ಮಳೆಗಾಲದ ಸೈಕಲ್ ಸವಾರಿ

ಮಳೆಗಾಲದ ಸೈಕಲ್ ಸವಾರಿ

ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್ಛ ಹವೆ, ತೋಯ್ದ ಮರಗಳು ಐಪಾಡ್ ಕಿವಿಯಲ್ಲಿ "ಎಲ್ಲೋ ಮಳೆಯಾಗಿದೆಯೆಂದು" ಹಾಡು ಕೇಳಿಸುತಿತ್ತು. ಊರಿನವರೆಗೂ ಟಿಕೇಟ್ ಕೊಂಡಿದ್ದರೂ, ಈಗಲೇ ಊರಿಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆ ಎದ್ದಿತು. ತಡಮಾಡಲಿಲ್ಲ, ಎದ್ದು ಡ್ರೈವರ್ ಬಳಿ ಬಸ್ ನಿಲ್ಲಿಸಲು ಹೇಳಿ ಅಲ್ಲಿಯೇ ಇಳಿದುಕೊಂಡೆ. ಕೊಡೆಯಿಲ್ಲ, ರೈನು ಕೋಟಿಲ್ಲ, ಮಳೆಯಲ್ಲೇ ನೆನೆಯುತ್ತಾ ಘಾಟಿ ಇಳಿಯತೊಡಗಿದೆ. ಕತ್ತಲಾಗದೇ, ಹೊಟ್ಟೆಗೆ ಏನಾದರೂ ಸಿಕ್ಕಿದ್ದರೆ ಜೀವನದ ಕೊನೆಯವರೆಗೂ ಹಾಗೆಯೇ ನಡೆಯುತ್ತಿದೆನೇನೋ. ಹಾಗಾಗಲಿಲ್ಲ, ಸಿಕ್ಕ ಲಾರಿಯೊಂದನ್ನು ಹತ್ತಿಕೊಂಡು ಕುಕ್ಕೆ ಸುಬ್ರಮಣ್ಯ ತಲುಪಿದೆ. ಕುಮಾರಧಾರೆ ಸೇತುವೆ ಮೀರಿ ಹರಿಯುತ್ತಿತ್ತು, ಕರಾವಳಿಯ ಧಾರಾಕಾರ ಮಳೆ, ಮಲೆನಾಡ ಹಸಿರು. ದೇವಸ್ಥಾನಕ್ಕೂ ಹೋಗದೆ ರಥ ಬೀದಿ, ಹೊಳೆಯ ಬದಿ ಒಬ್ಬನೇ ತಿರುಗಾಡಿಕೊಂಡು, ರಾತ್ರಿ ರೂಮನ್ನು ಬಾಡಿಗೆಗೆ ಕೊಂಡು ಬೆಳೆಗೆದ್ದು ಮನೆಗೆ ಹೊರಟೆ..

ಮೊನ್ನೆ ಮಲೆನಾಡ ಪ್ರವಾಸ ಕೈಗೊಂಡಾಗಲೂ ಇದೇ ಆಗಿದ್ದು. ಜೋಗ ನೋಡಿದ ನಂತರ ನಾವು ಹೋಗಬೇಕಾಗಿದ್ದುದು ಯಾವುದೋ ಮಠವನ್ನು ನೋಡಲು, ಸುಮಾರು ೨ ಗಂಟೆ ವಾಹನದಲ್ಲಿ ಕುಳಿತು ಪಯಣ. ಹಾಗೇ ಸಾಗುತ್ತಾ ಇದ್ದಾಗ ವಿಶಾಲವಾದ ಗದ್ದೆಬಯಲು ಎದುರಾಯಿತು. ಈಗಷ್ಟೆ ನೆಟ್ಟಿ ಮಾಡಿದ್ದು, ಹಚ್ಚ ಹಸುರು. ಕ್ಯಾಬ್ ನಿಲ್ಲಿಸಲು ಹೇಳಿ ಕೂಡಲೇ ಕೆಳಗಿಳಿದೆ. ರಾಜ ಮಾರ್ಗದ ಮಗ್ಗುಲಲ್ಲಿ ಕಿರಿದಾದ ರಸ್ತೆ, ಅಕ್ಕ ಪಕ್ಕದಲ್ಲಿ ಗದ್ದೆ, ಡೊಂಕಾದ ರಸ್ತೆಯ ದೂರದಲ್ಲಿ ಸೈಕಲ್ ಸವಾರ. ನಾನು ಫೋಟೋ ತೆಗೆಯುವುದರೊಳಗೆ ಆತ ಮುಂದೆ ಹೋಗಬಹುದೆಂದು ಓಡತೊಡಗಿದೆ. ಇನ್ನೇನು ಹತ್ತಿರ ಬಂದೆ, ಅಷ್ಟರಲ್ಲಿ ಆತ ಹೋಗಿಯಾಗಿತ್ತು. ಹಿಂದೆ ನೋಡಿದೆ, ಮಿತ್ರ ಅನಿಲ್ ಹಿಂಬಾಲಿಸುತ್ತಿದ್ದನು. ಅವನ ಮುಖ ನೋಡಿ, "ಹೋಗ್ಬೇಕಾ ಮಠಕ್ಕೆ?" ಕೇಳಿದೆ. ಆತನಿಗೂ ಸ್ಥಳ ಹಿಡಿಸಿದ್ದರಿಂದ ಹಳ್ಳಿಯ ದಾರಿ, ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ರೈತರೊಂದಿಗೆ ಮಾತಿಗಿಳಿಯುತ್ತಾ, ನನಗೆ ಬೇಕಾದ ಚಿತ್ರ ತೆಗೆಯುತ್ತಾ ಸಂತೋಷವಾಗಿದ್ದೆ. ಉಳಿದವರು ತಮ್ಮ ಪ್ರಯಾಣ ಮುಂದುವರೆಸಿದರು. ಹಾಗೆಯೇ ಕೆಳಗಿನವು ನಾ ಸೆರೆಹಿಡಿದ ಸೈಕಲ್ ಚಿತ್ರಗಳು.

ಮಳೆಯಲ್ಲಿ ತೋಯ್ದ ಸೈಕಲ್
BICYCLE PARKING

ಡಬ್ಬಲ್ ರೈಡಿನ ಮಜಾ
BICYCLE DOUBLE RIDE

ಮೋಡವನ್ನು ಹಿಂಬಾಲಿಸಿ
Chase the cloud

ಪರಿಸರ ಸ್ನೇಹಿ ವಾಹನ
CYCLIST

"If we admit that human life can be ruled by reason, then all possibility of life is destroyed." — Leo Tolstoy

Rating
No votes yet

Comments