ಉರುವಲು

ಉರುವಲು

ಉರುವಲು ಮನುಷ್ಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಅಡಿಗೆ ಬೆಯಿಸಿಕೊಳ್ಳುವುದರಿಂದ ಪ್ರಾರಂಭವಾಗಿ ಹಬೆ ನೀರಿನ ಸ್ನಾನದವರೆಗೂ ಉರುವಲಿನ ಅಗತ್ಯ ವರ್ಣಿಸಲಸದಳ. ಉಳ್ಳವರು ಉರಿಗಾಗಿ ಗ್ಯಾಸ್,ಗೋಬರ್ ಗ್ಯಾಸ್, ಮುಂತಾದ ಹಣ ತೆತ್ತುವ ಮಾರ್ಗವನ್ನು ಬಳಸಿದರೆ ರೈತಾಪಿ ಜನರು ಇಂದಿಗೂ ಮರಮುಟ್ಟುಗಳಿಗೆ ಮೊರೆ ಹೋಗುವುದು ಅನಿವಾರ್ಯ. ಹಣ ಉಳಿತಾಯದ ಪರಿ ಒಂದೆಡೆಯಾದರೆ ಸುಲಭಕ್ಕೆ  ಸಿಗುವ ದಾರಿ ಇನ್ನೊಂದೆಡೆ. ಉರುವಲಿಗಾಗಿ ಮರಮುಟ್ಟುಗಳನ್ನು ಸಂಗ್ರಹಿಸುವ ರೀತಿ ಹಲವಾರು ಬಗೆಯದು ಅಂತಹ ವ್ಯವ್ಸ್ಥೆಯಲ್ಲಿ ಇದೂ ಒಂದು.
 ಮಲೆನಾಡಿನ ಸೆರಗಿನಲ್ಲಿ ಹರಿಯುವ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ಕಟ್ಟಿದ ಪರಿಣಾಮ ಹಿನ್ನೀರು ಶೇಖರಣೆಯಾಗಿದೆ. ಹಿನ್ನೀರಿನ ನಡುವೆ ಹೇರಳ ಕಾಡಿನ ನಡುಗುಡ್ಡಗಳು ಹಲವಾರು ಇವೆ. ನೀರಿನ ತಟದಲ್ಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಮರತ್ತೂರು ಹುಣಸೂರು ಮುಂತಾದ ಹತ್ತಾರು ಹಳ್ಳಿಯ ಜನರು ಲಿಂಗನಮಕ್ಕಿಯ ಆಣೆಕಟ್ಟಿನ ಹಿನ್ನೀರ ಕಾಡನ್ನು ತಮ್ಮ ವರ್ಷದ ಉರುವಲಿಗಾಗಿ ಅವಲಂಬಿಸುತ್ತಾರೆ. ಅವರು ಕಟ್ಟಿಗೆ ಸಂಗ್ರಹಿಸಿ ತರುವ ಪರಿ ಎಂಥಹವರನ್ನೂ ಒಮ್ಮೆ ಬೆಚ್ಚಿಬೀಳಿಸುತ್ತದೆ.
 ಊರಿನಲ್ಲಿ  ರೈತರು ಮೂರ್ನಾಲ್ಕು ಜನ ಸೇರಿ  ವಾರಕ್ಕಾಗುವ   ಆಹಾರ ಕಟ್ಟಿಕೊಂಡು ಹಿನ್ನೀರಿನ ನಡುಗುಡ್ಡೆ ಸೇರುತ್ತಾರೆ. ಅಲ್ಲಿ ಒಣಗಿದ ಮರದ ದಿಮ್ಮಿಗಳನ್ನು ಕಡಿದು ಒಂದೆಡೆ ಗುಡ್ಡೆ ಹಾಕುತ್ತಾರೆ. ಸಾಕಷ್ಟು ಉರುವಲು ಸಂಗ್ರಹವಾಯಿತು ಎಂದಾಗ  ನೀರಿನಲ್ಲಿ  ಒಂದೊಂದೇ  ದಿಮ್ಮಿಗಳನ್ನು ಹಾಕಿ ಮರದ ಬಳ್ಳಿಯಿಂದ ಕಟ್ಟುತ್ತಾರೆ. ಹೀಗೆ ಒಂದರ ಮೇಲೆ ಒಂದು  ಒಣಗಿದ ಮರ ಇಟ್ಟಾಗ  ತೆಪ್ಪ  ಕಂ ಕಟ್ಟಿಗೆ ಲೋಡ್ ತಯಾರು. ಅಲ್ಲಿಯೇ  ಮರದ ಹುಟ್ಟು ತಯಾರಿಸಿ  ಊರಿನತ್ತ  ಹುಟ್ಟುಹಾಕುತ್ತಾರೆ. ಸಂಜೆ ಹೊತ್ತಿಗೆ  ವರ್ಷಕ್ಕಾಗುವಷ್ಟು ಕಟ್ಟಿಗೆಯೊಂದಿಗೆ ತಟದ ಸಮೀಪದ  ಊರಿಗೆ ಮರಳುತ್ತಾರೆ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಕಟ್ಟಿಗೆ ಸುಮಾರು ಎರಡು ಲಾರಿ ಲೋಡ್ ನಷ್ಟಿದೆ. ಶೇಕಡಾ ಇಪ್ಪತ್ತರಷ್ಟು ಮೇಲ್ಬಾಗದಲ್ಲಿ ಕಾಣಿಸುತ್ತಿದ್ದರೆ  ಇನ್ನುಳಿದ ಎಂಬತ್ತರಷ್ಟು ನೀರಿನಲ್ಲಿ  ಮುಳುಗಿದೆ.

Rating
No votes yet

Comments