ಕೊಳಲನೂದುವ ಚದುರನಾರೇ ಪೇಳಮ್ಮ?
ಕೇಳ್ದವರ ಹಿಗ್ಗಿಸಿತು ನಾದದಲಿ
ವೇದಗಳ ಹೊಮ್ಮಿಸುತ
ಮರಗಿಡಗಳನೂ ನಲಿಸಿತು;
ಕಲ್ಲ ಕರಗಿಸಿತು ನೆರೆನಿಂತ
ಮಿಗಗಳ ಮೈಮರೆಸುತ
ತುರುಗಳಿಗೆ ಸಂತಸವೀಯಿತು;
ಗೋವಳರ ಸಡಗರಿಸಿ ಮತ್ತೆಲ್ಲ
ಮುನಿಗಳಿಗೆ ನೆಮ್ಮದಿ ತರುತ
ಸಪ್ತ ಸ್ವರಗಳನೆಲ್ಲೆಲ್ಲು ಹರಡಿತು;
ಆ ಮಗುವಿನ ಕೊಳಲ ಉಲಿ
ಸ್ಲಕಲ ಲೋಕಗಳನೂ ಗೆಲ್ಲುತಲಿ
ಓಂಕಾರದೊಳಹುರುಳ ಸಾರಿತು!
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತದ ಶ್ಲೋಕ 2-110):
ಲೋಕಾನುನ್ಮುದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದಮಾನಂದಯನ್ |
ಗೋಪಾನ್ಸಂಭ್ರಮಯನ್ ಮುನೀನ್ ಮುಕುಲಯನ್ ಸಪ್ತಸ್ವರಾನ್ಜೃಂಭಯನ್
ಓಂಕಾರಾರ್ಥಮುದೀರಯನ್ವಿಜಯತೇ ವಂಶೀನಿನಾದಃ ಶಿಶೋಃ ||
-ಹಂಸಾನಂದಿ
ಕೊ: ಕೊಳಲನೂದುವ ಚದುರನಾರೇ ಪೇಳಮ್ಮ ಎನ್ನುವುದು ವ್ಯಾಸರಾಯರ ಒಂದು ಜನಪ್ರಿಯ ಪದ
ಕೊ.ಕೊ: ಮೂಲದ ಲಾಲಿತ್ಯ ಕನ್ನಡ ದಲ್ಲಿ ಮಾಯವಾಗಿದ್ದರೂ, ಅದರ ಅರ್ಥವನ್ನು ಆದಷ್ಟೂ ಸರಳವಾಗಿ ತರಲು ಒಂದು ಪ್ರಯತ್ನ ಮಾಡಿರುವೆ ಅಷ್ಟೆ. ಕೃಷ್ಣ ಹುಟ್ಟಿದ ಶ್ರಾವಣ ಕೃಷ್ಣ ಅಷ್ಟಮಿ ಬರುವ ಮುನ್ನ ಈ ಅನುವಾದ ಮಾಡಿದ ಹಿಗ್ಗು ನನಗಿದೆ.
ಕೊ.ಕೊ.ಕೊ: ಕೃಷ್ಣನ ಕೊಳಲು ಕಲ್ಲನ್ನೂ ಕರಗಿಸಬಲ್ಲುದಂತೆ. ಅಂತೆಯೇ ಬಾಲಮುರಳಿಕೃಷ್ಭ ಅವರ ಹಾಡುಗಾರಿಕೆಯೂ ಅಂದರೆ ಹೆಚ್ಚೇನಿಲ್ಲ. ಕೃಷ್ಣ ಕರ್ಣಾಮೃತದ ಈ ಶ್ಲೋಕ, ನಂತರ ಕನಕ ದಾಸರ ಒಂದು ದೇವರ ನಾಮವನ್ನು ಇಲ್ಲಿ ಕೇಳಿ ಈ ವರ್ಷದ ಕೃಷ್ಣಾಷ್ಟಮಿಯ ಸಂತಸದಲ್ಲಿ!
Rating