ಕನ್ನಡ ಕುವರ ಕುಮಾರವ್ಯಾಸ ಭಾಗ=೨

ಕನ್ನಡ ಕುವರ ಕುಮಾರವ್ಯಾಸ ಭಾಗ=೨

 ಕುಮಾರವ್ಯಾಸ  ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ..

ಕವಿಯೇ ಹೇಳಿಕೊಂಡಂತೆ ಕಾವ್ಯಕೆ ಗುರು.
ಅದರಲ್ಲಾವುದಿಲ್ಲ?
 
           ಅರಸುಗಳು ಬಯಸಿದರೆ ಅವರಿಗೆ ಅತ್ಯಂತ ಪ್ರಿಯವಾದ ವೀರರಸವಲ್ಲಿದೆ.ವೇದಜ್ಞರಾದ ದ್ವಿಜರೋದಿದರೆ ಚತುರ್ವೇದಗಳ ಸಾರವನ್ನೇ ಅಲ್ಲಿ ಹೀರಿಬಿಡಬಹುದು.ವಿರಕ್ತರಾದ ಯೋಗಿಗಳು ನಮಗಲ್ಲೇನಿದೆ?ಎಂದು ಮೂಗು ಮುರಿಯುವಂತಿಲ್ಲ.ಅವರ ವಿರಕ್ತಿಯನ್ನು ಹೆಚ್ಚಿಸಿ ಆತ್ಮತತ್ವಕ್ಕೊಯ್ಯಬಲ್ಲ ವೇದಾಂತ ತತ್ವ ವಿಚಾರಗಳ ರಾಶಿಯೇ ಇಲ್ಲಿದೆ.ಇನ್ನು ಮಂತ್ರಿಗಳಿಗೆ ರಾಷ್ಟ್ರ ರಕ್ಷಣೆಗೆ ಬೇಕಾದ ಬೌದ್ಧಿಕ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬಹುದಾದ ರಾಜಕೀಯ ಚಾಣಾಕ್ಷತೆಗಳು ಇಲ್ಲಿ ಅಸಂಖ್ಯವಾಗಿವೆ.ಶೃಂಗಾರ ಲೋಲರಾದ ವಿರಹಿಗಳಿಗೆ  ವಿಭಾವಾನುಭಾವ ಸ್ಥಾಯೀಸಂಚಾರೀಯುಕ್ತ ಶೃಂಗಾರರಸ ಪ್ರವಾಹವೇ ಇಲ್ಲಿದೆ.ವಿದ್ಯಾಸಮುದ್ರವನ್ನು ಪಾನಮಾಡಿದ ವಿದ್ವನ್ಮಣಿಗಳಿಗೆ ಅನನ್ಯಾತಿಶಯ, ರೂಪಕಾದ್ಯಲಂಕಾರಗಳ ವರ್ಣನೆಗಳು ಹೇರಳವಾಗಿದೆ.
 
     "ಅಡುಮುಟ್ಟದ ಸೊಪ್ಪಿಲ್ಲ" ಎಂಬಂತೆ ಕುಮಾರವ್ಯಾಸನು ಸ್ಪರ್ಶಿಸದವಿಷಯಗಳಿಲ್ಲವಾದ್ದರಿಂದ ಕಾವ್ಯಕೆ ಗುರು ಎಂದು ಹೇಳಿಕೊಂಡರೆ ಅದರಲ್ಲಿ ಅತಿಶಯೋಕ್ತಿಯೇನಿದೆ.ಸಂಸ್ಕೃತ ಮಹಾಭಾರತದ ಕರ್ತೃಗಳಾದ ವ್ಯಾಸರೂ ಸಹ ತಮ್ಮ ಭಾರತದ ಬಗೆಗೆ "ಯದ್ ಇಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್"(ಇಲ್ಲಿರುವುದನ್ನು ಉಳಿದ ಗ್ರಂಥಗಳಲ್ಲಿ ಕಾಣಬಹುದು.ಆದರೆ ಇಲ್ಲಿಲ್ಲದಿರುವುದು ಇನ್ನೆಲ್ಲೂ ಕಾಣಸಿಗಲಾರದು)ಎನ್ನುತ್ತಾರೆ."ವ್ಯಾಸೋಚ್ಚಿಷ್ಟಂ ಜಗತ್ಸರ್ವಮ್"(ಎಲ್ಲವೂ ವ್ಯಾಸರು ತಿಂದು ಬಿಟ್ಟಿದ್ದು ಅರ್ಥಾತ್ ಅವರು ಬರೆದು ಬಿಟ್ಟಿದ್ದು ಎನ್ನುವ ವಾಣಿ ಪ್ರಸಿದ್ಧವಾಗಿಯೇ ಇದೆ. ಅಂತೆಯೇ ಕುಮಾರವ್ಯಾಸನದು.ಅವನು ಎಷ್ಟು ಕವಿಗಳಿಗಾಧಾರವಾಗಿಲ್ಲ?
 
