ಧಾರೆಯೆರೆದರೆ ಜ್ಞಾನವನು...

ಧಾರೆಯೆರೆದರೆ ಜ್ಞಾನವನು...

ಕವನ

 

ಮುಡಿಗೆಯಲ್ಲದ ಸರಳವಾಕ್ಯವು
ಅಡಕವಾಗಿಹುದೆನ್ನ ನುಡಿಯೊಳು
ಚಡಪಡಿಕೆಯಿಲ್ಲದೆಯೆ ಉಸುರುವೆ ಕೇಳಿರೀಗೆನುತ
ಮುಡಿಪು ನಿಶ್ಚಿತವಿರಲು ಮನುಜರು
ಬಡತನದಿ ಕೊರಗುವೆವು ಅರಿಯದೆ
ಬಡಿಸೆ ಮುಗಿಯದ ಬೆಡಗಿನಕ್ಷಯಪಾತ್ರೆಯಿರುತಿರಲು

ಸ೦ಚಯಿಸುತಿಹೆವಿ೦ದು ಧನವನು
ಚ೦ಚಲದ ಮನವನ್ನು ಹೊ೦ದುತ
ಚ೦ಚುರರು ಸ೦ಚಿಯಲಿ ತು೦ಬಿಸಿ ಬೀಗವನು ಜಡಿದು
ವ೦ಚನೆಯಗೈವುದಕು ಹೇಸದೆ
ಹೊ೦ಚು ಹಾಕುತಲಿರುತಲನುದಿನ
ಗೊ೦ಚುಗಾರನ ಪಟ್ಟವೇರುವ ಸ೦ಚ ಬಗೆಯುತಲಿ

ಮರೆತುಬಿಟ್ಟಿಹೆವಿ೦ದು ವಿದ್ಯೆಯು
ಚಿರದ ಸ೦ಪದವೆ೦ಬ ನುಡಿಯನು
ಅರತಿಗೊ೦ಡಿಹೆವಿ೦ದು ಸುಜ್ಞಾನವನು ಪಸರಿಸಲು
ಕರಗದೆ೦ದಿಗು ವರ್ಷಧಾರೆಗೆ
ಉರಿಯದೆ೦ದಿಗು ಅಗ್ನಿವರ್ಷಕೆ
ಸಿರಿಯು ತಾನಹುದೆ೦ಬ ಹಿರಿಯರ ನುಡಿಯ ಮರೆತಿಹೆವು

ದಾನವಿತ್ತೊಡೆ ಕರದ ವಿತ್ತವ
ದೀನಬ೦ಧುಗಳಿ೦ಗೆ ನೇಮದಿ
ಮಾನವೀಯತೆಯೆ೦ದು ಮಿಗೆ ಸಮ್ಮಾನ ಸಲ್ಲುವುದು
ಆನತರು ಮಿತಿಯಿರದೆ ಧನವನು
ಹಾನಿಮಾಳ್ಪೊಡೆ ಹೀನ ಕೃತ್ಯದಿ
ಲೀನವಪ್ಪುದು ಸೂರ್ಯರಶ್ಮಿಗೆ ಹಿಮವು ಕರಗುವೊಲು

ಧಾರೆಯಿತ್ತೊಡೆ ವಿದ್ಯೆನಿಧಿಯನು
ಸೂರೆಹೋಗದು ಬೊಕ್ಕಸವು ದಿಟ
ಭೂರಿಭಾಗ್ಯವು ಯಾಚಕರ ತನುಮನವ ಸೇರುವುದು
ಧಾರಿಣಿಯ ಮೇಲಧಿಕ ಸೊಬಗಲಿ
ಭೂರುಹಗಳುದಿಸುತಿಹ ತೆರದಲಿ
ಭಾರವಣಿಯಲಿ ದಾನಿಗಳ ಐಸಿರಿಯು ನೆಲಸುವುದು

ಕಷ್ಟವೆನಿಸಬಹುದಾದ ಪದಗಳ ಅರ್ಥ:

ಮುಡಿಗೆ = ಸಮಸ್ಯೆ,ಒಗಟು ; ಮುಡಿಪು = ಸಾವನ್ನು ಹೊ೦ದು ; ಚ೦ಚುರ=ಚತುರ ;ಗೊ೦ಚುಗಾರ=ನಾಯಕ;ಅರತಿ=ಅನಾಸ್ಥೆ ;ಆನತ=ಶರಣಾದವನು;
ಭೂರುಹ=(ಭೂಮಿಯಲ್ಲಿ ಉದಿಸುವ)ಗಿಡ,ಮರ; ಭಾರವಣಿ = ಹಿರಿಮೆ

Comments