ಸಂಪದಿಗ ಮಿತ್ರರಿಗೊಂದು ಕೀ....ಮಾತು

ಸಂಪದಿಗ ಮಿತ್ರರಿಗೊಂದು ಕೀ....ಮಾತು

 
  ’ಸಂಪದ’ದಲ್ಲಿ ಆಳವಾದ ಚರ್ಚೆ ಮತ್ತು ವಿಮರ್ಶೆಯ ತಥಾಕಥಿತ ಕೊರತೆಯ ಬಗ್ಗೆ ಕಳೆದ ವಾರ ಇದೇ ’ಸಂಪದ’ದಲ್ಲಿ ಆಳವಾದ ಚರ್ಚೆ ನಡೆಯಿತಷ್ಟೆ. ಸಂಪದಿಗರೆಲ್ಲರೂ ಸಾಹಿತ್ಯವನ್ನು ವಿಮರ್ಶಿಸುವಷ್ಟು ಅಥವಾ ವಿಷಯಗಳನ್ನು ಆಳವಾಗಿ ಚರ್ಚಿಸಿ ಬರೆಯುವಷ್ಟು ಪ್ರಬುದ್ಧರಾಗಿರಲೇಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂಬ (ಒಪ್ಪತಕ್ಕ) ಅಭಿಪ್ರಾಯ ಆ ಚರ್ಚೆಯಲ್ಲಿ ವ್ಯಕ್ತವಾಗಿದೆ. ಆದರೆ, ’ಹಾಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಲ್ಲ ಮಿತ್ರರೂ, ಬರವಣಿಗೆಯ ಮೂಲಕ ಚರ್ಚೆಯಲ್ಲಿ ಅಥವಾ ವಿಮರ್ಶೆಯಲ್ಲಿ ಪಾಲ್ಗೊಳ್ಳಲು ಅತ್ಯಂತ ಸಮರ್ಥರು’ ಎಂಬ ವಾಸ್ತವದ ಅನಾವರಣವು ಆ ಮಿತ್ರರ ಸದರಿ ಪ್ರತಿಕ್ರಿಯೆಗಳಿಂದಲೇ ಉಂಟಾಗಿದೆ! ಇದು ನಿಜಕ್ಕೂ ಸಂತಸದ ವಿಷಯ.
  ಈ ಸಂದರ್ಭದಲ್ಲಿ ಸಂಪದಿಗ ಮಿತ್ರರಿಗೊಂದು ಕಿವಿಮಾತು, ಊಹ್ಞೂ, key(board)ಮಾತು ಹೇಳಲಿಚ್ಛಿಸುತ್ತೇನೆ.
  ಹುಟ್ಟುಟ್ಟುತ್ತಲೇ ಯಾರೂ ಸಕಲಕಲಾಕೋವಿದರಾಗಿ ಹುಟ್ಟುವುದಿಲ್ಲ. ದೊಡ್ಡವರಾಗುತ್ತ ಸಾಗಿದಂತೆ, ತಮ್ಮ ಪ್ರಯತ್ನಗಳಿಂದ ಹಲವು ಕಲೆಗಳನ್ನು ಕಲಿಯುತ್ತಾರೆ. ವಿವಿಧ ಪ್ರಕಾರಗಳ ಬರವಣಿಗೆಯೆಂಬುದೂ ಇಂತಹ ಒಂದು ಕಲಿಯಬಲ್ಲ ಕಲೆ. ’ಸಂಪದ’ವು ಭಾವನೆಗಳ ವಿನಿಮಯದ ವೇದಿಕೆ ಮಾತ್ರವಲ್ಲ, ಸಾಹಿತ್ಯಕೃಷಿಯೆಂಬ ಕಲೆಯನ್ನು ಕಲಿಸುವ ಶಾಲೆ ಕೂಡ ಎಂದು ನಾನು ಭಾವಿಸಿದ್ದೇನೆ. ಈ ಶಾಲೆಯಲ್ಲಿ ಕಲಿಯುತ್ತ ಕಲಿಯುತ್ತ ದಿನಗಳೆದಂತೆ ಪ್ರಬುದ್ಧತೆಯೆಂಬುದು ಬಂದೇಬರುತ್ತದೆ. ಅಂತಹದೊಂದು ವಿಶ್ವಾಸ, ಜೊತೆಗೆ ಅದಮ್ಯ ಆತ್ಮವಿಶ್ವಾಸ ಇವೆರಡು ಸಂಪದಿಗರಿಗೆ ಇದ್ದರಾಯಿತು, ಅಷ್ಟೆ. ಹಾಡುತ್ತ ಹಾಡುತ್ತ ರಾಗ, ಬರೆಯುತ್ತ ಬರೆಯುತ್ತ ಸರಾಗ.
