ಸೀರೆಯಲ್ಲಿರುವ ನೀರೆ ....

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.

ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ.

ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ.

ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್ದು ಬಂದು ಅಪ್ಪ ರಮೇಶ್ - ಸುರೇಶ್ (ಫೈವ್ ಸ್ಟಾರ್) ಜಾಹೀರಾತು ಮಾಡೋಣ ಬಾ ಎಂದ. ನಾನು ರಮೇಶ್ ಎಂದರೆ, ಅವನು ಸುರೇಶ್ ಅನ್ನುತ್ತಾನೆ. ನಾನು ರಮೇಶ್ ಎಂದೆ, ಅವ ತೊದಲಿ ತುರೇಶ್ ಎಂದು ಅಪ್ಪಿಕೊಂಡ. ನನ್ನ ಮಡದಿ ಗಹ ಗಹಿಸಿ ನಗುತ್ತಾ, ತುರೇಶ್ ಅಲ್ಲ ಕಣೋ ಅದು ಸುರೇಶ್ ಎಂದಳು. ಅವಳು ಸುರೇಶ್ ಎಂದರೂ, ನನಗೆ ಅದೇಕೋ "ಸೀರೆ ತಾ" ಅಂದ ಹಾಗೆ ಕೇಳಿಸೋದು.

ಹೋಗುವ ಸಮಯದಲ್ಲಿ "ಬೇರೆ ಬಾಡಿಗೆ ಮನೆ ನೋಡಿ" ಎಂದು ಹೇಳಿದಳು. ಈಗ ಇರುವ ಮನೆಗೆ ಏನು? ಆಗಿದೆಯೇ ಎಂದೆ. ಬಾತ್‌ರೂಮ್ ಮತ್ತು ಟಾಯ್ಲೆಟ್ ಒಂದೇ ಕಡೆ ಇದೆ ಅಲ್ಲ ಎಂದಳು. ಅದಕ್ಕೆನೀಗ ಎಂದೆ. ಎರಡು ಒಂದ ಕಡೆ ಇದ್ದರೆ ತೊಂದರೆ ಆಗುವದಿಲ್ಲವ ಎಂದಳು. ಮತ್ತೆ ವಾಸ್ತು ಚೆನ್ನಾಗಿ ಇದೆಯಲ್ಲ ಎಂದೆ. ವಾಸ್ತು ಇದೆ, ಎಂದು ಮನೆಯಲ್ಲಿ ಇದ್ದರೆ ಮನೆ ಹವಾಮಾನ ಕೆಡುತ್ತೆ ಎಂದಳು. ಇಬ್ಬರು ನಕ್ಕೆವು. ನಮ್ಮಿಬ್ಬರನ್ನೂ ನೋಡಿ ನಮ್ಮ ಮಗ ಕೂಡ ಮುಗುಳ್ನಗೆ ಬೀರಿದ. ಅದೇ ನಮ್ಮ ಊರಲ್ಲಿ ನೋಡಿ ಎಲ್ಲ ಸೆಪರೇಟ್ ..ಸೆಪರೇಟ್.. ಆಗಿ ಇರುತ್ತೆ ಎಂದಳು. ನಿಮ್ಮ ಊರ ಏನು? ದೊಡ್ಡ ಸಿಂಗಪೂರ?, ನಿಮ್ಮ ಊರಲ್ಲಿ ಒಂದು ಹೇರಿಗೆ ಆಸ್ಪತ್ರೆ ಕೂಡ ಇಲ್ಲ ಎಂದೆ. ಯಾಕೆ? ಬೇಕು ಆಸ್ಪತ್ರೆ ನಮ್ಮ ಊರಲ್ಲಿ ರೋಡೇss ಸರಿ ಇಲ್ಲ. ಆಸ್ಪತ್ರೆಗೆ ಹೋಗುತ್ತಾ.. ಹೋಗುತ್ತಾ ..ಎಲ್ಲ ಮುಗಿದೆ ಹೋಗಿರುತ್ತೆ ಎಂದು ಗಹ ಗಹಿಸಿ ನಕ್ಕಳು.

ಅವರನ್ನು ಬಸ್ ಹತ್ತಿಸಿ, ಮನೆಗೆ ಬರುವ ದಾರಿಯಲ್ಲಿ ಬಜ್ಜಿ, ಬೋಂಡ ತಿಂದು, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದೆ. ಅವಳು ಇದ್ದರೆ, ಬರಿ ಎಣ್ಣೆ ಪದಾರ್ಥ ತಿನ್ನುತ್ತೀರ ಎಂದು ಬೈದಿರೋಳು. ಮನೆಗೆ ಬಂದೊಡನೆ ಅದೇಕೋ ಮನಸೆಲ್ಲ ಭಾರವಾದ ಹಾಗೆ ಅನ್ನಿಸಿತು. ಮನೆಯಲ್ಲಿ ಮಗನ ಚೀರಾಟ, ತುಂಟಾಟ, ಅವಳ ನಗು,ಮಾತು, ಜಗಳ, ಬೇಸರ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ, ಘಮ ಘಮಿಸುವ ಅಡುಗೆ ವಾಸನೆ ಎಲ್ಲವೂ ಮಾಯವಾಗಿತ್ತು. ಎಲ್ಲವನ್ನು ಯೋಚಿಸುತ್ತಾ ಒಬ್ಬನೇ ಫ್ರಿಡ್ಜ್ ನಲ್ಲಿ ಇರುವ ಊಟ ಮುಗಿಸಿ ನಿದ್ದೆಗೆ ಜಾರಿದೆ.

ಎದ್ದೊಡನೆ ಲೇ ಕಾಫೀ ಎಂದೆ. ಎಲ್ಲಿ ಬರಬೇಕು ಕಾಫೀ... ಅವಳೇ ಇಲ್ಲ. ಮತ್ತೆ ಫೋನ್ ರಿಂಗ್ ಆಯಿತು. ರೀ ಮನೆಗೆ ಬಂದು ಮುಟ್ಟಿದ್ದೇನೆ ಎಂದಳು. ಮೊನ್ನೆ ಮಾಡಿದ ಕಾಫೀ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಬಿಸಿ ಮಾಡಿ ಕುಡಿಯಿರಿ ಎಂದು ಕುಹಕ ಮಾತಿನೊಂದಿಗೆ ಫೋನ್ ಕಟ್ ಮಾಡಿದಳು. ನಾನೇ ಅಡುಗೆ ಮನೆ ಎಂಬ ಗುಹೆಗೆ ಈ ಬಾರಿ ಬಲಗಾಲಿಟ್ಟು (ಎಡಗಾಲಿಟ್ಟು ಪ್ರವೇಶಿಸಿದಾಗ ಆದ ಪ್ರತಾಪ ನಿಮಗೆ ಗೊತ್ತೇ ಇದೆ. ನಳ ಪಾಕ್ .... :)) ಹೋಗಿ ಕಾಫೀ... ಕ್ಷಮಿಸಿ ಚಹಾ ಮಾಡಿಕೊಂಡು ಬಂದು ಹೀರಿದೆ.

Rating
No votes yet

Comments