ವಿಚ್ಛೇದನಾ-ಪರಿಣಯವೆಂಬ ಕೆ. ಸತ್ಯನಾರಾಯಣ ಅವರ ಹೊಸ ಕಾದಂಬರಿ

ವಿಚ್ಛೇದನಾ-ಪರಿಣಯವೆಂಬ ಕೆ. ಸತ್ಯನಾರಾಯಣ ಅವರ ಹೊಸ ಕಾದಂಬರಿ

ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಆದರೆ ಮುಂದೆ ಮುಂದೆ ಹಿಂದಿನ ವಾಡೆಯಲ್ಲಿನ ನಿಲುವುಗನ್ನಡಿ ಹೊರತು ಉಳಿದೆಲ್ಲ ಹೊಸತರಂತಿದ್ದ ವಸ್ತುಗಳು ವಾಡೆಯ ಬೀಗ ತೆಗೆದ ಬಳಿಕ ಧೂಳೀಪಟವಾಗಿಹೋಗುತ್ತವೆ. ನಾನು ಬಲ್ಲಂತೆ ಕನ್ನಡಿಗಳು ಹಾಳಾಗುವುದಿಲ್ಲ. ಅವುಗಳ ಕಣಕಣವೂ ಹೊಸಕನ್ನಡಿಗಳಾಗಿ ಇರುತ್ತವೆ. ಒಳಗೆ ನುಸುಳುವ ಬಿಂಬಗಳನ್ನು ತಿಂದುಕೊಂಡು ಬದುಕುತ್ತವೆ. ಇಲ್ಲಿಯೂ ನಿಲುವುಗನ್ನಡಿ ಹುಡಿಯಾಗದೆ ಉಳಿಯುತ್ತದೆ.

ಕಾದಂಬರಿ ಶುರುವಾಗುವುದು ಕೋದಂಡರಾಮಪುರವೆಂಬ -ಪ್ರಾಯಶಃ- ದೇಶದಲ್ಲಿ ಉಲ್ಬಣಗೊಂಡ ವಿಚ್ಛೇದನಗಳ ದಾವೆಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆಗೆ ಒಂದು ಜಾಗ ಹುಡುಕುವುದರ ಮೂಲಕ. ಅದು ಹಳೆಯ ವಾಡೆಯೊಂದರಲ್ಲಿ ಸಿಕ್ಕಿಬಿಡುತ್ತದೆ. ಸತ್ಯನಾರಾಯಣ ಯಾವಾಗಲೂ ಸಿಂಗಲ್ ಲೇಯರಿನ ಬರೆಹ ಬರೆಯುವುದಿಲ್ಲ. ಅವರ ಬಹುಪಾಲು ಬರೆಹಗಳಲ್ಲಿ ನಾನು ಬಹಳ ಸ್ಪಷ್ಟ ಯೋಜನೆಯನ್ನು ಕಾಣುತ್ತೇನೆ. ಅದು ಅವರ ಹೊಸ ಕಾದಂಬರಿ ವಿಚ್ಛೇದನಾ-ಪರಿಣಯದ ನದಿಯಲ್ಲಿ ಪದರಗಳು ಏಳುವ ರೂಪಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕಥೆ ಎಲ್ಲಿಗೆ ಹೋಗಬೇಕೆಂದು ಅವರು ಅಂದುಕೊಂಡಿದ್ದಾರೋ ಅದನ್ನು ಆ ರೂಪಕ ಹೇಳುತ್ತದೆ.

ಸತ್ಯನಾರಾಯಣರಿಗೆ ಕಥೆಗಳ ಕೊರತೆ ಇಲ್ಲ. ಅವರಿಗೆ ಕಥಾಹಂದರ ಬೇರೆ ಏನನ್ನೋ ಹೇಳುವ ಮಾಧ್ಯಮ ಎಂದು ನನಗೆ ಅನ್ನಿಸಿದೆ. ಕಥೆಗಳಲ್ಲಿ ಅವರು ಮಾಸ್ತಿಯವರ ಉತ್ತರಾಧಿಕಾರಿಯಂತೆ ಬರೆಯುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವೇನೂ ಇಲ್ಲ. ಅದು ತೊಡಕೂ ಅಲ್ಲ. ಉತ್ತರಾಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ನಾನು ಬಲ್ಲೆ. ಉತ್ತರಾಧಿಕಾರಿ ಯಾವತ್ತೂ ಕಡಿಮೆಯಾದ ಪಾತ್ರವನ್ನು ನಿರ್ವಹಿಸಬಾರದು. ನನ್ನ ದಾರಿಯ ಹಿಡಿದು ನಡೆ, ನಿನಗೆ ತೋರಲಿ ನಾ ಕಾಣದ ದಾರಿ ಎಂದು ನಾನು ಒಂದು ಕವಿತೆಯಲ್ಲಿ ಬರೆದಿದ್ದೇನೆ. ಅಂದರೆ ನಿಜ ಕಥೆಗಾರರ ನಡುವೆ ಸಾತತ್ಯವೊಂದು ಯಾವಾಗಲೂ ಏರ್ಪಡುತ್ತಾ ಇರುತ್ತದೆ. ಅಡಗೂಲಜ್ಜಿಯ ಮನೆಗಳಲ್ಲಿ ಇದ್ದ ಕಥೆಗಳು ಪ್ರತಿ ರಾತ್ರಿ ಮೆಲ್ಲಗೆ ಹೊರಹೋಗಿ ಕಥೆಗಳನ್ನು ಹೊತ್ತುತರುತ್ತಿದ್ದವು ಎಂದು ನಾನು ಕಲ್ಪಿಸಿಕೊಂಡಿದ್ದೇನೆ. ಮತ್ತು ಮಾಸ್ತಿಯ ನಂತರದ ಲೇಖಕರು (ನಾನು ಕೂಡಿ ಎಲ್ಲರೂ) ಮಾಡಬೇಕಾದ ಅದನ್ನು ಸತ್ಯನಾರಾಯಣ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ನಾನು ಇಷ್ಟಪಟ್ಟಿದ್ದೇನೆ.