   ನಾನು ಸೂಕ್ಷ್ಮವಾಗಿ ಗಮನಿಸುತ್ತಿರುವಂತೆ, ಅನೇಕ ಸಂಪದಿಗರಿಗೆ ತಾವು ಯಾವ ವಿಷಯ ಕುರಿತು ಬರೆಯಬೇಕೆಂದು ಹೊಳೆಯದಿರುವುದು ಅಥವಾ ಆ ನಿಟ್ಟಿನಲ್ಲಿ ಅವರು ಆಲೋಚಿಸದಿರುವುದು ಕಂಡುಬರುತ್ತದೆ. ಎಂದೇ, ಸ್ವತಂತ್ರವಾಗಿ ಲೇಖನ ಸೃಜಿಸದಿರುವ ಅಂತಹವರು ಇತರರ ಲೇಖನಗಳಿಗೆ ಆ ಲೇಖನಗಳಿಗಿಂತ ಅದ್ಭುತವಾಗಿ ಮತ್ತು ವಿಸ್ತಾರವಾಗಿ ಪ್ರತಿಕ್ರಿಯಿಸುತ್ತಾರೆ! ಅಂತಹ ಬರಹಗಾರರಿಗೆ ನಿರ್ದಿಷ್ಟ ವಿಷಯವೇನಾದರೂ ನೀಡಲ್ಪಟ್ಟರೆ ಆಗ ಅವರು ಆ ವಿಷಯದ ಬಗ್ಗೆ ಪ್ರಬುದ್ಧ ಲೇಖನ ಸೃಷ್ಟಿಸುವುದರಲ್ಲಿ ಸಂಶಯವೇ ಇಲ್ಲ.
  ಅಂತಹ ಎಲ್ಲ ಸಂಪದಿಗರಿಗೂ ನನ್ನದೇ ಉದಾಹರಣೆ ನೀಡುವ ಮೂಲಕ ದಿಕ್ಸೂಚಿಯಾಗಬಯಸುತ್ತೇನೆ. ಮಾಧ್ಯಮಿಕ ಶಾಲಾ ಹಂತದಿಂದಲೇ ಸಾಹಿತ್ಯಕೃಷಿ ಆರಂಭಿಸಿದ ನಾನು ವಿಸ್ತಾರವಾದ ಆ ಹೊಲಕ್ಕೆ ಕಾಲಿಟ್ಟದ್ದು ವಿವಿಧ ಪತ್ರಿಕೆಗಳು ವಿಷಯ ನೀಡಿ ಲೇಖನ ಆಹ್ವಾನಿಸುತ್ತಿದ್ದ ಸಂದರ್ಭಗಳನ್ನು ಉಪಯೋಗಿಸಿಕೊಂಡು. ಹಾಗೆ ಬರವಣಿಗೆ ಆರಂಭಿಸಿದ ನಾನು ಅನತಿ ಕಾಲದಲ್ಲೇ, ನನಗೇ ಅಚ್ಚರಿಯಾಗುವಂತೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸ್ವತಂತ್ರ ಬರಹಗಳನ್ನು ಸೃಷ್ಟಿಸಬಲ್ಲ ಮಟ್ಟವನ್ನು ತಲುಪಲು ಕಾರಣ ಮೂಲದಲ್ಲಿ ವಿಷಯಗಳನ್ನು ನೀಡಿ ನನ್ನಿಂದ ಬರೆಸಿದ ಆ ಪತ್ರಿಕೆಗಳು.
