ಪುಸ್ತಕನಿಧಿ

 

ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು ಬರೆದಳು. ಇದನ್ನು ಒಂದು ಸೃಜನಶೀಲ ದಾಖಲೆ ಎಂದು ಪರಿಗಣಿಸಲಾಗುತ್ತದೆ.

 

ಮಹಾತ್ಮಾ ಗಾಂಧಿ , ಜವಾಹರ ಲಾಲ್ ನೆಹರು, ಸರದಾರ್ ಪಟೇಲ್, ಜಿನ್ನಾ, ಅಂದಿನ ಕಾಲದ ಪ್ರಮುಖ ಕೈಗಾರಿಕೋದ್ಯಮಿಗಳಾದ ಟಾಟಾ , ಬಿರ್ಲಾ, ಕಾಶ್ಮೀರದ ಸಿಂಹ ಶೇಖ್ ಅಬ್ದುಲ್ಲಾ ಎಂಥವರು ? ಅವರುಗಳ ಬಗ್ಗೆ ನಮ್ಮ ಪೂರ್ವ ಗ್ರಹಿಕೆಗಳು ಏನೇ ಇರಲಿ, ಅವನ್ನು ಬದಿಗಿಟ್ಟು ಮುಕ್ತ ಮನಸ್ತಿನಿಂದ ಈ ಪುಸ್ತಕವನ್ನು ನಾವು ಓದಬೇಕು. ಆಗ ನೆಹರು ಮತ್ತು ಪಟೇಲರು ಹಾಗೂ ಟಾಟಾ ಮತ್ತು ಬಿರ್ಲಾ ಇವರುಗಳ ನಡುವಣ ಹೋಲಿಕೆ ಮಾಡದಿರಲು ಸಾಧ್ಯವಿಲ್ಲ.

 

 ಆ ಸಮಯದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಹೇಗಿತ್ತು, ಕಾಶ್ಮೀರಿಗಳು ಹೇಗೆ ಧರ್ಮಾತೀತರಾಗಿದ್ದರು, ಕಾಶ್ಮೀರ ಸಮಸ್ಯೆಗೆ ಪಾಕಿಸ್ತಾನ ಹೇಗೆ ಕಾರಣ, ಎಂಬುದು ನಮ್ಮ ಅರಿವಿಗೆ ಬರುತ್ತದೆ. ಶೇಖ್ ಅಬ್ದುಲ್ಲಾ ಹೇಗೆ ಧರ್ಮಾತೀತವಾಗಿ ಜನರನ್ನು ಸಂಘಟಿಸಿದರು, ರೈತ ಕಾರ್ಮಿಕ ಬಡವರ ಹಿತಕ್ಕಾಗಿ ಪ್ರಜಾಪ್ರಭುತ್ವದ ಮೂಲಕ ಜನರ ಹಕ್ಕುಗಳಿಗಾಗಿ ಹೋರಾಡಿದರು, ಪಾಕಿಸ್ತಾನದ ಆಕ್ರಮಣದ ವಿರುದ್ಧ ಹೇಗೆ ಕಾಶ್ಮೀರವನ್ನು ಉಳಿಸಿಕೊಂಡರು ಎಂಬುದು ಗಮನಾರ್ಹ. ಅವರು ನಿಜಕ್ಕೂ ಒಬ್ಬ ಇತಿಹಾಸ ಪುರುಷ, ಸ್ವತಂತ್ರ ಭಾರತದ ಮೊದಲನೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಲೇಖಕಿ ಹೇಳುತ್ತಾರೆ. ಭಾರತ ಉಪಖಂಡದಲ್ಲಿ ಭಾರತಕ್ಕಿಂತ ಮೊದಲು ಲಿಖಿತ ಸಂವಿಧಾನವು ರಚನೆಯಾಗಿದ್ದು ಕಾಶ್ಮೀರದಲ್ಲಿ ಅಂತೆ. ಅದು ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ , ಸಮಾನತೆಯನ್ನು ಕೊಟ್ಟಿತ್ತು.  

 

ಈ ಪುಸ್ತಕದಲ್ಲಿ ರಾಜಮಹಾರಾಜರುಗಳು, ಹಿಂದೂ ಮುಸ್ಲಿಂ ದಂಗೆಗಳು, ಕಾರ್ಮಿಕರು. ಬಾಲ ಕಾರ್ಮಿಕರು ಹಾಗೂ ರೈತರು ಇವರುಗಳ ಪರಿಸ್ಥಿತಿ ಹೇಗಿತ್ತು ಎಂಬ ಸಂಗತಿಗಳು ಸಾಕಷ್ಟು ವಿವರವಾಗಿ ಇವೆ.

 

ಈ ಪುಸ್ತಕವನ್ನು ಕನ್ನಡಕ್ಕೆ ಡಾ. ಕೆ. ಆರ್. ಸಂಧ್ಯಾರೆಡ್ಡಿ ಅನುವಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದೆ. ಅವರ ಜಾಲತಾಣದಿಂದ ಪುಸ್ತಕವನ್ನು ತರಿಸಿಕೊಳ್ಳಬಹುದು.

ಕುಸುಮಾಕರ ದೇವರಗೆಣ್ಣೂರು -ಇವರು ಸುಪ್ರಸಿದ್ಧ ಸಾಹಿತಿಯಂತೆ. ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದೀತು. ಈ ಪುಸ್ತಕವನ್ನು ಕರ್ನಾಟಕ ಸರಕಾರವು ಬಹಳ ಕಡಿಮೆ ಬೆಲೆ (೨೫ ರೂ ) ಗೆ ಮಾರಾಟ ಮಾಡಿತು - ಕರ್ನಾಟಕಕ್ಕೆ 50 ವರ್ಷಗಳ ಆದ ಸಂದರ್ಭದಲ್ಲಿ,

ಮೊದಲು ಕತೆ - ಒಬ್ಬ ಶಾಲಾ ಕಾಲೇಜು ವಿದ್ಯಾರ್ಥಿಯ ಕತೆ ಇದು . ತುಂಬ ಸಹಜವಾಗಿ ಇದೆ. ಆತನ ಮನಸ್ಸಿನ ತುಂಬ ತಂದೆಯ ಬಗ್ಗೆ , ಸಮಾಜದ ಬಗ್ಗೆ ಬಹಳಷ್ಟು ಅತೃಪ್ತಿ ಇದೆ. ತನ್ನ ತಂದೆ ತನಗೆ ಯಾವುದೇ ಸ್ವಾತಂತ್ರ್ಯ ಕೊಡುತ್ತಿಲ್ಲ , ಪ್ರೋತ್ಸಾಹ ಕೊಡುತ್ತಿಲ್ಲ ಇತ್ಯಾದಿ. ಇದರಿಂದಾಗಿ ತನ್ನ ಏಳಿಗೆ ಆಗುತ್ತಿಲ್ಲ ಎಂಬ ಭಾವನೆ . ಇದರಿಂದಾಗಿ ತನ್ನ ಬದುಕಿಗೂ ಹಾನಿ ಮಾಡಿಕೊಳ್ಳುತ್ತಾನೆ, ಸಮಾಜ ವಿರೋಧಿ ಎನ್ನುವಂತಹ ಋಣಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳುತ್ತಾನೆ. ತನ್ನ ಮಾನಸಿಕ ಸ್ಥಿತಿಯನ್ನು ಕೆಡಿಸಿಕೊಂಡು ಬದುಕನ್ನು ಹಾಳುಗೆಡವುತ್ತಾನೆ. ಆಶ್ಚರ್ಯವೆಂದರೆ ಇಂಥದೇ ಪರಿಸ್ಥಿತಿಯಲ್ಲಿರುವ ಈತನ ಒಂದಿಬ್ಬರು ಗೆಳೆಯರು ಇವನಂತೆ ಋಣಾತ್ಮಕ ಧೋರಣೆ ತಾಳದೆ, ತಮ್ಮ ಬದುಕನ್ನು ಈತನ ಕಣ್ಣ ಮುಂದೆಯೇ ಸುಧಾರಿಸಿಕೊಂಡು ಯಶಸ್ಸು ಪಡೆಯುತ್ತಾರೆ.  

