ಪುಸ್ತಕನಿಧಿ

'ಕಸ್ತೂರಿ' ಹೆಸರಿನ ಮಾಸಪತ್ರಿಕೆ ನಿಮಗೆ ಗೊತ್ತಿರಬೇಕು . ಅದು ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾದರಿಯ ಕನ್ನಡ ಡೈಜೆಸ್ಟ್ ಆಗಿದೆ.

ಇದೇ ತರಹದ ಕೆಲವು ಡೈಜೆಸ್ಟ್‌ಗಳು ಕನ್ನಡದಲ್ಲಿ ಹಿಂದೆ ಇದ್ದವು.  ಅವುಗಳಲ್ಲಿ ಈ 'ಕಲ್ಯಾಣ'  ಒಂದು. ಇದರ ಕೆಲವು ಸಂಚಿಕೆಗಳು ಹಳೆಯ ಸಂಪದಿಗ ಗೆಳೆಯ ಶ್ರೀ ಓಂ ಶಿವಪ್ರಕಾಶರಿಂದಾಗಿ archive.org ಎಂಬ ತಾಣದಲ್ಲಿ ಸಿಕ್ಕವು . (ಅಲ್ಲಿ 'ಕಲ್ಯಾಣ ಡೈಜೆಸ್ಟ್‌' ಎಂದು ಕನ್ನಡದಲ್ಲಿ ಟೈಪ್ ಮಾಡಿ ಹುಡುಕುವುದರಿಂದ ಸಿಗುತ್ತವೆ. )

ಈ ಡೈಜೆಸ್ಟ್  ಇಂದಿನ ವಿಜಯಪುರ (ಹಿಂದಿನ ವಿಜಾಪುರ) ನಗರದಿಂದ ಹೊರಡುತ್ತಿತ್ತು. ಶ್ರೀ ಆರ್. ಬಿ. ಕುಲಕರ್ಣಿಯವರ ಒಡೆತನದ ಈ ಪತ್ರಿಕೆಯನ್ನು ಸುಪ್ರಸಿದ್ಧ ಸಾಹಿತಿ 'ಸತ್ಯಕಾಮ'ರು ಸಂಪಾದಿಸುತ್ತಿದ್ದರು.

ಈ ಪತ್ರಿಕೆಯ ಡಿಸೆಂಬರ್ 1961 ರ ಸಂಚಿಕೆಯನ್ನ ನಾನು ಇತ್ತೀಚೆಗೆ ಓದಿದೆ. ಅದರಲ್ಲಿ ನಾ ಕಂಡ ವಿಶೇಷವನ್ನು ನಿಮಗೆ ಇಲ್ಲಿ ತಿಳಿಸುವೆ.

1) ಶ್ರೀ ಶಂಕರಾಚಾರ್ಯರು ಪ್ರತಿ ದಿನವೂ ಸ್ನಾನದಿಂದ ಬರುವಾಗ ಒಬ್ಬ ಶೂದ್ರ ಶಿಷ್ಯನ ಹೆಗಲ ಮೇಲೆ ಕೈಯಿಟ್ಟುಕೊಂಡು ಬರುತ್ತಿದ್ದರು. ಕೆಲವರು ಇದನ್ನು ಆಕ್ಷೇಪಿಸಿದರು.  ಆಗ ಶಂಕರರು ಹೇಳಿದರು - 'ಶರೀರ ದ ಮಲಕಳೆದುಕೊಂಡು ಶುದ್ಧ ನಾಗಿ ಮಠಕ್ಕೆ ಬಂದು ಪೂಜೆಮಾಡಲು ಮನಸ್ಸು ಶುದ್ಧ ವಾಗಿ ಮಡಿಯಾಗ ಬೇಡ ವೆ ? ನಾವು ಉಚ್ಚ ಜಾತಿಯವರೆಂಬುದೂ ಮನಸ್ಸಿನ ಮೈಲಿಗೆ, ಅದನ್ನು ಕಳೆದುಕೊಳ್ಳಲು ಶೂದ್ರ ಶಿಷ್ಯನ ಹೆಗಲು ಅನುಸರಿಸಿ ಬರುವೆ. '
2) ಸಾಮ್ರಾಟ್ ಅಶೋಕನು ಕಳಿಂಗದ ಮೇಲೆ ದಾಳಿ ಮಾಡಿದನು. ಆಗ ಕಳಿಂಗಕ್ಕೆ ಪುಟ್ಟ ಬಾಲಕಿ ಅಮಿತಾ ರಾಣಿಯಾಗಿದ್ದಳು. ಅವಳು ಅಶೋಕನನ್ನು ಕೇಳಿದಳು - " ಯಾಕೆ ನಮ್ಮ ಜನರನ್ನು ಹೆದರಿಸುತ್ತಿದ್ದೀಯ ? ಕೊಲ್ಲುತ್ತಿದ್ದೀಯ ? ಯಾಕೆ ನಿನಗೆ ತಿನ್ನಲು ಅನ್ನ ಕಡಿಮೆಯಾಗಿದೆಯೇ ? ದುಡ್ಡು ಬೇಕಾಗಿದೆಯೇ ? ಆಡಲು ಆಟಿಕೆಗಳಿಲ್ಲವೇ? "
ಆಗ ಅವನ ಮನಃಪರಿವರ್ತನೆ ಆಯಿತು.
3) ಹಿರಿಯ ಸುಪ್ರಸಿದ್ಧ  ಸಾಹಿತಿ ಶ್ರೀರಂಗ ಅವರ ಒಂದು ವಿಡಂಬನೆ ಇಲ್ಲಿದೆ. ಸ್ವಾತಂತ್ರ್ಯದ ಕುರಿತು. ಶ್ರೀರಂಗರ ಅನೇಕ ಪುಸ್ತಕಗಳು archive.org ಯಲ್ಲಿ ಇರುವವಾದರೂ ನಾನು ಇನ್ನೂವರೆಗೆ ಓದಿಲ್ಲ. ಈ ಲೇಖನವು ಅವರ ಶೈಲಿಯ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು. ಮೂರು ಪುಟಗಳ ಈ ಲೇಖನವನ್ನು  ಪೂರ್ತಿ ಓದಿಯೇ ಸವಿಯಬೇಕು.

ಈ ಪುಸ್ತಕವು https://archive.org/details/unset0000unse_o3v0 ಈ ಕೊಂಡಿಯಲ್ಲಿ ಸಿಗುತ್ತದೆ. ಅದನ್ನು ಅಲ್ಲೇ ಓದಬಹುದು. ಅಥವಾ pdf ರೂಪದಲ್ಲಿ ನಿಮ್ಮ ಕಂಪ್ಯೂಟರ್ / ಲ್ಯಾಪ್‌ಟಾಪ್ / ಮೊಬೈಲಿಗೆ ಇಳಿಸಿಕೊಂಡು ನಂತರ ಓದಬಹುದು.

ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ.

ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ, ಕರ್ನಾಟಕ ಸಾಮ್ರಾಜ್ಯದ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯು ಉತ್ತರಾಪಥ (ಉತ್ತರ ಭಾರತ)ದ ಚಕ್ರವರ್ತಿ ಹರ್ಷವರ್ಧನನ ಜತೆಗೆ ತನ್ನ ಸಾಮ್ರಾಜ್ಯದ ಉತ್ತರದ ಸೀಮೆ ಗೋದಾವರಿ ನದಿಯಲ್ಲ ಆದರೆ ನರ್ಮದಾ ನದಿ ಎಂದು ಸಾಧಿಸಲು ಯುದ್ಧ ಮಾಡಿ ಯಶಸ್ವಿಯಾಗುತ್ತಾನೆ. ಈ ಯುದ್ಧದ ಕಥೆ ಮತ್ತು ಜೊತೆ ಜೊತೆಗೆ ಈತನ ಸೇನಾಪತಿಯ ಸೊಸೆಯು ಪುರುಷ ವೇಷದಲ್ಲಿ ಸಾಹಸ ಮಾಡಿ ಯುದ್ಧದ ಗೆಲುವಿಗೆ ಕಾರಣಳಾದ ಸಂಗತಿ ಮೊದಲ ಅರ್ಧಭಾಗದಲ್ಲಿದ್ದರೆ ನಂತರದ ಭಾಗದಲ್ಲಿ ಮುಂದಿನ ಸಾಮ್ರಾಟ್ ಯಾರು ಎಂದು ಅಧಿಕಾರಕ್ಕಾಗಿ ಅವನ ಮಕ್ಕಳ ನಡುವೆ ನಡೆದ ಜಗಳ, ಅದರಿಂದಾಗಿ ದಕ್ಷಿಣದ ಪಲ್ಲವ ರಾಜನು ಲಾಭ ಪಡೆದು ರಾಜಧಾನಿ ಬಾದಾಮಿಯನ್ನು ವಶಪಡಿಸಿಕೊಂಡು ನಾಶ ಮಾಡಿದನು. ಇಮ್ಮಡಿ ಪುಲಕೇಶಿಯು ಆಗ ಅರ್ಧಾಂಗ ವಾಯುವಿನಿಂದ ಹಾಸಿಗೆ ಹಿಡಿದಿದ್ದನು. ಆದ ಘಟನೆಗಳಿಗೆ ಈಶ ಸಂಕಲ್ಪವೇ ಹಾಗೆ ಇದೆ ಎಂದು ಸಮಾಧಾನ ಮಾಡಿಕೊಳ್ಳದೆ ಬೇರೆ ಹಾದಿಯೇ ಇಲ್ಲ!

ಈ ಪುಸ್ತಕದ ಮುನ್ನುಡಿಯಲ್ಲಿ ಇರಾಣದ ಚಕ್ರವರ್ತಿಯು ಇಮ್ಮಡಿ ಪುಲಕೇಶಿಯ ಸಹಾಯ ಕೋರಿದ ಸಂಗತಿ ಇದೆ. ಇದು ನನಗೆ ಗೊತ್ತಿರಲಿಲ್ಲ. ಇಮ್ಮಡಿ ಪುಲಕೇಶಿಯು 42 ವರ್ಷ ಈ ಸಾಮ್ರಾಜ್ಯವನ್ನು ಆಳಿದನಂತೆ.

ಈ ಕಾದಂಬರಿಯನ್ನು ಬರೆದವರು ನಾಗೇಶ ಎಂಬುವವರು. ಇವರೇ ಬರೆದ ಚಾಲುಕ್ಯರ ಕುರಿತಾದ ಇನ್ನೊಂದು ಕಾದಂಬರಿ 'ಸತ್ಯಮೇವ ಜಯತೆ' . ಇದೇ ಗಾತ್ರದ್ದು. ನನ್ನ ಮುಂದಿನ ಓದು ಅದು. 

(ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್‌' ಎಂದು ಬರೆದು ಹುಡುಕಿ.

ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು . ಅವನ್ನು ನಿಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ.

ಕೃಷ್ಣಾನಂದ ಲಕ್ಷ್ಮಣ ಕಾಮತ್‌ ಅವರು ತಮಗೆ ಇಷ್ಟವಾದದ್ದನ್ನು ಮಾಡಿದರು, ಓದಿದರು, ಬರೆದರು, ಬದುಕಿದರು.ಬಯಸಿದಂತೆ ಬದುಕಿದ ಅವಧೂತರು. ನಿಜವಾದ ಅರ್ಥದಲ್ಲಿ ಜೀವಿಸಿದರು.

... ಗೌರವಕ್ಕೆ ಅರ್ಹರಾಗಿದ್ದರೂ ಅದನ್ನು ಪಡೆಯದೇ ಹೋದವರು ಕಾಮತರು. ಕಾಮತರು ಈ ಬಗ್ಗೆ ತಲೆಕೆಡಿಸಿಕೊ೦ಡವರೇ ಅಲ್ಲ. ಅವರಿಗೆ ತಾವಾಯಿತು ತಮ್ಮ ಕೆಲಸವಾಯಿತು. ಜನಸಂಪರ್ಕ ಕಡಿಮೆ. ಜನರೊಡನೆ ಮಾತನಾಡಿದ್ದು ಕಡಿಮೆ. ಹರಟೆ ಹೊಡೆಯುವ ಜಾಯಮಾನದವರಲ್ಲ.

ಪ್ರತಿಯೊಂದು ವಿಷಯದಲ್ಲಿಯೂ ಆಸಕ್ತಿಯಿತ್ತು. ಅವರಲ್ಲಿ ಮಗುವಿನಲ್ಲಿರ ಬೇಕಾದ ಮುಗ್ಧತೆಯೂ ಇತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲವಿತ್ತು.

ಹಾಗಾಗಿ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದರು. ಪ್ರವಾಸ ಕಥನ, ಕಲೆ, ಪರಿಸರ, ಪ್ರಬ೦ಧ, ಕಾದ೦ಬರಿ, ಪ್ರಾಣಿ-ಪಕ್ಷಿಗಳ 22 ಪುಸ್ತಕಗಳು.

"ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎ೦ದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿ ಕೊಡಬಲ್ಲವು.

ಕೃಷ್ಣಾನಂದ ಕಾಮತ್‌ ಮತ್ತು ಜ್ಯೋತ್ಸ್ನಾ ಕಾಮತರ ಜೋಡಿ ಅನುರೂಪ ದಾಂಪತ್ಯಕ್ಕೊಂದು ಮಾದರಿ.

ನಮ್ಮಲ್ಲಿ ಹುದುಗಿಕೊ೦ಡಿರುವ ಕ್ರಿಯಾಶಕ್ತಿ ಹೊರಹೊಮಬೇಕಾದರೆ ಅದಕ್ಕೆ ಪ್ರೋತ್ಸಾಹ ಅತ್ಯವಶ್ಯ.

ಜೀವನದಲ್ಲಿ ಅತೀವ ಶ್ರದ್ಧೆ ಮತ್ತು ಆಸಕ್ತಿಯನ್ನು ಬೆಳೆಸಿಕೊ೦ಡು ಅದರ ಆಳವನ್ನು ಅರಿಯಲು ಸದಾಕಾಲ ಹವಣಿಸುತ್ತಿದ್ದ ಮನಸ್ಸು ಅವರದ್ದಾಗಿತ್ತು.

ಸರಳವಾದ ಉಡುಗೆ, ಸರಳವಾದ ನಡವಳಿಕೆ ಅವರ ಹೆಗ್ಗುರುತು.

ಮಿತಭಾಷಿಯಾಗಿ, ಕಾಡುಹರಟೆಗಳಿಂದ ಮೈಲಿ ದೂರವಿದ್ದು, ಸದಾ ಏನಾದರೂ ಕೆಲಸವನ್ನು ಹಚ್ಚಿಕೊಂಡು ಇರುತ್ತಿದ್ದರು. ತನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು, ಜನರ ಚಲನವಲನಗಳನ್ನು ಸೂಕ್ಷ ವಾಗಿ ಗಮನಿಸುತ್ತಿದ್ದರು. ದೊಡ್ಡಸ್ತಿಕೆ ಎನ್ನುವುದು ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ.

