ಕರ್ನಾಟಕದ ಮೊಮ್ಮಗಳು!

ಕರ್ನಾಟಕದ ಮೊಮ್ಮಗಳು!

ವಿಶ್ವ ಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದು ಎಷ್ಟು ಸಮಂಜಸವೆಂದು ಭಾರೀ ಚರ್ಚೆ-ವಾಗ್ವಾದಗಳು ನಡೆದುವು. ವಿಶ್ವ ಕನ್ನಡ ಸಮ್ಮೇಳನ ಸಾಹಿತಿಗಳಿಗೇ ಅಲ್ಲವೆಂದೂ, ಕನ್ನಡಿಗರಿಗೇ ಎಂದೂ ಸಮಾಧಾನ ನೀಡಿ ಸಾಂತ್ವನಗೊಳಿಸಿದರು.


ನೋಡಿದಿರಲ್ಲಾ, ಶ್ರೀಮತಿ ಐಶ್ವರ್ಯ ರೈ ಬಚ್ಚನರನ್ನು - "ಎಲ್ಲರಿಗೂ ನಮಸ್ಕಾರ!", ಎಂದುದನ್ನು. ನಾನಂತೂ ಪುಳಕಗೊಂಡೆ. ತನ್ನ ತಾಯಿನಾಡು ಕರ್ನಾಟಕವೆಂದರು. ಮಂಗಳೂರಿನ ಹಳೆಬರಿಗೆ ‘ತಾಯಿನಾಡು’ ಪತ್ರಿಕೆಯ ನೆನೆಪಾಯಿತೇನು? ಕನ್ನಡ ಸಾಹಿತ್ಯದ ಬಗ್ಗೆ ಏನೂ ತಿಳಿಯದೆಂದರು. ಹೆಚ್ಚು (ಅರ್ಥಾತ್ ಯಾವುದೇ) ಕನ್ನಡ ಸಿನಿಮಾ ನೋಡಿಲ್ಲವೆಂದರು! ಕರ್ನಾಟಕ ಸರ್ಕಾರದ ಆಹ್ವಾನವನ್ನು ಮನ್ನಿಸುವ ಕೃಪೆದೋರಿ ಸರ್ಕಾರ ಏರ್ಪಡಿಸಿದ್ದ ಅಷ್ಟಾಸನದ ವಿಶೇಷ ವಿಮಾನದಲ್ಲಿ ಆಕಾಶದಿಂದ ಧರೆಗಿಳಿದು ಪಾವನಗೊಳಿಸಿದ ರಂಭೆಯಾದರು.


ಅಲ್ಲವೇ ಮತ್ತೆ? ಸಾವಿರಾರು ಮಂದಿ ಕನ್ನಡಿಗರಿಗೆ ಕೆಲಸವಿತ್ತ ಮೂರ್ತಿಗಳಿಗಿಂತ ಬಹುಕೋಟಿ ಕನ್ನಡಿಗರ ಮನದಣಿಸುತ್ತಿರುವ ಐಶ್ವರ್ಯ ಅಗಣಿತ ಪಾಲು ಮೇಲಲ್ಲವೇ?


ಕನ್ನಡ ಜಿಲ್ಲೆಯವರೇ ಆಗಿದ್ದು ಚೆನ್ನೈಯಲ್ಲಿ ‘ಉರವು ಕರಙಳ್’ ಸಂಸ್ಥೆಯನ್ನು ನಡೆಸುತ್ತಿರುವ ಉಮೇಶ್ (ಹೆಸರು ಇದಲ್ಲವೆಂದೆನಿಸುತ್ತಿದೆ; ಮನ್ನಿಸಿ) ಈಕೆ ಜಗದೇಕ ಸುಂದರಿಯೆಂದು ಪುರಸ್ಕೃತಳಾಗಿ ದೇಶದಲ್ಲೆಲ್ಲಾ ಸಂಚರಿಸುತ್ತಾ ಚೆನ್ನೈಗೆ ಹೋಗಿದ್ದಾಗ, ‘ನಮ್ಮ ಸಂಸ್ಥೆಯ ಒಂದು ಮಗುವನ್ನೆತ್ತಿಕೊಂಡು ಪೋಸ್ ಕೊಡಿ; ನನ್ನ ಸಮಾಜ ಸೇವೆಗೆ ಅನುಕೂಲವಾಗುತ್ತದೆ; ಅನುದಾನ ಪಡೆಯಲು ಸುಲಭವಾಗುತ್ತದೆ’ ಎಂದೆಲ್ಲಾ ಪರಿಪರಿಯಾಗಿ ಮನವಿ ಮಾಡಿಕೊಂಡಾಗ ಈ ಕರ್ನಾಟಕದ ಮೊಮ್ಮಗಳು, ‘ಉಂಹುಂ’ ಎಂದ ಇತಿಹಾಸವನ್ನು ನಾವು ಓದಿದ್ದು ನೆನಪಿದೆ ತಾನೇ?


ಕಿವಿದೆರೆದು ಕುಳಿತಿದ್ದೇನೆ, ನಮ್ಮ ಸಾಹಿತಿಗಳು, ಬುದ್ಧಿಜೀವಿಗಳು, ಮತ್ತಿತರರು ಏನೆನ್ನುವರೆಂದು ಕೇಳಿಸಿಕೊಳ್ಳಲು!

Comments