ಕೊನೆ ಕೊನೆಯ ಪುಟಗಳಲ್ಲಿ ಕಾದಂಬರಿಯ ಹೆಸರು ಆದ ನಾಲ್ಕನೆಯ ಆಯಾಮದ ಬಗ್ಗೆ ಉಲ್ಲೇಖ ಇದೆ. ಏನಿದು ನಾಲ್ಕನೆಯ ಆಯಾಮ ( Dimension !) ? ಇದು ಬದುಕಿನದು, ವಿಜ್ಞಾನದ್ದಲ್ಲ. ನಮ್ಮ ಬದುಕಿಗೆ ಮೂರೇ ಆಯಾಮಗಳೇ? - Birth, copulation and death ? (ಅಥವಾ ನಮ್ಮಲ್ಲಿ ಸಂಕ್ಷಿಪ್ತವಾಗಿ ಹೇಳುವಂತೆ - ಉ.ಮ. ಹೇ ? ) ಇವರ ಹೊರತಾಗಿ ಇನ್ನೇನೂ ಇಲ್ಲವೇ ? ಈ ನಾಲ್ಕನೇ ಆಯಾಮಕ್ಕಾಗಿ ಈತನ ತಹತಹ.

ಕತೆಯನ್ನು ಅವನ ಮೂಲಕವೇ ತುಂಬ ಸಹಜವಾಗಿ ಹೇಳಲಾಗಿದೆ. ಯಾವುದೇ ತೀರ್ಮಾನವನ್ನು ಕಾದಂಬರಿಕಾರರು ಎಲ್ಲೂ ಕೊಡುವುದಿಲ್ಲ. ಈ ಕಾದಂಬರಿಯ ಕುರಿತಾಗಿ ಪ್ರಾರಂಭದಲ್ಲಿ ಕೊಟ್ಟಿರುವ ಒಂದು ಪುಟವನ್ನು ನಿಮಗಾಗಿ ಇಲ್ಲಿ ಕೊಟ್ಟದ್ದೇನೆ - ನನ್ನಂತಹ ಸಾಮಾನ್ಯ ಓದುಗರಿಗೆ ಸ್ವಲ್ಪ ಸಂಕೀರ್ಣವಾದದ್ದು . ನೀವು ಅದರಲ್ಲಿ ಹೇಳಿರುವುದನ್ನು ಓದಿ ತಿಳಿದು ಮೆಚ್ಚಬಹುದು.

 

 

 

ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು.
1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ  ಕಾಲುಗಳು  ಇತ್ಯಾದಿ
2) ಅವನ ಮುಖದಿಂದ ಬ್ರಾಹ್ಮಣರೂ,  ಅವನ ತೋಳುಗಳಿಂದ ಕ್ಷತ್ರಿಯರೂ  ಅವನ ತೊಡೆಗಳಿಂದ ವೈಶ್ಯರೂ  ಅವನ ಅಡಿಗಳಿಂದ ಶೂದ್ರರೂ  ಹುಟ್ಟಿದರು.   

ಇವು ಪುರುಷಸೂಕ್ತದಲ್ಲಿ ಬರುತ್ತವೆ.  ಇತ್ತೀಚೆಗೆ ಗೂಗಲ್ - e-ಪುಸ್ತಕಗಳಲ್ಲಿ ಡಿ ವಿ ಜಿ ಅವರು ಬರೆದ ಈ ಪುಸ್ತಕವು ಗಮನ ಸೆಳೆಯಿತು. ಗೂಗಲ್ ನ e-ಪುಸ್ತಕಗಳ ಅನುಕೂಲ ವೆಂದರೆ ಖರೀದಿಸುವ ಮೊದಲೇ ಕೆಲವು ಪುಟಗಳನ್ನು sample ಎ೦ದು ಓದುವ ಸೌಲಭ್ಯ ಇದೆ. ಹಾಗೆ ಓದಿ ಪುಸ್ತಕಕ್ಕಾಗಿ ಹಣ ಕೊಡುವ ಬಗ್ಗೆ ನಿರ್ಧರಿಸಬಹುದು.

ಮುನ್ನುಡಿಯು ಹೇಳುವಂತೆ ಇದು ಪರತತ್ವದ ಕುರಿತಾಗಿದೆ. 
ಆರಂಭಿಕ ಪುಟಗಳು ಅನೇಕ ವಿಚಾರಗಳನ್ನು ತುಂಬ ತಿಳಿಯಾಗಿ ತಿಳಿಸುತ್ತವೆ. 

 

೧)  ಅರಿವಿನ ಒರೆಗಲ್ಲು ಬರವಣಿಗೆ.

೨) ಈ ಗ್ರಂಥಕ್ಕೆ ಯಾರು ಅಧಿಕಾರಿಗಳು?

೩)  ನಮ್ಮ ಬದುಕಿನಲ್ಲಿ ಮೂರು ವಸ್ತುಗಳು ಮುಖ್ಯ -೧) 'ನಾನು' ಎಂದು ಕೊಳ್ಳುವ ಜೀವ  ೨) ಈ ಜೀವದ ಅನುಭವಕ್ಕೆ ಬರುವ ಪ್ರಪಂಚ ೩) ಇವೆರಡಕ್ಕೂ ಮೂಲಕಾರಣವಾಗಿ ನಿಯಾಮಕವಾಗಿ  ವಿಶೇಷ ವಸ್ತುವೋ ಶಕ್ತಿಯೋ ಇದ್ದಲ್ಲಿ ಆ ಪರವಸ್ತು , ಈಶ್ವರ .  ಈ ಮೂರರ ಸ್ವರೂಪವನ್ನು ಮತ್ತು  ಪರಸ್ಪರ ಸಂಬಂಧವನ್ನು ತಿಳಿದುಕೊಳ್ಳದೆ ಚೆನ್ನಾಗಿ ಬಾಳುವ ಬಗೆಯನ್ನು ಮನುಷ್ಯ ತಿಳಿಯನು. (ಹೌದೆ?) 

೪) ಜೀವ, ಜಗತ್ತು , ಈಶ್ವರ ಇವುಗಳ ಒಟ್ಟಿನ ಅರಿವೇ ತತ್ವಜ್ಞಾನ. ಪುರುಷ ಸೂಕ್ತವು ಆ ಈಶ್ವರ ಶಕ್ತಿಯ ಬಗೆಗೆ ತಿಳಿಸಿ ಕೊಡುತ್ತದೆ.

೫) ಜ್ಞಾನವನ್ನು ಸಂಪಾದಿಸಬೇಕೆಂಬ ಆಸೆಯೇ ಜಿಜ್ಞಾಸೆ.  ಇದಕ್ಕಾಗಿ ಪ್ರಯತ್ನ ಪಡುವವನೇ ಜಿಜ್ಞಾಸು. 