ಸಾಮಾನ್ಕರಿಂದ ಅತೀ ಸಾಮಾನ್ಕರವರೆಗೆ ಎಲ್ಲರೊಂದಿಗೆ ಸಮಾನ ರೀತಿಯಲ್ಲಿ ಬೆರೆಯುವ ಸ್ವಭಾವ. ಅವರ ಪ್ರಕಾರ ಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಮಾನವಧರ್ಮ. “ನಮ್ಮ ಸುಖ-ಸಂಪತ್ತುಗಳನ್ನು ಅಭಾಗಿಗಳೊಂದಿಗೆ ಹಂಚಿಕೊ೦ಂಡಾಗಲೇ ಜೀವನಕ್ಕೆ ಒ೦ದು ಅರ್ಥ ಬರುತ್ತದೆ” ದಾನಶೀಲತೆಯನ್ನು ವೈಭವೀಕರಿಸದೆ, ಅದು ನಿತ್ಯದ ಸಂಗತಿಗಳಲ್ಲಿ ಒಂದು ಎಂಬ ನಡವಳಿಕೆಯನ್ನು ರೂಢಿಸಿಕೊಂಡಿದ್ದ ಕೃಷ್ಣಾನಂದರು ಈ ಪ್ರವೃತ್ತಿ ತನ್ನಲ್ಲಿ ಸದಾಕಾಲ ಉಳಿದುಕೊಂಡಿರಲಿ, ನಿರ್ಭಾಗ್ಯರ ಹೃದಯದಲ್ಲಿ ನಮ್ಮಂಥವರಿಗೆ ಸ್ಥಾನವಿರುತ್ತಲ್ಲ ಅಷ್ಟು ಸಾಕು ಎನ್ನುತ್ತಿದ್ದ ಸಹೃದಯಿ.

ಐಷಾರಾಮಿ ಬದುಕು ಹಾಗೂ ಕೊಳ್ಳುಬಾಕ ಸಂಸ್ಕೃತಿಯ ಕುರಿತು ಕಿ೦ಚಿತ್ತೂ ಒಲವು ತೋರದ ಕೃಷ್ಣಾನಂದರು ಯಾರಿಂದಲೂ, ಯಾವುದರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ. ನಿರೀಕ್ಷೆ ಮನುಷ್ಯರಲ್ಲಿ ನಿರಾಶೆಯನ್ನು ಹುಟ್ಟಿಸುತ್ತದೆ. ಎಂಬ ಮಾತನ್ನು ಬದುಕಿಗೆ ಅನ್ನಯಿಸಿಕೊಂಡಿದ್ದರಿ೦ದ ಬದುಕನ್ನು. ಸಹನೀಯಗೊಳಿಸುವುದು ಅವರಿಗೆ: ಸಾಧ್ಯವಾಯಿತು.

ಕೈಗೊಳ್ಳುವ ಕೆಲಸ ಕಾರ್ಯಗಳ ಉದ್ದೇಶ ಹಾಗೂ ಫಲಿತಾಂಶ ಮುಖ್ಯವೆಂದು ಪರಿಗಣಿಸಿದ್ದರಿ೦ದ ಲಾಭನಷ್ಟಗಳ ಲೆಕ್ಕಾಚಾರದ ಕಡೆಗೆ ಅವರ ಗಮನ ಹರಿಯಲಿಲ್ಲ.

ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-ನೀತಿಗಳ ಬೆಂಬಲದಿಂದಲೇ ಗೆದ್ದುದನ್ನು ಈ ಕಾದಂಬರಿ ಹೇಳುತ್ತದೆ. ಇದರ ವಾಚನದಿಂದ ಕನ್ನಡಿಗರಲ್ಲಿ ಸ್ವಾಭಿಮಾನವು ಜಾಗೃತವಾದರೆ ತಾವು ಕೃತಾರ್ಥರಾಗುವುದಾಗಿ ಲೇಖಕರು ಹೇಳುತ್ತಾರೆ.

ಆರಂಭಿಕ ಪುಟಗಳಲ್ಲಿ ಸುಂದರ ಯುವತಿ ಯೊಬ್ಬಳ ಅಪಹರಣ, ರಕ್ಷಣೆಯ ಸಂಗತಿಯಿದೆ. ನಂತರ ಒಬ್ಬ ಗುಜರಾತಿ ಒಬ್ಬ ಮುದಿ ರಾಜನೂ ಅವನ ಚಿಕ್ಕ ವಯಸ್ಸಿನ ರಾಣಿ ವಿಮಲೆಯ ಸಂಗತಿಯಿದೆ. ಈ ರಾಜನ ಪಾವಗಡ ಕೋಟೆಯ ಮೇಲೆ ಚಾಲುಕ್ಯರ ಸಾಮ್ರಾಟನಾದ ಭೂವಡನು ಸಾಮ್ರಾಜ್ಯ ವಿಸ್ತರಣೆಗಾಗಿ ಮುತ್ತಿಗೆ ಹಾಕಿದ ಸಂಗತಿಯೂ ಆ ಎಳೆವಯಸ್ಸಿನ ರಾಣಿಯು ಇವನಲ್ಲಿ ಆಸಕ್ತಳಾಗಿ ತನ್ನ ಗಂಡನ ಅಧೀನದ ಕೋಟೆಯನ್ನು ಭೂವಡನ ವಶಪಡಿಸುವಳು, ಆದರೆ ಅವಳ ಅನೀತಿಗಾಗಿ ಭೂವಡನು ಅವಳನ್ನು ತಿರಸ್ಕರಿಸುವನು. ಈಗ ವಿಮಲೆಯು ಅವನ ನಾಶಕ್ಕಾಗಿ ಯೋಜಿಸುವಳು. ಅದು ಹೇಗೆ? ಅದರಿಂದ ಈ ಭೂವಡನು ಹೀಗೆ ಪಾರಾಗುವನು, ಮತ್ತು ಆರಂಭದಲ್ಲಿದ್ದ ಸುಂದರಿಯ ರಕ್ಷಣೆ ಹೇಗಾಗುವುದು ಎಂಬುದು ಉಳಿದ ಕತೆ. 

ಅಲ್ಲಿನ ಕೆಲವು ಒಳ್ಳೆಯ ಸಾಲುಗಳು: -

ಲೋಕದಲ್ಲಿ ವೀರರಾದವರಿಗೆ ಅನಾಥರನ್ನೂ ನಿರ್ಬಲರನ್ನೂ ರಕ್ಷಿಸುವುದೇ ಶ್ರೇಷ್ಠ ಧರ್ಮವಾಗಿರುವುದು.

ಇಂಥ ಪುಣ್ಯ ಕೆಲಸಕ್ಕೆ ಸಹಾಯ ಮಾಡದಿರುವುದು ಅನುಚಿತ.

ಪರಸ್ತ್ರೀಯನ್ನು ಹತ್ತಿರ ಇರಿಸಿಕೊಳ್ಳುವುದು ಅಪಕೀರ್ತಿಗೆ ಸಾಧನ.

ಈ ಕಾದಂಬರಿಯನ್ನು ಓದಲು ಮತ್ತು ಡೌನ್ ಲೋಡ್ ಮಾಡಿಕೊಳ್ಳಲು pustaka.sanchaya.net ತಾಣದಲ್ಲಿ ಈ ಕಾದಂಬರಿಯ ಹೆಸರು ಬರೆದು ಹುಡುಕಿರಿ.

ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ' ಎಂದು ಹುಡುಕುವ ಮೂಲಕ ಪುಸ್ತಕವನ್ನು ಓದಬಹುದು.

ಇದು ಒಂದು ರಮ್ಯ ಕಥಾನಕ. ಬಹುಶಃ ಮರಾಠಿ ಮೂಲದ್ದು. ಶೂರ ಹಾಗೂ ಸಜ್ಜನ ನಾಯಕ. ಸುಂದರಿ ನಾಯಕಿ (ಅವಳ ಹೆಸರೇ ಪದ್ಮನಯನೆ), ಋಷಿ, ರಾಕ್ಷಸ, ಗಿಳಿ ಎಲ್ಲ ಇಲ್ಲಿದ್ದಾರೆ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

ಅಲ್ಲಲ್ಲಿ ನಾನು ಬರೆದಿಟ್ಟುಕೊಳ್ಳಬಹುದಾದ ಒಳ್ಳೆಯ ವಾಕ್ಯಗಳನ್ನು ನೋಡಿದೆ. ಅವುಗಳನ್ನು ಈ ಮುಂದೆ ಹಂಚಿಕೊಂಡಿದ್ದೇನೆ.

ನಿನ್ನ ಗುಣಗಳಿಗೆ ಮೆಚ್ಚಿ ಭಗವಂತನು ನನ್ನ ರೂಪದಿಂದ ನಿನಗೆ ದರ್ಶನ ಕೊಟ್ಟಿರಬಹುದು.

ಅವನು ವೃದ್ಧಾಪ್ಯದ ಮೂಲಕ ನಿರ್ವಾಣ ಹೊಂದಿದನು.

ಕಾಲಗತಿಯು ಒಂದೇ ಸಮ ಇರುವುದಿಲ್ಲ ತೀರ ಕೆಳಗೆ ಹೋದ ಕಾಲಚಕ್ರವು ಮೇಲಕ್ಕೆ ಬಂದೇ ಬರುವುದು. ಅದರಂತೆ ದುಃಖದಲ್ಲಿರುವ ನಾನು ಕಾಲಾಂತರದಲ್ಲಿ ಸುಖವನ್ನು ಹೊಂದಿಯೇ ತೀರುತ್ತೇನೆ.

ದುಃಖದಿಂದ ನಾನು ದಡ್ಡು ಬಿದ್ದಿದ್ದೇನೆ. ಇನ್ನು ಯಾವದಕ್ಕೂ ನಾನು ಹೆದರೆನು.

ಪಾಣಿಗ್ರಹಣವಾಗುವವರೆಗೆ ಪುರುಷ ಸ್ಪರ್ಶವು ನಿಂದ್ಯ.

ದೇವರಲ್ಲಿ ವಿಶ್ವಾಸವಿಟ್ಟು ಸಮಾಧಾನದಿಂದ ಇರು. ಇದೇ ಕಾಲವೇ ಕಡೆತನಕ ಇರುತ್ತದೆಂದು ತಿಳಿಯಬೇಡ. ಕ್ಷಣದಲ್ಲಿ ಉಪ್ಪರಿಗೆಯು ತಿಪ್ಪೆಯಾಗುತ್ತದೆ, ತಿಪ್ಪೆಯು ಉಪ್ಪರಿಗೆಯಾಗುತ್ತದೆ. ರಾವಣನ ವೈಭವವನ್ನು, ದೈವೀಸತ್ವವು ಮಂಗಗಳ ಕೈಯಿಂದ ಮಣ್ಣುಗೂಡಿಸಿ ಬಿಟ್ಟಿತು. ದಾರಿದ್ರದ ಪ್ರದರ್ಶನವಾದ ಸುದಾಮನ ಮುರಕು ಗುಡಿಸಲನ್ನು ಅದೇ ದೈವೀಸತ್ವವು ಬಂಗಾರದ ಪಟ್ಟಣದೊಳಗಿನ ರಾಜಮಂದಿರವಾಗಿ ಮಾಡಿತು.

ಸತ್ಕಾರ್ಯದಲ್ಲಿ ಶರೀರವನ್ನು ಸವೆಸಬೇಕಲ್ಲದೆ ಹಾಳುಚಿಂತೆಗೆ ಗುರಿಮಾಡಬಾರದು.

ನಿನ್ನ ಕುಲಕ್ಕೂ ವಂಶಕ್ಕೂ ಶೀಲಕ್ಕ ವಿದ್ಯೆಗೂ ವಯಸ್ಸಿಗೂ ಪ್ರಸಂಗಕ್ಕೂ ತಕ್ಕಂತೆ ನಡೆ.

ಮನುಷ್ಯನ ಸಂಸಾರ ಯಾತ್ರೆಗೆ ಕಟ್ಟಿದ ಬುತ್ತಿ ಯಾವುದು? ಕಾಲ್ಪನಿಕ ಸುಖವಲ್ಲವೇ? ಅಂದ ಬಳಿಕ ಸುಖವನ್ನು ಕಲ್ಪಿಸುತ್ತಾ ಆನಂದದಿಂದಿರು.

ಇಂಥ ಪ್ರಸಂಗದಲ್ಲಿಯೇ ಮನುಷ್ಯನ ಪರೀಕ್ಷೆ ಆಗುತ್ತದೆ.

ಅವನ ಬಾಳು ಮೂಗಿಲ್ಲದ ಮೋರೆಯಂತೆಯೂ ವಿನಯವಿಲ್ಲದ ವಿದ್ಯೆಯಂತೆಯೂ ಸದಾಚರಣೆ ಇಲ್ಲದ ವೇದಾಂತ ಜ್ಞಾನದಂತೆಯೂ ಅಮಂಗಲವಾಯಿತು.

ಲೋಕದೊಳಗೆ ಅವರವರ ತೆರದೊಳು ನಡೆವವ ಜಾಣ - ನಿಜಲಿಂಗ ಕವಿಗಳು ಹಾಗೆ ಹೇಳಿದ್ದಾರೆ.

ದೊರೆಯೆ, ಇಂಥ ಕರುಣಾಸ್ಪದವಾದ ಪ್ರಸಂಗದಲ್ಲಿ, ಯಾರ ಅಂತಃಕರಣವು ಕರಗಿ ನೀರಾಗಿ ಅದು ಕಣ್ಣೀರುಗಳ ದ್ವಾರದಿಂದ ಹೊರಬಿಳಲಿಕ್ಕಿಲ್ಲ! ಸರ್ವ ಸಂಗಪರಿತ್ಯಾಗಮಾಡಿದ ಮಹಾತ್ಮರು, ಆ ಕರಗಿದ ಅಂತಃಕರಣಕ್ಕೆ ತಮ್ಮ ಆತ್ಮ ಸಂಯಮನದ ಒಡ್ಡು ಹಾಕುವದರಿಂದ, ಆ ಕರುಣಾಜಲವು ಸಂಚಯಹೊಂದಿ ಹೊಂದಿ ವಿಚಿತ್ರಶಕ್ತಿಯನ್ನು ತಾಳಿ, ಅದು ಪರೋಪಕಾರದ ಕೃತಿಗಳನ್ನು

ಮಾಡುವದು! ಇನ್ನು ನೀನು ಸಾಮಾನ್ಯ ಜನರಂತೆ ಕಣ್ಣೀರು ಸುರಿಸುವದನ್ನು ಬಿಟ್ಟು, ಪದ್ಮನಯನೆಯ ಹಿತದ ಕೆಲಸಗಳನ್ನು ಮಾಡು. ಆಕೆಯ ಕಲ್ಯಾಣಕ್ಕಾಗಿ ಈಶ್ವರಾರಾಧನೆ, ಅತಿಥಿಸೇವೆ, ಸತ್ಪಾತ್ರದಾನ ಮೊದಲಾದವುಗಳು ದೊಡ್ಡ ಪ್ರಮಾಣದಿಂದ ನಡೆ ಯಲಿ. ಇಂಥ ಸತ್ತಿಯೆಗಳ ಪುಣ್ಯವೇ ರಾಜಪುತ್ರಿಯ ಕಷ್ಟ ನಿವಾರಣ ಮಾಡು ವದು. ಆಕೆಯ ಶೋಧಾರ್ಥವಾಗಿ ನಾಲ್ಕೂ ಕಡೆಗೆ ಸೇವಕರನ್ನು ಕಳಿಸು.

