ಯದಾಯದಾಹಿ ಧರ್ಮಸ್ಯ...

ಯದಾಯದಾಹಿ ಧರ್ಮಸ್ಯ...

’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ?’ಎಂದು ರಾಯರು ತಮ್ಮ ಧ್ವನಿ ಪೆಟ್ಟಿಗೆಯ ಫ್ರೀಕ್ವೆನ್ಸಿಯನ್ನು ಆದಷ್ಟು ಜೋರಾಗಿ ಬಳಸಿದ್ದು ಇಡೀ ಗಲ್ಲಿಗೇ ಕೇಳಿಸಿ ಸರಿ ಸುಮಾರು ಹತ್ತರ ಹೊತ್ತಿಗೆ ಮಲಗಿದ್ದವರೆಲ್ಲಾ ಒಮ್ಮೆ ಎಚ್ಚರಗೊಂಡು ಪುನಃ ನಿದ್ದೆ ಹೋದರು. ಮನೆಯೊಳಗಿನಿಂದ ಬರುತ್ತಿದ್ದ ’ಬುಸ್ ಬುಸ್’ ಏದುಸಿರಿನ ಸದ್ದಿನಿಂದ ರಾಯರು ತಮ್ಮ ಮಗನಿಗೆ ಬುದ್ಧಿ ಕಲಿಸುವ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆಂದು ಇನ್ನೂ ಮಲಗದವರು ಅಂದುಕೊಂಡರು. ಇಷ್ಟಕ್ಕೂ ಬೆಳೆದ ಮಗನೊಡನೆ ಸ್ನೇಹಿತನಾಗಿರಬೇಕು ಎಂಬ ಶ್ಲೋಕವೊಂದನ್ನು ಶಿರಸಾ ಪಾಲಿಸುತ್ತಿದ್ದ ರಾಯರು ಇಂದೇಕೆ ಇಷ್ಟು ಉದ್ರಿಕ್ತರಾದರು ಎಂಬುದು ಅಲ್ಲಿಯವರೆಗೆ ಅವರ ಸಂಭಾಷಣೆ ಕೇಳಿದವರಿಗೆ ಮಾತ್ರ ಅರಿವಿತ್ತು. ಎರಡು ಮೂರು ನಿಮಿಷಗಳ ಬಳಿಕ ಧಡಾರನೆ ಬಾಗಿಲು ಬಿದ್ದ ಶಬ್ದದಿಂದ ಮತ್ತು ಮೊದಲ ರಾಯರ ಜೋರಾದ ಮಾತಿನಿಂದ ರಾಯರ ಮನೆಯಲ್ಲೂ ಜೀವ ಸಂತತಿ ಇದೆ ಎಂಬುದನ್ನು ಊರಿನ ಜನತೆಗೆ ಸ್ಪಷ್ಟೀಕರಿಸುವಂತೆ ಕಂಡಿತು.

ಹೆಂಡತಿ ತೀರಿದ ಬಳಿಕ ತಾಯಿಯಿಲ್ಲದ ತಬ್ಬಲಿ ಎಂದು ಅತಿಯಾಗಿ ಪ್ರೀತಿಯಲ್ಲಿ ಬೆಳೆಸದೇ ರಾಯರು ಮೊದಲಿನಿಂದಲೂ ಸ್ವತಂತ್ರ ವಿಚಾರ ಹೊಂದಿದ್ದ ಮಗನ ಬಗ್ಗೆ ಅಭಿಮಾನ ಉಳ್ಳವರೇ. ಅಪ್ಪ ನೆಟ್ಟ ಆಲದ ಮರ ಎಂದು ಅದಕ್ಕೇ ನೇತು ಹಾಕಿಕೊಂಡು ಸಾಯುವವರ ಮುಂದೆಲ್ಲಾ ’ನನ್ನ ಮಗ’ ಎಂದು ಮೀಸೆ ತಿರುವಿದವರು. ಅವರ ಈ ಅಭಿಮಾನದಿಂದ ಮತ್ತವರ ಮಗನ ಊರಿನ ಜನತೆಗೆ ಗೊತ್ತಿರದ ಅತ್ಯುನ್ನತ ಜ್ಞಾನದಿಂದ ಊರಿನ ಜನತೆ ರಾಯರಿಂದ ರಾಯರಿಗೂ ಅರಿವಾಗಿರದ ರೀತಿಯಲ್ಲಿ ಹಂತ ಹಂತವಾಗಿ ದೂರವಾಗಿತ್ತು.