೬) ತತ್ಪಾಧ್ಯಯನಕ್ಕೆ ಬೇಕಾದ ಸಂಗತಿಗಳು ನಾಲ್ಕು - ೧) ಈ ಲೋಕದಲ್ಲಿ ಶಾಶ್ವತವಾದದ್ದು ಯಾವುದು ? ನಾಶವಾಗಿ ಹೋಗುವುದು ಯಾವುದು ? ಎಂಬ ವಿವೇಚನೆ, ವಿವೇಕ. ೨) ತಾನು, ತನ್ನದು,  ತನ್ನ ಸೌಖ್ಯ, ತನ್ನ ಲಾಭ, ತನ್ನ ಹೆಸರು ಎಂಬ ಸ್ವಾರ್ಥಗಳನ್ನು ಹದ್ದಿನಲ್ಲಿರಿಸುವುದು. ೩) ತನಗೆ ಬಂದ ಕಷ್ಟ ನಿಷ್ಠುರಗಳನ್ನು ಸಹಿಸಿ, ಕೋಪ,ತಾಪ,ಮದ,ಮತ್ಸರಗಳನ್ನು ತಡೆದು ಮನಸ್ಸನ್ನು ಸಮಾಧಾನ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ೪) ವೇದ ಶಾಸ್ತ್ರಗಳನ್ನು ಶೃದ್ಧೆ ನಂಬಿಕೆಗಳಿಂದ ಕೇಳುವುದು, ಅಧ್ಯಯನ ಮಾಡುವುದು - ಇದೇ ಮೋಕ್ಷದ ಅಪೇಕ್ಷೆ. ಅದಕ್ಕಾಗಿ ಬಹುಕಾಲದ ಸಾಧನೆ - ಅದೇ ತಪಸ್ಸು .  
ಇವೆಲ್ಲ ಇಲ್ಲದಿರಲು ಈ ಪುಸ್ತಕ ಅಂಥವರಿಗೆ ನಿಷ್ಪ್ರಯೋಜಕ.

೭) ವೇದಾಧ್ಯಯನಕ್ಕೆ ಅಧಿಕಾರಿಗಳು ಯಾರು ? ಎಲ್ಲರಿಗೂ ವೇದಗಳ ಅಧ್ಯಯನಕ್ಕೆ ಅಧಿಕಾರ ಇಲ್ಲದಿದ್ದರೂ  ಅವುಗಳ ವಿಷಯವನ್ನು ತಾತ್ಪರ್ಯವನ್ನು ತಿಳಿಯಲು ಎಲ್ಲರಿಗೂ ಅಧಿಕಾರ ಇದೆ.

೮) ಪುರುಷ ಸೂಕ್ತವು ಪುರುಷ ಎಂದರೆ ಪರಮಾತ್ಮನನ್ನು ಕುರಿತದ್ದು. ಅದಕ್ಕಾಗಿ ಗಾಯತ್ರಿ ಮಂತ್ರದ ಹಾಗೆ ಮಹತ್ವದ್ದು,  ಇದನ್ನು ಪಾರಾಯಣ ಮಾಡಬೇಕು . ಪಾರಾಯಣ ಎಂದರೆ ಪರಾಯಣತೆ, ಅದೊಂದರಲ್ಲೆ  ನಿಷ್ಠೆ ಹೊಂದಿ ಅರ್ಥದ ಮನನ ಮಾಡುವಿಕೆ.

ಮುಂದೆ ಪುರುಷಸೂಕ್ತದ ತಾತ್ಪರ್ಯವೂ , ಛಾಯಾನುವಾದವೂ ಇದೆ.

ಅತ್ಯಂತ ಸುದ್ದಿ ಮಾಡಿರುವ, ಆರಂಭದಲ್ಲಿ ನಾನು ತಿಳಿಸಿದ 'ಅವನ ಮುಖದಿಂದ ..... ' ಎಂಬುದರ ಬಗ್ಗೆಯೂ ವಿವರವಾದ ಸ್ಪಷ್ಟನೆ ಇದೆ.

ಆದರೆ ನಾವು ಚೆನ್ನಾಗಿ ಬಾಳಿ ಬದುಕಲು  ಸೃಷ್ಟಿಕರ್ತನ ಕುರಿತಾದ ಅಂಥ ತಿಳುವಳಿಕೆಯ ಅಗತ್ಯ ಇಲ್ಲ ಎ೦ದು ಗೌತಮ ಬುದ್ಧನು ಹೇಳಿದ್ದನ್ನೂ ನಾವು ತಿಳಿದಿರಬೇಕು ಅಂತ ನನ್ನ ಅನಿಸಿಕೆ.  

 

 

 

 

 

 

ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು .  ಅದರ ಹೆಸರು ಬೇಡ . ಬರೆದವರ ಹೆಸರು ಬೇಡ.  ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ. 

ಇದು ಹಳೆಯ ಕಾಲದ ಕಾದಂಬರಿ. 
ಮೊದಲ ಐವತ್ತು-ಅರವತ್ತು ಪುಟಗಳು ಗಂಡ-ಹೆಂಡತಿಯರು  ಪರಸ್ಪರರಿಗೆ ಬರೆದ ಪತ್ರಗಳು. ಗಂಡ ರಾಮನಾಥ / ರಾಮಚಂದ್ರ.  ಹೆಂಡತಿಯ ಹೆಸರು ಜಾನಕಿ.  ಬೇರೊಂದು ಊರಿನಲ್ಲಿ ಮೊದಲು ಕಲಿಯುತ್ತಿದ್ದ .  ಆಮೇಲೆ ಏನೋ ಒಂದು ನೌಕರಿ ಮಾಡುತ್ತಿದ್ದ.  ಹಣದ ತೊಂದರೆ ಬೇರೆ.  ಊರಿಗೆ ಹೋಗುವದೂ ಕಡಿಮೆ. ಈ ಗಂಡ-ಹೆಂಡಿರ ಪತ್ರಗಳು ತುಂಬಾ ಸಹಜವಾಗಿ ಇವೆ. ಹೆಂಡತಿ ಸಂಪ್ರದಾಯಸ್ಥಳು . ಗಂಡ ದೊಡ್ಡ ಊರಿನಲ್ಲಿ ಇರುವುದರಿಂದ ಸ್ವಲ್ಪ ಆಧುನಿಕ ಮನೋಭಾವದವನು ಅಂತ ಹೇಳಬಹುದು.  ಹೇಗೋ ಏನೋ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ಇರುವದು  ಈ ಪತ್ರಗಳ ಮೂಲಕ ನಮಗೆ ತಿಳಿದು ಬರುತ್ತದೆ.   
ಈ ಭಾಗ ಚೆನ್ನಾಗಿದೆ. , ನನಗೆ ಹಿಡಿಸಿತು. 

ನಂತರದ ಕೆಲವೇ ಪುಟಗಳಲ್ಲಿ ಅವಳು ಮೊದಲ ಹೆರಿಗೆಯಲ್ಲಿ ಗಂಡು ಮಗುವನ್ನು ಹಡೆದು ಸತ್ತು  ಹೋಗುವಳು. ಆ ಮಗುವಿನ ಬಗ್ಗೆ ಹೆಚ್ಚಿಗೆ ಉಲ್ಲೇಖವಿಲ್ಲ.ಆದರೆ ಅದನ್ನು ಬೇರೆ ಯಾರದೋ ಬಳಿಗೆ ಬಿಟ್ಟು ಮುಂಬೈಯಲ್ಲಿ ಕೆಲಸ ಮುಂದುವರಿಸುವನು.

ಅಲ್ಲಿ ಒಬ್ಬ ಆಧುನಿಕ ಯುವತಿಯ (ಇವಳ ಹೆಸರು ವಿದ್ಯಾ ) ಪರಿಚಯವಾದ ಸಂಗತಿ , ಅವಳೊಡನೆ ಮಾತುಕತೆಯ ಸಂಗತಿ ಹತ್ತಿಪ್ಪತ್ತು ಪುಟಗಳಷ್ಟುಇದೆ. ಅವಳನ್ನು ಮದುವೆಯಾದದ್ದನ್ನು ತಿಳಿಸಿಲ್ಲ. ಆದರೆ ಅದನ್ನು ನಾವು ಊಹಿಸಿಕೊಳ್ಳಬೇಕು. 

