ಸಿಟ್ಟು ಬಂದಾಗ ಮೌನವೇ ಒಳ್ಳೆಯದು

ಸಿಟ್ಟು ಬಂದಾಗ ಮೌನವೇ ಒಳ್ಳೆಯದು

ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು ಬರುವುದರಿಂದ ಯಾರೋ ತೆಗೆದುಕೊಂಡು ಹೋಗಿರಬೇಕು, ಹೋಗಲಿ ಬಿಡು ಎಂದು ಮಡದಿಗೆ ತಿಳಿಸಿದೆ. ನಿಮಗೆ ದುಡ್ಡು ಹೆಚ್ಚಾಗಿದೆ ಅದಕ್ಕೆ ನೀವು ಹಾಗೆ ಹೇಳ್ತೀರಾ ಅಂದು ಮಂಚದ ಅಡಿಯಲ್ಲಿ, ಸೋಫಾದ ಅಡಯಲ್ಲಿ ಶೋಧದ ಕಾರ್ಯ ಮುಂದುವರೆಸಿದ್ದಳು. ಇದರ ಮಧ್ಯೆ ನನ್ನ ಚಿಕ್ಕ ಮಗಳು ಅಲ್ಲಿದೆ, ಇಲ್ಲಿದೆ ಎನ್ನುತ್ತಿದ್ದಳು. ಅವಳು ಹೇಳಿದ ಕಡೆಯೆಲ್ಲಾ ನೋಡಿದ್ದಾಯಿತು. ಅಂತೂ ಎಲ್ಲೂ ಸಿಗಲಿಲ್ಲ. ಹೋಗಲಿ ಮತ್ತೊಂದು ಸೆಟ್ ಹಾಗೂ ಹಳೇ ನಂಬರ್ ನೀಡುವಂತೆ ಏರ್ ಟೆಲ್ ಕಂಪೆನಿಯವರಿಗೆ ಹೇಳಿ ಎಂದಿನಂತೆ ನನ್ನ ಕಾರ್ಯದಲ್ಲಿ ತೊಡಗಿಕೊಂಡೆ.

ನಮ್ಮದು ವಟಾರದ ಮನೆ. ಚಿಕ್ಕಪ್ಪ, ದೊಡ್ಡಪ್ಪ ಎಲ್ಲಾ ಅಕ್ಕಪಕ್ಕದಲ್ಲಿಯೇ ಇದ್ದಾರೆ. ನನ್ನ ದೊಡ್ಡಪ್ಪನ ಮೊಮ್ಮಗ 8ನೇ ಕ್ಲಾಸ್ ಓದುತ್ತಿದ್ದಾನೆ. ಒಂದು ದಿನ ಸಂಜೆ ಅವನು ಸಂತೆ ಮೈದಾನದಲ್ಲಿ ಹಲವು ಹುಡುಗರ ಜೊತೆ ಸೈಕಲ್ ಹಿಡಿದುಕೊಂಡು ಮಾತನಾಡುತ್ತಿದ್ದುದನ್ನು ನೋಡಿದೆ. ಅಷ್ಟೊತ್ತಿಗೆ ಅಲ್ಲಿ ಬೇರೆ ಬೇರೆ ಘಟನೆಗಳು ನಡೆಯುವುದರಿಂದ ದೊಡ್ಡವರೇ ಹೋಗಲು ಸ್ವಲ್ಪ ಹಿಂಜರಿಯುತ್ತಾರೆ. ಅಂತಹುದರಲ್ಲಿ ಇವನು ಯಾಕೆ ನಿಂತಿದ್ದಾನೆ ಎನ್ನುವ ಅನುಮಾನ ಬಂತು. ಮಾರನೆಯ ದಿನ ಬೆಳಗ್ಗೆ ಅವನನ್ನ ಕರೆದು ಸಂಜೆ ಏನೋ ಸಂತೆ ಮೈದಾನದಲ್ಲಿ ಮಾಡುತ್ತಿದ್ದೆ ಎಂದು ಗದರಿಸಿದೆ. ಅದಕ್ಕೆ ಅವನಿಂದ ಸಕಾರಾತ್ಮಕ ಉತ್ತರ ಬರಲಿಲ್ಲ.  ನಮ್ಮನೆ ಮೊಬೈಲ್ ನೀನೆ ಅಂತೆ ತೆಗೆದುಕೊಂಡು ಹೋಗಿರುವುದು. ನಿನ್ನ ಸ್ನೇಹಿತ ನನಗೆ ಎಲ್ಲಾ ಹೇಳಿದ್ದಾನೆ ಎಂದು ತಮಾಷೆ ಮಾಡಿದೆ. ತಕ್ಷಣವೇ ಅವನ ಮುಖಚಹರೆ ಬದಲಾಯಿತು. ಹಾಗಾದರೆ ಇವನಿಂದಲೇ ಮೊಬೈಲ್ ಎಲ್ಲೋ ಹೋಗಿದೆ ಎನ್ನುವ ಯೋಚನೆಗಳು ಆರಂಭವಾಗಲು ಪ್ರಾರಂಭವಾಯಿತು. ಯಾರಿಗೂ ಹೇಳಲಿಲ್ಲ. ರಾದ್ದಾಂತವಾಗುತ್ತದೆ ಎನ್ನುವ ಕಾರಣಕ್ಕೆ.