ಪ್ರಾಜ್ಞನ ಶೋಕವು ಲೋಕೋದ್ಧಾರಕ್ಕೆ ಕಾರಣವಾಗುವದು

ನೀನು ಅವನ ಆಶ್ರಯದಲ್ಲಿದ್ದು ಅವನ ದುಃಖವನ್ನು ಕಣ್ಣಿಂದ ನೋಡುತ್ತ ಕೂಡು ವದು ಯೋಗ್ಯವೆ?

ಸ್ತ್ರೀಯರು ಸಂಕಟದಲ್ಲಿರುವುದನ್ನು ನೋಡುವದು ಕ್ಷತ್ರಿಯರ ಶೀಲವಲ್ಲ. ತಮ್ಮ ಪ್ರಾಣವನ್ನು ಅರ್ಪಿಸಿಯಾದರೂ ಅವರ ಸಂಕಟವನ್ನು ದೂರ ಮಾಡುವರು.

ಬಂಧುಗಳಲ್ಲಿ ಪ್ರೇಮವು ಬಂಧುತ್ವದಿಂದ ಹುಟ್ಟುತ್ತದೆ. ಆದರೆ ಮಿತ್ರರಲ್ಲಿಯ ಪ್ರೇಮವು ಬಂಧುತ್ವದಿಂದ ಹುಟ್ಟುತ್ತದೆ ಬಂಧುತ್ವವೇ ಪ್ರೇಮದಿಂದ ಹುಟ್ಟುತ್ತದೆ. ಈ ಸಂಸಾರದಲ್ಲಿ ಪ್ರೇಮವು ಸುಖದ ಮೂಲಾಧಾರವಾಗಿರುವುದರಿಂದ ಮಿತ್ರನೇ ಹೆಚ್ಚಿನ ಬಂಧುವು .

ನನ್ನ ಬಹಿ:ಪ್ರಾಣವಾದ ಹೆಂಡತಿಯು

ಈ ಜಗತ್ತಿನಲ್ಲಿ ಮನುಷ್ಯರಾಗಿ ಹುಟ್ಟಿ ಈ ಜನ್ಮವನ್ನು ಸಾರ್ಥಕಗೊಳಿಸದೆ ವ್ಯರ್ಥವಾಗಿ ದೇಹವನ್ನು ನೀಗುವದು ಅಯೋಗ್ಯ.

ವಿಷಯೋಪಭೋಗದ ಹೊರತು ಬೇರೆ ಉದ್ಯೋಗವು ಇಲ್ಲದ್ದರಿಂದ, ನಾನು ಪದ್ಮನಯನೆ ಯೊಡನೆ ಕೆಲವು ವೇಳೆಯನ್ನು ಜಲಕ್ರೀಡೆಯಲ್ಲಿಯೂ, ಕೆಲವು ವೇಳೆಯನ್ನು ವೀಣೆ-ಜಲತರಂಗ ಮುಂತಾದ ವಾದ್ಯಗಳನ್ನು ಬಾರಿಸುವದರಲ್ಲಿಯೂ, ಕೆಲವು ವೇಳೆಯನ್ನು ಉದ್ಯಾನದಲ್ಲಿ ವಿಹರಿಸುವದರಲ್ಲಿಯೂ, ಕೆಲವು ವೇಳೆಯನ್ನು ಆಟಗಳಲ್ಲಿಯೂ ಕಳೆಯುತ್ತಿದ್ದೆನು.

ಮಾತಾ-ಪಿತೃಗಳ, ಹಾಗು ಪ್ರಿಯಳ ವಿಯೋಗದುಃಖಕ್ಕಾಗಿ ನೀನು ಪ್ರಾಣಕೊಟ್ಟರೆ, ನಿನ್ನ ಹಿತವನ್ನು ಮಾತ್ರ. ನೋಡಿದಂತೆ ಆಗುತ್ತದಲ್ಲದೆ, ಅನ್ಯರ ದುಃಖದ ನಿವಾರಣದ ಕಡೆಗೆ ನೀನು ಮನಸ್ಸು ಮಾಡಿದಂತೆ ಆಗುವದಿಲ್ಲ. ಸ್ವಂತದ ಹಿತವನ್ನು ಮಾತ್ರ ಸಾಧಿಸಿ ಕೊಳ್ಳುವವರು ನೀಚವರ್ಗದ ಜನರೊಳಗೆ ಸೇರಿಸಲ್ಪಡುತ್ತಾರೆ. ಪ್ರಾಣತ್ಯಾ ಗವು ನಿನ್ನ ಮಾತಾಪಿತೃಗಳ, ಇಲ್ಲವೆ ನಿನ್ನ ಪ್ರಿಯಳ ಸಮಾಗಮ ನಿಮಿತ್ತವಾ ಗಲಿ, ದರ್ಶನೋಪಾಯವಾಗಲಿ ಆಗುವದೊ?

ಯಾವ ಪ್ರಯತ್ನವನ್ನೂ ಮಾಡದೆ ಜೀವ ಕೊಡುವದು ಪೌರುಷವಲ್ಲ. ಯತ್ನ ಮಾಡಿಯೂ ಸಾಧ್ಯವಾಗದಿದ್ದರೆ, ಅಲ್ಲಿ

ಯಾವ ದೋಷವೂ ಇಲ್ಲ.

ಯತ್ನ ಮಾಡುತ್ತಿರುವದು ಪುರುಷಧರ್ಮವಾಗಿರುವದು.

ಒಬ್ಬರನ್ನೊಬ್ಬರು ಶಿಕ್ಷಿಸುವುದಕ್ಕೂ ಕ್ಷಮಿಸುವುದಕ್ಕೂ ಮನುಷ್ಯರು ಸ್ವತಂತ್ರರಲ್ಲ.

ಹಿಗ್ಗುವ ಪದಾರ್ಥವನ್ನು ಹರಿಯುವವರೆಗೂ ಜಗ್ಗಬಾರದು.

ತಿಳಿದವರು ಕಾರಣವಿಲ್ಲದೆ ತಮ್ಮ ಬಾಯಿಯಿಂದ ತಮ್ಮ ಸ್ತೋತ್ರವನ್ನು ಮಾಡಿಕೊಳ್ಳುವುದಿಲ್ಲ.

