ನವರಾತ್ರಿಯ ನಾಲ್ಕನೇ ದಿನ

ನವರಾತ್ರಿಯ ನಾಲ್ಕನೇ ದಿನ

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ ಸಿಕ್ಕಿತು ನನಗೆ- ಹಾಗಾಗಿ ನನ್ನ ಬರೀ ಮಾತುಗಳಲ್ಲೂ ಸ್ವಲ್ಪ ಅರ್ಥ ಕೂಡಿದಂತಾಯಿತು ನನಗೆ. ನನ್ನ ಬಾಲ್ಯದಲ್ಲಿ, ನನ್ನ ಊರಿನಲ್ಲಿ ನಡೆಯುತ್ತಿದ್ದ ನವರಾತ್ರಿ-ಗಣೇಶೋತ್ಸವದ ನೆನಪು ಮರುಕಳಿಸಿತು.

ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಇವರು ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.

ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.

ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ.

ಈಗ ಇವತ್ತು ನವರಾತ್ರಿಯ ನಾಲ್ಕನೇ ದಿನ ಕೇಳಿ. ಜಿ.ಎನ್.ಬಿ. ಅವರು ರಚಿಸಿದ, ಅಮೃತಬೇಹಾಗ್ ರಾಗದ ಕಮಲಚರಣೇ ಕನಕಾರುಣೇ ಎಂಬ ಕೃತಿ. ಹಾಡಿರುವವರು ಜಿ.ಎನ್.ಬಿ. ಪರಂಪರೆಯ ಹಾಡುಗಾರ್ತಿಯರಾದ ಪ್ರಿಯ ಸಹೋದರಿಯರು:ಷಣ್ಮುಖಪ್ರಿಯ ಮತ್ತು ಹರಿಪ್ರಿಯ.

ಅಮೃತಬೇಹಾಗ್ ರಾಗ ಜಿ.ಎನ್.ಬಿ. ಅವರ ಹೊಸ ಕಲ್ಪನೆಯೇ. ಆ ಮೊದಲೇ ಪ್ರಸಿದ್ಧವಾಗಿದ್ದ ಅಮೃತ ವರ್ಷಿಣಿ ಮತ್ತು ಬೇಹಾಗ್ ರಾಗಗಳಿಂದ ಕೆಲವು ಅಂಶಗಳನ್ನು ಹೆಕ್ಕಿ ತೆಗೆದುಕೊಂಡು, ಈ ರಾಗಕ್ಕೊಂದು ರೂಪಕೊಟ್ಟಿದ್ದಾರೆ. ರಾಗದ ಸ್ವರೂಪ ತಿಳಿಯುವಂತಹ ಉತ್ತಮ ಚಿಟ್ಟೆಸ್ವರವನ್ನೂ ಹೊಸೆದಿದ್ದಾರೆ.

ಕೃತಿಯ ಸಾಹಿತ್ಯ ಸಂಸ್ಕೃತದಲ್ಲಿದೆ. ಕೊನೆಯ ಸಾಲಿನಲ್ಲಿ ಬರುವ ವಿಮರ್ಶಾನಂದ ಎಂಬುದು ಜಿ.ಎನ್.ಬಿ. ಅವರ ಅಂಕಿತ.

-ಹಂಸಾನಂದಿ

Rating
No votes yet