ಆದರೆ ಅವರ ಕಾದಂಬರಿಗಳ ಲೋಕ ಬೇರೆ.

ಅವರ ಈ ಕಾದಂಬರಿ ವಿಚ್ಛೇದನ-ಪರಿಣಯ ಮ್ಯಾಜಿಕಲ್ ರಿಯಲಿಸಂನ ಮಾರ‍್ಕ್ವೆಜ್‌ನನ್ನು ನೆನಪಿಗೆ ತರುತ್ತದೆಯಾದರೂ ಅದು ಭಾರತದ ಒಟ್ಟಂದದ ಸ್ತ್ರೀಕೇಂದ್ರಿತ ಸಮಸ್ಯೆಗಳನ್ನು ಅದು ಭಿನ್ನ ರೀತಿಯಲ್ಲಿ ಅಂದರೆ ಈವರೆಗೆ ಯಾರೂ ಹೇಳದ ರೀತಿಯಲ್ಲಿ ನಮ್ಮ ಮುಂದಿಡುತ್ತದೆ. ವಿಚ್ಛೇದನ-ಪರಿಣಯವೆಂಬ ಅದರ ಹೆಸರೇ ಅದರ ಟೆನ್ಷನ್ ಅನ್ನು ನಮ್ಮ ಮುಂದಿಡುತ್ತದೆಯಾಗಿ ಓದಿಗೆ ಹೊಸಬಗೆಯ ಸಿದ್ಧತೆಯನ್ನು ಬೇಡುತ್ತದೆ. ನನಗೆ ಅದರಲ್ಲಿ ತುಂಬಾ ಡಿಸ್ಟರ್ಬ್ ಮಾಡಿದ್ದು ವಾಡೆ ಮತ್ತು ಅದು ವರ್ತಮಾನದವರೆಗೂ ಒಡಲಲ್ಲಿ ಇಟ್ಟುಕೊಂಡು ಬಂದ ಹಿಂಸೆ. ಆಧುನಿಕವಾದಕ್ಕೆ ತೆರೆದುಕೊಂಡ ವಾಡೆಯ ಮಂಚವೇ ಮುಂತಾದ ಭೋಗೋಪಯೋಗಿ ವಸ್ತುಗಳೆಲ್ಲ ಧೂಳೀಪಟವಾಗುವುದು ಒಂದು ರೂಪಕವಾಗಿದೆ. ಇಡೀ ಕಾದಂಬರಿಯೇ ರೂಪಕಗಳನ್ನು ಹೊತ್ತು, ಹೊದ್ದು ಜೀವಿಸಿದೆ.

ಸತ್ಯನಾರಾಯಣ ಅವರ ಕಥೆಗಳು ಅವರ ಕಾದಂಬರಿಗಳಿಗಿಂತ ಭಿನ್ನವಾಗಿ ಮಾತಾಡುತ್ತವೆ ಎಂದೆ. ಅವರ ಕಥೆಗಳು ಮಾಸ್ತಿಯವರ ಸಂಪ್ರದಾಯಕ್ಕೆ ಹೊಂದುತ್ತವೆ ಎಂದರೂ - ಅದು ಅದಷ್ಟೇ ಎಂಬ ಅಭಿಪ್ರಾಯವಲ್ಲ. ಕಾಲದ ಜೊತೆ ಸಾಗುವುದನ್ನು ಸತ್ಯನಾರಾಯಣ ಎಂದೂ ಬಿಡುವುದಿಲ್ಲ.