ಜಗತ್ತಿಲ್ಲಿ ಸರ್ವಸಮ್ಮತನಾದವನು ದೊರೆಯಲಾರನು. ಈಶ್ವರಾಂಶರೂ ಈ ಪದವಿಯನ್ನು ಹೊಂದಲಿಲ್ಲ. ಕಮಲಾಕ್ಷನು ಗುಣಪೂರ್ಣನಿದ್ದರೂ ಸರ್ವ ಸಮ್ಮತನಿದ್ದಿಲ್ಲ; ಬಹುಜನ ಸಮ್ಮತನಾಗಿದ್ದನೆಂದು ಮಾತ್ರ ಹೇಳಬಹುದು.

ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಾಜಿಕ ಕಾದಂಬರಿ ಇದಾಗಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. " ಎಂಬ ಮಾಹಿತಿ ಇತ್ತು. ಅದರ pdf ಓದಿ ಎಂದು ಇದ್ದ ಕೊಂಡಿ ಕೆಲಸ ಮಾಡುತ್ತಿರಲಿಲ್ಲ . ಅದನ್ನು ಸ್ವಲ್ಪ ತಿದ್ದಿಕೊಂಡು ನೋಡಿದಾಗ https://archive.org/details/dli.osmania.4265/page/n9/mode/2up ತಾಣದಲ್ಲಿ ಪುಸ್ತಕ ಸಿಕ್ಕು ಬಿಟ್ಟಿತು.

ಕಥೆಯ ಸಾರಾಂಶ ಹೀಗೆ. ಇದು ಬ್ರಿಟಿಷ್ ಕಾಲದ ಕಥೆ. ಜಮೀನ್ದಾರ್ ನ ಮಗನೊಬ್ಬನು ಐಸಿಎಸ್ ಪರೀಕ್ಷೆ ಕಟ್ಟಿ ಫಲಿತಾಂಶದ ಹಾದಿ ನೋಡುತ್ತಿದ್ದಾನೆ. ಒಂದು ಬೆಳಗ್ಗೆ ಪಿಸ್ತೂಲನ್ನು ತೆಗೆದುಕೊಂಡು ಬೇಟಿ ಆಡಲು ಹೋಗಿ ಎರಡು ಪಕ್ಷಿಗಳಿಗೆ ಗುಂಡು ಹೊಡೆಯುವನು. ಆಗ ಒಬ್ಬ ಶಿಷ್ಯನೊಂದಿಗೆ ಅಲ್ಲಿಗೆ ಬಂದ ಸನ್ಯಾಸಿಯು ಅದನ್ನು ಅಕ್ಷೇಪಿಸಿದನು. ನೀನು ಮಾಡಿದ ಈ ಹಿಂಸೆಗೆ ನಿನಗೆ ಇದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ದಿನವನ್ನು ಮತ್ತು ಈ ವೇಳೆಯನ್ನು ನೆನಪಿಟ್ಟುಕೋ ಎಂದು ಒದರಿದನು. ಜಮೀನ್ದಾರನ ಮಗನು ಮನೆಗೆ ಮರಳಿದ. ಅವತ್ತೇ ಸಂಜೆಗೆ ಆತನು ಐಸಿಎಸ್ ಪಾಸಾದ ಸಂಗತಿಯು ಬಂದು ತಲುಪಿತು. ಆಮೇಲೆ ಕೆಲ ದಿನಗಳ ನಂತರ ಒಂದು ಪತ್ರವು ಅವನನ್ನು ತಲುಪಿತು . ಅದರಲ್ಲಿ ಅವನು ಪ್ರೀತಿಸಿದ್ದ ಮತ್ತು ಮದುವೆಯಾಗಲು ಬಯಸಿದ್ದ ಲಂಡನ್ನಿನ ಹುಡುಗಿ ಅವನು ಆ ಪಕ್ಷಿಗಳಿಗೆ ಗುಂಡು ಹೊಡೆದ ಸಮಯದಲ್ಲಿ ಸತ್ತಿದ್ದಳು. ಇದನ್ನು ಅವನು ಯಾರಿಗೂ ಹೇಳಲಿಲ್ಲ. ಅವನಲ್ಲಿ ಒಂದು ತರಹದ ವೈರಾಗ್ಯ ಉದಯಿಸಿ ಮರುದಿನ ಆ ಸನ್ಯಾಸಿಯನ್ನೂ ಅವನ ಶಿಷ್ಯನನ್ನು ಮನೆಗೆ ಕರೆತಂದು ಇಟ್ಟುಕೊಂಡನು. ಅವನು ತನ್ನ ಸ್ವಭಾವವನ್ನು ಬದಲಿಸಿಕೊಂಡ. ಮೋಸ ಮಾಡುವುದನ್ನು ಮತ್ತು ಕುಡಿಯೋದನ್ನು ಬಿಟ್ಟುಬಿಟ್ಟ. 

ಆದರೆ ಈ ಸನ್ಯಾಸಿ ಮತ್ತು ಅವನ ಶಿಷ್ಯ ಎಂತಹವರು ? ಪೊಲೀಸಿನಲ್ಲಿ ಕೆಲಸ ಮಾಡುತ್ತಿದ್ದ ಇವನ ಸಂಬಂಧಿ ಒಬ್ಬನು ಸಹಜವಾಗಿ ಎಂಬಂತೆ ಇವರ ಮನೆಗೆ ಭೇಟಿ ಕೊಟ್ಟನು. ಮುಂದೆ ನಡೆದುದೇನು ? ಆತನಕ ನಡೆದುದರ ವಿಶ್ಲೇಷಣೆಯೂ ಮುಖ್ಯವೇ . ಅದು ಇಲ್ಲಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ರೀತಿ, ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ರೀತಿ ಓದಿ ತಿಳಿಯಲು ಅರ್ಹವಾಗಿದೆ. ಆ ಜಮೀನ್ದಾರನ ಮಗನ ಗುರುಭಕ್ತಿ, ಶೃದ್ಧೆ , ವೈರಾಗ್ಯಗಳು ದೂರವಾದದ್ದು ಹೇಗೆ ಎಂಬುದು ಕುತೂಹಲಕಾರಿಯಾಗಿದೆ.

ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು.

ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ.

ಇದು ತೆಲುಗಿನ ಪುಸ್ತಕವೊಂದರ ಅನುವಾದ. ಇದು ಕತೆ ಅಥವಾ ಕಾದಂಬರಿ ಏನಲ್ಲ, ಆದರೆ ಇತಿಹಾಸ ದೃಷ್ಟಿಯಿಂದ 'ಚಂದ್ರಗುಪ್ತ ಚಕ್ರವರ್ತಿ'ಯ ಕುರಿತು ಇದೆ. ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಾವು ಓದಿರುತ್ತೇವೆ , ತಿಳಿದಿರುತ್ತೇವೆ. ಆದರೆ ಆ ಸಂಗತಿಗಳ ಮೂಲ ಏನು? ಎಂಬುದನ್ನು ಈ ಪುಸ್ತಕ ಚರ್ಚಿಸುತ್ತದೆ. ಐತಿಹಾಸಿಕ ದಾಖಲೆಗಳನ್ನು ಮುಂದಿಡುತ್ತದೆ. 

ಚಂದ್ರಗುಪ್ತ ,ಚಾಣಕ್ಯರ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖ ಇದೆ. ಅನೇಕ ಕಾವ್ಯ, ಕಾದಂಬರಿ, ನಾಟಕಗಳಿವೆ. ಐತಿಹಾಸಿಕ ಮೂಲಗಳಿವೆ. ಆ ಐತಿಹಾಸಿಕ ಗ್ರೀಕ್ ಮೂಲಗಳ ಬಗ್ಗೆ, ಅಲ್ಲಿರುವ ಮಾಹಿತಿ ಇಲ್ಲಿದೆ. ತುಂಬ ಮಹತ್ವದ ಪುಸ್ತಕ. 