ಅರರೆ, ಮುಂದಿನ ಪುಟಗಳಲ್ಲಿ ಇದೇನು ? ಹತ್ತಿರದ ಮನೆಯ     ಯುವತಿಯೊಬ್ಬಳ ಸಂಪರ್ಕಕ್ಕೆ ಬರುತ್ತಾನೆ. ಅವಳ ಮುಗ್ಧತೆಯನ್ನು ಮೆಚ್ಚಿ  ಅಂತೆ,  ತಬ್ಬಿಕೊಳ್ಳುತ್ತಾನೆ!. ಅವಳ ಜೊತೆಗೆ ಮುಂಬೈಯಲ್ಲಿ ಅಲೆಯುತ್ತಾನೆ. 
ಸದ್ಯದ ಹೆಂಡತಿ ವಿದ್ಯಾಳ  ಗಮನಕ್ಕೂ ಇದು ಬರುವುದು. ಇವಳಿಗೆ ಸಿಟ್ಟು ಬರುವುದು ಸಹಜ ಅಲ್ಲವೆ?  ಇವಳ ಮನಸ್ಸು ಸಂಕುಚಿತ ಅಂತೆ!  ಇದು ಇವನ ವಿಚಾರ.  ತಮ್ಮ ಜಗಳದಲ್ಲಿ ಅವನು ಜಾನಕಿಯನ್ನು ನೆನೆಯುವನು. ಈ  ಜಾನಕಿ  ಯಾರು ಎ೦ದು ಕೇಳಿದಾಗಲೇ ಅವಳಿಗೆ ಗೊತ್ತಾಗುತ್ತದೆ - ಜಾನಕಿ ಇವನ ಮೊದಲ ಹೆಂಡತಿ  ಮತ್ತು ಈಗಾಗಲೇ ಅವನಿಗೆ ಒಂದು ಮಗು ಇದೆ ಅಂತ.  ಇದಾವ ಸಂಗತಿಯೂ ಅವಳಿಗೆ ತಿಳಿಯದು.  ಇದನ್ನೆಲ್ಲ ಹೇಳದೆ  ಮತ್ತೆ ಮದುವೆಯಾದ ಮಹಾನುಭಾವ ಈತ!  ಇದು ನಮಗೂ ಈ ಹಂತದಲ್ಲೇ ತಿಳಿದು ಬರುತ್ತದೆ.  ಈಗ 116ನೇ ಪುಟದಲ್ಲಿ ಇದ್ದೇನೆ. ಇದ್ಯಾಕೋ  ತುಂಬ ಅನೀತಿಯ ಕತೆ ಅಂತನ್ನಿಸಿ  ಓದುವದನ್ನು ನಿಲ್ಲಿಸಿದೆ. ಇನ್ನೂ ಬಾಕಿ ಇರುವ 180 ಪುಟದಲ್ಲಿ ಇನ್ನೂ ಏನೇನು ಕಾದಿದೆಯೋ ?

ಈ ಕಾದಂಬರಿ ಬರೆದವರು ಸ್ವತಃ ಎರಡೋ ಮೂರೋ ಮದುವೆ ಆದವರು ಅಂತ ನಾನು ಕೇಳಿದ್ದೇನೆ. ಅದಕ್ಕೇ ಅವರ ಹೆಸರೂ ಹೇಳಿಲ್ಲ, ಕಾದಂಬರಿಯ ಹೆಸರೂ ಇಲ್ಲಿ ಹೇಳಿಲ್ಲ.

ಮುಂದಿನ ಭಾಗ ಓದಿದಾಗ,  ನಿಮಗೆ ತಿಳಿಸುವಂಥದ್ದೇನಾದರೂ ಇದ್ದರೆ ತಿಳಿಸುವೆ 

(ಮುಂದುವರಿದೀತು)

 

  

"ಎಲ್ಲಕಾಲಕ್ಕೂ ಬರುವ ಕಥೆಗಳು " - ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡಿದ್ದ ಪುಸ್ತಕ. ಈಗ archive.org ನಲ್ಲಿ ಸಿಕ್ಕೀತು.  ಇದು ಮಕ್ಕಳಿಗಾಗಿ ನ್ಯಾಷನಲ್ ಬುಕ್ ಟ್ರಸ್ಟ್ ನವರು ಹೊರತಂದ ಪುಸ್ತಕ. 

ಇದರಲ್ಲಿ ಖಾಂಡವ ದಹನ , ಬಕಾಸುರನ ವಧೆ , ಉಪಮನ್ಯುವಿನ ಕಥೆ , ಪರೀಕ್ಷಿತನ ಕಥೆ ಮತ್ತು ಸತ್ಯವಾನ ಸಾವಿತ್ರಿ ಕಥೆ ಇವೆ. 

ಇಲ್ಲಿನ ಕಥೆಗಳ ವಿಶೇಷ ಹೀಗಿವೆ: -

೧) ಸತ್ಯವಾನ ಸಾವಿತ್ರಿ ಕಥೆಯಲ್ಲಿ ಸಾವಿತ್ರಿಯು ಸತ್ಯವಾನನನ್ನು ಮೆಚ್ಚಿ , ಅವನು ಬೇಗನೆ ಸಾಯಲಿರುವ ಬಗ್ಗೆ ಗೊತ್ತಿದ್ದೂ ಹಟ ಮಾಡಿ  ಮದುವೆಯಾದವಳು. ಸತ್ಯವಾನನು ಬೇಗನೆ ಸಾಯಲಿರುವ ಸಂಗತಿ ಸತ್ಯವಾನನನ್ನು ಬಿಟ್ಟು ಎಲ್ಲರಿಗೂ ಗೊತ್ತಿದೆ. ಆ ದಿನ ಸಾವಿತ್ರಿ ಸತ್ಯವನ್ನು ಜೊತೆಗೆ ಅರಣ್ಯಕ್ಕೆ ಹೋಗುವಳು. .ಅವನಿಗೆ ಒಂದು ಹಾವು ಕಡಿದು ಅವನು ಸತ್ತು ಹೋಗುವನು .  ಅವನನ್ನು ತೆಗೆದುಕೊಂಡು ಹೋಗಲು ಸ್ವತಹ ಯಮನೇ ಬಂದಿದ್ದಾನೆ,  ಆ ತರಹ ಯಮನೇ  ಹೋಗಲು ಆತನಿಗೆ ನಾರದನ ಸಲಹೆಯಿದೆ. ಅಲ್ಲಿ ಯಮನ ಜೊತೆ ಮಾತನಾಡಿ ಸತ್ಯವಾನನ ಪ್ರಾಣವನ್ನು ಮರಳಿ ಪಡೆದ ಕಥೆ ನಿಮಗೆಲ್ಲ ಗೊತ್ತಿದೆ, ಅಲ್ಲವೆ? 
ಆಮೇಲೆ ಸಾವಿತ್ರಿಯ ತಂದೆಯು ಅವಳನ್ನು ಕೇಳಿದ - ನಿನಗೆ ಯಮನನ್ನು ಎದುರಿಸಲು ಇಷ್ಟೊಂದು ಧೈರ್ಯ ಹೇಗೆ ಬಂತು?
ಆಗ ಅವಳು ಹೇಳಿದಳು -"ನಾನು ಮೊದಲ ಸಲ ಸತ್ಯವಾನನ ತಾಯಿಯನ್ನು ಕಂಡಾಗಲೇ ಆಕೆ, ಸತ್ಯವಾನ ಹುಟ್ಟಿದಾಗ ಜ್ಯೋತಿಷಿಗಳು ಜಾತಕ ರಚಿಸಿದ್ದನ್ನು ಹೇಳಿದ್ದಳು. ಮತ್ತು ಆ ಜ್ಯೋತಿಷಿಗಳಲ್ಲಿ ಉಳಿದವರಿಗಿಂತ ಜ್ಞಾನಿಯೂ  ದೂರದೃಷ್ಟಿಯುಳ್ಳವನೂ ಆದ ಒಬ್ಬ ಜ್ಯೋತಿಷಿ ಮಾತ್ರ, ಉಳಿದವರು ಹೇಳಿದ ಭವಿಷ್ಯ ತುದಿಯಲ್ಲಿ ತನ್ನದೊಂದು ಸೂಚನೆಯನ್ನು ಕೂಡಿಸಿದ್ದನಂತೆ, ಸಾವಿಗಿಂತಲೂ ಬಲಶಾಲಿಯಾದ ಇನ್ನೊಂದು ವಸ್ತುವಿನಿಂದ  ಸತ್ಯವಾನನ ಮರಣವನ್ನು ನಿವಾರಿಸಲು ಸಾಧ್ಯ ಎಂದು. ಆ ಮಾತು ನನಗೆ ಭರವಸೆ ಕೊಟ್ಟಿತು, ಧೈರ್ಯ ಕೊಟ್ಟಿತು. ನನ್ನಲ್ಲಿ ಸಾವಿಗಿಂತ ಬಲಶಾಲಿಯಾದ ವಸ್ತುವಿತ್ತು, ಅದೇ ಪ್ರೇಮ. 