ಎಸ್ಸೆಸ್ಸೆಲ್ಸಿಯಲ್ಲಿ ತೊಂಭತ್ತು, ಪಿಯುಸಿ ಸೈನ್ಸಿನಲ್ಲಿ ಎಂಭತ್ತೈದು ಪ್ರತಿಶತ ಪಡೆದರೂ ಬಿ. ಎ ತೆಗೆದುಕೊಂಡಿದ್ದ ಮಗನ ಅಭಿವ್ಯಕ್ತಿಗೆ ಅವರೇನೂ ಅಂದಿರಲಿಲ್ಲ. ಮೊದಲು ಧರ್ಮಗ್ರಂಥಗಳನ್ನೂ, ಪುರಾಣಗಳನ್ನೂ ಅಧ್ಯಯನ ಮಾಡುತ್ತಿದ್ದ ಮಗನೊಡನೆ ಆ ಬಗ್ಗೆ ವಿಸ್ತಾರವಾದ ವಿವರಣೆಗಳನ್ನು ಕೊಡಲೂ ಅವರು ಸಿಕ್ಕ ಸಮಯವನ್ನೆಲ್ಲಾ ಉಪಯೋಗಿಸಿಕೊಳ್ಳುತ್ತಿದ್ದರು. ತರ್ಕಶಾಸ್ತ್ರ, ಧರ್ಮಶಾಸ್ತ್ರ ಇವೇ ಮೊದಲಾದ ಪುಸ್ತಕಗಳ ಅಧ್ಯಯನ ಮಾಡಿ ಹಿಂದೂ ಪರಂಪರೆಯ ಮೂರ್ತ ಸ್ವರೂಪ ಇವನಾಗುತ್ತಾನೆ, ಅವಧಾನಿಯಾಗುತ್ತಾನೆ ಎಂಬುದು ಅವರ ಕನಸಾಗಿತ್ತು. ಆದರೆ ಆ ಕನಸು ವಿಚ್ಚಿದ್ರಗೊಂಡಿದ್ದೂ ಇವತ್ತೇ.

ಮಗನ ಟೇಬಲ್ಲಿನ ಮೇಲೆ ಬಿದ್ದಿದ್ದ ರಾಶಿ ಪುಸ್ತಕಗಳಲ್ಲಿ ಒಂದೂ ಹಿಂದೂ ಧರ್ಮಗ್ರಂಥಗಳಿಲ್ಲದ ಕಾರಣ ಅವರಿಗೇನೋ ಗುಮಾನಿ ಬಂದು ನಡೆಸಿದ ವಿಚಾರಣೆಯ ಪರಿಣಾಮವಾಗಿ ಹೊರಬಿದ್ದದ್ದು ಮಗನ ಬದಲಾದ ವಿಚಾರಧಾರೆ.  ಅಥೀಯಿಸಂ, ಎಗ್ಸಿಸ್ಟೆನ್ಶಾಲಿಸಂ ಎಂಬ ಕೇಳಿರದ ಪದಗಳ ಬಗ್ಗೆ ಮಗ ಮಾತನಾಡತೊಡಗಿದಾಗ ಇವೂ ಹಿಂದೂ ಪರಂಪರೆ ಎಂಬ ವಿಶಾಲ ಅಶ್ವತ್ಥ ವೃಕ್ಷದ ಯಾವುದೋ ಕೊಂಬೆಗಳು ಎಂದುಕೊಂಡರೂ ಅವರ ಈ ಪೂರ್ವಾಗ್ರಹಗಳೂ ಒಂದೊಂದಾಗಿ ಮಗ ಅಚ್ಚ ಕನ್ನಡದಲ್ಲೇ ವಿವರಿಸತೊಡಗಿದಾಗ ಮುರಿಯತೊಡಗಿದವು.

