷಿತ ಜೀವನ ನನಗೆ ಬೇಸರವಾಯಿತು. ಇನ್ನಷ್ಟು ದೇಶಗಳನ್ನು ನೋಡಬೇಕೆಂಬ ಆಸೆ ಹೆಚ್ಚಾಯಿತು. ಕಾಮರೂಪದಲ್ಲಿ ನನ್ನ ಕಾಲ ಮುಗಿಯಿತು. ನಾನು ವಾತಾಪಿಗೆ ನನ್ನ ಇಚ್ಛೆಯಬಗ್ಗೆ ಓಲೆ ಕಳುಹಿಸಿದೆ. ಮಹಾಮಂತ್ರಿಗಳಿಂದ ಉತ್ತರ ಬಂದೊಡನೆಯೇ ಕಾಮರೂಪ ಬಿಟ್ಟು ಹೊರಡಲು ಸಿದ್ಧನಾದೆ.

ರಾಜ ಭಾಸ್ಕರವರ್ಮನು ನನ್ನನ್ನು ರಾಜ್ಯದಕಡೆಯಿಂದ ಆದರಪೂರ್ವಕವಾಗಿ ಬೀಳ್ಕೊಟ್ಟ. ಕಾಮರೂಪದಲ್ಲಿ ನಾನು ಬೆಳೆಸಿಕೊಂಡಿದ್ದ ಮಿತ್ರವರ್ಗದವರೂ ನನ್ನನ್ನು ಸೌಹಾರ್ಧತೆಯಿಂದ ಬೀಳ್ಕೊಟ್ಟರು. ನನ್ನ ಮನೆಯ ಸೇವಕರಿಗೆ ಪಾರಿತೋಷಿಕವನ್ನು ಕೊಟ್ಟು ನಾನು ಹೊರಡಲು ಸಿದ್ಧನಾದೆ.

ದೇವದತ್ತನು ಬೇಸರದಿಂದಾದರೂ "ಸೂರ್ಯ, ನೀನು ಹೊರಡುವೆಯೆಂದರೆ ನನಗೆ ಬಹು ಬೇಸರ. ನಾವಿಬ್ಬರೂ ಒಮ್ಮನಸ್ಸಿನವರು. ಒಂದೇ ರುಚಿ ಹೊಂದಿದವರು. ಆದರೆ ನೀನು ನಿನ್ನ ಆಕಾಂಕ್ಷೆಯಂತೆ ದೇಶಯಾಣ ಹೊರಟಿರುವೆ. ಹೋಗಿ ಬಾ. ನಿನ್ನ ಈ ಬಂಧುವನ್ನು ಮರೆಯಬೇಡ. ಎಂದಾದರೂ ಕಾಮರೂಪಕ್ಕೆ ಹಿಂತಿರುಗಿದರೆ ಈ ಬಂಧುವನ್ನು ಕಾಣುವುದು ಮರೆಯಬೇಡ" ಎಂದು ಹೇಳಿದ.

ಆರ್ದ್ರಾಕ್ಷಿಗಳಿಂದ ನಾನೂ "ದೇವದತ್ತ, ನೀನು ನನಗೆ ಅತ್ಯಂತ ಆಪ್ತ. ನನಗೆ ಮಿತ್ರರೇ ವಿರಳ, ಆದರೆ ನೀನು ಆ ಸಣ್ಣ ವೃಂದದಲ್ಲಿ ನನಗೆ ಅತೀ ಹತ್ತಿರನಾದವನು. ನಿನ್ನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಂದಾದರೂ ನಮ್ಮ ಪಥಗಳು ತರಣೆ ಹೊಂದುತ್ತವೆ. ಮತ್ತೆ ಸಿಗೋಣ ಮಿತ್ರ" ಎಂದು ಹೇಳಿ ಹೊರಟೆ. ಸಾರ್ಥವೊಂದರ ಜೊತೆಗೆ ಹೊರಟು ಗೌಡ, ಅಂಗ, ಮಗಧ, ವತ್ಸ, ಚೇಡಿ ದೇಶಗಳನ್ನು ಹಾಯ್ದು, ಇಂದ್ರಪ್ರಸ್ಥ, ಕುರುಕ್ಷೇತ್ರಗಳನ್ನು ನೋಡಿ, ಸ್ಥಾನೇಶ್ವರ ಮಾರ್ಗವಾಗಿ ಜಾಲಂಧರಕ್ಕೆ ಹೋಗಿ ಸೇರಿದೆ.