ಹೊಲದೆಡೆಗೆ
ಕವನ
ಕಾರ್ಮುಗಿಲು ಕಪ್ಪಿಟ್ಟು ಕರಗುತಿರೆ ಮಳೆಯಾಗಿ
ನೆಲದೊಡಲು ಒಪ್ಪಾಗಿ ಹಸಿಮಣ್ಣು ಹದವಾಗಿ
ಧೋಯೆಂದು ಬಳಬಳನೆ ಸುರಿಯುತಿದೆ ಮಳೆಧಾರೆ
ನಾಟಿಯಿದೆ ಗದ್ದೆಯಲಿ ಬನ್ನಿರೇ ನಾರಿಯರೆ ॥
ಉತ್ಸಾಹ ಮೈಯಡರಿ ಉಲ್ಲಾಸ ಗರಿಗೆದರಿ
ಬೀಸುನಡೆ ಹೊಲದೆಡೆಗೆ ಗೊರಬೊಂದು ಬೆನ್ನೇರಿ
ಭೂತಾಯ ಮಡಿಲೊಳಗೆ ಬೆವರಾಗಿ ದುಡಿಯೋಣ
ಕಾಯಕವೆ ಕೈಲಾಸ ನುಡಿಮಾತ ನೆನೆಯೋಣ ॥
ಬೇಸಾಯ ಕೈಬೀಸಿ ಕರೆಯುತಿದೆ ರೈತರನು
ತಾ ದುಡಿದು ನೀಡುತಿಹ ಹಸಿದವಗೆ ಅನ್ನವನು
ಎಳೆದಷ್ಟು ಸಾಗದಿದು ಬದುಕಿನಾ ಸುಖತೇರು
ಬೆಳೆದಷ್ಟು ಉಳಿಯುವುದು ಹಸಿರೊಳಗಿನಾ ಬೇರು ॥
ನೀಲವ್ವ ಗಂಗವ್ವ ನಡೆಯಿರೇ ಹೊಲದೆಡೆಗೆ
ಮಾತಲ್ಲಿ ಮಲ್ಲವ್ವ ಹಾಡನುಡಿ ಜತಜತೆಗೆ
ಸರಸಕ್ಕ ಬಿಡುವಿರಸ ಮಾತಾಡು ಮಲ್ಲಿಗೆ
ಮೂರ್ನಾಲ್ಕು ದಿನಬಾಳು ಅಪರಿಚಿತರು ಇಲ್ಲಿಗೆ |
-ವಿಜಯಲಕ್ಷ್ಮೀ ಕಟೀಲು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
