ತರ್ಲೆ ಮಂಜನ ರಥಸಪ್ತಮಿ....

ತರ್ಲೆ ಮಂಜನ ರಥಸಪ್ತಮಿ....

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.

ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ. ಸಾವಿತ್ರಿ ಇಷ್ಟು ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು. ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ. ಅದಕ್ಕೆ ಕೋಪದಿಂದ ಏನು? ಬೇಕು ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು, ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.

ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು. ನಾನು ನನ್ನ ಬಗ್ಗೆ ಹೇಳಿದ್ದು ಎಂದ ಮಂಜ. ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು. ಮೊನ್ನೆನೇ ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು. ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ ಎಂದ. ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್ ಜನ ಇದ್ದಾರೆ. ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ, ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ ಪ್ರದರ್ಶಿಸಿದ.

ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ. ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ, ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ... ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ ನಗುತ್ತಾ, ತನ್ನ ಬ್ಯಾಗ್ ತೆಗೆದು ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ.

ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....

Rating
No votes yet

Comments