’ಎಪಿಕರಸ್ ಎಂಬ ತತ್ವಜ್ಞಾನಿ ಹೀಗೆ ಹೇಳಿದ್ದಾನೆ ಕೇಳಿ - ಒಂದು ವೇಳೆ ದೇವರು ದುಷ್ಟರನ್ನು ನಿಗ್ರಹಿಸಲು ಇಷ್ಟಪಡುತ್ತಿದ್ದೂ ಆತನಿಗದು ಸಾಧ್ಯವಾಗದಿದ್ದರೆ ಆತನಿಗೆ ಅಸೀಮ ಶಕ್ತಿಗಳಿಲ್ಲ. ಒಂದು ವೇಳೆ ಆತ ಸಮರ್ಥನಾಗಿದ್ದೂ ಹೀಗೇ ಇರಲಿ ಎಂದು ಯೋಚಿಸುತ್ತಿದ್ದರೆ ಆತನೊಬ್ಬ ಲೋಕಕಂಟಕ. ಆತ ಸಮರ್ಥನೂ ಮತ್ತು ದುಷ್ಟರ ನಿಗ್ರಹಿಸಲು ಇಚ್ಛಿತನೂ ಆಗಿದ್ದರೆ ದುಷ್ಟರೆಲ್ಲಿಂದ ಬರುತ್ತಿದ್ದರು. ಒಂದು ವೇಳೆ ಆತ ಅಸಮರ್ಥನೂ ಮತ್ತು ಇದ್ದದ್ದು ಹೀಗೆಯೇ ಇರಲಿ ಎನ್ನುವವನಾಗಿದ್ದರೆ ಆತನನ್ನು ದೇವರೆಂದು ಏಕೆ ಕರೆಯಬೇಕು?’ ಮಗನ ಈ ಮಾತಿಗೆ ಒಂದು ಕ್ಷಣ ತತ್ತರಿಸಿದರೂ ಸಾವರಿಸಿಕೊಂಡು ಸಮಾಧಾನಿಸುವ ರೀತಿಯಲ್ಲೇ ಭಗವದ್ಗೀತೆಯ ಯಾವುದೋ ಶ್ಲೋಕ ನೆನಪಾಗಿ ’ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಶ್ಕ್ರಿತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ಎಂದು ಅವನಿಗೆ ಗೊತ್ತಿದೆ ಎಂದು ಗೊತ್ತಿದ್ದರೂ ’ಅಧರ್ಮ ತಾಂಡವವಾಡುವಾಗ ಕಲ್ಕಿಯಾಗಿ ಅವತರಿಸಿ ಬಂದೇ ಬರುತ್ತಾನೆ ನೋಡು’ ಎಂದು ಆಶ್ವಾಸನೆಯನ್ನಿತ್ತರು.  