೨) ರಾಜ ಪರೀಕ್ಷಿತನು ಬೇಟೆಗೆ ಹೋದಾಗ ದುಡುಕಿ ಒಬ್ಬ ಸಾಧು ಮನಸ್ಸಿನ ಋಷಿಗೆ ಅವಮಾನ ಮಾಡಿದ. ಅವನ ಮಗನಿಗೆ ಸಿಟ್ಟು ಬಂದು ಪರೀಕ್ಷಿತನಿಗೆ ಒಂದು ವಾರದಲ್ಲಿ ಹಾವಿನಿಂದ ಸಾಯುವಂತೆ ಶಾಪ ಕೊಟ್ಟ. ಆಗ ಋಷಿಯು ಮಗನಿಗೆ ತಿಳಿ ಹೇಳುತ್ತಾನೆ - ನೀನು ತಪ್ಪು ಮಾಡಿದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ   ಶಾಪ ಕೊಟ್ಟೆ. ನಿನ್ನ ಶಾಪ ನಿಜವಾಗುತ್ತದೆ. ಆದರೆ ಅದನ್ನು ತಪ್ಪಿಸುವ ಶಕ್ತಿ ನಿನಗೆ ಇಲ್ಲ.ಇದು ಸಾಧುಜನರು ನಡೆದುಕೊಳ್ಳುವ ರೀತಿಯಲ್ಲ.

ನಂತರ ಅವನು  ತನ್ನ ಮಗನು ಕೊಟ್ಟ ಶಾಪದ ಸಂಗತಿಯನ್ನು  ರಾಜನಿಗೆ ತಿಳಿಸಿ ಎಚ್ಚರದಿಂದಿರಲು ಹೇಳುತ್ತಾನೆ. 

ರಾಜನು ತನ್ನ ತಪ್ಪನ್ನು ತಿಳಿದುಕೊಳ್ಳುತ್ತಾನೆ, ಋಷಿಯ ಒಳ್ಳೆಯ ಮನಸ್ಸಿನ ಕುರಿತಾಗಿ ಅವನಲ್ಲಿ ಗೌರವ ಭಾವನೆ ಮೂಡುತ್ತದೆ. ತನ್ನ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಾನೆ. ಜೊತೆಗೆ ಯಾವುದೇ ಹಾವಿನ ವಿಷದಿಂದ ಕಾಪಾಡುವ ಶಕ್ತಿ ಇರುವ ರಾಜ ವೈದ್ಯನಿಗೆ ಹೇಳಿ ಕಳಿಸುತ್ತಾನೆ. 

ಆ ರಾಜವೈದ್ಯನು ರಾಜನ ಜೀವ ಉಳಿಸಲು ಹೊರಟಾಗ ದಾರಿಯಲ್ಲಿ ರಾಜನ ಜೀವ ತೆಗೆಯಲು ಹೊರಟಿರುವ ತಕ್ಷಕನ ಭೆಟ್ಟಿಯಾಗುತ್ತದೆ. ಆ ತಕ್ಷಕನು ರಾಜವೈದ್ಯನಿಗೆ ತಿಳಿ ಹೇಳುತ್ತಾನೆ - ಪರೀಕ್ಷಿತನ ಮರಣವು ವಿಧಿಲಿಖಿತವಾಗಿದೆ. ಋಷಿಯ ಮಗನು ಶಾಪವನ್ನು ಕೊಟ್ಟಿಲ್ಲ.  ಆದರೆ ವಿಧಿಲಿಖಿತವನ್ನು ಹೇಳಿದ್ದಾನೆ ಅಷ್ಟೇ.   ಅವನ ಆಯುಷ್ಯವು ಕೊನೆಯಾಗುವುದು ಮೊದಲೇ ನಿಶ್ಚಯವಾಗಿದೆ. 

ಇದನ್ನು ಕೇಳಿ ರಾಜ ವೈದ್ಯನು ತಾನು ಈ ವಿಷಯದಲ್ಲಿ ನಡುವೆ ಬರುವುದಿಲ್ಲ ಎಂದು ತನ್ನ ಪ್ರಯಾಣವನ್ನು ರದ್ದು ಮಾಡುತ್ತಾನೆ! ಆಮೇಲೆ ನಿಮಗೆ ಗೊತ್ತಿರುವ ಹಾಗೆ ಒಂದು ಹಣ್ಣಿನಿಂದ ಹೊರಟು ಹುಳು ದೊಡ್ಡದಾಗಿ ರಾಜನನ್ನು ಕಚ್ಚಿ ಕೊಲ್ಲುತ್ತದೆ. 

೩) ನಿಮಗೆ ಭೀಮನು ಬಕಾಸುರನನ್ನು ಕೊಂದ ಕಥೆ ಗೊತ್ತಿದೆ - ಈ ಪುಸ್ತಕದಲ್ಲಿ ಅದರ ಕಥೆಯಲ್ಲಿ ಹೇಳಿದಂತೆ ಈ  ಬಕಾಸುರ ಯಾರು ಗೊತ್ತೆ?