ಕುಮಾರವ್ಯಾಸಭಾರತದ ದ್ರೌಪದೀ ಸ್ವಯಂವರ ಪ್ರಕರಣದ ಇನ್ನೊಂದು ಭಾಮಿನಿಯನ್ನು ನೋಡೋಣ:-
 
ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನಪೋಲ್ದುದಲಕಾವೇಷ್ಟಿತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತುತಮಾಲ ಪತ್ರವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ
 
"ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು "
ಎಂದರೆ
 
ರಾಜಸೂಯಯಾಗವನ್ನು ಮಾಡಬೇಕಾದರೆ, ಮೊದಲು ಚತುರ್ದಿಕ್ಕುಗಳಲ್ಲಿರುವ ರಾಜರುಗಳನ್ನು ಗೆದ್ದು ಜಯಭೇರಿ ಮೊಳಗಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ನಂತರವೇ ರಾಜಸೂಯ ಯಾಗವನ್ನು ಮಾಡಬೇಕು.ಇದು ಕ್ಷತ್ರಿಯರಿಗೆ ಮಾತ್ರ ಮೀಸಲಾದ ಯಾಗ.ಅವರಲ್ಲೂ ಸಾಮಾನ್ಯ ರಾಜರಿಗೆ ಇದು ಸಾಧ್ಯವಿಲ್ಲ.ದಿಗ್ವಿಜಯದ ನಂತರ ಒಂದುವರೆ ವರ್ಷಗಳಷ್ಟು ಕಾಲ ಈ ಯಾಗದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯುತ್ತವೆ.ಈ ಯಾಗವನ್ನು ಮಾಡಿ ಅವಭೃತ ಸ್ನಾನ ಮಾಡಿದವನು "ಸಾಮ್ರಾಟ್" ಪದವಿಗೇರುತ್ತಾನೆ.ಯುಧಿಷ್ಠಿರನು ಮುಂದೆ ಈ ಯಾಗವನ್ನು ಮಾಡುತ್ತಾನೆ.
 
ಅದಿರಲಿ- ದ್ರೌಪದಿಯು ಇಲ್ಲಿ ರಾಜಸೂಯದ ಕರ್ತೃ ಹೇಗಾದಳು?ಅವಳು ಯಾವಾಗ ಎಲ್ಲ ರಾಜರುಗಳ ಮೇಲೆ ವಿಜಯ ಗಳಿಸಿದಳು?ಎಂದರೆ-
 