’ಏಕೆ, ಈಗ ಅಧರ್ಮ ಕಡಿಮೆಯಿದೆಯೇನು? ದೇವರ ಹೆಸರಿನಲ್ಲೇ ನಡೆಯುವ ಕರ್ಮಕಾಂಡಗಳಿಗಾದರೂ ಅವತರಿಸಿ ಬಂದು ಧರ್ಮವನ್ನು ನೆಲೆಸುವಂತೆ ಮಾಡುತ್ತಾನೋ... ಇಲ್ಲ! ಯೋಚಿಸಿ ಅಪ್ಪ. ಬಂದೇ ಬರುತ್ತಾನೆಂದು ಯೋಚಿಸಿ ಯೋಚಿಸಿ ನಿಮ್ಮ ಬದುಕುಗಳನ್ನು ಆ ದೇವರೆಂಬೋ ಹೆಸರಿನ ಪೊಳ್ಳು ನಂಬಿಕೆಗೆ ಬಲಿ ಕೊಡ್ತಾ ಇದ್ದೀರಾ’ ಚರ್ಚೆ ಮುಂದುವರಿದಂತೆಲ್ಲಾ ಮಗನ ವಿಶಾಲ ಜ್ಞಾನಕ್ಕೆ ತಮ್ಮ ಮಾತುಗಳಂತೆ ದೇಹವೂ ಜರ್ಜರಿತವಾಗುತ್ತಿರುವಂತೆ ರಾಯರಿಗೆ ಭಾಸವಾಯಿತು.

’ನನಗಂತೂ ದೇವರ ಮೇಲೆ ವಿಶ್ವಾಸ ಹೊರಟು ಹೋಗಿದೆ. ನೀವೇನಾದರೂ ಆತನ ಮೇಲೆ ಇನ್ನೂ ಭರವಸೆಯಿಟ್ಟಿದ್ದಲ್ಲಿ ಆತನಿಗೆ ಹೇಳಿ ನಿಮ್ಮ ಭರವಸೆಗಳೂ ನಷ್ಟವಾಗುವ ಮುನ್ನ ಅವತರಿಸಲಿ. ಅಲ್ಲಿಯವರೆಗೆ ನಾನು ಜನರ ಬದುಕಿನಿಂದ ದೇವರೆಂಬ ಆಷಾಡಭೂತಿಯನ್ನು ಕಿತ್ತೆಸೆಯಲು ಯತ್ನಿಸುತ್ತೇನೆ’ ಎಂದ ಮಗನ ಮುಂದೆ ರಾಯರ ಕಣ್ಣಲ್ಲಿ ಕೆಂಪು ನೀರು ಹರಿದಿತ್ತು. ಇದನ್ನು ರಾಯರ ಮಗ ಗಮನಿಸಿದನೋ ಅಥವಾ ಇಲ್ಲವೋ ರಾಯರಿಗೆ ಅರಿವಾಗಿರಲಿಲ್ಲ. ಚರ್ಚೆಯ ಕೊನೆಗೆ ಮಾತ್ರ ’ನೀತ್ಸೆಯ ಮಾತುಗಳನ್ನು ನಾನೂ ಹೇಳ್ತೇನೆ ಅಪ್ಪ. ದೇವರೆಂಬುದು ಸತ್ತು ಹೋಗಿರುವ ಶಬ್ದ, ಇಟ್ಸ್ ಜಸ್ಟ್ ಅ ಡೆಡ್ ವರ್ಡ್’ಎಂದಾಗ ಅವರ ರಕ್ತದೊತ್ತಡವೇರಿ ’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ’ ಎಂದು ಮಗನನ್ನು ಹಿಗ್ಗಾ ಮುಗ್ಗಾ ಥಳಿಸಿ ತಾನು ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು.
                                                             