“ಈ ದೇಶದ ರಾಜ ದುರ್ಬಲ ನಾಗಿದ್ದಾನೆ. ಪ್ರಜೆಗಳನ್ನು ರಕ್ಷಿಸಿಕೊಳ್ಳುವ ಚಾತುರ್ಯ ಆತನಿಗಿಲ್ಲ. ಮೇಲಾಗಿ ಅವರು ಶತಮೂರ್ಖ, ತಾನು ಆಲಸಿಯಾಗಿ, ರಾಜ್ಯದ ಬೇರೆ ಬೇರೆ ಭಾಗಗಳನ್ನು ತನ್ನ ಹೆಸರಿನಲ್ಲಿ ಆಳುವುದಕ್ಕೆ ಅನೇಕ ದಳಪತಿಗಳನ್ನು ನೇಮಿಸಿದ್ದಾರೆ. ಈ ಗ್ರಾಮ ಮತ್ತು ಸುತ್ತಣ ಪ್ರದೇಶವನ್ನು ಅಳುವುದಕ್ಕೆ ನೇಮಕವಾಗಿರುವವನು ಬಕ ಎಂಬ ಒಬ್ಬ ರಾಕ್ಷಸ. ಅವನು ಮನುಷ್ಯರನ್ನು ತಿನ್ನುತ್ತಾನೆ. "

:)

ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕಾಲ ಅಲ್ಲವೇ ? ದಯವಿಟ್ಟು ಮುಂದೆ ಓದಿ. ಮೀನೂ  ಮಸಾನಿ ಸ್ವತಂತ್ರ ಭಾರತದ ಒಬ್ಬ ಗೌರವಾನ್ವಿತ ರಾಜಕಾರಣಿ . ಅವರ ಬಗ್ಗೆ ವಿಕಿಪೀಡಿಯಾ ಮೂಲಕ ತಿಳಿಯಬಹುದು 1940 ರಲ್ಲಿ ಅವರು our India ಎಂಬ ಪುಸ್ತಕ ಬರೆದಿದ್ದರು. ಕನ್ನಡಕ್ಕೆ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಅನುವಾದಿಸಿದ್ದರು.  ಭಾರತ ಎಂದರೆ ಏನು, ಭಾರತದ ಜನ ಜೀವನ ಹೇಗಿದೆ.  ಜಗತ್ತಿನ ಇತರ ದೇಶಗಳ ಜನರಿಗೆ ಹೋಲಿಸಿದರೆ ನಾವು ಹೇಗಿದ್ದೇವೆ. ನಮ್ಮ ಸ್ಥಿತಿಗತಿ ಸುಧಾರಿಸಲು ಏನು ಮಾಡಬೇಕು ಹೇಗೆ ಮಾಡಬೇಕು ಎಂಬಂತಹ ಸಂಕೀರ್ಣ ವಿಷಯಗಳನ್ನೂ  ಸರಳ ರೀತಿಯಲ್ಲಿ ಮಕ್ಕಳು ತಿಳಿಯುವ ಹಾಗೆ ತಿಳಿಸಿದ್ದಾರೆ. 
ಅದರಲ್ಲಿನ ಒಂದು ಭಾಗ :- 

 

ರಾಷ್ಟ್ರ ಅಥವಾ ಸರಕಾರ, ದೇಶದಲ್ಲಿ ಬಾಳುತ್ತಿರುವ ನಾವು ನೀವು ಬಯಸಿದ ಹಾಗೆ ಮಾಡುವ ಒಂದು ಯಂತ್ರ, ಸಾಧನ. ಅದನ್ನೆಲ್ಲ ಮಾಡಬೇಕಾದುದು ಅದರ ಕರ್ತವ್ಯ. ಅನೇಕ ಸಲ ಅದು ಮಾಡದು. ಏನು ದುರ್ದೈವವೋ ಸರಕಾರಗಳೆಲ್ಲ ಬಹುಮಟ್ಟಿಗೆ ಸೋಮಾರಿ ಛತ್ರಗಳು; ತುಂಬಾ ನಿಧಾನ. ಜನ ಎಷ್ಟು ಬಲಾತ್ಕಾರ ಮಾಡಿದರೆ ಅಷ್ಟೇ ಕೆಲಸ. ಜನ ಕೊಂಚ ಅಸಡ್ಡೆಯಾಗಿದ್ದರೆ, ನಿಧಾನವಾಗಿದ್ದರೆ ಸರ್ಕಾರ ನಿಧಾನ, ಅದಕ್ಕೆ ಅಸಡ್ಡೆ. ಯಾರೋ ಹೇಳಿದಾರೆ 'ಯಥಾ ಪ್ರಜಾ ತಥಾ ರಾಜಾ'. ನೀವು ಎಂಥ ಪ್ರಜೆಯಾಗುತ್ತೀರೋ ನಮ್ಮ ದೇಶವನ್ನು ಅದರ ಸಮಸ್ಯೆಗಳನ್ನು ಎಷ್ಟು ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತೀರಿ ಅದರ ಮೇಲೆಯೇ ಎಲ್ಲರೂ ಆಧಾರ
ಗೊಂಡಿದೆ. ಇದನ್ನು ನೆನಪಿಡಿ.

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ  (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು.   ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ  ಪುಸ್ತಕಗಳು ಈಗ  archive.org  ತಾಣದಲ್ಲಿ ಸಿಗಬಹುದು.  ಅವುಗಳನ್ನು ಓದುವ ಕಾಲವು ನನ್ನ ಪಾಲಿಗೆ ಕೂಡಿ ಬಂದ ಹಾಗಿದೆ. :)

ಈ ದಿನ  'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ ಓದಿದೆನು . ಪೆನುಗೊಂಡೆ,  ನಿಡುಗಲ್ಲು  ಸ್ಥಳಗಳಿಗೆ ಸಂಬಂಧಪಟ್ಟಿದುದು ಇದು . 
ಎಂ. ಕೆ. ನಾಗಪ್ಪ ಎಂಬುವವರು ಬರೆದ  ಈ ಕಾದಂಬರಿಯು   https://archive.org/details/in.ernet.dli.2015.364694 ಈ ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.  ಇಂಥ ಹಳೆಯ ಕನ್ನಡ ಪುಸ್ತಕ ಹುಡುಕಲು pustaka.sanchaya.net ತಾಣವನ್ನು ಬಳಸಬಹುದು. 

ಕತೆಯು ಚೆನ್ನಾಗಿದ್ದು ಓದಿಸಿಕೊಂಡು ಹೋಗುವುದು . ಅಂದಿನ ಶೈಲಿಯ ಬರವಣಿಗೆಯ ಕೆಲವು ಸಾಲುಗಳನ್ನು , ಪದಪುಂಜಗಳನ್ನು  ಇಲ್ಲಿ ಕೆಳಗೆ ಸಂಗ್ರಹಿಸಿದ್ದೇನೆ . ನನಗೆ ಮೆಚ್ಚಿಗೆ ಆದವು, ನಿಮಗೂ  ಮೆಚ್ಚಿಗೆ ಆಗಬಹುದು.

 

ನಾಥನ ಕಣ್ದಾವರೆಗಳನ್ನು  ಅತಿ ಕೋಮಲವಾದ ತನ್ನ ಕರಕಮಲಗಳಿಂದ ಮುಚ್ಚಿದಳು. 

ಆನಂದಬಾಷ್ಪಗಳನ್ನೂ ದುಃಖಾಶ್ರುಗಳನ್ನೂ ಕಣ್ಣೆಂಬ ಪಾತ್ರೆಗಳಲ್ಲಿ ಧರಿಸಿ ಪತಿಯ ಚರಣಕಮಲಗಳನ್ನು  ತೊಳೆಯಲಾರಂಭಿಸಿದಳು. 

ತನ್ನ ಮುಖಚಂದ್ರನ ಕಿರಣಗಳಿಂದ ಪತಿಯ ನೇತ್ರಕಮಲಗಳನ್ನು ಅರಳಿಸಿದಳು. 

ಆಕೆಯ ಪ್ರಾಣಪ್ರಿಯನೂ ಪ್ರಾಣಪದಕವೂ ಆದ ಅವನು...

ಚಿಂತಾಸಾಗರಮಗ್ನನಾದ ಮನೋವಲ್ಲಭನ ಮುಖವೈಖರಿಯನ್ನು ನೋಡಿ....

ಮನೋನೇತ್ರದಿಂದ ಕಂಡುಕೊಂಡಳು.

