ದೃಷ್ಟಿಯ ಬೊಟ್ಟಿಡಿ ಕನ್ನಡ ತಾಯಿಗೆ ಮಲೆನಾಡಿನ ಕೆನ್ನೆಯ ಮೇಲೆ

ದೃಷ್ಟಿಯ ಬೊಟ್ಟಿಡಿ ಕನ್ನಡ ತಾಯಿಗೆ ಮಲೆನಾಡಿನ ಕೆನ್ನೆಯ ಮೇಲೆ

 

 

 ಚೇತನ್ ರವರ ಅದ್ಭುತವಾದ ಮಲೆನಾಡಿನ ಮನಸೆಳೆಯುವ ಚಿತ್ರಗಳೇ ಈ ಕವನಕ್ಕೆ ಪ್ರೇರಣೆಯಾಗಿವೆ. ನೀಲಿಯ ಮಧ್ಯದೊಳೋಲಾಡುವ ಬಿಳಿ ಮೋಡಗಳು ದಟ್ಟ ಕಾಡನ್ನಾಚ್ಛಾದಿಸಿದ ಸೊಬಗು ಅವರ್ಣನೀಯ.ತದನಂತರ  ಸೂರ್ಯನ ಕಿರಣಗಳಿಂದ ಆಗಸ ತಿಳಿಯಾದಾಗ ಮೆರೆಯುವ ಪಸುರಿನ ಸಿರಿಯೋಲಗ ಎಂಥವರನ್ನೂ ಉತ್ತೇಜಿಸುವಂತಿದೆ.ಈ ಕವನಕ್ಕೆ ಪ್ರೇರಣೆಯಾದ ಚೇತನ್ ರವರಿಗೂ ತನ್ಮೂಲಕ ಚೇತೋಹಾರಿಯಾದ ಅವರ ಚಿತ್ರಗಳಿಗೂ ಧನ್ಯವಾದಗಳು.ಈ ಚಿತ್ರಗಳನ್ನು ನೋಡಿ ಈ ಕವನವನ್ನು ಓದಿದರೆ ಹೆಚ್ಚು ಅರ್ಥಪೂರ್ಣವೆನಿಸೀತು.

http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%B3%AB\
 
ದೃಷ್ಟಿಯ ಬೊಟ್ಟಿಡಿ ಕನ್ನಡ ತಾಯಿಗೆ ಮಲೆನಾಡಿನ ಕೆನ್ನೆಯ ಮೇಲೆ
 
ಆಗಸದೊಡೆಯನು ಮರಗಳ ಮೇಗಡೆ ನೀಲಿಯ ಓಕುಳಿಯಾಡಿದನೋ
ನಾಗರತ್ನದಲಿ ಹೆಣೆದಿಹ ಮುಕುಟಕೆ ಹಿಮಮಣಿ ಸಾಲನು ಕಟ್ಟಿದನೊ
ಮಾಗಿದ ತರು ಮುತ್ತಿಕ್ಕಲು ನಭವನು ಮೇಗಡೆ ಸೆಳೆಯಲು ಬಾಗಿದನೋ
ಬೀಗಿದ ಪವನನು ಮೆಲ್ಲನೆ ಬೀಸುತ ತರುಲತೆಗಳ ಮೇಲ್ ಸಾಗಿದನೊ
 
ಕಾಲ ಮೇಘಗಳ ಒಡೆಯನು ಮೇಣ್ ಅತ್ತಿತ್ತಲು ಚಲಿಸುತ ಅಂಬರದಿ
ಮೇಲೆ ರವಿಯ ಮುಸುಕುತ್ತಲೆ ಚಾದರ ಹಾಸಿದ ಗಗನದೊಳಲ್ಲಲ್ಲಿ 
ನೀಲಿಯ ಮುಳುಗಿಸಿ ಬೆಳ್ಳಿಯ ಬೆಳಗಿಸಿ ಕಾರ್ಮುಗಿಲಿಂ ಕಪ್ಪಾಗಿಸಿದ
ಹಾಲಿನ ಬಣ್ಣದಿ ಸೂರ್ಯನ ಮುಚ್ಚುತ ಹಸಿರಿಣ ತೋರಣ ಕಟ್ಟಿಸಿದ
 
ದಿನಕರ ರಶ್ಮಿಯು ಬಲವಾಯ್ತಾಗಲೆ ಮೇಘದ ಪರದೆಯ ಸರಿಸುತ್ತ
ಮನೆಮಾಡಿದ ಮುಗಿಲಿನ ಹಂದರವನು ಗಾಳಿಯು ಎತ್ತಲೋ ಅಟ್ಟುತ್ತ
ಮಲೆನಾಡಿನ ಪಸುರಿನ ಐಸಿರಿಯಿದು ಬೆಸೆಯಿತು ಸೊಗಸಿನ ಕಬ್ಬಗಳ
ತಲೆವಾಗಿದ ತರುಗಳನಪ್ಪಿದ ಲತೆಯೊಡಲಲಿ  ಅರಳಿದ ಪುಷ್ಪಗಳ
 
ಶ್ರೀಗಂಧದ ಕಂಪದು ಬೀರಿತು  ಸಹ್ಯಾದ್ರಿಯು ಮಂಜಲಿ ಮುಸುಕಿರಲು
ಆನಂದವೂ ಉಕ್ಕೇರಿತು ಕೆಳಗಡೆ ಬತ್ತದ ಸಸಿಗಳ ಹಸುರಿರಲು
ಪಸುರನು ಹಾಸುತ ಭೂರಮೆಯೊಡಲಿಗೆ ಪಚ್ಚೆಯ ಆಚ್ಛಾದನ ಹೊದಿಸಿ
ಕುಸುರಿಯ ಹೆಣೆಯಿತೋ  ಎಂಬೊಲು ಮಧ್ಯದಿ ವಲ್ಲರಿಗಳು ಮೇಣ್ ಪಲ್ಲವಿಸಿ
 
ದೃಷ್ಟಿಯ ಬೊಟ್ಟಿಡಿ ಕನ್ನಡ ತಾಯಿಗೆ ಮಲೆನಾಡಿನ ಕೆನ್ನೆಯ ಮೇಲಾ
ಸೃಷ್ಟಿಕರ್ತನಿಗೆ ಮನ್ನಣೆಯೀಯಿರಿ ಸೃಜಿಸಿದುದಕೆ ಗಿರಿಗಳಸಾಲ
ವೃಷ್ಟಿಯಿಂದ ವಸುಮತಿಯನು ತಣಿಸಿದ ಬೆಟ್ಟದ ಸಾಲಿನ ಸೊಬಗಿಂದ
ಹೃಷ್ಟವಾಯ್ತು ಸಂತುಷ್ಟವಾಯ್ತು ವಿಧಿ ಸೃಷ್ಟಿಯ ಪ್ರಕೃತಿಯ ಸೊಗಸಿಂದ
 
 
 
Rating
No votes yet

Comments