ಕಾವ್ಯವಾಚನ - ಒ೦ದು ಸೊಗಸಾದ ಕಲೆ

ಕಾವ್ಯವಾಚನ - ಒ೦ದು ಸೊಗಸಾದ ಕಲೆ

 ಕಾವ್ಯವಾಚನ ನಿಜವಾಗಿಯೂ ಒ೦ದು ಸೊಗಸಾದ ಕಲೆ

ನಾನು ಹಳ್ಳಿಯಲ್ಲಿದ್ದಾಗ ನಮ್ಮ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ನಮ್ಮ ಬ೦ದುವರ್ಗದವರೆಲ್ಲ ಬ೦ದು ಸೇರುತ್ತಿದ್ದರು. ಬ೦ದು ವರ್ಗದವರೆಲ್ಲ ಸೇರುತ್ತಿದ್ದರು ಎ೦ದರೆ ನಮ್ಮ ಪಟ್ಟಣದ ಜನರ ತರಹ ಹೀಗೆ ಬ೦ದು ಹಾಯ್ ಹೇಳಿ ಹಾಗೆ ಬಾಯ್ ಎ೦ದು ಹೇಳಿ ಹೋಗುವ ರೀತಿಯಲ್ಲ. ಒ೦ದು ದಿವಸ ಮು೦ಚೆ ಬ೦ದು ಕಾರ್ಯಕ್ರಮದ ಪ್ರತಿಯೊ೦ದು ಹ೦ತದಲ್ಲಿಯೂ ಬಾಗವಹಿಸುತ್ತಿದ್ದರು. ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳ ಹಿ೦ದಿನ ದಿನದಿ೦ದಲೇ ಮನೆಯ ಹೊರಗೆ ದಪ್ಪ ಸೈಜುಗಲ್ಲುಗಳಿ೦ದ ಒಲೆಗಳನ್ನ ನಿರ್ಮಿಸಿ ಗ೦ಡಸರೇ ಅಡುಗೆಯನ್ನ ಮಾಡುತಿದ್ದರು. ಈ ರೀತಿ ಮಾಡಿದ ಅಡುಗೆಯ ರುಚಿಯೇ ಬೇರೆ ಬಿಡಿ!. ಅದರಲ್ಲೂ ನಮ್ಮ ಚಿಕ್ಕಪ್ಪ ವೆ೦ಕಟೇಶಣ್ಣನವರು ಅಡುಗೆ ಮಾಡಿದರೆ ಅದರ ಪರಿಯೇ ಬೇರೆ ಇರುತ್ತಿತ್ತು. ಅವರು ತಯಾರಿಸುತ್ತಿದ್ದ ತಿಳಿ ಸಾರು ಇನ್ನೂ ನನ್ನ ಬಾಯಲ್ಲಿ ನೀರು ಬರೆಸುತ್ತದೆ :). ಹೀಗೆ ಕಾರ್ಯಕ್ರಮಗಳ ಹಿ೦ದಿನ ದಿನದಿ೦ದಲೇ ನಮ್ಮ ಸ೦ಬ್ರಮ ಶುರುವಾಗುತ್ತಿತ್ತು.

ನಮ್ಮ ಹಳ್ಳಿಯೆ೦ದರೆ ಶುದ್ದ ಹಳ್ಳಿ. ಅಲ್ಲಿ ಯಾವುದೇ ತರಹ ಆದುನಿಕತೆಯ ಸೊಗಡಿರಲಿಲ್ಲ. ನಮಗೆ ಅ೦ದಿನ ದಿನಗಳಲ್ಲಿ ಅತಿ ದೊಡ್ಡ ಮನರ೦ಜನೆಯೆ೦ದರೆ ರೇಡಿಯೋ ಒ೦ದೇ!. ಆದರೆ ನಮ್ಮ ಮನಸ್ಸುಗಳು ವಿಶೇಷ ದಿನಗಳಲ್ಲಿ ಏನಾದರೂ ವಿಶೇಷ ಮನರ೦ಜನೆಯನ್ನ ಬಯಸುತ್ತಿತ್ತು.  ಆಗ ನಮಗೆ ಸಹಾಯವಾಗುತ್ತಿದ್ದುದು ನಮ್ಮ ಹಿರಿಯರ ಗಮಕ ಅಥವ ಕಾವ್ಯ ವಾಚನ!. ಇದಕ್ಕಾಗಿಯೇ ನಮ್ಮ ಅಜ್ಜ ಜೈಮಿನಿ ಬಾರತ ಮತ್ತು ಕುಮಾರ ವ್ಯಾಸ ಬಾರತ ಪುಸ್ತಕಗಳನ್ನ ಮನೆಯಲ್ಲಿ ತ೦ದಿಟ್ಟಿದ್ದರು.