ಅವನ ಸ್ನೇಹಿತರ ಶಾಲೆಗಳಿಗೆ ಹೋಗಿ ಇಬ್ಬರನ್ನು ಬೆದರಿಸಿ ಪೊಲೀಸ್ ಗೆ ಕಂಪ್ಲೇಟ್ ನಿಡುತ್ತೇನೆ ಎಂದೆ. ಅಣ್ಣಾ ನಾವಲ್ಲಾ ಕದ್ದಿರುವುದು ಮತ್ತೊಬ್ಬ ಮಧು ಅಂತಾ ಇದಾನೆ, ಅವನು ಅಂದ್ರು. ಮಧು ಮನೆಗೆ ಹೋದೆ. ಅದನ್ನು ಮತ್ತೊಬ್ಬ ತೆಗೆದುಕೊಂಡು ಹೋಗಿದ್ದಾನೆ ಅಂದ. ಸರಿ ಹೀಗೆ ಹತ್ತು ಮನೆ ತಿರುಗಿದ ಮೇಲೆ ಕಡೆಯ ಹುಡುಗ ನಮ್ಮ ಮನೇಲ್ಲಿ ಇದೆ. ಆದರೆ ಅದನ್ನು ನಿಮ್ಮ ಹುಡುಗ  ತಂದು ಕೊಟ್ಟಿದ್ದಾನೆ ಎಂದ.

ತೆಗೆದುಕೊಂಡು ಬಾ ಅಂದೆ. ನೋಡಿದ್ರೆ ನಮ್ಮ ಮನೇ ಮೊಬೈಲ್ ಗಳು. ಆಶ್ಚರ್ಯವಾಯಿತು. ಎಲ್ಲಾ ಸ್ಕ್ರಾಚ್ ಮಾಡಿ, ಬ್ಯಾಟರಿ ಹಾಳು ಮಾಡಿದ್ರು. ಸಿಮ್ ಬಿಸಾಕಿದ್ರು. ನಿಮಗೆಲ್ಲಾ ಪೊಲೀಸ್ ಗೆ ಕೊಡ್ತೀನಿ ಅಂತಿದ್ದಾಗೆನೇ ಕಾಲು ಹಿಡಿದು ಅಣ್ಣಾ ಇನ್ನು ಮೇಲೆ ತಪ್ಪು ಮಾಡುವುದಿಲ್ಲ ಎಂದು ಬೇಡಿ ಕೊಂಡರು. ನೀವಿನ್ನೂ ಚಿಕ್ಕ ಹುಡುಗರು ಹೀಗೆಲ್ಲಾ ಮಾಡಿದರೆ ನಿಮ್ಮ ಜೀವನವೇ ಹಾಳಾಗುತ್ತದೆ. ಪುಸ್ತಕ, ಪೆನ್ನು ಬೇಕಾದರೆ ಹೇಳಿ ನಾನೇ ಕೊಡಿಸುತ್ತೇನೆಂದು ಹೇಳಿ ಅಲ್ಲಿಂದ ಸೀದಾ ನನ್ನ ದೊಡ್ಡಪ್ಪನ ಮೊಮ್ಮಗನ ಶಾಲೆಗೆ ಮೊಬೈಲ್ ತೆಗೆದುಕೊಂಡೇ ಹೋದೆ.

