ಗೋಕರುಣೆ ಬೀಚ್

ಗೋಕರುಣೆ ಬೀಚ್

ಈ ರಥದ ಮುಂದೆ ನಿಂತು ಮಕ್ಕಳು "ಇದೇನು ಅಂಕಲ್?" ಎಂದು ಕೇಳಿದಾಗ ಆಶ್ಚರ್ಯವಾಯಿತು! ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಊರ ಜಾತ್ರೆ ಸಮಯಕ್ಕೇ ಪರೀಕ್ಷೆ ಇರುತ್ತಿದ್ದುದರಿಂದ ಯಾವುದೇ ಜಾತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಗೋಕರ್ಣದಲ್ಲಿ ಶಿವರಾತ್ರಿ ಪ್ರಯುಕ್ತ ರಥೋತ್ಸವ ಇತ್ತು ಕಾಣುತ್ತದೆ. ನಾವು ಕಳೆದ ಸೋಮವಾರ ಅಲ್ಲಿಗೆ ಹೋದಾಗ, ಅಲ್ಲಿ ನಿಂತಿದ್ದ ಈ ತೇರು, ಅದರ ಗಾತ್ರ, ಸೌಂದರ್ಯ ಕಂಡು ಮಕ್ಕಳು ಕುಣಿದದ್ದೇ ಕುಣಿದದ್ದು.

"ಚಕ್ರ ಮುಂದೆ ಹೋಗದಂತೆ ಏನೂ ಅಡ್ಡ ಇಟ್ಟಿಲ್ಲ?" ಎಂದ ಒಬ್ಬ. ನನಗೂ ಒಮ್ಮೆಗೆ ಭಯವಾಯಿತು. ಈ ಮಕ್ಕಳ ಚೇಷ್ಟೆಗೆ ತೇರೆಲ್ಲಾದರೂ ಮುಂದೆ ಹೋಗಲು ಆರಂಭಿಸಿದರೆ!

" ರಥ ಅಲ್ಲಾಡದಂತೆ ದನದ ಪಕ್ಕದಲ್ಲಿ ಕೋಲೆರಡು ಮಂತ್ರಿಸಿ ಇಟ್ಟಿದ್ದಾರೆ." ಎಂದೆ. " ಈ ತೇರು ಒಂದಿಂಚು ಮುಂದೆ ಬರಬೇಕಾದರೆ ನೂರಾರು ಜನ, ಅಲ್ಲಿರುವ ಹಗ್ಗವನ್ನು ಒಟ್ಟಾಗಿ ಸೇರಿ ಎಳೆಯಬೇಕು" ಎಂದು ವಿವರಿಸಿ ಹೇಳಿದೆ.

ಗೋಕರ್ಣಕ್ಕೆ ಹೋದವರು ಬೀಚ್‌ಗೆ ಹೋಗದಿರುತ್ತಾರೆಯೇ? ಸಂಜೆ ನಾಲ್ಕೂವರೆಗೆ ಎಂಟ್ರಿ ಕೊಟ್ಟವರು ಸೂರ್ಯಾಸ್ತದವರೆಗೂ ಅಲ್ಲಿದ್ದೆವು. ಟೈಮು ಹೋದದ್ದೇ ಗೊತ್ತಾಗಲಿಲ್ಲ. (ಜಪಾನ್ ಸುನಾಮಿ ಆಗಿನ್ನೂ ಸಂಭವಿಸಿರಲಿಲ್ಲ)

ನಾವು ಬಂದಾಗ ಒಂದು ಚೂರೂ ಕಸಕಡ್ಡಿ ಇಲ್ಲದ ಸುಂದರ ಬೀಚ್, ೭ ಗಂಟೆಗೆ ಹೀಗಾಗಿದೆ! ಎಲ್ಲೆಂದರಲ್ಲಿ ಕಸ. ನನ್ನದು ಮೊಬೈಲ್ ಕ್ಯಾಮರವಾದುದರಿಂದ ಟ್ಯೂಬ್‌ಲೈಟ್ ಬೆಳಕು ಇರುವಲ್ಲಿಯ ಗಲೀಜಿನ ಚಿತ್ರ ಮಾತ್ರ ತೆಗೆದಿದ್ದೇನೆ. ಉಳಿದ ಕಡೆ ಇನ್ನೂ ಜಾಸ್ತಿ ಇತ್ತು.

ನೈಟ್ ಡ್ಯೂಟಿಗೆ ಬಂದ ಗೋವುಗಳು ಕರುಣೆಯಿಂದ( ಗೋ+ಕರುಣ=ಗೋಕರ್ಣ) ಬೀಚನ್ನು ಕ್ಲೀನ್ ಮಾಡುತ್ತಿದ್ದವು. ಇನ್ನುಳಿದಿದ್ದನ್ನು, ತಾನು ರಾಜ ಎಂಬ ಅಹಂಕಾರ ಸ್ವಲ್ಪವೂ ಇಲ್ಲದೇ ಸಮುದ್ರರಾಜ ತೊಳೆದುಕೊಂಡು ಹೋಗುತ್ತಿದ್ದ.

ಸಮುದ್ರದ ತಾಳ್ಮೆಗೂ ಒಂದು ಮಿತಿ ಇದೆಯಲ್ಲಾ........

...ಗೋಕರ್ಣಕ್ಕೆ ಹೋಗಲು ಬೆಂಗಳೂರಿಂದ ರಾತ್ರಿ ೯ ಗಂಟೆಗೆ ಡೈರೆಕ್ಟ್ ಬಸ್ ಇದೆ. ೧೦-೧೫ ನಿಮಿಷಕ್ಕೆ ಒಮ್ಮೆ ಕಿಟಕಿ ತಾನಾಗೇ ಓಪನ್ ಆಗುವಂತೆ, ಏರ್‌ಕಂಡೀಷನ್ ವ್ಯವಸ್ಥೆ, ಈ ರಾಜಹಂಸ ಬಸ್‌ನಲ್ಲಿ ಇದೆ.

...ಗೋಕರ್ಣದಲ್ಲಿ ಹೋಟೆಲ್‌ಗಳು ಹಲವಿದ್ದರೂ, ಅಲ್ಲಿನ ಭಟ್ಟರ ಮನೆಯಲ್ಲಿಯೇ ವಾಸಮಾಡುವುದು ಉತ್ತಮ. ಊಟ, ತಿನಿಸು, ನಿದ್ರೆ, ಸ್ನಾನ, ಪೂಜೆ, ದೇವರದರ್ಶನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವರು.

-ಗಣೇಶ.

Rating
No votes yet

Comments