ಸಮಯ ಮೂರು ದಾಟಿದರೂ ರಾಯರ ಮಗನಿನ್ನೂ ಮಲಗಿರಲಿಲ್ಲ. ಅವನ ಮನಸ್ಸು ಕ್ಷೋಭೆಗೊಳಗಾಗಿತ್ತು. ಅಪ್ಪನ ಮನಸ್ಸು ಆತನಿಗೆ ಆರ್ಥವಾಗುತ್ತಿತ್ತು. ದಿನವಿಡೀ ಅಪ್ಪನೊಂದಿಗೆ ಇದ್ದೂ ಅಪ್ಪನ ನಂಬಿಕೆಗಳನ್ನು ಅಲುಗಾಡಿಸುತ್ತೇನೆ ಎಂಬ ನಂಬಿಕೆ ಅವನಿಗಿರಲಿಲ್ಲ. ಅದರ ಮೇಲೆ ಅದು ಅಪ್ಪನಿಗೆ ಪ್ರತಿನಿತ್ಯದ ವೇದನೆಯಾಗಲಿದೆ ಎಂದು ಅವನಿಗೆ ಅರ್ಥವಾಗಿತ್ತು. ತನ್ನ ಸಿದ್ಧಾಂತಗಳನ್ನಂತೂ ಯಾವುದೇ ಕಾರಣಕ್ಕೂ ಬಿಡಲು ಆತನಿಗೆ ಆಗುತ್ತಿರಲಿಲ್ಲ. ಇದೆಲ್ಲದರ ಪರಿಹಾರವೆಂದರೆ ತಾನು ಮನೆ ಬಿಟ್ಟು  ಹೋಗುವುದು ಎಂದು ಆತ ನಿರ್ಧಾರ ಮಾಡಿದ್ದ. ಇದ್ದ ಪುಸ್ತಕಗಳನ್ನೂ, ಬಟ್ಟೆಗಳನ್ನೂ ತುಂಬಿಸಿ ಕೆಲವು ನೂರರ ನೋಟುಗಳನ್ನು ಪತ್ರವೊಂದರ ಜೊತೆಗೆ ಇಟ್ಟು ಆ ಪತ್ರದಲ್ಲಿ ಹೇಳಬೇಕಾದುದನೆಲ್ಲಾ ಹೇಳಿ ’ಮೂರು ತಿಂಗಳಿಗೊಮ್ಮೆ ಬಂದೇ ಬರುತ್ತೇನೆ, ಹಣ ಪ್ರತಿ ತಿಂಗಳೂ ಕಳುಹಿಸುತ್ತೇನೆ’ ಎಂದೂ ಬರೆದು ತಾನು ಬರೆದ್ದದ್ದನ್ನೆಲ್ಲಾ ಒಮ್ಮೆ ಓದಿದ. ’ದೇವರಾದರೋ ತನ್ನನ್ನು ನಂಬು ಎಂದು ಯಾವತ್ತೂ ಹೇಳಿದವನಲ್ಲ, ಆದರೆ ನಾನು ಮಾತ್ರ ಆಶ್ವಾಸನೆ ಕೊಡ್ತಾ ಇದ್ದೇನೆ’ ಎಂದುಕೊಂಡು ವಿಷಾದದ ನಗೆ ನಕ್ಕ.

ರಾತ್ರಿಯ ಸಂಗ್ರಾಮದ ನಂತರ ಅವನಿಗೆ ತಂದೆಯನ್ನು ಎದುರಿಸುವ ಶಕ್ತಿಯಿರಲಿಲ್ಲ. ಪತ್ರವನ್ನು ಬಾಗಿಲ ಬದಿಗಿಟ್ಟು ಹೊರಗಿನಿಂದಲೇ ಅಡ್ಡ ಬಿದ್ದು ಅವನು ಅಲ್ಲಿಂದ ಹೊರಟ. ಅವನಿಗೆ ಗಮ್ಯವೊಂದು ಬಾಗಿಲು ತೆರೆಯಲಿತ್ತು. ಒಳಗೆ ಮಲಗಿದ್ದ ರಾಯರು ಕೇವಲ ನಿದ್ದೆ ಹೋಗಿರಲಿಲ್ಲ, ಆ ಬಾಗಿಲನ್ನು ತೆರೆದು ಅವರು ಆ ಪತ್ರವನ್ನು ಇನ್ಯಾವಾಗಲೂ ಓದಲಾರರು ಎಂಬುದು ಅವನಿಗೆ ಗೊತ್ತಿರಲಿಲ್ಲ.

Rating
No votes yet

Comments