ಏಕಾಏಕಿ ಶಾಲೆಗೆ ಹೋದವನೇ ಅವನನ್ನ ಹೊರ ಕರೆದು. ನಿಧಾನವಾಗಿ ನೀನು ಮೊಬೈಲ್ ಕದ್ದಿದ್ದರೆ ಹೇಳು. ನೀನು ನನ್ನ ಮಗನಿದ್ದ ಹಾಗೆ. ಹಾಗೆಲ್ಲಾ ಮಾಡಬಾರದು ಅಂದೆ. ಮತ್ತದೇ ಸುಳ್ಳು ಹೇಳಿದ. ಸಿಟ್ಟು ತಡೆಯಲಾಗಲೇ ಇಲ್ಲ. ಕೆನ್ನೆಗೆ ಒಂದು ನಿಧಾನವಾಗಿ ಹೊಡೆದೆ. ನಡುಗಲು ಆರಂಭಿಸಿದ. ತಕ್ಷಣವೇ ತಪ್ಪನ್ನು ಒಪ್ಪಿಕೊಂಡ. ನಿಮ್ಮ ಮನೆಯಲ್ಲಿ ಪೇಪರ್ ಬಂಡಲ್ ಕಟ್ಟಲು ಬಂದಾಗ ತೆಗೆದುಕೊಂಡು ಹೋಗಿದ್ದೇ ಅಂತಾ, ಗೇಮ್ಸ್ ಆಡುವುದಕ್ಕೋಸ್ಕರ ಕದ್ದಿರುವುದು ಎಂದು ತಪ್ಪು ಒಪ್ಪಿಕೊಂಡ. ಅಷ್ಟರಲ್ಲಾಗಲೇ ನನ್ನ ಸುತ್ತ ಶಾಲೆಯ ಶಿಕ್ಷಕರು ಮತ್ತುವರೆದಿದ್ದರು. ಸುರೇಶ್ ಯಾವತ್ತು ನೀವು ದುಡುಕುವರಲ್ಲ. ಯಾಕೆ ಏಕಾಏಕಿ ಸಿಟ್ಟಾದಿರಿ ಎಂದು. ಇವರ ಮನೆಯಲ್ಲಿ ಸಾಕಷ್ಟು ಬಡತನವಿದೆ. ಒಬ್ಬನೇ ಮಗ ಬೇರೆ, ಇವನು ಕಳ್ಳತನಕ್ಕೆ ಇಳಿದರೆ ಮನೆಗೆ ಕೆಟ್ಟು ಹೆಸರು ಬರುವುದಲ್ಲದೆ, ಇವನ ಜೀವನವೇ ಹಾಳಾಗುತ್ತದಲ್ಲಾ ಎಂದು ಈ ರೀತಿ ಮಾಡಿದೆ ಎಂದು ಹೇಳಿದೆನಾದರೂ ಯಾಕೆ ಕೈ ಮಾಡಿದೆ ಎನ್ನುವ ಪ್ರಶ್ನೆ ಒಳಗೆ ಕಾಡುತ್ತಲೇ ಇತ್ತು.ನನ್ನಲ್ಲಿ ಕಣ್ಣಲ್ಲಿ ನೀರು ತುಂಬಿತ್ತು. ಹೊಡೆಯಲು ನಾನ್ಯಾರು.