ಕಲಿಸದೆ ಬರ್ಪುದು ಕುಶಲಂ ಇಳೆಯೊಳ್ ಪೆಣ್ ಜಾತಿಗೆ

ಪಾಪದ ಆಲೋಚನೆಗೆ ಅವಕಾಶವಿತ್ತದ್ದಕ್ಕೆ ಕ್ಷಮಿಸೆಂದು ದೇವರಲ್ಲಿ ಪ್ರಾರ್ಥನೆ ಮಾಡಿರಿ.

ಪಾರವಿಲ್ಲದ ಪಾಪವಾರಿಧಿಯಲ್ಲಿ ಪತಿಯು ಬೀಳುವಾಗ ಕೈಹಿಡಿದು ಕಾಪಾಡುವುದು ಪತ್ನಿಯ ಕರ್ತವ್ಯವು. 

ಶಿಫಲವಾದ ಕೋಟೆ, ಜೀರ್ಣವಾದ ದೇವಾಲಯ , ಚೂರ್ಣವಾದ ಅರಮನೆ, ನಿರ್ಮಾನುಷವಾದ ರಾಜಬೀದಿಗಳು.

ದಾರನ್ನು = ಯಾರನ್ನು

ಗರ್ಭಜಾತೆ - ಮಗಳು
- - ಪ್ರಾಣಕಾಂತೆ ಸಹಧರ್ಮಚಾರಿಣಿ
- - ನೀಚ ಕುಲೋದ್ಭವ

ಅಡಿದಾವರೆ
ದಿವ್ಯ ಪಾದ ಸರೋಜಂಗಳು
ಮುಖಕಮಲ

ಆತ್ಮವಲ್ಲಭ

ನೇತ್ರ ಕಮಲ ,  ಪಾದ ಕಮಲ, ಮುಖಕಮಲ   :)

ಸರಸಿಜಾನನೆ

ಮನ್ಮನೋಹಾರಿಣಿ

ಸ್ನೇಹವನ್ನೂ ಬಾಂಧವ್ಯವನ್ನೂ ಕದನವನ್ನೂ ಸರೀಕರಲ್ಲಿ ಮಾಡಬೇಕು.

ಧರ್ಮವೂ ಸತ್ಕೀರ್ತಿಯೂ ಶಾಶ್ವತವೇ ಹೊರತು ರಾಜ್ಯ ಗೀಜ್ಯಗಳಲ್ಲ.

ಭೋಗಪ್ರದಾಯಿನಿ

ರೂಪದಲ್ಲಿ ರತಿ , ಬುದ್ಧಿಯಲ್ಲಿ ಸರಸ್ವತಿ , ಪೌರುಷದಲ್ಲಿ ವೀರಾಧಿವೀರರನ್ನು ತಲೆಬಾಗಿಸುವಂಥವಳು.

ಅವಳು ರೂಪದ ರಾಶಿ, ಮೋಹದ ಗಣಿ, ವಿದ್ಯೆಯ ಆಕಾರ, ಪ್ರೇಮದ ಪುಂಜ. 

ರಾಜ್ಯಹೀನನಾದರೂ ಮನೋರಾಜ್ಯದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಕೂಡದು . 

ಸದ್ಗುಣಗಳೆಂಬ ರತ್ನಗಳ ರಾಶಿ ಇರುವಾಗ ಧನಹೀನ ಎಂಬ ಚಿಂತೆಯೇಕೆ ?

ಅವಳು ಇವನ ಭಾಗ್ಯದ ಸಾರ.

ಇದು ದಾವ ಸ್ಥಳ?

 

 

 

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  

 ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ  ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ. ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ಕ್ಷತ್ರಿಯ ಕರ್ಮವನ್ನು ಮಾಡುತ್ತಿರುವನು. ಈತನಿಗೆ ಈಗಾಗಲೇ ಮದುವೆಯಾಗಿದ್ದರೂ ಮುಸ್ಲಿಂ ನರ್ತಕಿಯಾದ ಮಸ್ತಾನಿಯ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುವನು. ಅವಳಿಗೆ ಒಂದು ಗಂಡು ಮಗುವಾಗುವುದು. ಅವಳನ್ನು ಪುಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜ ಸ್ವೀಕರಿಸುವುದಿಲ್ಲ. 

ಮಸ್ತಾನಿಯು  ಇದೆಲ್ಲದರಿಂದ ನೊಂದು, 'ನಾನು ಮುಸ್ಲಿಮಳಾಗಿ ಹುಟ್ಟಿರುವುದು ತಪ್ಪೇ ' ಎಂದು ಕೇಳಿದರೆ 'ಇಲ್ಲ ನೀನು ಮುಸ್ಲಿಮಳಾಗಿ ಹುಟ್ಟಿದ್ದು ತಪ್ಪಲ್ಲ; ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ತಪ್ಪು' ಎಂದ ಬಾಜೀರಾವ್.

ಪುಣೆಯ ಬ್ರಾಹ್ಮಣರು ತನ್ನನ್ನು ಬಹಿಷ್ಕರಿಸುವುದು ನೆನಪಿಸಿಕೊಂಡ. ತಾನು ಮಾಡಿದ ಅಪರಾಧವಾದರೂ ಏನು , ಒಬ್ಬ ಮುಸಲ್ಮಾನ ಸುಂದರಿಯನ್ನು ಇಟ್ಟುಕೊಂಡಿದ್ದು, ಅವಳ ಜೊತೆಗೆ ಮಾಂಸದೂಟ  ಮಾಡಿದ್ದು ಹಾಗೂ ಮದ್ಯಪಾನ ಮಾಡಿದ್ದು.
ನಾನು ಬ್ರಾಹ್ಮಣನಿದ್ದುದರಿಂದ ಇವುಗಳನ್ನು
ಮಾಡಬಾರದೆಂದು ಅವರ ಕಟ್ಟಳೆ, ತಾನು ಬ್ರಾಹ್ಮಣನಾಗಿದ್ದು ಖಡ್ಗವನ್ನು ಹಿಡಿದು ಶತ್ರುಗಳನ್ನು ಕೊಂದೆ, ಯುದ್ಧಗಳನ್ನು ಗೆದ್ದೆ.  ಖಡ್ಗವನ್ನು ಹಿಡಿಯುವುದು ಬ್ರಾಹ್ಮಣ ಧರ್ಮವಲ್ಲ, ಕ್ಷತ್ರಿಯನ ಧರ್ಮ .  ಆಗ ಇವರಾರೂ ಆಕ್ಷೇಪಿಸಲಿಲ್ಲ. ನಾನು ಆಗಲೇ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಕ್ಷತ್ರಿಯನಾಗಿದ್ದೇನೆ. ಕ್ಷತ್ರಿಯ ಧರ್ಮದಂತೆ ನಾನು ಪರಸ್ತ್ರೀ ಗಮನ ಮಾಡಿರಬಹುದು, ಮಾಂಸ ತಿಂದಿರಬಹುದು ಮದ್ಯ ಕುಡಿದಿರಬಹುದು. ಈ ಪಂಡಿತೋತ್ತಮರಿಗೆ ಇದು ಏಕೆ ತಿಳಿಯಲಿಲ್ಲ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ?  ನಾನು ಬೇರೆ ಯಾವ ಅಪರಾಧ ಮಾಡಿಲ್ಲ ಅಧರ್ಮವನ್ನು ಮಾಡಿಲ್ಲ, ಬದಲಾಗಿ ಧರ್ಮದ ರಕ್ಷಣೆ ಮಾಡಿದ್ದೇನೆ, ಇವರುಗಳ ಧರ್ಮವನ್ನು ದೇವಸ್ಥಾನಗಳನ್ನು ದೇವರುಗಳನ್ನು ಕಾಪಾಡಿದ್ದೇನೆ ಎಂದು ಆತನ ಯೋಚನೆ.