   ದ್ರೌಪದಿಯ ಸ್ವಯಂವರವು ಪಾಂಚಾಲ ದೇಶದಲ್ಲಿ ನಡೆಯಲಿರುವುದೆಂಬುದನ್ನು ಕೇಳಿ ಅವಳ ಸೌಂದರ್ಯಾತಿಶಯಗಳನ್ನು ಮೊದಲೇ ಕೇಳಿದ್ದ ರಾಜರುಗಳು ಅವಳನ್ನು ಪಡೆದುಕೊಳ್ಳುವ ಅಭಿ ಲಾಷೆಯಿಂದ,ದೇಶ ವಿದೇಶಗಳಿಂದ ಪಾಂಚಾಲಕ್ಕೆ ಬಂದು ಸೇರಿದರು.ಸ್ವಯಂವರ ಮಂಟಪದಲ್ಲಿ ಸ್ವಯಂವರ ಮಾಲಿಕೆಯನ್ನು ಹಿಡಿದು ದ್ರೌಪದಿಯು ಸಭಾ ಪ್ರವೇಶವನ್ನು ಮಾಡಿದೊಡನೆಯೇ ಎಲ್ಲ ರಾಜರ ಕಂಗಳೂ ದ್ರೌಪದಿಯ ಮುಖಮಂಡಲದ ಮೇಲೆ ನೆಟ್ಟವು.ಆ ತಮ್ಮ ಕಂಗಳನ್ನು ರಾಜರು ಹಿಂದೆಗೆಯಲಾರದಾದರು.
 
     ಮಂಡಲವೆಂದರೆ ಮುಖ ಹಾಗೂ ದೇಶ ಎಂದರ್ಥ ಎಲ್ಲ ಮಂಡಲಾಧಿಪರೂ ದ್ರೌಪದಿಯ ರೂಪ ಲಾವಣ್ಯಕ್ಕೆ ಮಾರು ಹೋಗಿ ಅವಳ ಮುಖಮಂಡಲದ ಸೌಂದರ್ಯದ ಸಾರವನ್ನು ಹೀರುವುದರಲ್ಲಿ ತಮ್ಮನ್ನು ತಾವೇ ಮರೆತು ಬಿಟ್ಟರು.ಆದ್ದರಿಂದ ದ್ರೌಪದಿಯು ತನ್ನ ಮೊಗದ ಸೌಂದರ್ಯ ಹಾಗೂ ತೇಜಗಳಿಂದ(ಅಗ್ನಿಯ ಮಗಳಲ್ಲವೇ?)ಎಲ್ಲ ರಾಜರನ್ನು ಗೆದ್ದು ಬಿಟ್ಟಳು.ಪರ್ಯಾಯವಾಗಿ ಅವರ ದೇಶಗಳನ್ನೆಲ್ಲ ಗೆದ್ದಂತಾಯಿತು.ಹೀಗೆ ರಾಜಮಂಡಲವು ಜಿತವಾಯ್ತು.ಆದ್ದರಿಂದ ದ್ರೌಪದಿಯು ರಾಜಸೂಯದ ಕರ್ತೃವಾದಳು.
 
    " ಮುಖವಿದು ರಾಜರಾಜನ ಪೋಲ್ದುದಲಕಾವೇಷ್ಟಿ ತತ್ವದಲಿ."
 
ರಾಜರಾಜನೆಂದರೆ ಕುಬೇರ.
 
ರಾಜರಾಜೋ ಧನಾಧಿಪಃ(ಅಮರಕೋಶ)
 
ದ್ರೌಪದಿಯ ಮುಖವು ರಾಜರಾಜನೆಂದು ಪ್ರಸಿದ್ಧನಾದ ಕುಬೇರನಿಗೆ ಸಮನಾಯ್ತು ಎನ್ನುತ್ತಾನೆ ಕವಿ.
ಹೇಗೆ?
ಕುಬೇರನು ಅಲಕೆಯಲ್ಲಿ ಅರ್ಥಾತ್ ಅಲಕಾನಗರದಲ್ಲಿ ವೇಷ್ಟಿತನಾಗಿದ್ದಾಬೆ.ಆದ್ದರಿಂದ "ಅಲಕಾವೇಷ್ಟಿತ".
"ಅಲಕಾ" ಎಂದರೆ ಮುಂಗುರುಳು  ಎಂದು ಇನ್ನೊಂದರ್ಥ.ದ್ರೌಪದಿಯು ಸುಂದರವಾದ ಮುಂಗುರುಳುಗಳಿಂದ ಶೋಭಿತಳಾಗಿರುವುದರಿಂದ ಅವಳೂ ಅಲಕಾವೇಷ್ಟಿತಳಾಗಿದ್ದಾಳೆ.ಆದ್ದರಿಂದ ಅಲಕಾವೇಷ್ಟಿ ತತ್ವದಲ್ಲಿ ಇಬ್ಬರೂ ಸಮಾನರು.
 