  ಈಗಲೂ ವಿವಿಧ ಪತ್ರಿಕೆಗಳು ಈ ಕೆಲಸವನ್ನು ಮಾಡುತ್ತಲೇ ಇವೆ. ಉದಾಹರಣೆಗೆ, ನಾನು ಪ್ರಸ್ತುತ ’ನುಡಿ ಛಡಿ’ ಸಾಪ್ತಾಹಿಕ ಅಂಕಣಬರಹ ಬರೆಯುತ್ತಿರುವ ’ಉದಯವಾಣಿ’ ದಿನಪತ್ರಿಕೆಯು ’ವೇದಿಕೆ’ ಎಂಬ ನಿತ್ಯಾಂಕಣವೊಂದನ್ನು ನಡೆಸುತ್ತಿದ್ದು, ತಾನು ಪ್ರತಿ ವಾರ ನೀಡುವ ಚರ್ಚಾ ವಿಷಯವೊಂದರ ಬಗ್ಗೆ ಓದುಗರಿಂದ ಕಿರುಬರಹಗಳನ್ನು ಆಹ್ವಾನಿಸಿ ಪ್ರಕಟಿಸುತ್ತಿದೆ. ಕೊಟ್ಟ ವಿಷಯದ ಬಗ್ಗೆ ಅತ್ಯುತ್ತಮವಾಗಿ ಅಕ್ಷರಚರ್ಚೆಯಲ್ಲಿ ತೊಡಗಬಲ್ಲ ಸಂಪದಿಗ ಮಿತ್ರರು ಸಾಕಷ್ಟಿದ್ದೀರಿ. ಅಂತಹವರೆಲ್ಲ ಆ ಅಂಕಣಕ್ಕೆ ಧಾರಾಳವಾಗಿ ಬರೆಯಬಹುದು. (ಸಿದ್ಧಹಸ್ತ ಸ್ವತಂತ್ರ ಬರಹಗಾರರೂ ಅಲ್ಲಿ ಬರೆಯಬಹುದು.) ಅಂತರ್ಜಾಲದಲ್ಲೂ (’ಉದಯವಾಣಿ’ಯ ಬೆಂಗಳೂರು ಆವೃತ್ತಿಯಲ್ಲಿ, ಸಂಪಾದಕೀಯ ಪುಟದಲ್ಲಿ, ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ ’ವೇದಿಕೆ’ಯ ವಿವರ ಲಭ್ಯ. ಅಲ್ಲಿ ಕೊಡಲ್ಪಡುವ ಸಾಮಾಜಿಕ ವಿಷಯಗಳ ಬಗ್ಗೆ ನೀವು ಬರೆಯುವ ಬರಹಗಳನ್ನು ಲಕ್ಷಾಂತರ ಓದುಗರು ಓದುವುದರಿಂದ ಆ ಮಟ್ಟಿಗೆ ಸಾಮಾಜಿಕ ಜಾಗೃತಿಗೂ ನಿಮ್ಮಿಂದ ಕೊಡುಗೆ ಸಂದಂತಾಗುತ್ತದೆ.
  ಮಿತ್ರರೇ, ಜಿಜ್ಞಾಸೆ ಮತ್ತು ಚರ್ಚೆ ಇವೇ ಮಾನವಜೀವನದ ಮುಖ್ಯಸ್ರೋತಗಳು. ಜಿಜ್ಞಾಸುಗಳಾಗಿ ಹಲವು ವಿಷಯಗಳನ್ನು ತಿಳಿದುಕೊಳ್ಳೋಣ; ಚರ್ಚೆಯ ಮೂಲಕ ವಿಚಾರಮಂಥನ ನಡೆಸೋಣ; ಯೋಚನೆಯಲ್ಲಿಯೂ, ಮಾತಿನಲ್ಲಿಯೂ ಮತ್ತು ಬರವಣಿಗೆಯಲ್ಲಿಯೂ.  

Comments