ಮೊದಲ ತೊದಲ ನುಡಿಯ ಪರಿ

ಮೊದಲ ತೊದಲ ನುಡಿಯ ಪರಿ

ಕವನ

( ತಲ ಷಟ್ಪದಿ)

ಅಧರ ದಲ್ಲಿ

ಮಧುರ ನುಡಿಯು

ಚದುರ ವಾಗಿ ಕೇಳುತ|

ಮೊದಲ ನುಡಿಗೆ

ತೊದಲ ತುಟಿಯ

ಕದಲ ದಂತೆ ಹೇಳಿದೆ||

 

ಪಟ್ಟ ಹಿಡಿದು

ಪುಟ್ಟನೊಬ್ಬ

ಕಟ್ಟೆ ಮೇಲೆ ಕುಳಿತನು|

ಅಟ್ಟ ವೇರಿ

ಸೊಟ್ಟ ಮೋರೆ

ನೆಟ್ಟ ನೋಟವಿತ್ತನು||

 

ನುಡಿಯನಾಡಿ

ಕಡೆಗೆ ತಾನು

ತಡೆಯೆ ಬರುವೆನೆಂದನು|

ಹಡೆದ ಮಾತೆ

ಯುಡುಗೆ ನೋಡಿ

ಹುಡುಗ ಚಣದಿ ನಿಂತನು||

 

ಅಮ್ಮನಿಂದು

ಸುಮ್ಮಳಾಗಿ

ತಮ್ಮ ಬಾರೋಯೆಂದಳು|

ಒಮ್ಮೆ ತಿನ್ನು

ಮಮ್ಮು ಸಾರು

ಗುಮ್ಮ ಬಂದು ಕದಿವಳು||

 

ತೋಷಪಟ್ಟು

ವೇಷ ಹಾಕಿ

ಹಾಸದಿಂದ ಜಿಗಿಯಿತು|

ಆಸುಪಾಸು

ಮೋಸವಿರದ

ವಾಸ ಗೃಹದಿ ನಲಿಯಿತು||

 

ಓರೆನೋಟ

ಬೀರಿತಾನು

ನೀರಿನಲ್ಲಿ ಧುಮುಕಿತು|

ಸಾರಿಸಾರಿ

ಹೋರಿಯಂತೆ

ಬಾರಿಬಾರಿ ಮುಳುಗಿತು||

 

ಋಷಿಯ ತೆರದಿ

ಖುಷಿಯ ಪಟ್ಟು

ಹೊಸದು ನೃತ್ಯ ನೋಳ್ಪಲಿ|

ದೆಸೆಯ ಕಂಡು

ಹುಸುನಗುತಲಿ

ಬೆಸೆದು ಕೊಂಡು ಮಗುವಲಿ||

 

ಜೊಲ್ಲು ಸುರಿವ

ಬೆಲ್ಲ ಜೇನು

ಕಲ್ಲು ಮನವ ಕರಗಿಸೆ|

ಗಲ್ಲ ತುಂಬಿ

ಸೊಲ್ಲು ಕೇಳು

ತಲ್ಲಿ ಮಗುವ ಕೂಡಿಸೆ||

 

ಆಟವಾಡಿ

ಪಾಠ ಕೇಳಿ

ಕಾಟ ಕೊಟ್ಟು ಹೋಯಿತು|

ತಾಟು ಹಿಡಿದು

ರೋಟಿಗಾಗಿ

ಲೋಟವನ್ನು ಕೆಡವಿತು||

 

ಅಳುವ ತುಟಿಯ

ಮಳೆಯ ಹನಿಯ

ಫಳನೆ ಹೊಳೆವ ಕಂಗಳು|

ತೆಳುವ ಟೊಂಕ

ಸೆಳೆವ ಮೊಗವು

ಬಿಳಿಯ ಹಲ್ಲು ತಿಂಗಳು||

-ಶಂಕರಾನಂದ ಹೆಬ್ಬಾಳ 

 

ಚಿತ್ರ್