 

"ಭೂಮಿಯಿಂದ ಎರಡು ಲಕ್ಷ ಇಪ್ಪತ್ತನಾಲ್ಕು ಸಾವಿರ ಮೈಲಿ ದೂರದಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನಡೆಗೆ ಸಾಗುತ್ತಾ ಹಿಂದಕ್ಕೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನೀಲಿ, ಹಸಿರು, ಕೆಂಪು ವರ್ಣದ ಭೂಮಿ, ವಜ್ರದಂತೆ ಪ್ರಜ್ವಲಿಸುತ್ತಿತ್ತು, ಸುತ್ತ ಜೀವಕೋಟಿಯ ಸುಳಿವೂ ಇಲ್ಲದ ಚಂದ್ರ ಹಾಗೂ ಮತ್ತಿತರ ಬಂಜರು ಗ್ರಹಗಳು! ಮುಂದೆ ಅನಂತವಾಗಿ ಹಬ್ಬಿರುವ ಕರಿಯ ಶೂನ್ಯ ಆಕಾಶ! ಜೀವದ ಸುಳಿವಿಲ್ಲದ ಸೌರಮಂಡಲದ ನಡುವೆ ಹೊಳೆಯುತ್ತಿರುವ ನೀಲಿಯ ಏಕಮಾತ್ರ ಗ್ರಹ ಭೂಮಿ, ಇದಕ್ಕಿಂತ ಅನರ್ಘವಾದದ್ದು, ಅಮೂಲ್ಯವಾದುದು ಏನೂ ಇಲ್ಲ ಎನ್ನಿಸಿತು ಆ ಗಗನ ಯಾತ್ರಿಗಳಿಗೆ .   ನಮ್ಮ ಸೀಬೆ ಗಿಡದ ಮೇಲಿನ ಅಳಿಲು,  ಮುಬಿಯಾ ನದಿ ತೀರದ ಕಪ್ಪೆ,  ಹಳ್ಳದ ಪಕ್ಕ ಅಡ್ಡಡ್ಡ ಓಡಾಡುವ ವಿಚಿತ್ರ ಏಡಿ, ಆಫ್ರಿಕದ ಯಾವುದೋ ಕಾಡಿನ ಗಾಳಿಯಲ್ಲಿ ತೇಲಾಡುವ ಇಲಿ, ಕೆರೆಯ ಕಲ್ಲಿನ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಆಮೆ, ಇವೆಲ್ಲದರ ಸಂಯೋಜನೆ ಭೂಮಿಯಿಂದ ಎರಡು ಲಕ್ಷ ಮೈಲು ದೂರದಲ್ಲಿ ಗಗನ ಯಾತ್ರಿಗಳು ಕಂಡ ಕಾಣ್ಕೆ.  ಈ ಸತ್ಯವನ್ನು ಅಷ್ಟು ದೂರ ಹೋಗದೆ   ಸಾಕ್ಷಾತ್ಕರಿಸಿಕೊಂಡವರು"  ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಂಥವರು.   ಭೂಮಿಯ ಅತಿ ಸಾಮಾನ್ಯವಾದುದು, ಸರಳವಾದುದು ಸಹ ಅತ್ಯಮೋಘ, ಅಸಾಮಾನ್ಯ ಎಂದು ನಾವು ತಿಳಿದಿರುವುದಷ್ಟೇ ವಿಶ್ವಮಾನ್ಯ ಎಂದು ನಮಗೆ ಅವರು ತೋರಿಸಿಕೊಡುತ್ತಾರೆ. 

ಅವರ  ಮಿಲೆನಿಯಂ ಸರಣಿಯ ಪುಸ್ತಕಗಳಲ್ಲಿ ಒಂದಾದ 'ನೆರೆಹೊರೆಯ ಗೆಳೆಯರು' ಅನ್ನು  ಇತ್ತೀಚೆಗೆ ಓದಿದೆ. ಪುಸ್ತಕದ ಗಾತ್ರ ಒಂದು ನೂರು ಪುಟಗಳು. ಆದರೆ ತುಂಬಾ ಚೆನ್ನಾದ ಪುಸ್ತಕ. ಮನುಷ್ಯರಾದ ನಾವುಗಳು ತುಂಬಾ ಸ್ವಾರ್ಥಿಯಾಗಿ ನಮ್ಮನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಬದುಕುತ್ತೇವೆ. ಆದರೆ ಈ ಭೂಮಿಯ ಮೇಲಿನ ಜೀವಗಳು ಹೇಗೆಲ್ಲ ಬದುಕಿವೆ? ಹೇಗೆ ತಮ್ಮ  ಕುಲವನ್ನು ಬೆಳೆಸುತ್ತವೆ? ಹೇಗೆಲ್ಲಾ ಸಾಯುತ್ತವೆ?  ಸ್ವಾರ್ಥಿಮನುಷ್ಯನಿಂದಾಗಿ ಹೇಗೆ ನಿರ್ನಾಮದ ಅಂಚಿಗೆ ಹೋಗುತ್ತವೆ? ಕೊಲ್ಲುವ ಕೈ ಒಂದು, ಕಾಯುವ ಕೈ ಒಂದು ಅನ್ನುವ ಹಾಗೆ ಎಷ್ಟೋ ಜನರು ತಮ್ಮ ಲಾಭಕ್ಕಾಗಿ  ಅವುಗಳನ್ನು ಕೊಲ್ಲುತ್ತಿದ್ದರೆ, ಅವುಗಳನ್ನು ಕಾಪಾಡಲೂ ಇನ್ನಷ್ಟು ಜನರು ಪ್ರಯತ್ನಿಸುತ್ತ ಇರುತ್ತಾರೆ.

ನಮ್ಮ ಆತ್ಮಕೇಂದ್ರಿತ ಬದುಕಿನಿಂದ ಹೊರಬಂದು ಲೋಕವನ್ನು ತಿಳಿಯಲು ಇಂಥ ಪುಸ್ತಕಗಳು ಪ್ರೇರೇಪಿಸುತ್ತವೆ.

- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ

- ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ.

- ಈ ಪುಸ್ತಕವು ಒಬ್ಬ ಸಂಸಾರಿಗನು ಹೇಳಿದಂತೆ ಅವನ ಬದುಕಿನ ಚಿತ್ರಣ. ಬದುಕಿನ ಭಾಗವಾದ ಹೆಂಡತಿಯ ಕುರಿತು ಮೆಚ್ಚಿಗೆಯ ಮಾತುಗಳಿವೆ. 

- ' ಮನುಷ್ಯನು ಹುಟ್ಟಿ ಬಂದುದರ ಸಾರ್ಥಕ್ಯವೇನು? ಹಣಗಳಿಕೆ , ಲೋಕದ ಮತ್ತು ದೇವರ ಸೇವೆ. ಮನುಷ್ಯನು ಹಣ, ಕೀರ್ತಿ ಮತ್ತು ದೇವರ ಪ್ರೀತಿ ಇವುಗಳ ಹೊರತು ಮತ್ತೇನೂ ಸಾಧಿಸುವುದು ಇರುವುದಿಲ್ಲ' - ಇಲ್ಲಿ ನಾನು ಮೆಚ್ಚಿದ ಸಾಲು. 

