ಜಪಾನ್ - ಜ್ಯೋತಿಷ್ಯ

ಜಪಾನ್ - ಜ್ಯೋತಿಷ್ಯ

ಜಪಾನ್ " ನೆನ್ನೆ ಮಧ್ಯಾಹ್ನದಿಂದ ಸುಮಾರು ಎಲ್ಲರ ಬಾಯಲ್ಲೂ ಇದೇ ಕೇಳಿ ಬರುತ್ತಿದೆ. ಜಪಾನ್ ಎಂದೂ ಕಂಡರಿಯದ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದೆ. ಭೀಕರ ಭೂಕಂಪ, ಸುನಾಮಿ ಎಲ್ಲಿ ನೋಡಿದರೂ ನೀರು, ಹಳ್ಳಿ ಹಳ್ಳಿಗಳೇ ಕೊಚ್ಚಿ ಹೋಗುವ ದೃಶ್ಯ, ಕಾರುಗಳು ಮುಳುಗಿ ತೇಲುತ್ತಿರುವುದು ನೋಡಿದರೇ ಯಾವುದೋ ಆಂಗ್ಲ ಸಿನಿಮಾ ನೋಡಿದ ಹಾಗಿತ್ತು. ಅದೆಷ್ಟು ಸಾವು ನೋವಾಗಿದೆಯೋ ಭಗವಂತನೇ ಬಲ್ಲ.

ಇವಿಷ್ಟು ಒಂದೆಡೆಯಾದರೆ ಜಪಾನ್ ಗೂ ಜ್ಯೋತಿಷ್ಯಕ್ಕೂ ಏನು ಸಂಬಂಧ? ನೆನ್ನೆ ಹೀಗೆ ಟಿ.ವಿ ಯಲ್ಲಿ ಜಪಾನ್ ನಲ್ಲಿ ಸಂಭವಿಸಿದ ವಿಕೋಪಗಳನ್ನು ನೋಡುತ್ತಿದ್ದಾಗ ಯಾವುದೋ ಒಂದು ಚಾನಲ್ ನಲ್ಲಿ ಯಾವುದೋ ಒಬ್ಬ "ಬೃಹತ್" ದೇಹಿ ಜ್ಯೋತಿಷಿ ನಾನು ಮಾರ್ಚ್ ೬ ರಂದೇ ಹೇಳಿದ್ದೆ ಹೀಗೆ ಒಂದು ಅವಘಡ ಸಂಭವಿಸುವುದು ಎಂದು ಬಡಬಡಿಸುತ್ತಿದ್ದ, ಇನ್ನೊಂದು ಚಾನಲ್ ನಲ್ಲಿ ಯಾವುದೋ ವ್ಯಕ್ತಿ ಸಾವಿರ ವರ್ಷಗಳ ಹಿಂದೆಯೇ ನುಡಿದಿದ್ದನಂತೆ, ಇನ್ನೊಂದು ವಾಹಿನಿಯಲ್ಲಿ ಜಗತ್ತಿನ ಕೊನೆಯ ಕ್ಷಣಗಳು ಎಂದು ಬಿತ್ತರವಾಗುತ್ತಿದ್ದವು.

ನನಗೇ ಅರ್ಥವೇ ಆಗಲಿಲ್ಲ. ಪ್ರಕೃತಿಯನ್ನು ಅಳೆಯಲು ಇವರು ಯಾರು? ಇಷ್ಟೆಲ್ಲ ವಿಜ್ನಾನ ಮುಂದುವರಿದಿದ್ದರೂ ವಿಜ್ನಾನಿಗಳಿಗೇ ಪ್ರಕೃತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರಲು ಈ ಜ್ಯೋತಿಷಿಗಳು ಹೇಗೆ ಅಳೆಯಲು ಸಾಧ್ಯ. ಎಲ್ಲ ಸಮಯದಲ್ಲೂ ಅವಘಡ ಸಂಭವಿಸಿದ ಮೇಲೆಯೇ ನಾನು ಹಾಗೆ ಹೇಳಿದ್ದೆ ಹೀಗೆ ಹೇಳಿದ್ದೆ ಎಂದು ವದರುವ ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ. ಇದೇ ರೀತಿ ಹಿಂದೊಬ್ಬ ಬಡಬಡಿಸಿದ್ದ. ಆತ ಪ್ರಖ್ಯಾತ ಜ್ಯೋತಿಷಿಯಂತೆ ಆತ ಬೇರೆ ಜ್ಯೋತಿಷಿಗಳನ್ನು ದೋಷಿಸುತ್ತಿದ್ದ ಅವರೆಲ್ಲ ಬರೀ ಹಣಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು. ಆತ ಯಡಿಯೂರಪ್ಪ ಸರ್ಕಾರ ಬಂದ ಹೊಸದರಲ್ಲಿ ಒಂದು ವಾಹಿನಿಯಲ್ಲಿ ನುಡಿದಿದ್ದ. ಯಡಿಯೂರಪ್ಪ ಸರ್ಕಾರ ಆರು ತಿಂಗಳೊಳಗೆ ಬೀಳುತ್ತದೆ. ಇದು ಶೇಕಡಾ ನೂರರಷ್ಟು ಖಚಿತ ಎಂದು. ಆದರೆ ಏನಾಯಿತು. ಇನ್ನಾದರೂ ಜ್ಯೋತಿಷಿಗಳು ಬುದ್ಧಿ ಕಲಿಯಬೇಕು.

ಅಲ್ಲಿ ಜಪಾನ್ ನಲ್ಲಿ ಸಂಭವಿಸಿರುವ ಅಪಘಾತಕ್ಕೆ ಅಲ್ಲಿ ಹೋಗಿ ಸಹಾಯ ಮಾಡಲಂತೂ ಸಾಧ್ಯವಿಲ್ಲ. ಕನಿಷ್ಟ ಪಕ್ಷ ಸಂತಾಪ ತೋರಿಸಿದರೆ ಸಾಕು. ಅದು ಬಿಟ್ಟು ನಾನು ಹೇಳಿದ್ದಕ್ಕೆ ಹೀಗಾಯಿತು ಹಾಗಾಯಿತು ಎಂದು ಬಡಬಡಿಸುವುದು ಬೇಡ.

 

ಜಪಾನ್ ವಿಕೋಪದ ಚಿತ್ರಗಳಿಗೆ ಇಲ್ಲಿ ನೋಡಿ.

http://www.theatlantic.com/infocus/2011/03/earthquake-in-japan/100022/

 

ಚಿತ್ರ ಕೃಪೆ : ಅಂತರ್ಜಾಲ

Comments