ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ.......


ಅದೊಂದು ಕಾಲ......


ಮಾರುದ್ದ ಜಡೆಯವಳು (ಮಾರುದ್ದ ಏನು ಬಂತು..ಆಕೆ ರಸ್ತೆಯಲ್ಲಿ ೫ನೇ ಕ್ರಾಸ್ ತಲುಪಿದರೂ, ಜಡೆ ತುದಿ ಇನ್ನೂ ೪ನೇ ಕ್ರಾಸ್‌ನಲ್ಲೇ ಇರುತ್ತಿತ್ತು!!) ಮಲ್ಲಿಗೆ ಮುಡಿದು ಹೋಗುವಾಗ ಈ ಹಾಡು ಬಾಯಲ್ಲಿ (ಛೇಡಿಸಲಿಕ್ಕಲ್ಲ) ತನ್ನಷ್ಟಕ್ಕೇ ಬರುತ್ತಿತ್ತು.


ಚಲುವಿಯರ ಹಿಂದೆ ಹೋಗುವುದಕ್ಕೂ ಒಂದು ಅರ್ಥವಿತ್ತು.


ಶುದ್ಧ ಕೊಬ್ಬರಿ ಎಣ್ಣೆ ಹಾಕಿ, ನೀಟಾಗಿ ಬಾಚಿ, ಒಂದು ಅಥವಾ ಎರಡು ಜಡೆ ಹೆಣೆದು,


ಮಲ್ಲಿಗೆ, ಸಂಪಿಗೆ, ಗುಲಾಬಿ, ಕನಕಾಂಬರ,.....ಒಬ್ಬೊಬ್ಬರು ಒಂದೊಂದು ಬಗೆಯ ಹೂಗಳನ್ನು ಮುಡಿದು, ಕ್ಲಾಸಿಗೆ ಬಂದರೆ....... ಲಾಲ್‌ಬಾಗ್ ಫ್ಲವರ್ ಷೋ ಫ್ಲಾಪ್ ಷೋ!


ಕಣ್ಣು ಮುಚ್ಚಿಯೇ ಮೈಸೂರು ಮಲ್ಲಿಗೆ ಹೂವಿನ ಗಮ ಬಂದಾಗ, ಮಲ್ಲಿ ಬಂದಳು ಎನ್ನುತ್ತಿದ್ದರು. ಈ ಕಾಲದವರು ಕಣ್ಣೆದುರಿಗೆ ಇದ್ದರೂ, ಕಣ್ಣರಳಿಸಿ ಅವರ ಮುಖ ನೋಡದೇ, ರಮ್ಯ, ಭವ್ಯ, ಕಾವ್ಯ, ಭಾಗ್ಯ,ಶ್ರಾವ್ಯ, ಯ, ಯ, ಯಾರೆಂದು ಹೇಳಲು ಸಾಧ್ಯಾನಾ?


ಈಗಿನ ಹುಡುಗಿಯರಲ್ಲಿ ತಪ್ಪು ಹುಡುಕುತ್ತಿಲ್ಲ. ಎಲ್ಲರೂ ಸುರಸುಂದರಿಯರೇ. ಐಶ್ವರ್ಯಾ, ಕತ್ರೀನಾಗಿಂತ ಸುಂದರಿಯರು ಪ್ರತೀ ಬೀದಿಯಲ್ಲೂ ಇದ್ದಾರೆ.


ಹಿಂದೆ, ಸೌಂದರ್ಯದಲ್ಲಿ ಸುಮಾರಾಗಿದ್ದವರೂ, ಮುಡಿದ ಹೂವಿನಿಂದಾಗಿ ತ್ರಿಲೋಕ ಸುಂದರಿಯರಂತೆ ಕಾಣಿಸುತ್ತಿದ್ದರು.( ಅದಕ್ಕೇ ಈಗಿನವರು ತಮ್ಮ ಸೌಂದರ್ಯದ ಕ್ರೆಡಿಟ್ ಹೂವಿಗೆ ಹೋಗುವುದು ಬೇಡ ಎಂದು ಹೂ ಮುಡಿಯುವುದೇ ಇಲ್ಲ)


ಮೊಬೈಲ್ ಜತೆ ಸಿಮ್ ಫ್ರೀ ಇದ್ದ ಹಾಗೇ, ಹೂವಿನ ಜತೆ ಪರಿಮಳನೂ ಫ್ರೀ. ಗುಲಾಬಿ ಹೂ ಬಣ್ಣ, ಪರಿಮಳದಲ್ಲಿ ಸೂಪರ್. ಮಲ್ಲಿಗೆಯೇನು ಕಮ್ಮೀನಾ? ಸಂಗೀತ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ಇದ್ದಂತೆ ಹೂಗಳಲ್ಲಿ ಮಲ್ಲಿಗೆ. ಶ್ವೇತವರ್ಣದಲ್ಲಿ ಅದೆಂತಹ ಸುವಾಸನೆ. ಅದರಲ್ಲೂ ಮಂಗಳೂರು ಮಲ್ಲಿಗೆಯನ್ನು ಮೆಚ್ಚದವರಿದ್ದರೆ, ಅವರ ಮೂಗನ್ನು ರಿಪೇರಿಗೆ ಕಳುಹಿಸಬೇಕು.