ಅವರ ಕಾದಂಬರಿ ಅವರ ಕಥೆಗಳಿಗಿಂತ ಹೇಗೆ ಭಿನ್ನ (ಕಾಕಕತಾಳೀಯವಾಗಿ ಅವರ ಕಥಾಸಂಕಲನ ನಕ್ಸಲ್ ವರಸೆ ಕೂಡಾ ಈಗಲೇ ಬಿಡುಗಡೆಯಾಗಿದೆ.) ಎನ್ನುವುದನ್ನು ಗುರುತಿಸಿಕೊಳ್ಳಲು ನಾನು ಯತ್ನಿಸಿದ್ದೇನೆ. ಅದಕ್ಕೆ ಹಿನ್ನೆಲೆ ಅವರ ಕಾಲಜಿಂಕೆ ಕಾದಂಬರಿ ಮತ್ತು ಇದು. ನನಗೆ ಮುಖ್ಯವಾಗಿ ಕಾಣುವ ಒಂದು ವಿಚಾರವೆಂದರೆ ಮಾಸ್ತಿ ಮ್ಯಾಜಿಕಲ್ ರಿಯಲಿಸಂನ ಹಾದಿಯನ್ನು ಹಿಡಿದವರಲ್ಲ. ಸತ್ಯನಾರಾಯಣ ಅವರಿಗೆ ಪರ್ಯಾಯ ನಿರೂಪಣಾ ಮಾಧ್ಯಮವನ್ನು ಕಂಡುಕೊಳ್ಳುವುದು ಈಗಿನ ತುರ್ತು ಮತ್ತು ಅಗತ್ಯವಾಗಿ ಕಂಡಿದೆ. ಆ ಹಾದಿಯ ಈ ಕಾದಂಬರಿಯಲ್ಲಿ ರಂಜಕ ನಿರೂಪಣೆಯ ಎಲ್ಲ ಮಾರ್ಗಗಳನ್ನೂ ಅವರು ತ್ಯಜಿಸಿಬಿಟ್ಟಿದ್ದಾರೆ ಎನ್ನಿಸುತ್ತದೆ. ಇದು ಭಿನ್ನ ಓದುವ ಕ್ರಮವನ್ನು ಬೇಡುತ್ತದೆ. ಹಾಗಾಗಿ ಅಂತಹ ಭಿನ್ನ ಓದುಗರ ಹುಡುಕಾಟವೂ ಲೇಖಕರಿಗೆ ಅಗತ್ಯವಾಗುವುದೇನೋ ಎನ್ನುವ ಆತಂಕವನ್ನು ಕೃತಿ ಮೂಡಿಸುತ್ತದೆ. ಬಹುಶಃ ಇದು ಜಾಡಿಗೆ ಬಿದ್ದು ಬರೆಯುವುದನ್ನು ಹೊರಗಿಡುವ ಎಲ್ಲ ಲೇಖಕರಿಗೂ ಅನಿವಾರ್ಯವೂ, ಅದೇ ಸಮಯ ಆತಂಕಕಾರಿಯೂ ಆದ ವಿಚಾರವಾಗಿರಲು ಸಾಧ್ಯ.

ವಿಚ್ಛೇದನ-ಪರಿಣಯದ ಫೋಕಲ್ ಪಾಯಿಂಟ್ ಸಂಬಂಧಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡುವುದಾಗಿದೆ. ಆದರೆ ಇದು ಸ್ತ್ರೀವಾದಿ ನೆಲೆಯಿಂದ ಹೊರಡುವುದಲ್ಲ. ಬದಲಿಗೆ ಸ್ತ್ರೀ ಪುರುಷ ಸಂಬಂಧಗಳಲ್ಲಿ ಅಗತ್ಯವಾದ ಮನೋದೈಹಿಕ ಹೊಂದಾಣಿಕೆಗಳನ್ನು, ಆ ಸಂಬಂಧಗಳನ್ನು ಅರ್ಥಪೂರ್ಣವಾಗಿಸುವುದು ಹೇಗೆಂದು ಕುರಿತು ಯೋಚಿಸುವುದಾಗಿದೆ. ಕಾಲಕ್ರಮದ ಶತಮಾನಗಳ ಅಳತೆಯಲ್ಲಿ ನಾಗರಿಕತೆಯು ಮುಂದೆ ತಂದಿರುವ ಸುಳ್ಳುಗಳನ್ನು ಸತ್ಯನಾರಾಯಣ ವಿವೇಚಿಸುತ್ತಾರೆ. ಈ ವಿಶ್ಲೇಷಣೆಯಲ್ಲಿ ಅವರ ಒಲವು ನಾಗರಿಕವಾಗಿದೆ. ಈ ಹಳೆಯದರೊಂದಿಗೆ ಸಂಬಂಧವಿರಿಕೊಂಡೂ ಅದನ್ನು ಹೇಗೆ ಸಹ್ಯವೂ, ವಿವೇಕಯುತವೂ ಆಗಿ ಮಾಡಬಹುದು ಎನ್ನುವುದರಲ್ಲಿ ಅವರ ಯೋಚನೆಯ ಬೀಜಗಳು ಮೊಳೆಯಲು ಕಾತುರವಾಗಿವೆ. ಹೊಸ ಓದಿಗೆ ಯಾವಾಗಲೂ ಮಿಡಿಯುವವರು ಗಮನಿಸಲೇಬೇಕಾದ ಕೃತಿ ಇದು

Comments