ತಕ್ಷಣ ಅವನನ್ನು ಶಾಲೆಯ ಕೊಠಡಿಯೊಳಗೆ ಕರೆದೊಯ್ದು. ಇವರ ಚಿಕ್ಕಪ್ಪನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಹೋಗು ಎಂದರೆ ಇಲ್ಲಿಗೆ ಬಂದಿದ್ದಾನೆ ಎನ್ನುವ ಕಾರಣಕ್ಕೆ ಅವನನ್ನು ಗದರಿಸಿದೆ ಎಂದು ಆತನ ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಸಿದೆ. ಕಾರಣ ನಾಳೆ ಶಾಲೆಯಲ್ಲಿ ಯಾವುದೇ ಕಳ್ಳತನವಾದರೂ ಇವನ ಮೇಲೆ ಬರಬಾರದು ಎನ್ನುವ ಕಾರಣಕ್ಕೆ. ಹಾಗೇ ಶಿಕ್ಷಕರಿಗೆ ಗೊತ್ತಿಲ್ಲದೆ ಮಾಡಿದ್ದಾನೆ. ನಮ್ಮದು ತಪ್ಪಿದೆ. ಇದನ್ನು ಬೆಳಸಬೇಡಿ ಎಂದು ಮನವಿ ಮಾಡಿದೆ.

ನಂತರ ಮನೆಗೆ ಬಂದು ಮಡದಿಗೆ ಮೊಬೈಲ್ ಸೆಟ್ ಗಳನ್ನು ಕೊಟ್ಟೆ. ಖುಷಿಯಾದಳು. ಹಾಗೇ ನಡೆದ ಘಟನೆ ತಿಳಿಸಿದೆ. ಯಾಕೆ ಹೊಡೆಯೋಕ್ಕೆ ಹೋದ್ರಿ, ಅವನು ಅವಮನಾಕ್ಕೆ ಏನಾದ್ರೂ ಮಾಡಿಕೊಂಡರೆ ಅಂದ್ಲು. ಮನಸ್ಸು ತಡೆಯಲಾಗಲಿಲ್ಲ ಮತ್ತೆ ಶಾಲೆಗೆ ಹೋಗಿ ಅವನನ್ನು ಮನೆಗೆ ಕರೆದುಕೊಂಡು ಬಂದು ದೇವರಿಗೆ ಅವರ ಅಮ್ಮನಿಗೆ ನಮಸ್ಕಾರ ಮಾಡಿಸಿ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಹೇಳಿಸಿದೆ. ಆದರೆ ಅವನಿಗೆ ಹೊಡೆದದ್ದೂ ಇನ್ನೂ ನನ್ನನ್ನ ಕಾಡುತ್ತಲೇ ಇದೆ. ತಿಳಿದಂತನವಾಗಿ ಈ ರೀತಿ ಮಾಡಿದನಲ್ಲಾ ಎಂದು. ದುಡುಕಬಾರದಿತ್ತು. ಮೊಬೈಲ್ ಹೋದರೆ ಮತ್ತೊಂದು ಸಿಗುತ್ತದೆ. ಅಕಸ್ಮಾತ್ ಅವನು ಏನಾದರೂ ಮಾಡಿಕೊಂಡಿದ್ದರೆ ಸಾಯುವ ತನಕ ನನ್ನನ್ನು ಕಾಡುತ್ತಲೇ ಇರುತ್ತಿತ್ತು. ಎಂತಹ ಪ್ರಮಾದವಾಗುತ್ತಿತ್ತಲ್ಲಾ ಎನ್ನಿಸಿರುತ್ತದೆ. ಇದೀಗ ಸಿಟ್ಟು ಬಂದರೆ ಕೆಲಕಾಲ ಸುಮ್ಮನೆ ಕೂತು ಬಿಡುತ್ತೇನೆ. ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡರೆ ಮತ್ತೆ ಬರುತ್ತದೆಯೇ ಎನ್ನುವ ಗಾದೆ ಜ್ಞಾಪಕ ಬಂದಿದ್ದು ಅಂತೂ ಸುಳ್ಳಲ್ಲ.

Rating
No votes yet

Comments