ಮುಂದೆ?

ಈ ಕಾದಂಬರಿಯು ಚೆನ್ನಾಗಿದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. 

ಈ ಕಾದಂಬರಿ  ಈ ತಿಂಗಳ ಕೊನೆಯವರೆಗೆ ಉಚಿತವಾಗಿ ವಿವಿಡ್ ಲಿಪಿ ಆಂಡ್ರಾಯ್ಡ್ ಆ್ಯಪ್ನಲ್ಲಿ ಲಭ್ಯವಿದೆ.  ಬೇಕಾದರೆ ಈಗಲೇ  ಓದಿಬಿಡಿ! . ಆಮೇಲೆ ನೀವು ಅದನ್ನು ಕೊಳ್ಳಬೇಕಾಗುತ್ತದೆ. 

ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು . 

(ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು message ಕಳಿಸುವ ಮೂಲಕ ಪಡೆಯಬಹುದು.)

the Blue umbrella ಅನ್ನು ಇವತ್ತು ಓದಿದೆ. ಸುಮಾರು 20 ಪುಟಗಳ ಕಿರು ಕಾದಂಬರಿ. ಹಿಂದಿಯಲ್ಲಿ ಚಲನಚಿತ್ರವೂ  ಆಗಿದೆ. ಆದರೆ ಓದಿನ ಸುಖವೇ ಬೇರೆ. ನಿಮಗೆ ಬೇಕಾದ ಗತಿಯಲ್ಲಿ - ನಿಧಾನವಾಗಿ,  ವೇಗವಾಗಿ ಬೇಕಾದರೆ ಹಿಂದೆ ಮುಂದೆ ಹೋಗಿ ಅಥವಾ ಪುಟ ಹಾರಿಸಿ, ಬಿಟ್ಟು ಬಿಟ್ಟು ಓದಬಹುದು. ನಿಮ್ಮ ಕಲ್ಪನೆಗೂ ತುಂಬಾ ಅವಕಾಶ ಇರುತ್ತದೆ.

ಈ ಕತೆಯಲ್ಲಿ   ಹಿಮಾಚಲ ಪ್ರದೇಶದ ಒಂದು ಹಳ್ಳಿ , ಸರಳ ಜನ, ಒಂದು ಹುಡುಗಿಗೆ ಒಂದು ಸುಂದರ ನೀಲಿಕೊಡೆಯು ನಗರದಿಂದ ಪಿಕ್ ನಿಕ್ ಗೆ ಬಂದವರಿಂದ ಇವಳಿಗೆ ಸಿಗುತ್ತದೆ,  ಅವಳ ಕೊರಳ ಲಾಕೆಟ್ ನ ಆಕರ್ಷಣೆಗೆ ಒಳಗಾದ ಒಬ್ಬ ಯುವತಿಯಿಂದ . ಆ ಛತ್ರಿಯು ಇವಳ ಅಚ್ಚುಮೆಚ್ಚು . ಇದು ಊರವರ  ಗಮನ ಸೆಳೆದು ಹೊಟ್ಟೆಕಿಚ್ಚಿಗೆ ಕಾರಣವಾಗುತ್ತದೆ. ಒಂದು ಸಣ್ಣ ಅಂಗಡಿಯ ಮಾಲೀಕ -  ರಾಂಭರೋಸೆ  ಅದನ್ನು ಹಣಕೊಟ್ಟು ಆ ಹುಡುಗಿಯಿಂದ  ಕೊಳ್ಳಲು ವಿಫಲನಾಗುತ್ತಾನೆ. ಅದರ ಕಳ್ಳತನಕ್ಕೂ ತನ್ನ ಕೆಲಸದ ಹುಡುಗನಿಗೆ  ಅನುಮತಿ ಕೊಡುತ್ತಾನೆ. ಪ್ರಯತ್ನ ವಿಫಲವಾಗುತ್ತದೆ.  ಎಲ್ಲರಿಗೂ ಸಂಗತಿ ಗೊತ್ತಾಗುತ್ತದೆ.  ಅವನನ್ನು ಊರಿನ ಜನ ದೂರ ಮಾಡುತ್ತಾರೆ.  ಅವನ ವ್ಯಾಪಾರ ಇಳಿದು ಹೋಗುತ್ತದೆ. 

ಮುಂದೆ ? ಮಹತ್ವದ ಭಾಗ ಇದೆ. ಆ ಹುಡುಗಿಯ ಛತ್ರಿ ಇವನದೂ ಆಗುವುದು ಹೇಗೆ?  ಎಲ್ಲರದೂ ಆಗುವುದು ಹೇಗೆ? ಎಲ್ಲರೂ ತಮ್ಮ ತಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಹೇಗೆ?

ಇದನ್ನೆಲ್ಲ ನಾನು ಹೇಳುವುದಕ್ಕಿಂತ ನೀವೇ ಓದುವುದು ಒಳ್ಳೆಯದು. 

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  ಇದು ಚಲನಚಿತ್ರವೂ  ಆಗಿದೆ

ಇದು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ತಂದೆ ಮಗ, ಮೊಮ್ಮಗನ ಕಥೆಯನ್ನು ಹೇಳುತ್ತದೆ. ಚೆನ್ನಾಗಿದೆ. ಬಹಳ ದೊಡ್ಡದೂ ಏನಲ್ಲ,   ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಏಕೋ ಇದನ್ನು ಓದಲು ಆರಂಭಿಸಿದೆ. ಏನಿದು ಈ ತಾರೀಕು ? ಇದು ರಾಷ್ಟ್ರೀಯ ಧ್ವಜದಿನ . ಏನು ಹಾಗಂದರೆ ? ಇಂಟರ್ ನೆಟ್ಟಿನಲ್ಲಿ ನೋಡಿದೆ . ಅನೇಕ ಕುತೂಹಲಕರ ಸಂಗತಿಗಳು ದೊರಕಿದವು. ಭಾರತ ದೇಶಕ್ಕೆ ಒಂದೇ ಧ್ವಜ ಬೇಕು ಎ೦ದು ಮೊದಲು ಯೋಚಿಸಿದ್ದು ಯಾರು ಗೊತ್ತೇ - ಆಶ್ಚರ್ಯ ! - ಬ್ರಿಟಿಶರು  1857 ರಲ್ಲಿ, 

ಆಮೇಲೆ ಅದರಲ್ಲೆಲ್ಲೋ 'ರಾಷ್ಟ್ರೀಯ ಸಪ್ತಾಹ'ದ ಉಲ್ಲೇಖ ಇದೆ. ಆ ಅವಧಿಯಲ್ಲಿ ಯಾರೇ ಮರಣ ಹೊಂದಿದರೂ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದಿಲ್ಲವಂತೆ. ಏನಿದು ರಾಷ್ಟ್ರೀಯ ಸಪ್ತಾಹ ಅಂತ ಹುಡುಕಲು ಹೋದರೆ - ಭಗವದ್ಗೀತೆಯ ಲೋಕ ಸಂಗ್ರಹ ದ ಕಲ್ಪನೆ ಎದುರಾಯಿತು. ಏನಿದು ಲೋಕ ಸಂಗ್ರಹ  ? ಅದೂ ಒಂದು ಅದ್ಭುತ ಕಲ್ಪನೆ. (ಆ ಬಗ್ಗೆ ನಾನು ಇನ್ನಷ್ಟು ತಿಳಿಯಬೇಕಿದೆ ) ಇವೆಲ್ಲವನ್ನು ನಿಮಗೆ ಆಸಕ್ತಿ ಇದ್ದರೆ ನೀವೇ ಕಂಡುಕೊಳ್ಳಬೇಕು.