ರೆಂಜೆಹೂ ಅದಕ್ಕಿಂತಲೂ ಡಲ್ ಕಲರ್. ಆದರೆ ಪರಿಮಳವಿದೆಯಲ್ಲಾ ಹೂ ಬಾಡಿದರೂ ಹೋಗದು.


ರೆಂಜೆಯನ್ನ ಸಂಸ್ಕೃತದಲ್ಲಿ ಬಕುಳ ಎನ್ನುವರು.


ಬಾ.ಹೆಸರು: Mimusops elengi


ಹೂವಿನ ಆಕಾರ ನೋಡಿ-ಮುಸುಂಬಿ ಜ್ಯೂಸ್ ತೆಗೆಯುವ ಗ್ಲಾಸ್‌ನ ಬಟ್ಟಲಿನ (ಮಿಕ್ಸಿ ಬರುವ ಮೊದಲು ಇದನ್ನು ಉಪಯೋಗಿಸುತ್ತಿದ್ದರು) ಆಕಾರ. ಹೂ ಪೋಣಿಸಲು ಸುಲಭವಾಗುವಂತೆ ಮಧ್ಯದಲ್ಲಿ ರಂಧ್ರವಿದೆ.


ಗುಲಾಬಿ ಹೂವನ್ನು ಗಿಡದಿಂದ ಕತ್ತರಿಸಿ ತೆಗೆಯಬೇಕು. ಮಲ್ಲಿಗೆ ಮೊಗ್ಗಾಗಿರುವಾಗಲೇ ಬಳ್ಳಿಯಿಂದ ಮೆತ್ತನೆ ಎಳೆದು ತೆಗೆಯಬೇಕು. ಈ ರೆಂಜೆ ಹೂ ದೊಡ್ಡ ಮರದಲ್ಲಿ ಆಗುವುದು. ಹೂವಿನ ಪ್ರೇಮಿಗಳಿಗೆ ಮರಹತ್ತುವ ಕಷ್ಟ ಬೇಡವೆಂದು ತಾನೇ ಉದುರಿಸುವುದು. ಎಷ್ಟು ಒಳ್ಳೆಯ ಗುಣವಲ್ಲವಾ ಬಕುಳದ್ದು. ಇಷ್ಟು ಮಾತ್ರವಲ್ಲಾ.. ಈ ಮರ ನಿಮ್ಮ ತೋಟದಲ್ಲಿದ್ದರೆ, ಹಲ್ಲಿನ ಡಾಕ್ಟ್ರಿಗೆ ವರ್ಷ ವರ್ಷ ಹಾಕುವ ೫-೧೦ಸಾವಿರ ಉಳಿತಾಯವಾದಂತೆ! ಬಕುಲದ ಕಾಂಡದ ಕೆತ್ತೆ ತೆಗೆದು ಕಷಾಯ ಮಾಡಿ ಬಾಯಿ ಮುಕ್ಕುಳಿಸಿದರೆ, ಅಥವಾ ಪುಡಿ ಮಾಡಿ ಹಲ್ಲುಜ್ಜುತ್ತಿದ್ದರೆ ಹಲ್ಲಿನ ನೋವು, ಒಸಡು ನೋವು, ಒಸಡಿನಲ್ಲಿ ಕೀವು ಬರುವುದು..ಎಲ್ಲಾ ಮಂಗಮಾಯ.


ಅಲ್ಲಾಡುವ ಹಲ್ಲೂ ಗಟ್ಟಿಯಾಗುವುದು! "ಸ್ಥಾನಚ್ಯುತಾ ಅಪ್ಯಚಲಾ ಭವಂತಿ"- ಅಲ್ಲಾಡುವ ಸರಕಾರ ಗಟ್ಟಿಯಾಗಬೇಕು ಅಂದಿರಾ? ರೆಂಜೆಯ ಒಂದು ದಪ್ಪದ ರೆಂಬೆ ತೆಗೆದುಕೊಂಡು ಓಡಿಸಿ ಓಡಿಸಿ ಬಾರಿಸಿದರೆ ಆಗಬಹುದೇನೋ..........


-ಗಣೇಶ.


(ಚಿತ್ರಕೃಪೆ- ನೆಟ್)



 


 


 


 


 


 



 

Rating
No votes yet

Comments