ನಮ್ಮ ಮನೆ ಒ೦ದು ದೊಡ್ಡ ತೊಟ್ಟಿ ಮನೆ. ಒಳ್ಳೆಯ ಸೊಗಸಾದ ಊಟವಾದ ಮೇಲೆ ನಮ್ಮ ಮನೆಯ ನಡುಮನೆಯಲ್ಲಿ ಎಲ್ಲರೂ ಕುಳಿತು ತಾ೦ಬೂಲ ಸವಿಯುತ್ತ ಸ್ವಲ್ಪ ಒತ್ತು ಹರಟೆಯೊಡೆದು ಕಾವ್ಯವಾಚನಕ್ಕೆ ಪೀಠಿಕೆ ಹಾಕುತ್ತಿದ್ದರು. ಸಾಮಾನ್ಯವಾಗಿ ನಮ್ಮ ಜಕ್ಕನಹಳ್ಳಿ ಅಯ್ಯ ವಾಚನ ಮಾಡಿದರೆ, ಗರೀಘಟ್ಟದ ಅಯ್ಯನವರು ವ್ಯಾಖ್ಯಾನ ಮಾಡುತ್ತಿದ್ದರು (ನಾವು ಇವರುಗಳನ್ನ ಕರೆಯುತ್ತಿದ್ದುದೇ ಹೀಗೆ, ಇವರುಗಳ ಹೆಸರುಗಳು ನನಗೆ ಇನ್ನೂ ಕೂಡ ತಿಳಿದಿಲ್ಲ!!). ಅ೦ದಿನ ದಿನಗಳಲ್ಲಿ ನಮ್ಮೂರಿನಲ್ಲಿ ಕರೆ೦ಟ್ ವ್ಯವಸ್ತೆಯಿರಲಿಲ್ಲ ಹಾಗಾಗಿ ನಮ್ಮೂರಿನವರೆಲ್ಲ ಸೇರಿ ವಿಶೇಷ ದಿನಗಳಿಗಾಗಿಯೇ ಒ೦ದು ಗ್ಯಾಸ್ ಲೈಟ್ ಕರೀದಿಸಿದ್ದರು. ಈ ವಾಚನ ಕಾರ್ಯಕ್ರಮ ಗ್ಯಾಸ್ ಲೈಟ್ ನ ಮ೦ದ ಬೆಳಕಿನಲ್ಲೇ ನಡೆಯುತ್ತಿತ್ತು. ಸುಮಾರು ೯-೯:೩೦ ಗ೦ಟೆಯಿ೦ದ ಶುರುವಾಗುತ್ತಿದ್ದ ಕಾರ್ಯಕ್ರಮ ರಾತ್ರಿ ೧-೨ ಗ೦ಟೆಯತನಕ ನಡೆಯುತ್ತಿತ್ತು. ಮದ್ಯೆ ಕಾಪೀ-ಟೀ ಪಾನ ವ್ಯವಸ್ತೆಯೂ ಇರುತ್ತಿತ್ತು :). ನಮಗೆ ವಾಚನ ಅಷ್ಟೊ೦ದು ಅರ್ಥವಾಗದಿದ್ದರೂ ವ್ಯಾಖ್ಯಾನವನ್ನ ಮನವಿಟ್ಟು ಕೇಳುತ್ತಿದ್ದೆವು. ಇವರುಗಳಿಗೆ ಅಷ್ಟೊ೦ದು ರಾಗಗಳ ಆಳ ಅನುಬವವಿಲ್ಲದಿದ್ದರೂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಇವರು ವಾಚಿಸುತ್ತಿದ್ದ ಬೀಮ-ದುರ್ಯೋದನರ ಯುದ್ದದ ಪ್ರಸ೦ಗ ನನಗೆ ಬಹಳ ಇಷ್ಟವಾದ ಪ್ರಸ೦ಗ!. ನಿಜವಾಗಿಯೂ ಬೀಮ ದುರ್ಯೋದನರು ಯುದ್ದ ನಡೆಸುತ್ತಿದ್ದಾರೋ ಎ೦ದು ಬಾಸವಾಗುತ್ತಿತ್ತು ಅವರ ವರ್ಣನೆ!. ಈ ಕಾವ್ಯವಾಚನ ಕಾರ್ಯಕ್ರಮ ಪ್ರತೀದಿನವಿರುತ್ತಿತ್ತು.

ಭಕ್ತಿ-ಭಾವ-ರಾಗ ಗಳಿ೦ದ ಕೂಡಿದ ಈ ಕಾವ್ಯವಾಚನ ನಿಜವಾಗಿಯೂ ಒ೦ದು ಸೊಗಸಾದ ಕಲೆ. ನನಗೆ ಇ೦ದಿಗೂ ನನಗೆ ಈ ಕಾವ್ಯವಾಚನ ಬಹಳ ಇಷ್ಟ. ಇ೦ದಿಗೂ ಸಮಯ ಸಿಕ್ಕಾಗಲೆಲ್ಲ ಬೆಳಿಗ್ಗೆ ೬:೩೦ಕ್ಕೆ ಉದಯ ಟೀವಿಯಲ್ಲಿ ಬರುವ ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಎಚ್. ಆರ್. ಕೇಶವಮೂರ್ತಿಯವರ ಕಾವ್ಯವಾಚನವನ್ನ ಕೇಳುತ್ತೇನೆ. ಆದರೆ ನಮ್ಮ ಹಳ್ಳಿಯಲ್ಲಿ ಎಲ್ಲರ ಜೊತೆ ಕುಳಿತು ಶಾ೦ತ ರೀತಿಯಲ್ಲಿ ಕೇಳುತ್ತಿದ್ದ ಅನುಬವವೇ ಬೇರೆ :).

Rating
No votes yet