"ರಾಜನುದ್ಯಾನದವೊಲಾಸ್ಯಸರೋಜವಾಯ್ತು"
 
ಉದ್ಯಾನದಲ್ಲಿ ಸಾವಿರಾರು ಪುಷ್ಪಗಳಿದ್ದರೂ ಕಮಲ ಪುಷ್ಪವೇ ಉದ್ಯಾನಕ್ಕೆ ಅತ್ಯಂತ ಭೂಷಣ.
ಅದು ದ್ರೌಪದಿಗೆ ಹೇಗೆ ಅನ್ವಯಿಸುತ್ತದೆ?
 
ಇಲ್ಲಿ ಪಾಂಚಾಲನ ಸ್ವಯಂವರ ಮಂಟಪವೇ ಒಂದು ಸುಂದರ ಉದ್ಯಾನ.ರಾಜರ ಮುಖಗಳೆಲ್ಲಾ ಒಂದೊಂದು ಸುಂದರ ಪುಷ್ಪಗಳು.ದ್ರೌಪದಿಯ ಆಸ್ಯವು ಈ ಪುಷ್ಪೋದ್ಯಾನದ ಅತ್ಯಂತ ಶೋಭಿತವಾದ ಸರೋಜ.ಆದ್ದರಿಂದ ಆಸ್ಯಸರೋಜವಾಯ್ತು,
 
"ತಮಾಲ ಪತ್ರ ವಿರಾಜಿತವು"
 
     ತಮಾಲವೆಂದರೆ ಕನ್ನಡದಲ್ಲಿ ಹೊಂಗೆಯ ಗಿಡ.ಸಂಸ್ಕೃತದಲ್ಲಿ ಇದಕ್ಕೆ ತಾಪಿಚ್ಛ ಎಂದು ಹೇಳುತ್ತಾರೆ.(ತಮಾಲಸ್ತಿಲಕೆ ಖಡ್ಗೇ ತಾಪಿಚ್ಛೇ ವರುಣದ್ರುಮೇ -ಮೇದಿನೀಕೋಶ)
ತಮಾಲವೆಂದರೆ ತಿಲಕ ಅರ್ಥಾತ್ ಹಣೆ ಬೊಟ್ಟು ಎಂದರ್ಥ.ತಮಾಲ ಪತ್ರ ಎಂದರೆ ಹಣೆಗಿಡುವ ತಿಲಕ ಎಂದರ್ಥ.ದ್ರೌಪದಿಯ ಹಣೆಯು ಹೊಂಗೆಯ ಎಲೆಯ ಆಕಾರದ ತಿಲಕದಿಂದ ರಾರಾಜಿಸುತ್ತಾ ಆಕೆಯ ಮುಖ ಸೌಂದರ್ಯಕ್ಕೆ ಇಮ್ಮಡಿ ಅಂದವನ್ನು ತಂದಿತ್ತು ಎಂಬುದು ಮುಖ್ಯಾರ್ಥ.
      ಈ ಪದ್ಯದಲ್ಲಿ ಕವಿಯು ದ್ರೌಪದಿಯ ಮುಖವರ್ಣನೆಯನ್ನು ಮಾಡಿದ್ದಾನೆ.
 
    ಹೀಗೆ ಕುಮಾರವ್ಯಾಸನು ಅರ್ಥಗರ್ಭಿತ ಪದಪುಂಜಗಳನ್ನು ಪ್ರಯೋಗಿಸಿ ತನ್ನ ಕಾವ್ಯವನ್ನು ಪ್ರಗಲ್ಭ ಗೊಳಿಸಿರುವುದು ಮಾತ್ರವಲ್ಲದೇ ಓದುಗರ ಹೃದಯವನ್ನೇ ಸೂರೆಗೊಂಡಿದ್ದಾನೆ.
                                                                  
                                                                    ಮುಂದುವರಿಯುವುದು
 
 
 
 
 
 
 

Comments