- ಹೆಂಡತಿಯೊಡನೆ ಹೇಗೆ ಹೊಂದಿಕೊಂಡು ಬಾಳಬೇಕು, ಹೇಗೆ ಭಿನ್ನಾಭಿಪ್ರಾಯಗಳನ್ನು ನಿವಾರಿಸಬೇಕು ಎಂಬುದರ ಬಗ್ಗೆ 99 , 100, 101 ನೇ ಪುಟಗಳನ್ನು ಓದಲು ಮರೆಯದಿರಿ. ಇದರಿಂದ ನಿಮಗೂ ಉಪಯೋಗವಾಗುತ್ತದೆ , ಸುಖ ಜೀವನ ನಿಮ್ಮದಾಗುತ್ತದೆ ಎ೦ದು ನನ್ನ ಅನಿಸಿಕೆ . ನಿಮಗೂ ಹಾಗೆ ಎನ್ನಿಸಿದರೆ ಈ ಸಂಗತಿಯನ್ನು ನಿಮ್ಮ ಗೆಳೆಯ , ಗೆಳತಿಯರೊಡನೆ ಆಪ್ತರೊಡನೆ ಹಂಚಿಕೊಂಡು ಅವರ ಸುಖಜೀವನಕ್ಕೂ ಕಾರಣವಾಗಿ ಲೋಕದ ಸುಖವನ್ನು ಹೆಚ್ಚಿಸಿ. 

- ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 

ಇಳಿಸಿಕೊಳ್ಳಲು ಅಲ್ಲಿ ಕೆಳಗಿರುವ Download options ನಲ್ಲಿ pdf ಎಂಬುದರ ಮೇಲೆ ಕ್ಲಿಕ್ಕಿಸಿ.

- ಇದನ್ನು ಬರೆದವರು ಶ್ರೀ ಭಿ. ಪ. ಕಾಳೆ

ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ  ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ ರಾಮಾಯಣದ ಕಥೆಯನ್ನು ಹೇಳಲಾಗಿದೆ. ಕಥೆಯ ಚೌಕಟ್ಟಿನ ಮಟ್ಟಿಗೆ ಹೇಳುವುದಾದರೆ  ಇದು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದರೂ ಕೂಡ ಶ್ರೀರಾಮನನ್ನು ಇಲ್ಲಿ ವಿಶ್ವಮಾನವನನ್ನಾಗಿ ನೋಡಲಾಗಿದೆ. ಇದರ ಎರಡನೆಯ ಭಾಗ ನನಗೆ ಓದಲು ಸಿಕ್ಕಿಲ್ಲವಾದರೂ ಮೊದಲೇ ಭಾಗದಲ್ಲಿ ಸಾಮಾನ್ಯವಾಗಿ ನಾನು ಕಂಡ ಕೆಲ ಸಂಗತಿಗಳು ಇಲ್ಲಿವೆ: -

 

೧) ರಾಮನನ್ನು ಯುವರಾಜನನ್ನಾಗಿ ಮಾಡುವ ಸುದ್ದಿ ಹೊರಬಿದ್ದ ಕೂಡಲೇ ಎಲ್ಲರ ಬಾಯಲ್ಲಿ ಶ್ರೀರಾಮಚಂದ್ರ ಆಗಿಬಿಟ್ಟ!

 

 

೨) ದಶರಥ ಸಾಯುವ ಮೊದಲೊಮ್ಮೆ ಶ್ರೀರಾಮನಿಗೆ ಹೇಳುತ್ತಾನೆ - "ಒಳ್ಳೆಯ ರಾಜನಾಗು, ಒಳ್ಳೆಯ ಗಂಡನಾಗು. ಸಾಧ್ಯವಾದರೆ ಒಬ್ಬಳೇ ಹೆಂಡತಿಗೆ ಗಂಡನಾಗು !" ( ಸ್ಪಾನುಭವದಿಂದ ಕಲಿತ ಪಾಠ!)

 

 

೩) 14 ವರ್ಷಗಳ ವನವಾಸದ ಆಣತಿಯನ್ನು ರಾಮನು ಹಳ್ಳಿಗಳ ಮತ್ತು ಆಶ್ರಮಗಳ ಜೀವನ ವಿಧಾನಗಳನ್ನು ತಿಳಿಯಲು ಒಂದು ಅವಕಾಶವನ್ನಾಗಿ ತನ್ನ ಕಲಿಕೆಯ ಭಾಗವನ್ನಾಗಿ ನೋಡುತ್ತಾನೆ. ರಾಜಧಾನಿಯಲ್ಲಿ ನಗರಗಳಲ್ಲಿ ಅಧಿಕಾರ, ಸಂಪತ್ತು, ಸೈನ್ಯ, ಆಡಳಿತ ಎಲ್ಲಾ ಇವೆ . ಇವು ಆಶ್ರಮಗಳನ್ನು ಹಳ್ಳಿಗಳನ್ನು ಸಾಮಾನ್ಯ ಜನರನ್ನು ತಲುಪಬೇಕು. ನಗರಗಳನ್ನು ಕಾಡದೆ ಹಳ್ಳಿಗರನ್ನು ಆಶ್ರಮವಾಸಿಗಳನ್ನು ಕಾಡುವ ರಾಕ್ಷಸರ ಕಾಟವನ್ನು ನಿವಾರಿಸುವುದು ಅವನ ಬಯಕೆ. ರಾಜಧಾನಿ ಮತ್ತು ನಗರಗಳ ವ್ಯವಸ್ಥೆ ಒಂದು ರೀತಿ ರಾಕ್ಷಸ ವ್ಯವಸ್ಥೆಯಾಗಿದೆ!

 

೪) ಸರಳಜೀವನವನ್ನು ಕಾಡಿನಲ್ಲಿ ನಡೆಸಲು ಪ್ರಕೃತಿಯ ಮಡಿಲಲ್ಲಿ ಬೆಳೆದ ಸೀತೆಯು ರಾಮಲಕ್ಷ್ಮಣರಿಗೆ ನೆರವಾಗುತ್ತಾಳೆ. ಅವಳು ಒಂದು ತರಹ ಹಳ್ಳಿಯ ಹುಡುಗಿ ಎನ್ನಬಹುದು. 

 

೫) ರಾಮಲಕ್ಷ್ಮಣರನ್ನು ನೋಡಲೆಂದು ಬಂದ ಭರತನು "ರಾಜನಾಗುವ ಯೋಗ್ಯತೆ ಇರುವ ರಾಮನು ಈಗ ದರಿದ್ರನಂತೆ ಬದುಕಿದ್ದಾನೆ " ಎಂದರೆ ಶತ್ರುಘ್ನನು ಅವನನ್ನು ತಿದ್ದುತ್ತಾನೆ - "ಸರಳವಾಗಿ ಬದುಕುತ್ತಿದ್ದಾನೆ ಅಂತ ಹೇಳು "

 

ಇನ್ನುಳಿದ ಸಂಗತಿಗಳನ್ನು ನೀವೇ ಓದಿ !

 

ಈ ಪುಸ್ತಕವು ಮೊದಲ ಭಾಗವಾಗಿದ್ದು ಇದರಲ್ಲಿ ರಾಮಾಯಣದ ಬಾಲ ಕಾಂಡ ಮತ್ತು ಅಯೋಧ್ಯ ಕಾಂಡಗಳು ಮಾತ್ರ ಇವೆ. ಎರಡನೆಯ ಭಾಗ ಓದುವ ಕುತೂಹಲ ನನ್ನಲ್ಲಿ ಉಂಟಾಗಿದೆ.